Homeಮುಖಪುಟನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು...

ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…

38 ದಿನಗಳ ಕಳಪೆ ಸಂಪಾದಕ ಎಂದು ದೊರೆಸ್ವಾಮಿಯವರನ್ನು ಹಂಗಿಸಿದ್ದಕ್ಕೆ ಅವರು ಕೊಟ್ಟ ಉತ್ತರ ಇಲ್ಲಿದೆ.

- Advertisement -
- Advertisement -

ಬಾಬು ಕೃಷ್ಣಮೂರ್ತಿಯವರು ಪತ್ರಕರ್ತರು, ಬರಹಗಾರರು, ಒಳ್ಳೆಯ ಚಾರಿತ್ರಿಕ ಪುಸ್ತಕಗಳನ್ನು ಬರೆದಿದ್ದಾರೆ. ನನಗೆ ಅವರಲ್ಲಿ ಇಂದಿಗೂ ಪ್ರೀತಿ ಇದೆ. ಬಾಬು ಕೃಷ್ಣಮೂರ್ತಿಯವರನ್ನು ಅವರು ಮಗುವಾಗಿದ್ದಾಗಿನಿಂದಲು ಬಲ್ಲೆ. ಅವರ ತಾಯಿ ಸೀತಮ್ಮ, ತಂದೆ ಶಾಸ್ತ್ರಿ ಆಯುರ್ವೇದ ಪಂಡಿತರು. ಸೀತಮ್ಮನವರು ನಿಧನರಾಗುವುದಕ್ಕೆ­ ಮೊದಲು ನಾನು ಅವರನ್ನು ಭಾರತಿ ನರ್ಸಿಂಗ್ ಹೋಂಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ.

ಬಾಬು ನನ್ನನ್ನು ಮೊದಲ ಬಾರಿಗೆ ಈಗ ತರಾಟೆಗೆ ತೆಗೆದುಕೊಂಡಿದ್ದಾರೆ. ಗೋಡ್ಸೆ ವಿಚಾರದಲ್ಲಿ ಅವರು ನನ್ನ ಮೇಲೆ ಆಗ್ರಹ ಮಾಡಿರುವುದಕ್ಕೆ ನಾನು ಅವರ ಬಗೆಗೆ ಈ ರೀತಿ ಹೇಳುತ್ತಿಲ್ಲ. ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರವನ್ನು ನಾನು ಆನಂತರ ಪ್ರಸ್ತಾಪಿಸುತ್ತೇನೆ.

ಬಾಬು ಕೃಷ್ಣಮೂರ್ತಿ ನನ್ನನ್ನು ಕೆಲಸಕ್ಕೆ ಬಾರದ 38 ದಿನಗಳ ಪತ್ರಿಕಾ ಸಂಪಾದಕ ಎಂದು ಕರೆದು ಹಂಗಿಸಿದ್ದಾರೆ. ಈ ಮಾತು ನನ್ನನ್ನು ಇರಿಯಿತು. ಜೂಲಿಯಸ್ ಸೀಸರ್ ತನ್ನ ಪರಮ ಸ್ನೇಹಿತ ಎಂದುಕೊಂಡಿದ್ದ ಬ್ರೂಟಸ್ ತನ್ನನ್ನು ಇರಿದಾಗ `Yours is the  most unkindest cut of all’  ಎಂದು ಜರಿದ.

ಪತ್ರಿಕಾ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ನನ್ನನ್ನು 38 ದಿನಗಳ ಕಳಪೆ ಸಂಪಾದಕ ಎಂದು ಹೇಳಿರುವುದನ್ನು ಕುರಿತು ನಾನೂ ಕೂಡ Yours is the most unkindest cut of all’ಎಂದು ಹೇಳಬೇಕಿದೆ. ಸೀಸರ್ ಬ್ರೂಟಸ್‍ನ ಈ ಗೆಯ್ಮೆಯನ್ನುSuperlatives ನಲ್ಲಿ Unkindest ಎಂದು ಮಾತ್ರ ಹೇಳದೆ Most ಎಂಬ ಇನ್ನೊಂದು Superlatives ಕೂಡಾ ಬಳಸಿದ್ದಾನೆ. ಬ್ರೂಟಸ್‍ನ ಈ ಕೃತ್ಯ ಸೀಜರ್‌ನನ್ನು ದಿಗ್ಭ್ರಮೆಗೋಳಿಸಿದೆ. ಬಾಬುಕೃಷ್ಣಮೂರ್ತಿಯವರ ಈ ಮಾತು ನನ್ನನ್ನು ಸೀಜರ್‌ನಷ್ಟೇ ದಿಗ್ಭ್ರಮೆಗೊಳಿಸಿದೆ.

ಪೌರವಾಣಿ ಪತ್ರಿಕೆಯನ್ನು ಆರಂಭಿಸಿದ ನಮಗೆ – ಸ್ವಾತಂತ್ರ್ಯ ಹೋರಾಟಗಾರ ಯುವಕರು – ಸ್ವಾತಂತ್ರ್ಯ ಬೇಗ ದೊರಕಿಸಿಕೊಳ್ಳಬೇಕು ಎಂಬ ತವಕವಿತ್ತು. ನಮ್ಮ ನಾಯಕರನ್ನು ಪ್ರತಿ ಎಂಪಿಸಿಸಿ ಸಭೆಯಲ್ಲೂ ಜವಾಬ್ದಾರಿ ಸರ್ಕಾರ ಪಡೆಯಲು ತಡಮಾಡದೆ ಹೋರಾಟ ಆರಂಭಿಸಬೇಕೆಂದು ಒತ್ತಾಯ ತರುತ್ತಿದ್ದೆವು. ಇದಕ್ಕೆ ಪೂರಕವಾಗಿ ಒಂದು ಪತ್ರಿಕೆಯನ್ನು ಆರಂಭಿಸಲೂ ತೀರ್ಮಾನಿಸಿದೆವು. ಪೌರವಾಣಿ ಬೆಂಗಳೂರಿನಲ್ಲಿ ಜನ್ಮ ತಾಳಿತು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದ ದೊಡ್ಡಬಳ್ಳಾಪುರದ ರುಮಾಲೆ ಭದ್ರಣ್ಣನವರು ಪೌರವಾಣಿಯ ಮೊದಲ ಸಂಪಾದಕರಾದರು. ಪೌರವಾಣಿ ದಿನಪತ್ರಿಕೆ ಬೆಲೆ 3 ಕಾಸು. ರಾಯಟರ್ಸ್ ಮತ್ತು ಪಿಟಿಐ ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದೆವು.

ಪತ್ರಿಕೆ ಬಹಳ ಬೇಗ ಜನಾದರಣೆ ಗಳಿಸಿತು. ಭದ್ರಣ್ಣನವರು ನಾಯಿ ಕಚ್ಚಿ ಹೈಡ್ರೋಫೋಬಿಯಾ ಎಂಬ ರೋಗಕ್ಕೆ ಬಲಿಯಾದರು. ಅವರು ಸಾಯುವ ಮೊದಲು ನಮ್ಮ ಯುವಬಳಗವೆಲ್ಲ ಆಸ್ಪತ್ರೆಗೆ ಹೋಗಿ ಅವರನ್ನು ಕಂಡೆವು. ಅವರು ನಮ್ಮೆಲ್ಲರನ್ನು ಕುರಿತು “ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ಮೈಸೂರಿನ ಪ್ರಜೆಗಳಿಗೆ ಸ್ವಾತಂತ್ರ್ಯ ಬಂದಿಲ್ಲ. ಮಹಾರಾಜರು Accession  ಒಪ್ಪುತ್ತಿಲ್ಲ. ಅವರನ್ನು ಒಪ್ಪಿಸುವುದಕ್ಕಾಗಿ ಹೋರಾಟ ಮಾಡಬೇಕಾಗಿದೆ. ಪೌರವಾಣಿ ಪತ್ರಿಕೆ ಈ ಹೋರಾಟಕ್ಕೆ ಹೊಯ್‍ಕೈಯಾಗಿಸಿಲ್ಲ ಬೆಂಬಲಿಸಿದೆ. ಪೌರವಾಣಿ ಪತ್ರಿಕೆ ಈಗ ಜನಪ್ರಿಯವಾಗಿದೆ ನೀವು ಈ ಪತ್ರಿಕೆಯನ್ನು ಅಂತಿಮ ಗುರಿ ಮುಟ್ಟುವವರೆಗೂ ನಡೆಸಿಕೊಂಡು ಹೋಗಬೇಕು” ಎಂದು ಕೈಮುಗಿದು ಕೇಳಿಕೊಂಡರು.

ಕೆಲಹೊತ್ತಿನಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು. ಭದ್ರಣ್ಣನವರ ನೆಂಟರು, ನಾವೂ ಸೇರಿ ಅವರ ಅಂತ್ಯಕ್ರಿಯೆ ಮುಗಿಸಿದೆವು. ರಾತ್ರಿ ಪೌರವಾಣಿ ಕಚೇರಿಯಲ್ಲಿ ಸೇರಿದ್ದ ನಾವೆಲ್ಲ ಮುಂದೆ ಯಾರು ಸಂಪಾದಕರಾಗಬೇಕೆಂದು ಚರ್ಚಿಸಿದೆವು. ಕೊನೆಗೆ ನನ್ನನ್ನು ಸಂಪಾದಕನಾಗುವಂತೆ ಒತ್ತಾಯಿಸಿದರು. ನಾನು ಆಗ ಮೈಸೂರಿನಲ್ಲಿ ಸಾಹಿತ್ಯ ಮಂದಿರ ಎಂಬ ಪುಸ್ತಕದಂಗಡಿ ಮತ್ತು ಪ್ರಕಾಶನ ಸಂಸ್ಥೆ ನಡೆಸುತ್ತಿದ್ದೆ. ನಾನು ಪುಸ್ತಕದಂಗಡಿ ಮುಚ್ಚಿ ಇದ್ದ ಪುಸ್ತಕದ ದಾಸ್ತಾನನೆಲ್ಲ ಕಾಂಗ್ರೆಸ್ ಮುಖಂಡ ಎಂ.ಎನ್.ಜೋಯಿಸರ ಮನೆಯಲ್ಲಿಟ್ಟು, ಬೆಂಗಳೂರಿಗೆ ಬಂದು ಪೌರವಾಣಿ ಪತ್ರಿಕೆ ಸಂಪಾದಕನಾಗಿ ನೋಂದಾಯಿಸಿಕೊಂಡೆ. ಮೈಸೂರು ಕಾಂಗ್ರೆಸ್ ಕಮಿಟಿ ಆಗ `ಮೈಸೂರ್ ಚಲೋ’ ಕೊನೆಯ ಚಳವಳಿಯನ್ನು ಆರಂಭಿಸುವ ವಿಚಾರ ಮಾಡುತ್ತಿತ್ತು.

ಪೌರವಾಣಿ ಪತ್ರಿಕೆಯಲ್ಲಿ ಮೈಸೂರು ಮಹಾರಾಜರ ಆಡಳಿತ ವೈಖರಿ ಕುರಿತು ವಿಶ್ವ ಕರ್ನಾಟಕ ಸಂಪಾದಕರಾಗಿದ್ದ ತಿರುಮಲ ತಾತಾಚಾರ್ಯ ಶರ್ಮರು 8 ಲೇಖನಗಳನ್ನು ಬರೆದುಕೊಟ್ಟರು. ಆರು ಲೇಖನಗಳನ್ನು ಪ್ರಕಟಿಸಿ ಆಗಿತ್ತು. ಆಗ ಚೀಫ್ ಸೆಕ್ರೆಟರಿಯವರು ನಮಗೊಂದು ನೋಟಿಸ್ ನೀಡಿ ಇನ್ನು ಮೇಲೆ ಯಾವುದೇ ಲೇಖನಗಳನ್ನು ಮತ್ತು ಅಗ್ರ ಲೇಖನಗಳನ್ನು ಪ್ರಕಟಿಸುವ ಮುನ್ನ ನಮಗೆ ಅದನ್ನು ಕಳುಹಿಸಿ, ಸರ್ಕಾರಕ್ಕೆ ಒಪ್ಪಿಗೆಯಾಗುವ ಲೇಖನಗಳನ್ನು ಮಾತ್ರ ಪ್ರಕಟಿಸತಕ್ಕದ್ದು. ಈ ಆಜ್ಞೆಯನ್ನು ಮಿರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಸರ್ಕಾರಕ್ಕೆ ಉಳಿದ ಲೇಖನಗಳನ್ನು ಕಳಿಸದೆಯೇ 7 ಮತ್ತು 8ನೇ ಕಂತಿನ ಲೇಖನಗಳನ್ನು ಅಚ್ಚುಮಾಡಿ ಅದರ ಜೊತೆಗೆ ಒಂದು Box news ಅನ್ನು ಹಾಕಿದೆವು. ಸರ್ಕಾರ ನಮ್ಮ ಮೇಲೆ ಪ್ರತಿಬಂಧಕಗಳನ್ನು ಹೇರಲು ತೊಡಗಿದೆ. ಸರ್ಕಾರದ ಈ ಬೆದರಿಕೆಗೆ ಸೊಪ್ಪು ಹಾಕದೆ 7 ಮತ್ತು 8ನೇ ಕಂತಿನ ಲೇಖನಗಳನ್ನು ಸರ್ಕಾರಕ್ಕೆ ಕಳಿಸದೆ ಪ್ರಕಟಿಸುತ್ತಿದ್ದೇವೆ. ಸರ್ಕಾರದ ಧೋರಣೆಯನ್ನು ಒಪ್ಪದೆ ಪ್ರತಿಭಟನಾರ್ಥವಾಗಿ ನಾಳೆಯಿಂದ ಪತ್ರಿಕೆಯನ್ನು ನಿಲ್ಲಿಸಿದ್ದೇವೆ ಎಂದು ಅಚ್ಚು ಮಾಡಲಾಯಿತು. ಮೂರು ದಿನದ ನಂತರ ಪೊಲೀಸರು ಬಂದು ಪತ್ರಿಕಾಲಯಕ್ಕೆ ಬೀಗ ಹಾಕಿದರು.

ಇನ್ನು ಇಲ್ಲಿದ್ದರೆ ಬಂಧಿಸಲಿದ್ದಾರೆ, ಬೇರೆ ಪ್ರಾಂತಕ್ಕೆ ಹೋಗಿ ಪೌರವಾಣಿಯನ್ನು ಅಲ್ಲಿ ಅಚ್ಚು ಮಾಡಿಸಿ, ಮೈಸೂರು ಸಂಸ್ಥಾನದ ಊರುಗಳಿಗೆ ಏಕೆ ಕಳುಹಿಸಬಾರದು ಎಂದು ಆಲೋಚಿಸಿದೆ. ನಾನು ಮತ್ತು ನನ್ನ ಸ್ನೇಹಿತ ಶ್ರೀಧರಮೂರ್ತಿ ಪಕ್ಕದ ಹಿಂದೂಪುರಕ್ಕೆ ಹೋದೆವು ಸುದರ್ಶನ ಪ್ರೆಸ್‍ನಲ್ಲಿ ಪತ್ರಿಕೆಯನ್ನು ಅಚ್ಚುಮಾಡಿ ಕೊಡಲು ಮಾಲಿಕರಲ್ಲೊಬ್ಬರಾದ ಆದಯ್ಯ ಶೆಟ್ಟರು ಒಪ್ಪಿಕೊಂಡರು. ನಾನು ಪೌರವಾಣಿ, ಪೌರವೀರ ಪೌರಮಾರ್ತಾಂಡ, ಪೌರಭಾಸ್ಕರ ಈ ಹೆಸರುಗಳಲ್ಲಿ ಪತ್ರಿಕೆಯನ್ನು ನೋಂದಾಯಿಸಿಕೊಂಡೆ. ಮೈಸೂರು ಸಂಸ್ಥಾನದೊಳಕ್ಕೆ ಹೋಗುವ ಪೌರವಾಣಿ ಪತ್ರಿಕೆಯನ್ನು ಸರ್ಕಾರ ತಡೆಹಿಡಿದರೆ ಮತ್ತೊಂದು ಹೆಸರಿನಲ್ಲಿ ಪತ್ರಿಕೆಯನ್ನು ಕಳುಹಿಸಬಹುದಲ್ಲಾ ಎಂಬ ದೂರದೃಷ್ಟಿಯಿಂದ 5 ಹೆಸರಿನ ಪತ್ರಿಕೆಗಳನ್ನು ನೋಂದಾಯಿಸಿಕೊಂಡಿದ್ದೆ. ಕೆಲದಿನಗಳ ಮೇಲೆ ನಮ್ಮ ನಿರೀಕ್ಷೆಯಂತೆಯೇ ಪೌರವಾಣಿ ಪತ್ರಿಕೆ ಮೈಸೂರು ಸಂಸ್ಥಾನದೊಳಕ್ಕೆ ಬರದಂತೆ ತಡೆದರು. ನಾವು ಪೌರವೀರ ಹೆಸರಿನಲ್ಲಿ ಪತ್ರಿಕೆಯನ್ನು ಅಲ್ಲಿಂದಾಚೆಗೆ ಕಳುಹಿಸಿದೆವು.

ಮೈಸೂರು ಚಲೋ ಸತ್ಯಾಗ್ರಹ ನಡೆದ 38 ದಿನಗಳೂ ಪತ್ರಿಕೆ ಮೈಸೂರಿನ ಎಲ್ಲ ಕಡೆಗೆ ತಲುಪಿತು. ಬೆಂಗಳೂರಿಗೆ ದಿನಕ್ಕೊಬ್ಬ ಸತ್ಯಾಗ್ರಹಿಯ ಕೈಯಲ್ಲಿ ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಪತ್ರಿಕೆ ಹೊರತರುವುದಕ್ಕೆ ಸಹಾಯಕರಾಗಿರುವ ರುಮಾಲೆ ಚನ್ನಬಸವಣ್ಣ, ಮೈಸೂರಿನ ಸುಬ್ಬರಾಯರು, ತಿರುಮಲ ಶ್ರೀರಂಗಾಚಾರ್ ಮುಂತಾದವರಿದ್ದರು.

38 ದಿನಗಳು ಪೌರವಾಣಿ ನಡೆದದ್ದು ಬೆಂಗಳೂರಿನಲ್ಲಲ್ಲ. ಪೌರವಾಣಿ ಪತ್ರಿಕೆಯನ್ನು ಮೈಸೂರು ಸಂಸ್ಥಾನದಲ್ಲಿ ಮುಟ್ಟುಗೋಲು ಹಾಕಿಕೊಂಡ ನಂತರ ನಾವು ಮಾಡಿದ ಈ ಸಾಹಸದ ನಮ್ಮ ಕೆಲಸವನ್ನು ಅರಿಯದ ಬಾಬು ಕೃಷ್ಣಮೂರ್ತಿ ನನ್ನನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.

ಬಾಬು ಕೃಷ್ಣಮೂರ್ತಿಯವರ ಮೂದಲಿಕೆ ಮಾತನ್ನ ಕೇಳಿದಮೇಲೆ ಈ ಸುಳ್ಳನ್ನು, ಉತ್ಪ್ರೇಕ್ಷೆಯ ಮಾತನಾಡಲು ಯಾರು ಇವರಿಗೆ ಪ್ರೇರಣೆ ನೀಡಿರಬಹುದೆಂದು ಯೋಚನೆ ಮಾಡಿದೆ. ಆರ್‌ಎಸ್‍ಎಸ್‍ನಲ್ಲಿ ಇದ್ದುಹೋದ ಕೃಷ್ಣಮೂರ್ತಿಗೆ ಬಹುಕಾಲ ಧರ್ಮಾಂಧತೆಯ ವಿಷವುಣಿಸಲಾಗಿದೆ. ಅದು ಈ ರೀತಿ ನನ್ನ ಮೇಲೆ ಎಂದೂ ಇಲ್ಲದಷ್ಟು ಹರಿಹಾಯಲು ಪ್ರೇರಣೆ ನೀಡಿರಬಹುದು ಅಥವಾ ಆರ್‌ಎಸ್‍ಎಸ್ ಮುಖ್ಯರ ಆಜ್ಞಾನುಸಾರ ಕೃಷ್ಣಮೂರ್ತಿ ನಡೆದುಕೊಂಡಿರಬಹುದು.

ನನಗೆ ಪತ್ರಿಕೆ ಅಕಾಡೆಮಿ ಅವಾರ್ಡ್ ಬಂದಿದೆ. ನಾನು 5 ವರ್ಷಕಾಲ ಪೌರವಾಣಿಯ ಸಂಪಾದಕನಾಗಿದ್ದೆ, 38 ದಿನಗಳಲ್ಲ. Freelance Journalist ಆಗಿ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತೇನೆ. ಮೈಸೂರು ಸಂಸ್ಥಾನದ ಪತ್ರಿಕಾಸಂಘ ನನ್ನ ಸಕ್ರಿಯ ಪತ್ರಿಕೋದ್ಯಮವನ್ನು ಗುರುತಿಸಿ ನನಗೆ ಆ ಸಂಘದ ಅಧ್ಯಕ್ಷತೆಯನ್ನು ನೀಡಿ ಗೌರವಿಸಿದೆ ಎಂಬುದನ್ನು ಬಾಬುಕೃಷ್ಣಮೂರ್ತಿ ತಿಳಿಯಬೇಕು.

ಬಾಬುಕೃಷ್ಣಮೂರ್ತಿಯವರು ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರ ಪ್ರಸ್ತಾಪಿಸಿದ್ದಾರೆ. ಅದರ ಪ್ರಸ್ತಾಪ ಮುಂದಿನ ಸಂಚಿಕೆಯಲ್ಲಿ…..

– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...