Homeಮುಖಪುಟನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು...

ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…

38 ದಿನಗಳ ಕಳಪೆ ಸಂಪಾದಕ ಎಂದು ದೊರೆಸ್ವಾಮಿಯವರನ್ನು ಹಂಗಿಸಿದ್ದಕ್ಕೆ ಅವರು ಕೊಟ್ಟ ಉತ್ತರ ಇಲ್ಲಿದೆ.

- Advertisement -
- Advertisement -

ಬಾಬು ಕೃಷ್ಣಮೂರ್ತಿಯವರು ಪತ್ರಕರ್ತರು, ಬರಹಗಾರರು, ಒಳ್ಳೆಯ ಚಾರಿತ್ರಿಕ ಪುಸ್ತಕಗಳನ್ನು ಬರೆದಿದ್ದಾರೆ. ನನಗೆ ಅವರಲ್ಲಿ ಇಂದಿಗೂ ಪ್ರೀತಿ ಇದೆ. ಬಾಬು ಕೃಷ್ಣಮೂರ್ತಿಯವರನ್ನು ಅವರು ಮಗುವಾಗಿದ್ದಾಗಿನಿಂದಲು ಬಲ್ಲೆ. ಅವರ ತಾಯಿ ಸೀತಮ್ಮ, ತಂದೆ ಶಾಸ್ತ್ರಿ ಆಯುರ್ವೇದ ಪಂಡಿತರು. ಸೀತಮ್ಮನವರು ನಿಧನರಾಗುವುದಕ್ಕೆ­ ಮೊದಲು ನಾನು ಅವರನ್ನು ಭಾರತಿ ನರ್ಸಿಂಗ್ ಹೋಂಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ.

ಬಾಬು ನನ್ನನ್ನು ಮೊದಲ ಬಾರಿಗೆ ಈಗ ತರಾಟೆಗೆ ತೆಗೆದುಕೊಂಡಿದ್ದಾರೆ. ಗೋಡ್ಸೆ ವಿಚಾರದಲ್ಲಿ ಅವರು ನನ್ನ ಮೇಲೆ ಆಗ್ರಹ ಮಾಡಿರುವುದಕ್ಕೆ ನಾನು ಅವರ ಬಗೆಗೆ ಈ ರೀತಿ ಹೇಳುತ್ತಿಲ್ಲ. ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರವನ್ನು ನಾನು ಆನಂತರ ಪ್ರಸ್ತಾಪಿಸುತ್ತೇನೆ.

ಬಾಬು ಕೃಷ್ಣಮೂರ್ತಿ ನನ್ನನ್ನು ಕೆಲಸಕ್ಕೆ ಬಾರದ 38 ದಿನಗಳ ಪತ್ರಿಕಾ ಸಂಪಾದಕ ಎಂದು ಕರೆದು ಹಂಗಿಸಿದ್ದಾರೆ. ಈ ಮಾತು ನನ್ನನ್ನು ಇರಿಯಿತು. ಜೂಲಿಯಸ್ ಸೀಸರ್ ತನ್ನ ಪರಮ ಸ್ನೇಹಿತ ಎಂದುಕೊಂಡಿದ್ದ ಬ್ರೂಟಸ್ ತನ್ನನ್ನು ಇರಿದಾಗ `Yours is the  most unkindest cut of all’  ಎಂದು ಜರಿದ.

ಪತ್ರಿಕಾ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ನನ್ನನ್ನು 38 ದಿನಗಳ ಕಳಪೆ ಸಂಪಾದಕ ಎಂದು ಹೇಳಿರುವುದನ್ನು ಕುರಿತು ನಾನೂ ಕೂಡ Yours is the most unkindest cut of all’ಎಂದು ಹೇಳಬೇಕಿದೆ. ಸೀಸರ್ ಬ್ರೂಟಸ್‍ನ ಈ ಗೆಯ್ಮೆಯನ್ನುSuperlatives ನಲ್ಲಿ Unkindest ಎಂದು ಮಾತ್ರ ಹೇಳದೆ Most ಎಂಬ ಇನ್ನೊಂದು Superlatives ಕೂಡಾ ಬಳಸಿದ್ದಾನೆ. ಬ್ರೂಟಸ್‍ನ ಈ ಕೃತ್ಯ ಸೀಜರ್‌ನನ್ನು ದಿಗ್ಭ್ರಮೆಗೋಳಿಸಿದೆ. ಬಾಬುಕೃಷ್ಣಮೂರ್ತಿಯವರ ಈ ಮಾತು ನನ್ನನ್ನು ಸೀಜರ್‌ನಷ್ಟೇ ದಿಗ್ಭ್ರಮೆಗೊಳಿಸಿದೆ.

ಪೌರವಾಣಿ ಪತ್ರಿಕೆಯನ್ನು ಆರಂಭಿಸಿದ ನಮಗೆ – ಸ್ವಾತಂತ್ರ್ಯ ಹೋರಾಟಗಾರ ಯುವಕರು – ಸ್ವಾತಂತ್ರ್ಯ ಬೇಗ ದೊರಕಿಸಿಕೊಳ್ಳಬೇಕು ಎಂಬ ತವಕವಿತ್ತು. ನಮ್ಮ ನಾಯಕರನ್ನು ಪ್ರತಿ ಎಂಪಿಸಿಸಿ ಸಭೆಯಲ್ಲೂ ಜವಾಬ್ದಾರಿ ಸರ್ಕಾರ ಪಡೆಯಲು ತಡಮಾಡದೆ ಹೋರಾಟ ಆರಂಭಿಸಬೇಕೆಂದು ಒತ್ತಾಯ ತರುತ್ತಿದ್ದೆವು. ಇದಕ್ಕೆ ಪೂರಕವಾಗಿ ಒಂದು ಪತ್ರಿಕೆಯನ್ನು ಆರಂಭಿಸಲೂ ತೀರ್ಮಾನಿಸಿದೆವು. ಪೌರವಾಣಿ ಬೆಂಗಳೂರಿನಲ್ಲಿ ಜನ್ಮ ತಾಳಿತು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದ ದೊಡ್ಡಬಳ್ಳಾಪುರದ ರುಮಾಲೆ ಭದ್ರಣ್ಣನವರು ಪೌರವಾಣಿಯ ಮೊದಲ ಸಂಪಾದಕರಾದರು. ಪೌರವಾಣಿ ದಿನಪತ್ರಿಕೆ ಬೆಲೆ 3 ಕಾಸು. ರಾಯಟರ್ಸ್ ಮತ್ತು ಪಿಟಿಐ ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದೆವು.

ಪತ್ರಿಕೆ ಬಹಳ ಬೇಗ ಜನಾದರಣೆ ಗಳಿಸಿತು. ಭದ್ರಣ್ಣನವರು ನಾಯಿ ಕಚ್ಚಿ ಹೈಡ್ರೋಫೋಬಿಯಾ ಎಂಬ ರೋಗಕ್ಕೆ ಬಲಿಯಾದರು. ಅವರು ಸಾಯುವ ಮೊದಲು ನಮ್ಮ ಯುವಬಳಗವೆಲ್ಲ ಆಸ್ಪತ್ರೆಗೆ ಹೋಗಿ ಅವರನ್ನು ಕಂಡೆವು. ಅವರು ನಮ್ಮೆಲ್ಲರನ್ನು ಕುರಿತು “ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ಮೈಸೂರಿನ ಪ್ರಜೆಗಳಿಗೆ ಸ್ವಾತಂತ್ರ್ಯ ಬಂದಿಲ್ಲ. ಮಹಾರಾಜರು Accession  ಒಪ್ಪುತ್ತಿಲ್ಲ. ಅವರನ್ನು ಒಪ್ಪಿಸುವುದಕ್ಕಾಗಿ ಹೋರಾಟ ಮಾಡಬೇಕಾಗಿದೆ. ಪೌರವಾಣಿ ಪತ್ರಿಕೆ ಈ ಹೋರಾಟಕ್ಕೆ ಹೊಯ್‍ಕೈಯಾಗಿಸಿಲ್ಲ ಬೆಂಬಲಿಸಿದೆ. ಪೌರವಾಣಿ ಪತ್ರಿಕೆ ಈಗ ಜನಪ್ರಿಯವಾಗಿದೆ ನೀವು ಈ ಪತ್ರಿಕೆಯನ್ನು ಅಂತಿಮ ಗುರಿ ಮುಟ್ಟುವವರೆಗೂ ನಡೆಸಿಕೊಂಡು ಹೋಗಬೇಕು” ಎಂದು ಕೈಮುಗಿದು ಕೇಳಿಕೊಂಡರು.

ಕೆಲಹೊತ್ತಿನಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು. ಭದ್ರಣ್ಣನವರ ನೆಂಟರು, ನಾವೂ ಸೇರಿ ಅವರ ಅಂತ್ಯಕ್ರಿಯೆ ಮುಗಿಸಿದೆವು. ರಾತ್ರಿ ಪೌರವಾಣಿ ಕಚೇರಿಯಲ್ಲಿ ಸೇರಿದ್ದ ನಾವೆಲ್ಲ ಮುಂದೆ ಯಾರು ಸಂಪಾದಕರಾಗಬೇಕೆಂದು ಚರ್ಚಿಸಿದೆವು. ಕೊನೆಗೆ ನನ್ನನ್ನು ಸಂಪಾದಕನಾಗುವಂತೆ ಒತ್ತಾಯಿಸಿದರು. ನಾನು ಆಗ ಮೈಸೂರಿನಲ್ಲಿ ಸಾಹಿತ್ಯ ಮಂದಿರ ಎಂಬ ಪುಸ್ತಕದಂಗಡಿ ಮತ್ತು ಪ್ರಕಾಶನ ಸಂಸ್ಥೆ ನಡೆಸುತ್ತಿದ್ದೆ. ನಾನು ಪುಸ್ತಕದಂಗಡಿ ಮುಚ್ಚಿ ಇದ್ದ ಪುಸ್ತಕದ ದಾಸ್ತಾನನೆಲ್ಲ ಕಾಂಗ್ರೆಸ್ ಮುಖಂಡ ಎಂ.ಎನ್.ಜೋಯಿಸರ ಮನೆಯಲ್ಲಿಟ್ಟು, ಬೆಂಗಳೂರಿಗೆ ಬಂದು ಪೌರವಾಣಿ ಪತ್ರಿಕೆ ಸಂಪಾದಕನಾಗಿ ನೋಂದಾಯಿಸಿಕೊಂಡೆ. ಮೈಸೂರು ಕಾಂಗ್ರೆಸ್ ಕಮಿಟಿ ಆಗ `ಮೈಸೂರ್ ಚಲೋ’ ಕೊನೆಯ ಚಳವಳಿಯನ್ನು ಆರಂಭಿಸುವ ವಿಚಾರ ಮಾಡುತ್ತಿತ್ತು.

ಪೌರವಾಣಿ ಪತ್ರಿಕೆಯಲ್ಲಿ ಮೈಸೂರು ಮಹಾರಾಜರ ಆಡಳಿತ ವೈಖರಿ ಕುರಿತು ವಿಶ್ವ ಕರ್ನಾಟಕ ಸಂಪಾದಕರಾಗಿದ್ದ ತಿರುಮಲ ತಾತಾಚಾರ್ಯ ಶರ್ಮರು 8 ಲೇಖನಗಳನ್ನು ಬರೆದುಕೊಟ್ಟರು. ಆರು ಲೇಖನಗಳನ್ನು ಪ್ರಕಟಿಸಿ ಆಗಿತ್ತು. ಆಗ ಚೀಫ್ ಸೆಕ್ರೆಟರಿಯವರು ನಮಗೊಂದು ನೋಟಿಸ್ ನೀಡಿ ಇನ್ನು ಮೇಲೆ ಯಾವುದೇ ಲೇಖನಗಳನ್ನು ಮತ್ತು ಅಗ್ರ ಲೇಖನಗಳನ್ನು ಪ್ರಕಟಿಸುವ ಮುನ್ನ ನಮಗೆ ಅದನ್ನು ಕಳುಹಿಸಿ, ಸರ್ಕಾರಕ್ಕೆ ಒಪ್ಪಿಗೆಯಾಗುವ ಲೇಖನಗಳನ್ನು ಮಾತ್ರ ಪ್ರಕಟಿಸತಕ್ಕದ್ದು. ಈ ಆಜ್ಞೆಯನ್ನು ಮಿರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಸರ್ಕಾರಕ್ಕೆ ಉಳಿದ ಲೇಖನಗಳನ್ನು ಕಳಿಸದೆಯೇ 7 ಮತ್ತು 8ನೇ ಕಂತಿನ ಲೇಖನಗಳನ್ನು ಅಚ್ಚುಮಾಡಿ ಅದರ ಜೊತೆಗೆ ಒಂದು Box news ಅನ್ನು ಹಾಕಿದೆವು. ಸರ್ಕಾರ ನಮ್ಮ ಮೇಲೆ ಪ್ರತಿಬಂಧಕಗಳನ್ನು ಹೇರಲು ತೊಡಗಿದೆ. ಸರ್ಕಾರದ ಈ ಬೆದರಿಕೆಗೆ ಸೊಪ್ಪು ಹಾಕದೆ 7 ಮತ್ತು 8ನೇ ಕಂತಿನ ಲೇಖನಗಳನ್ನು ಸರ್ಕಾರಕ್ಕೆ ಕಳಿಸದೆ ಪ್ರಕಟಿಸುತ್ತಿದ್ದೇವೆ. ಸರ್ಕಾರದ ಧೋರಣೆಯನ್ನು ಒಪ್ಪದೆ ಪ್ರತಿಭಟನಾರ್ಥವಾಗಿ ನಾಳೆಯಿಂದ ಪತ್ರಿಕೆಯನ್ನು ನಿಲ್ಲಿಸಿದ್ದೇವೆ ಎಂದು ಅಚ್ಚು ಮಾಡಲಾಯಿತು. ಮೂರು ದಿನದ ನಂತರ ಪೊಲೀಸರು ಬಂದು ಪತ್ರಿಕಾಲಯಕ್ಕೆ ಬೀಗ ಹಾಕಿದರು.

ಇನ್ನು ಇಲ್ಲಿದ್ದರೆ ಬಂಧಿಸಲಿದ್ದಾರೆ, ಬೇರೆ ಪ್ರಾಂತಕ್ಕೆ ಹೋಗಿ ಪೌರವಾಣಿಯನ್ನು ಅಲ್ಲಿ ಅಚ್ಚು ಮಾಡಿಸಿ, ಮೈಸೂರು ಸಂಸ್ಥಾನದ ಊರುಗಳಿಗೆ ಏಕೆ ಕಳುಹಿಸಬಾರದು ಎಂದು ಆಲೋಚಿಸಿದೆ. ನಾನು ಮತ್ತು ನನ್ನ ಸ್ನೇಹಿತ ಶ್ರೀಧರಮೂರ್ತಿ ಪಕ್ಕದ ಹಿಂದೂಪುರಕ್ಕೆ ಹೋದೆವು ಸುದರ್ಶನ ಪ್ರೆಸ್‍ನಲ್ಲಿ ಪತ್ರಿಕೆಯನ್ನು ಅಚ್ಚುಮಾಡಿ ಕೊಡಲು ಮಾಲಿಕರಲ್ಲೊಬ್ಬರಾದ ಆದಯ್ಯ ಶೆಟ್ಟರು ಒಪ್ಪಿಕೊಂಡರು. ನಾನು ಪೌರವಾಣಿ, ಪೌರವೀರ ಪೌರಮಾರ್ತಾಂಡ, ಪೌರಭಾಸ್ಕರ ಈ ಹೆಸರುಗಳಲ್ಲಿ ಪತ್ರಿಕೆಯನ್ನು ನೋಂದಾಯಿಸಿಕೊಂಡೆ. ಮೈಸೂರು ಸಂಸ್ಥಾನದೊಳಕ್ಕೆ ಹೋಗುವ ಪೌರವಾಣಿ ಪತ್ರಿಕೆಯನ್ನು ಸರ್ಕಾರ ತಡೆಹಿಡಿದರೆ ಮತ್ತೊಂದು ಹೆಸರಿನಲ್ಲಿ ಪತ್ರಿಕೆಯನ್ನು ಕಳುಹಿಸಬಹುದಲ್ಲಾ ಎಂಬ ದೂರದೃಷ್ಟಿಯಿಂದ 5 ಹೆಸರಿನ ಪತ್ರಿಕೆಗಳನ್ನು ನೋಂದಾಯಿಸಿಕೊಂಡಿದ್ದೆ. ಕೆಲದಿನಗಳ ಮೇಲೆ ನಮ್ಮ ನಿರೀಕ್ಷೆಯಂತೆಯೇ ಪೌರವಾಣಿ ಪತ್ರಿಕೆ ಮೈಸೂರು ಸಂಸ್ಥಾನದೊಳಕ್ಕೆ ಬರದಂತೆ ತಡೆದರು. ನಾವು ಪೌರವೀರ ಹೆಸರಿನಲ್ಲಿ ಪತ್ರಿಕೆಯನ್ನು ಅಲ್ಲಿಂದಾಚೆಗೆ ಕಳುಹಿಸಿದೆವು.

ಮೈಸೂರು ಚಲೋ ಸತ್ಯಾಗ್ರಹ ನಡೆದ 38 ದಿನಗಳೂ ಪತ್ರಿಕೆ ಮೈಸೂರಿನ ಎಲ್ಲ ಕಡೆಗೆ ತಲುಪಿತು. ಬೆಂಗಳೂರಿಗೆ ದಿನಕ್ಕೊಬ್ಬ ಸತ್ಯಾಗ್ರಹಿಯ ಕೈಯಲ್ಲಿ ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಪತ್ರಿಕೆ ಹೊರತರುವುದಕ್ಕೆ ಸಹಾಯಕರಾಗಿರುವ ರುಮಾಲೆ ಚನ್ನಬಸವಣ್ಣ, ಮೈಸೂರಿನ ಸುಬ್ಬರಾಯರು, ತಿರುಮಲ ಶ್ರೀರಂಗಾಚಾರ್ ಮುಂತಾದವರಿದ್ದರು.

38 ದಿನಗಳು ಪೌರವಾಣಿ ನಡೆದದ್ದು ಬೆಂಗಳೂರಿನಲ್ಲಲ್ಲ. ಪೌರವಾಣಿ ಪತ್ರಿಕೆಯನ್ನು ಮೈಸೂರು ಸಂಸ್ಥಾನದಲ್ಲಿ ಮುಟ್ಟುಗೋಲು ಹಾಕಿಕೊಂಡ ನಂತರ ನಾವು ಮಾಡಿದ ಈ ಸಾಹಸದ ನಮ್ಮ ಕೆಲಸವನ್ನು ಅರಿಯದ ಬಾಬು ಕೃಷ್ಣಮೂರ್ತಿ ನನ್ನನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.

ಬಾಬು ಕೃಷ್ಣಮೂರ್ತಿಯವರ ಮೂದಲಿಕೆ ಮಾತನ್ನ ಕೇಳಿದಮೇಲೆ ಈ ಸುಳ್ಳನ್ನು, ಉತ್ಪ್ರೇಕ್ಷೆಯ ಮಾತನಾಡಲು ಯಾರು ಇವರಿಗೆ ಪ್ರೇರಣೆ ನೀಡಿರಬಹುದೆಂದು ಯೋಚನೆ ಮಾಡಿದೆ. ಆರ್‌ಎಸ್‍ಎಸ್‍ನಲ್ಲಿ ಇದ್ದುಹೋದ ಕೃಷ್ಣಮೂರ್ತಿಗೆ ಬಹುಕಾಲ ಧರ್ಮಾಂಧತೆಯ ವಿಷವುಣಿಸಲಾಗಿದೆ. ಅದು ಈ ರೀತಿ ನನ್ನ ಮೇಲೆ ಎಂದೂ ಇಲ್ಲದಷ್ಟು ಹರಿಹಾಯಲು ಪ್ರೇರಣೆ ನೀಡಿರಬಹುದು ಅಥವಾ ಆರ್‌ಎಸ್‍ಎಸ್ ಮುಖ್ಯರ ಆಜ್ಞಾನುಸಾರ ಕೃಷ್ಣಮೂರ್ತಿ ನಡೆದುಕೊಂಡಿರಬಹುದು.

ನನಗೆ ಪತ್ರಿಕೆ ಅಕಾಡೆಮಿ ಅವಾರ್ಡ್ ಬಂದಿದೆ. ನಾನು 5 ವರ್ಷಕಾಲ ಪೌರವಾಣಿಯ ಸಂಪಾದಕನಾಗಿದ್ದೆ, 38 ದಿನಗಳಲ್ಲ. Freelance Journalist ಆಗಿ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತೇನೆ. ಮೈಸೂರು ಸಂಸ್ಥಾನದ ಪತ್ರಿಕಾಸಂಘ ನನ್ನ ಸಕ್ರಿಯ ಪತ್ರಿಕೋದ್ಯಮವನ್ನು ಗುರುತಿಸಿ ನನಗೆ ಆ ಸಂಘದ ಅಧ್ಯಕ್ಷತೆಯನ್ನು ನೀಡಿ ಗೌರವಿಸಿದೆ ಎಂಬುದನ್ನು ಬಾಬುಕೃಷ್ಣಮೂರ್ತಿ ತಿಳಿಯಬೇಕು.

ಬಾಬುಕೃಷ್ಣಮೂರ್ತಿಯವರು ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರ ಪ್ರಸ್ತಾಪಿಸಿದ್ದಾರೆ. ಅದರ ಪ್ರಸ್ತಾಪ ಮುಂದಿನ ಸಂಚಿಕೆಯಲ್ಲಿ…..

– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...