ಗಣರಾಜ್ಯೋತ್ಸವದಂದು ಪೌರತ್ವ ಕಾನೂನಿನ ವಿರುದ್ಧ ಅಮೆರಿಕದ 30 ನಗರಗಳಲ್ಲಿ ಭಾರತೀಯ-ಅಮೆರಿಕನ್ನರು ಶಾಂತಿಯುತ ರ್ಯಾಲಿ ಮತ್ತು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದಾರೆ.
ಇನ್ನು ಕೆಲವೆಡೆ ಸಿಎಎ ಪರವಾಗಿ ಸಹ ಪ್ರತಿಭಟನೆ ನಡೆದಿದ್ದು, “ಭಾರತವು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುತ್ತದೆ” ಮತ್ತು ಸಿಎಎ ಭಾರತೀಯ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇನ್ನು ಕನಿಷ್ಟ 30ನಗರಗಳಲ್ಲಿ ಸಿಎಎ ವಿರೋಧಿ ಬ್ಯಾನರ್ಗಳನ್ನು ಹಿಡಿದ ಜನರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸಿಎಎ, ಎನ್ಪಿಆರ್ ರದ್ದುಪಡಿಸಬೇಕು ಮತ್ತು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದ ಭಾರತದ ಜಾತ್ಯತೀತ ತತ್ವಕ್ಕೆ ಅಪಾಯವಿದೆ ಎಂದು ಅವರು ಸಾರಿ ಹೇಳಿದ್ದಾರೆ.
ಕೆಲವು ನಗರಗಳಲ್ಲಿ, ವಿಶೇಷವಾಗಿ ನ್ಯೂಯಾರ್ಕ್, ಚಿಕಾಗೊ, ಹೂಸ್ಟನ್, ಅಟ್ಲಾಂಟಾ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಭಾರತೀಯ ದೂತಾವಾಸಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನಾಕಾರರು “ಭಾರತ್ ಮಾತಾ ಕಿ ಜೈ” ಮತ್ತು “ಹಿಂದೂ, ಮುಸ್ಲಿಂ, ಸಿಖ್, ಇಸಾಯ್ : ಆಪಾಸ್ ಮೇ ಸಾಬ್ ಭಾಯ್ ಭಾಯ್ ” ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನಾಕಾರರ ಅತಿದೊಡ್ಡ ಸಭೆ ಚಿಕಾಗೊದಿಂದ ವರದಿಯಾಗಿದೆ. ಅಲ್ಲಿ ಭಾರತೀಯ ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿದರು ಮತ್ತು ಹಲವಾರು ಮೈಲಿ ಉದ್ದದ ಮಾನವ ಸರಪಳಿಯನ್ನು ರಚಿಸಿದ್ದಾರೆ.
ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ 500 ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಸಿಎಎ ವಿರೋಧಿಸಿ ಶ್ವೇತಭವನದ ಬಳಿಯ ಉದ್ಯಾನವನದಿಂದ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಗೆ ಮೆರವಣಿಗೆ ನಡೆಸಿದ್ದಾರೆ.
ಭಾರತೀಯ ಅಮೆರಿಕನ್ ಮುಸ್ಲಿಂ ಕೌನ್ಸಿಲ್ (ಐಎಎಂಸಿ), ಈಕ್ವಾಲಿಟಿ ಲ್ಯಾಬ್ಸ್, ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್ಎಂ), ಮತ್ತು ಮಾನವ ಹಕ್ಕುಗಳಿಗಾಗಿ ಹಿಂದೂಗಳು (HfHR), ಯಹೂದಿ ವಾಯ್ಸ್ ಫಾರ್ ಪೀಸ್ (ಜೆವಿಪಿ) ನಂತಹ ಹಲವಾರು ಸಂಸ್ಥೆಗಳನ್ನು ಒಳಗೊಂಡ ಕನಿಷ್ಠ 30 ನಗರಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ.
“ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳ ಮೇಲೆ ಭಾರತದಲ್ಲಿ ಸರ್ಕಾರವು ನಡೆಸಿದ ಕ್ರೂರ ದಬ್ಬಾಳಿಕೆಯು ಸರ್ಕಾರದ ವಿಭಜಕ-ಕೋಮು-ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ತೋರಿಸುತ್ತಿದೆ. ಇದನ್ನು ಪ್ರಶ್ನಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬೀದಿಗಿಳಿದಿರುವ ಪರಿಸ್ಥಿತಿಯನ್ನು ಸೃಷ್ಟಿಸಿದೆ” ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಪಾಂಡೆ ಸಂದೀಪ್ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.
ಸಂವಿಧಾನವನ್ನು ಸರ್ಕಾರ ನಾಶಮಾಡಲು ಮುಂದಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅಂತಿಮವಾಗಿ ಜನ ಸಾಮಾನ್ಯರು ಮಾತ್ರ ರಕ್ಷಿಸಬಹುದೆಂಬ ಭರವಸೆಯನ್ನು ಈ ಹೋರಾಟಗಳು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.
“ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಮೋದಿ-ಷಾ ಸರ್ಕಾರದ ಕಠಿಣ ನೀತಿಗಳ ವಿರುದ್ಧ ಜಾಗತಿಕ ಒಮ್ಮತವನ್ನು ಪ್ರತಿನಿಧಿಸುತ್ತವೆ” ಎಂದು ನ್ಯೂಯಾರ್ಕ್ನ ಡಾ.ಶೇಕ್ ಉಬೈದ್ ಹೇಳಿದ್ದಾರೆ.