Homeಮುಖಪುಟನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು...

ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…

38 ದಿನಗಳ ಕಳಪೆ ಸಂಪಾದಕ ಎಂದು ದೊರೆಸ್ವಾಮಿಯವರನ್ನು ಹಂಗಿಸಿದ್ದಕ್ಕೆ ಅವರು ಕೊಟ್ಟ ಉತ್ತರ ಇಲ್ಲಿದೆ.

- Advertisement -
- Advertisement -

ಬಾಬು ಕೃಷ್ಣಮೂರ್ತಿಯವರು ಪತ್ರಕರ್ತರು, ಬರಹಗಾರರು, ಒಳ್ಳೆಯ ಚಾರಿತ್ರಿಕ ಪುಸ್ತಕಗಳನ್ನು ಬರೆದಿದ್ದಾರೆ. ನನಗೆ ಅವರಲ್ಲಿ ಇಂದಿಗೂ ಪ್ರೀತಿ ಇದೆ. ಬಾಬು ಕೃಷ್ಣಮೂರ್ತಿಯವರನ್ನು ಅವರು ಮಗುವಾಗಿದ್ದಾಗಿನಿಂದಲು ಬಲ್ಲೆ. ಅವರ ತಾಯಿ ಸೀತಮ್ಮ, ತಂದೆ ಶಾಸ್ತ್ರಿ ಆಯುರ್ವೇದ ಪಂಡಿತರು. ಸೀತಮ್ಮನವರು ನಿಧನರಾಗುವುದಕ್ಕೆ­ ಮೊದಲು ನಾನು ಅವರನ್ನು ಭಾರತಿ ನರ್ಸಿಂಗ್ ಹೋಂಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ.

ಬಾಬು ನನ್ನನ್ನು ಮೊದಲ ಬಾರಿಗೆ ಈಗ ತರಾಟೆಗೆ ತೆಗೆದುಕೊಂಡಿದ್ದಾರೆ. ಗೋಡ್ಸೆ ವಿಚಾರದಲ್ಲಿ ಅವರು ನನ್ನ ಮೇಲೆ ಆಗ್ರಹ ಮಾಡಿರುವುದಕ್ಕೆ ನಾನು ಅವರ ಬಗೆಗೆ ಈ ರೀತಿ ಹೇಳುತ್ತಿಲ್ಲ. ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರವನ್ನು ನಾನು ಆನಂತರ ಪ್ರಸ್ತಾಪಿಸುತ್ತೇನೆ.

ಬಾಬು ಕೃಷ್ಣಮೂರ್ತಿ ನನ್ನನ್ನು ಕೆಲಸಕ್ಕೆ ಬಾರದ 38 ದಿನಗಳ ಪತ್ರಿಕಾ ಸಂಪಾದಕ ಎಂದು ಕರೆದು ಹಂಗಿಸಿದ್ದಾರೆ. ಈ ಮಾತು ನನ್ನನ್ನು ಇರಿಯಿತು. ಜೂಲಿಯಸ್ ಸೀಸರ್ ತನ್ನ ಪರಮ ಸ್ನೇಹಿತ ಎಂದುಕೊಂಡಿದ್ದ ಬ್ರೂಟಸ್ ತನ್ನನ್ನು ಇರಿದಾಗ `Yours is the  most unkindest cut of all’  ಎಂದು ಜರಿದ.

ಪತ್ರಿಕಾ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ನನ್ನನ್ನು 38 ದಿನಗಳ ಕಳಪೆ ಸಂಪಾದಕ ಎಂದು ಹೇಳಿರುವುದನ್ನು ಕುರಿತು ನಾನೂ ಕೂಡ Yours is the most unkindest cut of all’ಎಂದು ಹೇಳಬೇಕಿದೆ. ಸೀಸರ್ ಬ್ರೂಟಸ್‍ನ ಈ ಗೆಯ್ಮೆಯನ್ನುSuperlatives ನಲ್ಲಿ Unkindest ಎಂದು ಮಾತ್ರ ಹೇಳದೆ Most ಎಂಬ ಇನ್ನೊಂದು Superlatives ಕೂಡಾ ಬಳಸಿದ್ದಾನೆ. ಬ್ರೂಟಸ್‍ನ ಈ ಕೃತ್ಯ ಸೀಜರ್‌ನನ್ನು ದಿಗ್ಭ್ರಮೆಗೋಳಿಸಿದೆ. ಬಾಬುಕೃಷ್ಣಮೂರ್ತಿಯವರ ಈ ಮಾತು ನನ್ನನ್ನು ಸೀಜರ್‌ನಷ್ಟೇ ದಿಗ್ಭ್ರಮೆಗೊಳಿಸಿದೆ.

ಪೌರವಾಣಿ ಪತ್ರಿಕೆಯನ್ನು ಆರಂಭಿಸಿದ ನಮಗೆ – ಸ್ವಾತಂತ್ರ್ಯ ಹೋರಾಟಗಾರ ಯುವಕರು – ಸ್ವಾತಂತ್ರ್ಯ ಬೇಗ ದೊರಕಿಸಿಕೊಳ್ಳಬೇಕು ಎಂಬ ತವಕವಿತ್ತು. ನಮ್ಮ ನಾಯಕರನ್ನು ಪ್ರತಿ ಎಂಪಿಸಿಸಿ ಸಭೆಯಲ್ಲೂ ಜವಾಬ್ದಾರಿ ಸರ್ಕಾರ ಪಡೆಯಲು ತಡಮಾಡದೆ ಹೋರಾಟ ಆರಂಭಿಸಬೇಕೆಂದು ಒತ್ತಾಯ ತರುತ್ತಿದ್ದೆವು. ಇದಕ್ಕೆ ಪೂರಕವಾಗಿ ಒಂದು ಪತ್ರಿಕೆಯನ್ನು ಆರಂಭಿಸಲೂ ತೀರ್ಮಾನಿಸಿದೆವು. ಪೌರವಾಣಿ ಬೆಂಗಳೂರಿನಲ್ಲಿ ಜನ್ಮ ತಾಳಿತು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದ ದೊಡ್ಡಬಳ್ಳಾಪುರದ ರುಮಾಲೆ ಭದ್ರಣ್ಣನವರು ಪೌರವಾಣಿಯ ಮೊದಲ ಸಂಪಾದಕರಾದರು. ಪೌರವಾಣಿ ದಿನಪತ್ರಿಕೆ ಬೆಲೆ 3 ಕಾಸು. ರಾಯಟರ್ಸ್ ಮತ್ತು ಪಿಟಿಐ ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದೆವು.

ಪತ್ರಿಕೆ ಬಹಳ ಬೇಗ ಜನಾದರಣೆ ಗಳಿಸಿತು. ಭದ್ರಣ್ಣನವರು ನಾಯಿ ಕಚ್ಚಿ ಹೈಡ್ರೋಫೋಬಿಯಾ ಎಂಬ ರೋಗಕ್ಕೆ ಬಲಿಯಾದರು. ಅವರು ಸಾಯುವ ಮೊದಲು ನಮ್ಮ ಯುವಬಳಗವೆಲ್ಲ ಆಸ್ಪತ್ರೆಗೆ ಹೋಗಿ ಅವರನ್ನು ಕಂಡೆವು. ಅವರು ನಮ್ಮೆಲ್ಲರನ್ನು ಕುರಿತು “ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ಮೈಸೂರಿನ ಪ್ರಜೆಗಳಿಗೆ ಸ್ವಾತಂತ್ರ್ಯ ಬಂದಿಲ್ಲ. ಮಹಾರಾಜರು Accession  ಒಪ್ಪುತ್ತಿಲ್ಲ. ಅವರನ್ನು ಒಪ್ಪಿಸುವುದಕ್ಕಾಗಿ ಹೋರಾಟ ಮಾಡಬೇಕಾಗಿದೆ. ಪೌರವಾಣಿ ಪತ್ರಿಕೆ ಈ ಹೋರಾಟಕ್ಕೆ ಹೊಯ್‍ಕೈಯಾಗಿಸಿಲ್ಲ ಬೆಂಬಲಿಸಿದೆ. ಪೌರವಾಣಿ ಪತ್ರಿಕೆ ಈಗ ಜನಪ್ರಿಯವಾಗಿದೆ ನೀವು ಈ ಪತ್ರಿಕೆಯನ್ನು ಅಂತಿಮ ಗುರಿ ಮುಟ್ಟುವವರೆಗೂ ನಡೆಸಿಕೊಂಡು ಹೋಗಬೇಕು” ಎಂದು ಕೈಮುಗಿದು ಕೇಳಿಕೊಂಡರು.

ಕೆಲಹೊತ್ತಿನಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು. ಭದ್ರಣ್ಣನವರ ನೆಂಟರು, ನಾವೂ ಸೇರಿ ಅವರ ಅಂತ್ಯಕ್ರಿಯೆ ಮುಗಿಸಿದೆವು. ರಾತ್ರಿ ಪೌರವಾಣಿ ಕಚೇರಿಯಲ್ಲಿ ಸೇರಿದ್ದ ನಾವೆಲ್ಲ ಮುಂದೆ ಯಾರು ಸಂಪಾದಕರಾಗಬೇಕೆಂದು ಚರ್ಚಿಸಿದೆವು. ಕೊನೆಗೆ ನನ್ನನ್ನು ಸಂಪಾದಕನಾಗುವಂತೆ ಒತ್ತಾಯಿಸಿದರು. ನಾನು ಆಗ ಮೈಸೂರಿನಲ್ಲಿ ಸಾಹಿತ್ಯ ಮಂದಿರ ಎಂಬ ಪುಸ್ತಕದಂಗಡಿ ಮತ್ತು ಪ್ರಕಾಶನ ಸಂಸ್ಥೆ ನಡೆಸುತ್ತಿದ್ದೆ. ನಾನು ಪುಸ್ತಕದಂಗಡಿ ಮುಚ್ಚಿ ಇದ್ದ ಪುಸ್ತಕದ ದಾಸ್ತಾನನೆಲ್ಲ ಕಾಂಗ್ರೆಸ್ ಮುಖಂಡ ಎಂ.ಎನ್.ಜೋಯಿಸರ ಮನೆಯಲ್ಲಿಟ್ಟು, ಬೆಂಗಳೂರಿಗೆ ಬಂದು ಪೌರವಾಣಿ ಪತ್ರಿಕೆ ಸಂಪಾದಕನಾಗಿ ನೋಂದಾಯಿಸಿಕೊಂಡೆ. ಮೈಸೂರು ಕಾಂಗ್ರೆಸ್ ಕಮಿಟಿ ಆಗ `ಮೈಸೂರ್ ಚಲೋ’ ಕೊನೆಯ ಚಳವಳಿಯನ್ನು ಆರಂಭಿಸುವ ವಿಚಾರ ಮಾಡುತ್ತಿತ್ತು.

ಪೌರವಾಣಿ ಪತ್ರಿಕೆಯಲ್ಲಿ ಮೈಸೂರು ಮಹಾರಾಜರ ಆಡಳಿತ ವೈಖರಿ ಕುರಿತು ವಿಶ್ವ ಕರ್ನಾಟಕ ಸಂಪಾದಕರಾಗಿದ್ದ ತಿರುಮಲ ತಾತಾಚಾರ್ಯ ಶರ್ಮರು 8 ಲೇಖನಗಳನ್ನು ಬರೆದುಕೊಟ್ಟರು. ಆರು ಲೇಖನಗಳನ್ನು ಪ್ರಕಟಿಸಿ ಆಗಿತ್ತು. ಆಗ ಚೀಫ್ ಸೆಕ್ರೆಟರಿಯವರು ನಮಗೊಂದು ನೋಟಿಸ್ ನೀಡಿ ಇನ್ನು ಮೇಲೆ ಯಾವುದೇ ಲೇಖನಗಳನ್ನು ಮತ್ತು ಅಗ್ರ ಲೇಖನಗಳನ್ನು ಪ್ರಕಟಿಸುವ ಮುನ್ನ ನಮಗೆ ಅದನ್ನು ಕಳುಹಿಸಿ, ಸರ್ಕಾರಕ್ಕೆ ಒಪ್ಪಿಗೆಯಾಗುವ ಲೇಖನಗಳನ್ನು ಮಾತ್ರ ಪ್ರಕಟಿಸತಕ್ಕದ್ದು. ಈ ಆಜ್ಞೆಯನ್ನು ಮಿರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಸರ್ಕಾರಕ್ಕೆ ಉಳಿದ ಲೇಖನಗಳನ್ನು ಕಳಿಸದೆಯೇ 7 ಮತ್ತು 8ನೇ ಕಂತಿನ ಲೇಖನಗಳನ್ನು ಅಚ್ಚುಮಾಡಿ ಅದರ ಜೊತೆಗೆ ಒಂದು Box news ಅನ್ನು ಹಾಕಿದೆವು. ಸರ್ಕಾರ ನಮ್ಮ ಮೇಲೆ ಪ್ರತಿಬಂಧಕಗಳನ್ನು ಹೇರಲು ತೊಡಗಿದೆ. ಸರ್ಕಾರದ ಈ ಬೆದರಿಕೆಗೆ ಸೊಪ್ಪು ಹಾಕದೆ 7 ಮತ್ತು 8ನೇ ಕಂತಿನ ಲೇಖನಗಳನ್ನು ಸರ್ಕಾರಕ್ಕೆ ಕಳಿಸದೆ ಪ್ರಕಟಿಸುತ್ತಿದ್ದೇವೆ. ಸರ್ಕಾರದ ಧೋರಣೆಯನ್ನು ಒಪ್ಪದೆ ಪ್ರತಿಭಟನಾರ್ಥವಾಗಿ ನಾಳೆಯಿಂದ ಪತ್ರಿಕೆಯನ್ನು ನಿಲ್ಲಿಸಿದ್ದೇವೆ ಎಂದು ಅಚ್ಚು ಮಾಡಲಾಯಿತು. ಮೂರು ದಿನದ ನಂತರ ಪೊಲೀಸರು ಬಂದು ಪತ್ರಿಕಾಲಯಕ್ಕೆ ಬೀಗ ಹಾಕಿದರು.

ಇನ್ನು ಇಲ್ಲಿದ್ದರೆ ಬಂಧಿಸಲಿದ್ದಾರೆ, ಬೇರೆ ಪ್ರಾಂತಕ್ಕೆ ಹೋಗಿ ಪೌರವಾಣಿಯನ್ನು ಅಲ್ಲಿ ಅಚ್ಚು ಮಾಡಿಸಿ, ಮೈಸೂರು ಸಂಸ್ಥಾನದ ಊರುಗಳಿಗೆ ಏಕೆ ಕಳುಹಿಸಬಾರದು ಎಂದು ಆಲೋಚಿಸಿದೆ. ನಾನು ಮತ್ತು ನನ್ನ ಸ್ನೇಹಿತ ಶ್ರೀಧರಮೂರ್ತಿ ಪಕ್ಕದ ಹಿಂದೂಪುರಕ್ಕೆ ಹೋದೆವು ಸುದರ್ಶನ ಪ್ರೆಸ್‍ನಲ್ಲಿ ಪತ್ರಿಕೆಯನ್ನು ಅಚ್ಚುಮಾಡಿ ಕೊಡಲು ಮಾಲಿಕರಲ್ಲೊಬ್ಬರಾದ ಆದಯ್ಯ ಶೆಟ್ಟರು ಒಪ್ಪಿಕೊಂಡರು. ನಾನು ಪೌರವಾಣಿ, ಪೌರವೀರ ಪೌರಮಾರ್ತಾಂಡ, ಪೌರಭಾಸ್ಕರ ಈ ಹೆಸರುಗಳಲ್ಲಿ ಪತ್ರಿಕೆಯನ್ನು ನೋಂದಾಯಿಸಿಕೊಂಡೆ. ಮೈಸೂರು ಸಂಸ್ಥಾನದೊಳಕ್ಕೆ ಹೋಗುವ ಪೌರವಾಣಿ ಪತ್ರಿಕೆಯನ್ನು ಸರ್ಕಾರ ತಡೆಹಿಡಿದರೆ ಮತ್ತೊಂದು ಹೆಸರಿನಲ್ಲಿ ಪತ್ರಿಕೆಯನ್ನು ಕಳುಹಿಸಬಹುದಲ್ಲಾ ಎಂಬ ದೂರದೃಷ್ಟಿಯಿಂದ 5 ಹೆಸರಿನ ಪತ್ರಿಕೆಗಳನ್ನು ನೋಂದಾಯಿಸಿಕೊಂಡಿದ್ದೆ. ಕೆಲದಿನಗಳ ಮೇಲೆ ನಮ್ಮ ನಿರೀಕ್ಷೆಯಂತೆಯೇ ಪೌರವಾಣಿ ಪತ್ರಿಕೆ ಮೈಸೂರು ಸಂಸ್ಥಾನದೊಳಕ್ಕೆ ಬರದಂತೆ ತಡೆದರು. ನಾವು ಪೌರವೀರ ಹೆಸರಿನಲ್ಲಿ ಪತ್ರಿಕೆಯನ್ನು ಅಲ್ಲಿಂದಾಚೆಗೆ ಕಳುಹಿಸಿದೆವು.

ಮೈಸೂರು ಚಲೋ ಸತ್ಯಾಗ್ರಹ ನಡೆದ 38 ದಿನಗಳೂ ಪತ್ರಿಕೆ ಮೈಸೂರಿನ ಎಲ್ಲ ಕಡೆಗೆ ತಲುಪಿತು. ಬೆಂಗಳೂರಿಗೆ ದಿನಕ್ಕೊಬ್ಬ ಸತ್ಯಾಗ್ರಹಿಯ ಕೈಯಲ್ಲಿ ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಪತ್ರಿಕೆ ಹೊರತರುವುದಕ್ಕೆ ಸಹಾಯಕರಾಗಿರುವ ರುಮಾಲೆ ಚನ್ನಬಸವಣ್ಣ, ಮೈಸೂರಿನ ಸುಬ್ಬರಾಯರು, ತಿರುಮಲ ಶ್ರೀರಂಗಾಚಾರ್ ಮುಂತಾದವರಿದ್ದರು.

38 ದಿನಗಳು ಪೌರವಾಣಿ ನಡೆದದ್ದು ಬೆಂಗಳೂರಿನಲ್ಲಲ್ಲ. ಪೌರವಾಣಿ ಪತ್ರಿಕೆಯನ್ನು ಮೈಸೂರು ಸಂಸ್ಥಾನದಲ್ಲಿ ಮುಟ್ಟುಗೋಲು ಹಾಕಿಕೊಂಡ ನಂತರ ನಾವು ಮಾಡಿದ ಈ ಸಾಹಸದ ನಮ್ಮ ಕೆಲಸವನ್ನು ಅರಿಯದ ಬಾಬು ಕೃಷ್ಣಮೂರ್ತಿ ನನ್ನನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.

ಬಾಬು ಕೃಷ್ಣಮೂರ್ತಿಯವರ ಮೂದಲಿಕೆ ಮಾತನ್ನ ಕೇಳಿದಮೇಲೆ ಈ ಸುಳ್ಳನ್ನು, ಉತ್ಪ್ರೇಕ್ಷೆಯ ಮಾತನಾಡಲು ಯಾರು ಇವರಿಗೆ ಪ್ರೇರಣೆ ನೀಡಿರಬಹುದೆಂದು ಯೋಚನೆ ಮಾಡಿದೆ. ಆರ್‌ಎಸ್‍ಎಸ್‍ನಲ್ಲಿ ಇದ್ದುಹೋದ ಕೃಷ್ಣಮೂರ್ತಿಗೆ ಬಹುಕಾಲ ಧರ್ಮಾಂಧತೆಯ ವಿಷವುಣಿಸಲಾಗಿದೆ. ಅದು ಈ ರೀತಿ ನನ್ನ ಮೇಲೆ ಎಂದೂ ಇಲ್ಲದಷ್ಟು ಹರಿಹಾಯಲು ಪ್ರೇರಣೆ ನೀಡಿರಬಹುದು ಅಥವಾ ಆರ್‌ಎಸ್‍ಎಸ್ ಮುಖ್ಯರ ಆಜ್ಞಾನುಸಾರ ಕೃಷ್ಣಮೂರ್ತಿ ನಡೆದುಕೊಂಡಿರಬಹುದು.

ನನಗೆ ಪತ್ರಿಕೆ ಅಕಾಡೆಮಿ ಅವಾರ್ಡ್ ಬಂದಿದೆ. ನಾನು 5 ವರ್ಷಕಾಲ ಪೌರವಾಣಿಯ ಸಂಪಾದಕನಾಗಿದ್ದೆ, 38 ದಿನಗಳಲ್ಲ. Freelance Journalist ಆಗಿ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತೇನೆ. ಮೈಸೂರು ಸಂಸ್ಥಾನದ ಪತ್ರಿಕಾಸಂಘ ನನ್ನ ಸಕ್ರಿಯ ಪತ್ರಿಕೋದ್ಯಮವನ್ನು ಗುರುತಿಸಿ ನನಗೆ ಆ ಸಂಘದ ಅಧ್ಯಕ್ಷತೆಯನ್ನು ನೀಡಿ ಗೌರವಿಸಿದೆ ಎಂಬುದನ್ನು ಬಾಬುಕೃಷ್ಣಮೂರ್ತಿ ತಿಳಿಯಬೇಕು.

ಬಾಬುಕೃಷ್ಣಮೂರ್ತಿಯವರು ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರ ಪ್ರಸ್ತಾಪಿಸಿದ್ದಾರೆ. ಅದರ ಪ್ರಸ್ತಾಪ ಮುಂದಿನ ಸಂಚಿಕೆಯಲ್ಲಿ…..

– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...