Homeಮುಖಪುಟಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ...

ಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ ದಿವಾನ್ ಶರೀಫ್

- Advertisement -
- Advertisement -

ಮೇಲಿನ ತಲೆಬರಹವನ್ನು ‘ಲಿಂಗಾಯತ ಮಠದ ಪೀಠದಲ್ಲಿ ಮುಲ್ಲಾ’ ಎಂದು ಒಂದು ವ್ಯಾಟ್ಸಾಪ್ ಸಂದೇಶ ಅಥವಾ ಫೇಸ್‌ಬುಕ್ ಪೋಸ್ಟ್ ಹಾಕಿ ನೋಡಿ, ಈ ದೇಶದ ಸಂವಿಧಾನ, ಸರ್ವಧರ್ಮ ಗೌರವಿಸುವವರು ಕುತೂಹಲದಿಂದ, ‘ಒಳ್ಳೆ ಬೆಳವಣಿಗೆ. ವಿವರ ಕೊಡಿ’ ಎನ್ನುತ್ತಾರೆ. ಆದರೆ, ಹಿಂದೆ ಮುಂದೆ ನೋಡದ, ಹುಸಿ ದೇಶಭಕ್ತಿಯ ಅಮಲಿನಲ್ಲಿ ತೇಲುತ್ತಿರುವವರು ಟ್ರೋಲ್ ಮಾಡಲು ಆರಂಭಿಸುತ್ತಾರೆ.

ಇಂತಹ ಒಂದು ಬಿಕ್ಕಟ್ಟಿನ ಕಾಲದಲ್ಲೂ ಬೆಳ್ಳಿಗೆರೆಗಳು ಮೂಡುತ್ತಿವೆ. ಇವತ್ತಿನ ಸಾಮಾಜಿಕ-ಧಾರ್ಮಿಕ ತಲ್ಲಣಗಳನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಎಂಬ ಪುಟ್ಟ ಗ್ರಾಮದಲ್ಲಿ ಒಂದು ದೊಡ್ಡ ಕ್ರಾಂತಿ ನಡೆದಿದೆ. ಮುಸ್ಲಿಂ ಯುವಕನೊಬ್ಬ ಇಷ್ಟಲಿಂಗ ದೀಕ್ಷೆ ಪಡೆದು, ಬಸವ ತತ್ವದ ಮುರುಘರಾಜೇಂದ್ರ ಕೋರಣೇಶ್ವರ ಮಠದ (ಶಾಂತಿಧಾಮ) ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅನೇಕ ದಲಿತ, ಹಿಂದುಳಿದವರನ್ನು ತಮ್ಮ ಶಾಖಾಮಠಗಳಿಗೆ ನೇಮಿಸಿದ ಚಿತ್ರದುರ್ಗದ ಮುರುಘಾಮಠದ ಶಾಖಾ ಮಠಗಳಲ್ಲಿ ಈ ಅಸೂಟಿ ಮಠವೂ ಒಂದು.

ಈ ಹೊತ್ತಿನಲ್ಲಿ ಇದು ಏಕೆ ಮುಖ್ಯವೆಂದರೆ, ಧರ್ಮಾಧಾರಿತ ಪೌರತ್ವ ಪ್ರತಿಪಾದಿಸಲು ಹೊರಟ ಪಟ್ಟಭದ್ರ ಶಕ್ತಿಗಳಿಗೆ ಇಂತಹ ಸಣ್ಣ, ಆದರೆ ಧಾರ್ಮಿಕವಾಗಿ ಅತಿ ಮಹತ್ವದ್ದಾದ ಘಟನೆಗಳೇ ಉತ್ತರ ಕೊಡಬಲ್ಲವು. ಧರ್ಮದ ಆಧಾರದಲ್ಲಿ ವಿಭಜನೆ ನಿರೀಕ್ಷಿಸಿದ್ದವರು ಬೆಚ್ಚಿ ಬೀಳುವಂತೆ ದೇಶದ ಜನರು ಸಿಎಎ-ಎನ್‌ಆರ್‌ಸಿ ವಿರುದ್ಧ ಧರ್ಮಾತೀತರಾಗಿ ಬೀದಿಗಿಳಿದ ಈ ಹೊತ್ತಲ್ಲೇ, ಮುನ್ನಾ ಎಂಬ ಯುವಕ ಬಸವ ತತ್ವದ ಲಿಂಗಾಯತ ಮಠದ ಪೀಠಾಧಿಪತಿಯಾಗುತ್ತಿರುವುದು ಏಕತೆ, ಸೌಹಾರ್ದತೆಯ ಸಂದೇಶವನ್ನು ಗಾಢವಾಗಿ ಹರಡಲಿದೆ.

ಬಸವ ಪರಂಪರೆಯ ವಾರಸುದಾರರು
ಅಸೂಟಿಯ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳು ಅಪ್ಪಟ ಬಸವಪ್ರಿಯರು. ಆಚರಣೆಯಲ್ಲೂ ಅವರು ಅದನ್ನು ಪಾಲಿಸುತ್ತ ಬಂದಿದ್ದಾರೆ. ಅವರ ಪುಟ್ಟ ಮಠಕ್ಕೆ ಎಲ್ಲ ಜಾತಿ ಜನಾಂಗಗಳ ಭಕ್ತರಿದ್ದು, ಇಸ್ಲಾಂ ಧರ್ಮದವರೂ ಅನುಯಾಯಿಗಳಾಗಿದ್ದಾರೆ.

ಧರ್ಮ ನಿರಪೇಕ್ಷತೆ, ಜಾತ್ಯಾತೀತೆಗಳಲ್ಲಿ ನಂಬಿಕೆಯಿಟ್ಟ ಅಸೂಟಿಯ ಮುನ್ನಾ ಮತ್ತು ಆತನ ತಂದೆ-ತಾಯಿ ಕೋರಣೇಶ್ವರ ಮಠದ ಭಕ್ತರು. ಬಸವ ತತ್ವದಲ್ಲಿ ಮುನ್ನಾ ತೋರಿದ ಆಸಕ್ತಿ, ಆತನ ಕಲಿಕೆ, ನಿರ್ಮಲ ಮನಸ್ಸನ್ನು ಗಮನಿಸಿದ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿ, ಮುನ್ನಾಗೆ ಲಿಂಗದೀಕ್ಷೆ ನೀಡಿದ್ದಾರೆ. ಮುನ್ನಾ ಈಗ ದಿವಾನ್ ಶರೀಫ್ ಮುಲ್ಲಾ ಆಗಿದ್ದಾರೆ. ಫೆಬ್ರುವರಿ 20ರ ನಂತರ ನಡೆಯಲಿರುವ ಬಸವ ತತ್ವ ಉತ್ಸವದಲ್ಲಿ ದಿವಾನ್ ಶರೀಫರು ಅಧಿಕೃತವಾಗಿ ಮಠದ ಪೀಠವೇರಲಿದ್ದಾರೆ.

ಸೂಫಿ ಪರಂಪರೆಯ ನೆಲವಿದು
ಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಜನಿವಾರ ಹಾಕಿ ಜಾತಿ ಕಟ್ಟಳೆ ಮುರಿದಿದ್ದರು. ಈಗ ಅದೇ ಹಾದಿಯಲ್ಲಿ ಕೋರಣೇಶ್ವರ ಶ್ರೀಗಳು ಸಂವಿಧಾನ ಮತ್ತು ಬಸವ ತತ್ವಗಳ ಆಶಯಕ್ಕೆ ಅನುಗುಣವಾಗಿ ಇಸ್ಲಾಂ ಧರ್ಮದ ಯುವಕನಿಗೆ ಮನ್ನಣೆ ನೀಡಿದ್ದಾರೆ.

ಈ ದೇಶದ ಮಣ್ಣಲ್ಲಿ ಧರ್ಮಗಳು ಒಂದರಲ್ಲೊಂದಾಗಿ ಬೆರೆತು ಬದುಕಿದ ಭಾವಸೆಲೆಗಳಿವೆ. ಅಷ್ಟು ಸುಲಭವಾಗಿ ಕಾನೂನು, ಬಲಪ್ರಯೋಗ ಮೂಲಕ ಆ ಭಾವತಂತುವನ್ನು ಹರಿಯುವುದು ಸುಲಭವಲ್ಲ. ಈ ನೆಲದ ಸೂಫಿ ಪರಂಪರೆಯ ಗುಣಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಶಹೀನ್ ಬಾಗ್‌ನಲ್ಲಿ ಹಿಂದೂ-ಮುಸ್ಲಿಂ-ಸಿಖ್-ಜೈನ್ ಧರ್ಮದ ಹೆರ್ಣಮಕ್ಕಳೆಲ್ಲ ಸತತ 60ಕ್ಕೂ ಹೆಚ್ಚು ದಿನದಿಂದ ಒಡ್ಡುತ್ತಿರುವ ಪ್ರತಿರೋಧವೇ ಸಾಕ್ಷಿ. ಹಾಗೆಯೇ ಅಸೂಟಿಯಂತಹ ಪುಟ್ಟ ಹಳ್ಳಿಗಳಲ್ಲಿ ಮತ್ತೆ ಮತ್ತೆ ಬಸವ, ಕುವೆಂಪು ಹುಟ್ಟಿ ಬರುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಲಿಂಗದೀಕ್ಷೆಯೇ ಸಾಕ್ಷಿ.

32 ವರ್ಷದ ದಿವಾನ್ ಶರೀಫ ಮುಲ್ಲಾ ಕುಟುಂಬಕ್ಕೆ ಅಸೂಟಿ ಗ್ರಾಮದ ಹೊರವಲಯದಲ್ಲಿ ಎರಡು ಎಕರೆ ಜಮೀನಿತ್ತು. ಅದನ್ನೀಗ ಅವರು ಮಗನ ಜೊತೆ ಮಠಕ್ಕೆ ಧಾರೆ ಎರದಿದ್ದಾರೆ. ಅಲ್ಲೀಗ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದು, ಅದೇ ಮಠಕ್ಕೆ ಶರೀಫ ಪೀಠಾಧಿಪತಿ ಅಗಲಿದ್ದಾರೆ. ಶರೀಫ ಅವರಿಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಜನ ಮಕ್ಕಳೂ ಸಹ ಇದ್ದಾರೆ. ತಂದೆ ರಹೀಮ ಸಾಬ್ ಹಾಗೂ ತಾಯಿ ಫಾತೀಮ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎನ್ನುತ್ತಾರೆ ಮುಲ್ಲಾ ಶರೀಫ್ ಸ್ವಾಮಿ.

ಕಾರ್ಮೋಡಗಳ ಅಂಚಿನಲ್ಲಿ ಬೆಳ್ಳಿಗೆರೆ ಹುಟ್ಟವುದು ಹೀಗೆಯೇ ಅಲ್ಲವೇ? ಬಂದೇ ಬರುತಾವ ಕಾಲ ಎಂದು ಆಶಾವಾದಿಯಾದವರಿಗೆ ಯಾವ ಕೋಮುಶಕ್ತಿಯೂ ಅಲ್ಲಾಡಿಸಲು ಸಾಧ್ಯವಿಲ್ಲ. ಅಸೂಟಿ ಮಠದ ಈ ಪರಂಪರೆ ಉಳಿದ ಬಸವ ಮಠಗಳಿಗೂ ಹಬ್ಬಲಿ, ಮಾನವ ಧರ್ಮ ಎಲ್ಲೆಡೆ ಹರಡಲಿ. ಎಂದಿನಂತೆ ರಾಮ-ಭೀಮರು ಅಲಾಯಿ-ಕುಲಾಯಿ ಎಂದು ಕುಣಿಯಲಿ, ರಹೀಮರು ದೀಪಾವಳಿಯ ಚುರ್‌ಚುರ್ ಕಡ್ಡಿ ಬೆಳಗಲಿ.


ನಮ್ಮದು ಬಸವ ಪರಂಪರೆಯ ಮಠ. ಇಲ್ಲಿ ಎಲ್ಲ ಜಾತಿ-ಧರ್ಮಗಳಿಗೂ ಅವಕಾಶವಿದೆ. ಈ ನೆಲ ಸರ್ವ ಜನಾಂಗದ ಶಾಂತಿಯ ತೋಟ. ಈ ದೇಶದ ಎಲ್ಲರಿಗೂ ಅವರಿಗಿಷ್ಟವಾದ ಧರ್ಮವನ್ನು ಆಚರಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ. ಹನ್ನೆರಡನೇ ಶತಮಾನದಲ್ಲೇ ನಮ್ಮ ಶರಣರು ಇದನ್ನು ಪ್ರತಿಪಾದಿಸಿದ್ದಾರೆ. ವಚನಕಾರ ಮರುಳ ಶಂಕರ ಅಫಘಾನಿಸ್ತಾನ ಮೂಲದ ಸೂಫಿ ಸಂತರು. ಇಲ್ಲಿ ಮುನ್ನಾ ದಿವಾನ್ ಶರೀಫರಾಗಿ ಪೀಠ ಏರುತ್ತಿರುವ ಘಟನೆ ಆಸ್ತಿಗಾಗಿ ಅಲ್ಲ, ಅಸ್ತಿತ್ವಕ್ಕಾಗಿ. ಮಾನವ ಧರ್ಮದ ಅಸ್ತಿತ್ವಕ್ಕಾಗಿ. ಈಗಂತೂ ಇದನ್ನು ಯಾರೂ ವಿರೋಧಿಸಿಲ್ಲ. ವಿರೋಧಿಸುವವರು ಬಂದರೆ, ಅವರಿಗೆ ಸೌಹಾರ್ದಯುತ ರೀತಿಯಲ್ಲಿ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ನಮ್ಮ ಚಿತ್ರದುರ್ಗ ಮುರುಘರಾಜೇಂದ್ರ ಸ್ವಾಮೀಜಿ ಈ ನಡೆಯನ್ನು ಬೆಂಬಲಿಸಿದ್ದಾರೆ.
-ಮುರುಘರಾಜೇಂದ್ರ ಕೋರಣೇಶ್ವರ ಶ್ರೀ, ಅಸೂಟಿ


ನನ್ನ ತಂದೆ, ತಾಯಿ ಮೊದಲಿನಿಂದಲೂ ಕೋರಣೇಶ್ವರ ಮಠದ ಭಕ್ತರು. ನಾನು ಓದಿದ್ದು ಮೂರನೇ ತರಗತಿ. ಆದರೆ ಬಸವ ತತ್ವಕ್ಕೆ ಆಕರ್ಷಿತನಾಗಿ ಮಾನವತೆಯೇ ದೊಡ್ಡ ಧರ್ಮ ಎಂದು ಅರಿತುಕೊಂಡಿದ್ದೇನೆ. ತಮ್ಮ ಇಷ್ಟದ ಧರ್ಮ ಆಚರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ. ಬಸವಧರ್ಮ ಯಾವ ತಾರತಮ್ಯವೂ ಇಲ್ಲದೇ ಎಲ್ಲರನ್ನೂ ಮನುಷ್ಯರೆಂದೇ ಪರಿಗಣಿಸುತ್ತದೆ.
-ದಿವಾನ್ ಶರೀಫ ಮುಲ್ಲಾ


ಕಳೆದ ವಾರವೇ ಈ ಸುದ್ದಿ ಕಿವಿಗೆ ಬಿದ್ದಾಗ ಖುಷಿಯಾಗಿತ್ತು. ಇವತ್ತಿನ ಈ ದುರಿತ ಕಾಲದಲ್ಲಿ ಇಂತಹ ಪುಟ್ಟ ಪುಟ್ಟ ದೀಪಗಳೇ ನಮಗೆ ಬೆಳಕು. ಸೂಫಿ ಮತ್ತು ಬಸವ ಪರಂಪರೆಯ ನೆರಳನ್ನು ಅಸೂಟಿ ಕ್ರಾಂತಿಯಲ್ಲಿ ಕಾಣುತ್ತಿದ್ದೇನೆ.
ಡಾ. ಅರುಣ್ ಜೋಳದಕೂಡ್ಲಿಗಿ, ಸಂಶೋಧಕ
ಕನ್ನಡ ವಿವಿ, ಹಂಪಿ


ಯಾರು ಯಾವ ಧರ್ಮ ಇಷ್ಟಪಡುತ್ತಾರೋ ಅದನ್ನು ಸ್ವೀಕರಿಸಲು ಸ್ವತಂತ್ರರು. ಮುನ್ನಾ ಎಂಬ ಯುವಕನ ಇಚ್ಛೆಯನ್ನು ಗೌರವಿಸಿ, ಆತನನ್ನು ಮಠವೊಂದಕ್ಕೆ ಪೀಠಾಧಿಪತಿ ಮಾಡುತ್ತಿರುವ ಸ್ವಾಮೀಜಿಯ ವೈಶಾಲ್ಯತೆ ದೊಡ್ಡದು. ಕುತೂಹಲದ ವಿಷಯ ನೋಡಿ: ಶರಣರ ಲಿಂಗಾಯತ ಮತ್ತು ಪ್ರವಾದಿಗಳ ಇಸ್ಲಾಂ ಧರ್ಮಗಳಲ್ಲಿ ಮೂರ್ತಿ ಪೂಜೆಯಿಲ್ಲ, ಏಕದೇವೋಪಾಸನೆಯೇ ಎರಡರಲ್ಲೂ ಆಚರಣೆಯಲ್ಲಿದೆ.
-ರಂಜಾನ ದರ್ಗಾ, ಚಿಂತಕ-ಲೇಖಕ, ಧಾರವಾಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...