ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು ಅಲಹಾಬಾದ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಕಾಂಗ್ರೆಸ್ ಮಂಗಳವಾರ (ಸೆ.8) ಮುಖ್ಯ ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದೆ.
ನ್ಯಾಯಾಲಯವು ವಿದ್ಯಾರ್ಥಿ ಹೋರಾಟಗಾರ್ತಿ ಆಕೃತಿ ಚೌಧರಿ ವಿರುದ್ಧದ ಬಂಧನ ಆದೇಶವನ್ನು ರದ್ದುಗೊಳಿಸಿದ್ದು ಮಾತ್ರವಲ್ಲದೆ, ಅವರಿಗೆ 5 ಲಕ್ಷ ರೂಪಾಯಿ ಪರಿಹಾರವನ್ನೂ ಮಂಜೂರು ಮಾಡಿದೆ. ಈ ಮೊತ್ತವನ್ನು ನಿರ್ಧಾರದಲ್ಲಿ ಭಾಗಿಯಾಗಿದ್ದ ಮೇಧಾ ರೂಪಮ್ ಮತ್ತು ಇತರ ಅಧಿಕಾರಿಗಳಿಂದಲೇ ವಸೂಲಿ ಮಾಡುವಂತೆ ನಿರ್ದೇಶಿಸಿದೆ.
“ಅಲಹಾಬಾದ್ ಹೈಕೋರ್ಟ್ ಜ್ಞಾನೇಶ್ ಕುಮಾರ್ ಗುಪ್ತಾ ಅವರ ಪುತ್ರಿಯನ್ನು ‘ನಿರಂಕುಶ ಅಧಿಕಾರಿ’ (ಡೆಸ್ಪೊಟಿಕ್ ಆಫೀಸರ್) ಎಂದು ಕರೆದಿದೆ. ಸಮಾಚಾರ್ ಸಮಾಪ್ತ್ ಹುಯೇ” ಎಂದು ಕಾಂಗ್ರೆಸ್ ನಾಯಕ ಪವನ್ ಖೇಡಾ ಅವರು ಹೈಕೋರ್ಟ್ ತೀರ್ಪಿನ ವರದಿಯನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಬರೆದಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರೂ ಸಹ ಇದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
“ನಾಚಿಕೆಗೇಡಿನ ತಂದೆಗೆ ತಕ್ಕ ನಾಚಿಕೆಗೇಡಿನ ಮಗಳು- ಪ್ರಜಾಪ್ರಭುತ್ವ ಮತ್ತು ಕಾನೂನಿನ ಸರಿಯಾದ ಪ್ರಕ್ರಿಯೆಗೆ ಇವರು ಕಳಂಕ. ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರು, ಖ್ಯಾತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಸುಪುತ್ರಿ. ಭಾರತವನ್ನು ಇಂತಹ ಪಿಡುಗಿನಿಂದ ಮುಕ್ತಗೊಳಿಸುವ ಅಗತ್ಯವಿದೆ” ಎಂದು ಮಹುವಾ ಮೊಯಿತ್ರಾ ಅವರು ಎಕ್ಸ್ ಜಾಲತಾಣದಲ್ಲಿ ಬರೆದಿದ್ದಾರೆ.
“ಸ್ವಪಕ್ಷೀಯ ಮತ್ತು ಸರ್ವಾಧಿಕಾರಿ ಧೋರಣೆಯ ಅಧಿಕಾರಿಗಳು ಉತ್ತರ ಪ್ರದೇಶವನ್ನು ದಬ್ಬಾಳಿಕೆಯ ಜಗತ್ತನ್ನಾಗಿ (ಡಿಸ್ಟೋಪಿಯಾ) ಪರಿವರ್ತಿಸಲಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಜಿಲ್ಲಾಧಿಕಾರಿ ಮತ್ತು ಜ್ಞಾನೇಶ್ ಕುಮಾರ್ ಅವರ ಪುತ್ರಿ ಮೇಘಾ ರೂಪಮ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಲಹಾಬಾದ್ ಹೈಕೋರ್ಟ್ಗೆ ಅಭಿನಂದನೆಗಳು. ಈ ತಂದೆ ಮತ್ತು ಮಗಳು ಇಬ್ಬರೂ ಸೇರಿ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಬರೆದುಕೊಂಡಿದ್ದಾರೆ.
ಗೌತಮ್ ಬುದ್ಧ ನಗರದಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ವಿರುದ್ಧ ಕೈಗೊಳ್ಳಲಾದ ಕ್ರಮಕ್ಕೆ ಸಂಬಂಧಿಸಿದ ಪ್ರತ್ಯೇಕ ಹಾಗೂ ಪೂರಕ ಪೋಸ್ಟ್ ಒಂದರಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಸೌರವ್ ದಾಸ್ ಅವರು ಗೌತಮ್ ಬುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿ ಅವರಿಗೆ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ರೂ. 5 ಲಕ್ಷದ ಬಾಂಡ್ ನೀಡುವಂತೆ ಸೂಚಿಸಿ ಹೊರಡಿಸಲಾಗಿದೆಯೆನ್ನಲಾದ ಆದೇಶವನ್ನು ಪ್ರಶ್ನಿಸಿದ್ದಾರೆ.
“ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಗಳು (ಡಿಎಂ) ಸುಪ್ರೀಂ ಕೋರ್ಟ್ನ ಸೆಪ್ಟೆಂಬರ್ 1ರ ಐತಿಹಾಸಿಕ ಆದೇಶವನ್ನು ಓದಿಲ್ಲವೇ? ಸಿಜೆಪಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಎಲ್ಲಾ ಪ್ರತಿಭಟನಾಕಾರರಿಗೆ ಯಾವುದೇ ರೀತಿಯ ಕಾನೂನು ಕ್ರಮಗಳಿಂದ ಶಾಶ್ವತವಾದ ಸಂಪೂರ್ಣ ವಿನಾಯಿತಿ ಇದೆ. ಅಕ್ಷಯ್ ತ್ರಿಪಾಠಿ ಅವರು 5 ಲಕ್ಷ ರೂಪಾಯಿಗಳ ಜಾಮೀನು ಬಾಂಡ್ ಅನ್ನು ಸಲ್ಲಿಸುವ ಅಗತ್ಯವಿಲ್ಲ”
“ನಾವು ತಕ್ಷಣವೇ ಇದರ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಗೌರವಾನ್ವಿತ ಜಿಲ್ಲಾಧಿಕಾರಿಗಳಿಗೆ (ಡಿಎಂ) ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಯನ್ನು ಕಳುಹಿಸಿಕೊಡಲು ಕೇಂದ್ರ ಸರ್ಕಾರವನ್ನು ಕೇಳಿದ್ದೇವೆ. ಯಾವೊಬ್ಬ ವಿದ್ಯಾರ್ಥಿಯನ್ನೂ ಗುರಿ ಮಾಡಲು ನಾವು ಬಿಡುವುದಿಲ್ಲ” ಎಂದು ದಾಸ್ ಬರೆದಿದ್ದಾರೆ.
“ಕಳೆದ ವಾರ, ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಅಚಲ್ ಸಚ್ದೇವ್ ಅವರಿದ್ದ ವಿಭಾಗೀಯ ಪೀಠವು, ಎನ್ಎಸ್ಎ ಅಡಿಯಲ್ಲಿ ಚೌಧರಿಯವರನ್ನು ನಿರಂತರವಾಗಿ ಬಂಧನದಲ್ಲಿಟ್ಟಿರುವುದು ಆರ್ಟಿಕಲ್ 21 ರ ಅಡಿಯಲ್ಲಿ ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿತ್ತು. ಬಂಧನದ ಆದೇಶಕ್ಕೆ ಯಾವುದೇ ಪೂರಕ ಪುರಾವೆಗಳಿಲ್ಲ ಮತ್ತು ಅಧಿಕಾರಿಗಳು ‘ಯಾವುದೇ ವಿವೇಚನೆ ಬಳಸದೆ’ ಈ ಆದೇಶವನ್ನು ಹೊರಡಿಸಿದ್ದಾರೆ ಎಂದು ಕೋರ್ಟ್ ಹೇಳಿತ್ತು.
“ಖಂಡನಾರ್ಹ ಆದೇಶವನ್ನು ಹೊರಡಿಸಿದ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯ ನಡವಳಿಕೆಯು ತೀವ್ರ ನಿಂದನೆಗೆ ಅಥವಾ ಅಪಹಾಸ್ಯಕ್ಕೆ ಅರ್ಹವಾಗಿದೆ” ಎಂದು ನ್ಯಾಯಾಲಯ ಹೇಳಿತ್ತು.
“ಚೌಧರಿಯವರನ್ನು ಒಂದು ‘ಉದಾಹರಣೆಯನ್ನಾಗಿ’ ಬಿಂಬಿಸಲು ಮತ್ತು ಕಾರ್ಮಿಕರ ಬೆಂಬಲಕ್ಕಾಗಿ ಇತರರು ತಮ್ಮ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸದಂತೆ ತಡೆಯಲು ರೂಪಮ್ ಅವರು ಬಯಸಿದ್ದಂತೆ ತೋರುತ್ತಿದೆ” ಎಂದು ಪೀಠವು ಹೇಳಿತ್ತು. ಅಧಿಕಾರಿಗಳ ಇಂತಹ ‘ಸ್ವಪಕ್ಷೀಯ ಮತ್ತು ಸರ್ವಾಧಿಕಾರಿ’ ನಡವಳಿಕೆಯು ಉತ್ತರ ಪ್ರದೇಶವನ್ನು ಜಾರ್ಜ್ ಆರ್ವೆಲ್ ಕಾದಂಬರಿಗಳಲ್ಲಿನ ಕಲ್ಪಿತ ದಬ್ಬಾಳಿಕೆಯ ಜಗತ್ತನ್ನಾಗಿ (ಒರೆವೆಲ್ಲಿಯನ್ ಡಿಸ್ಟೋಪಿಯಾ) ಪರಿವರ್ತಿಸಬಹುದು ಎಂದು ಕೋರ್ಟ್ ಎಚ್ಚರಿಸಿತ್ತು.
ನ್ಯಾಯಾಲಯವು ರೂಪಮ್ ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಇದನ್ನು ಅವರ ಸೇವಾ ದಾಖಲೆಗಳಲ್ಲಿ (ಸರ್ವಿಸ್ ರೆಕಾರ್ಡ್ಸ್) ದಾಖಲಿಸುವಂತೆ ಸೂಚಿಸಿತ್ತು. ಅಲ್ಲದೆ, 5 ಲಕ್ಷ ರೂಪಾಯಿಗಳ ಪರಿಹಾರದ ಮೊತ್ತವನ್ನು ಕೇವಲ ಸಾರ್ವಜನಿಕ ಹಣದಿಂದ ನೀಡದೆ, ‘ತಳಮಟ್ಟದ ಎಸ್ಎಚ್ಒವರೆಗಿನ ಜವಾಬ್ದಾರಿಯುತ ಅಧಿಕಾರಿಗಳ ವೇತನದಿಂದಲೇ ವಸೂಲಿ ಮಾಡಬೇಕು ಎಂದು ಆದೇಶಿಸಿತ್ತು.


