ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಕೇವಲ ಒಗ್ಗಟ್ಟಿನ ಮಾತುಗಳನ್ನಾಡಿದರೆ ಸಾಲದು, ಅದಕ್ಕೆ ತಕ್ಕಂತೆ ನಿರಂತರ ಹಾಗೂ ಪರಿಣಾಮಕಾರಿ ಹೆಜ್ಜೆಗಳನ್ನಿಡಬೇಕು ಎಂದು ಪಕ್ಷವು ಆಗ್ರಹಿಸಿದೆ.
ಎಐಸಿಸಿ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷ ಸಲ್ಮಾನ್ ಖುರ್ಷಿದ್ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, “ಬ್ರಿಕ್ಸ್ ಸದಸ್ಯ ರಾಷ್ಟ್ರವಾಗಿರುವ ಇರಾನ್ ಮೇಲಿನ ದಾಳಿಗಳನ್ನು ಭಾರತ ಬೆಂಬಲಿಸುತ್ತಿದೆ ಎಂಬ ಗ್ರಹಿಕೆಯನ್ನು ಹೋಗಲಾಡಿಸಬೇಕು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ರಾಜತಾಂತ್ರಿಕ ಪಾತ್ರ ಅತ್ಯಂತ ಸೀಮಿತವಾಗಿದೆ ಹಾಗೂ ಬ್ರಿಕ್ಸ್ ಸದಸ್ಯರ ನಡುವೆ ಒಮ್ಮತ ಮೂಡಿಸುವಲ್ಲಿ ಅನಾಸಕ್ತಿ ತೋರಿದೆ. ಅಲ್ಲದೆ, ಬ್ರಿಕ್ಸ್ನ ಸ್ಥಾಪಕ ಸದಸ್ಯ ರಾಷ್ಟ್ರ ದಕ್ಷಿಣ ಆಫ್ರಿಕಾ ರಾಜತಾಂತ್ರಿಕ ಒತ್ತಡಗಳನ್ನು ಎದುರಿಸಿದಾಗ ಭಾರತ ಸೂಕ್ತ ಬೆಂಬಲ ನೀಡಿರಲಿಲ್ಲ. ಈ ಎಲ್ಲಾ ಗೊಂದಲಗಳನ್ನು ನಿವಾರಿಸಲು ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲೂ ಭಾರತವು ವಿಶ್ವಾಸಾರ್ಹ ಪಾಲುದಾರನಾಗಿ ನಿಲ್ಲುತ್ತದೆ ಎಂಬುದನ್ನು ಸಾಬೀತುಪಡಿಸುವ ಮೂಲಕ ವಿಶ್ವಾಸವನ್ನು ಮರುನಿರ್ಮಾಣ ಮಾಡಬೇಕು ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವ ಜೊತೆಗೆ, ಬ್ರಿಕ್ಸ್ ಒಕ್ಕೂಟಕ್ಕೆ ಭಾರತವು ನೈತಿಕ ನಾಯಕತ್ವ ಹಾಗೂ ಕಾರ್ಯತಂತ್ರದ ಸ್ಪಷ್ಟತೆಯನ್ನು ಒದಗಿಸಬೇಕು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಜಾಗತಿಕ ಸರಕು ವ್ಯಾಪಾರದಲ್ಲಿ ಶೇ.19.6ರಷ್ಟು ಪಾಲು ಹೊಂದಿರುವ ಬ್ರಿಕ್ಸ್ ರಾಷ್ಟ್ರಗಳೊಂದಿಗಿನ ಭಾರತದ ವ್ಯಾಪಾರ ಸಂಬಂಧವು ಅತ್ಯಂತ ‘ಅಸಮತೋಲನ’ದಿಂದ ಕೂಡಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಬ್ರಿಕ್ಸ್ ಪೇ ಸಿಸ್ಟಮ್ (BRICS Pay System) ಕುರಿತ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿರುವ ಪಕ್ಷವು, ಭಾರತೀಯ ಸರಕು ಮತ್ತು ಸೇವೆಗಳಿಗೆ ಬ್ರಿಕ್ಸ್ ರಾಷ್ಟ್ರಗಳಲ್ಲಿ ಹೆಚ್ಚಿನ ಮಾರುಕಟ್ಟೆ ಅವಕಾಶ ಕಲ್ಪಿಸಬೇಕು. ಸುಂಕ ರಹಿತ ಹಾಗೂ ಇತರ ಮಾರುಕಟ್ಟೆ ಅಡೆತಡೆಗಳನ್ನು ನಿವಾರಿಸಿ, ಭಾರತೀಯ ಉದ್ಯಮಗಳಿಗೆ ನ್ಯಾಯಸಮ್ಮತ ಅವಕಾಶಗಳನ್ನು ಒದಗಿಸಿಕೊಡಲು ಕೇಂದ್ರ ಸರ್ಕಾರ ತನ್ನ ಅಧ್ಯಕ್ಷೀಯ ಸ್ಥಾನವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಪೂರೈಕೆ ಸರಪಳಿಯ (Supply chains) ಭದ್ರತೆ ಮತ್ತು ಎಲ್ಲರನ್ನೊಳಗೊಂಡ ಸಂಪರ್ಕ ಜಾಲವನ್ನು ಸಾಧಿಸಲು ಒಮ್ಮತ ಮೂಡಿಸುವುದು ಅತ್ಯಗತ್ಯವಾಗಿದೆ. ಜೊತೆಗೆ, 2014ರಲ್ಲಿ ಸ್ಥಾಪಿಸಲಾದ ‘ಕಂಟಿಂಜೆಂಟ್ ರಿಸರ್ವ್ ಅರೇಂಜ್ಮೆಂಟ್’ (CRA) ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಭಾರತವು ಈಗಾಗಲೇ 18 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡುವುದಾಗಿ ವಾಗ್ದಾನ ಮಾಡಿದೆ ಎಂಬುದನ್ನು ಕಾಂಗ್ರೆಸ್ ನೆನಪಿಸಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉಲ್ಲೇಖಿಸಿರುವ ಪಕ್ಷವು, ಭಾರತವು ತನ್ನ ಕಾರ್ಯತಂತ್ರದ ಏಳಿಗೆಯೊಂದಿಗೆ ಸಮಾನತೆ, ಶಾಂತಿಯುತ ಸಹಬಾಳ್ವೆ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯಬೇಕು ಎಂದಿದೆ. ಹಿಂದೊಮ್ಮೆ ಕೊರಿಯಾ ಯುದ್ಧದ ಸಂದರ್ಭದಲ್ಲಿ ಭಾರತ ವಹಿಸಿದ ಮಧ್ಯಸ್ಥಿಕೆ, ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧದ ಹೋರಾಟ ಹಾಗೂ ಜಾಗತಿಕ ಸಂಸ್ಥೆಗಳ ಸುಧಾರಣೆಗೆ ಭಾರತ ನೀಡಿದ್ದ ಕೊಡುಗೆಗಳನ್ನು ಉದಾಹರಣೆಯಾಗಿ ನೀಡಿದೆ. ಬ್ರಿಕ್ಸ್ ಶೃಂಗಸಭೆಯನ್ನು ಗುಂಪುಗಾರಿಕೆಯ ರಾಜಕೀಯಕ್ಕೆ (Bloc politics) ಬಳಸಿಕೊಳ್ಳದೆ, ಸದಸ್ಯ ರಾಷ್ಟ್ರಗಳ ನಡುವೆ ಒಗ್ಗಟ್ಟು ಮೂಡಿಸಲು ವೇದಿಕೆಯನ್ನಾಗಿಸಬೇಕು. ‘ಗ್ಲೋಬಲ್ ಸೌತ್’ ಮತ್ತು ‘ಗ್ಲೋಬಲ್ ನಾರ್ತ್’ ನಡುವೆ ವಿಶ್ವಾಸಾರ್ಹ ಸೇತುವೆಯಾಗಿ ಭಾರತ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.
ಇದರೊಂದಿಗೆ, 2021ರಲ್ಲಿ ಬ್ರಿಕ್ಸ್ ಅಧ್ಯಕ್ಷತೆ ವಹಿಸಿದ್ದಾಗ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಗಮನಹರಿಸಬೇಕು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಕಾಯಂ ಸದಸ್ಯತ್ವ ಪಡೆಯುವ ಭಾರತದ ಹಕ್ಕಿಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಂದ ದೃಢ ಬೆಂಬಲವನ್ನು ಗಿಟ್ಟಿಸಿಕೊಳ್ಳುವಂತೆಯೂ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
Courtesy : eedina.com


