ಸಹಾರನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆರ್ಜೆಡಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಹಿರಿಯ ನಾಯಕರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.
ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸಂಸದ ಮನೋಜ್ ಝಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಇಂತಹ ಬೆಳವಣಿಗೆಗಳು ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿವೆ, ಇಂತಹ ಕೋಮು ಧ್ರುವೀಕರಣದ ವಾತಾವರಣದಲ್ಲಿ ದೇಶದ ಸಾಮಾನ್ಯ ಜನರಿಗೆ ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ: ಈ ಮಸೀದಿಯು ಸರ್ಕಾರಿ ಜಾಗದಲ್ಲಿದ್ದು, ಅಕ್ರಮ ನಿರ್ಮಾಣವಾಗಿದೆ ಎಂದು ಜುಲೈ 16, 2026 ರಂದು ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ತೆರವುಗೊಳಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಸೀದಿ ಕಮಿಟಿಯು ಜಿಲ್ಲಾ ನ್ಯಾಯಾಲಯದ ಬಾಗಿಲು ತಟ್ಟಿತ್ತು. ಆದರೆ, ಸೆಪ್ಟೆಂಬರ್ 4ರ ಗುರುವಾರ ಜಿಲ್ಲಾ ನ್ಯಾಯಾಧೀಶರ ಪೀಠವು ಅರ್ಜಿಯನ್ನು ವಜಾಗೊಳಿಸಿ ಸಿಟಿ ಮ್ಯಾಜಿಸ್ಟ್ರೇಟ್ ಆದೇಶವನ್ನು ಎತ್ತಿಹಿಡಿಯಿತು. ಶುಕ್ರವಾರ ತಡರಾತ್ರಿ ಮಸೀದಿಯನ್ನು ಸೀಲ್ ಮಾಡಿದ ಆಡಳಿತ ಮಂಡಳಿಯು, ಶನಿವಾರ ಮುಂಜಾನೆ ಬುಲ್ಡೋಜರ್ ಮೂಲಕ ಕಟ್ಟಡವನ್ನು ತೆರವುಗೊಳಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡದಂತೆ ತಡೆಯಲು ಕೈರಾನಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಅವರ ನಿವಾಸದ ಹೊರಗೆ ಶುಕ್ರವಾರ ರಾತ್ರಿಯಿಂದಲೇ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ, ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಇನ್ನೊಂದೆಡೆ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆಡಳಿತದ ಕ್ರಮವನ್ನು ಖಂಡಿಸಿ, “1911ಕ್ಕಿಂತಲೂ ಮುಂಚಿನ ಕಂದಾಯ ದಾಖಲೆಗಳಲ್ಲಿ ವಹೀದ್ ಖಾನ್ ಮತ್ತು ಯಾಕೂಬ್ ಖಾನ್ ಅವರ ಹೆಸರುಗಳಿವೆ. ಎಲ್ಲಾ ದಾಖಲೆಗಳು ಇದ್ದರೂ ಸಂವಿಧಾನವನ್ನು ಗಾಳಿಗೆ ತೂರಿ ಧ್ವಂಸಗೊಳಿಸಲಾಗಿದೆ,” ಎಂದು ಕಿಡಿಕಾರಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ
ನ್ಯಾಯಾಲಯವು ಸ್ಥಳ ಖಾಲಿ ಮಾಡಲು ಸೂಚಿಸಿತ್ತೇ ವಿನಃ ತಕ್ಷಣವೇ ಧ್ವಂಸಗೊಳಿಸಲು ಸ್ಪಷ್ಟ ಆದೇಶ ನೀಡಿರಲಿಲ್ಲ. ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನಮಗೆ ಕಾಲಾವಕಾಶವಿತ್ತು ಎಂದು ಮುಸ್ಲಿಂ ಒಕ್ಕೂಟದ ನಾಯಕರು ಹಾಗೂ ಮಾಜಿ ಸಂಸದ ಫಜ್ಲೂರ್ ರೆಹಮಾನ್ ತಿಳಿಸಿದ್ದಾರೆ. ಈ ವಿಷಯವಾಗಿ ಶೀಘ್ರದಲ್ಲೇ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಲಾಗಿದೆ. ಸಹಾರನ್ಪುರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ವದಂತಿಗಳು ಹರಡದಂತೆ ತಡೆಯಲು ಕಲೆಕ್ಟರೇಟ್ ಸಂಕೀರ್ಣದ ಸುತ್ತಲೂ 10ಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ಸಿಬ್ಬಂದಿ ಹಾಗೂ ಪ್ರಾಂತೀಯ ಸಶಸ್ತ್ರ ಕಾನ್ಸ್ಟೆಬಲರಿ ಪಡೆಗಳನ್ನು ನಿಯೋಜಿಸಲಾಗಿದೆ. ಸೋಷಿಯಲ್ ಮೀಡಿಯಾಗಳ ಮೇಲೆಯೂ ಸೈಬರ್ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.


