ಕೊರೊನಾ ಮುನ್ನೆಚ್ಚರಿಕೆಯ ಸಮಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೊಂದಣಿಯನ್ನು ನಿಲ್ಲಿಸಬೇಕು ಎಂಬ ಕೂಗು ದಿನೇ ದಿನೇ ಜೋರಾಗುತ್ತಿದೆ. ಇದೇ ವಿಷಯವಾಗಿ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು ಎನ್ಪಿಆರ್ ಮುಂದೂಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ, ಏಪ್ರಿಲ್ 1 ರಿಂದ ಹಲವು ರಾಜ್ಯಗಳಲ್ಲಿ ಪ್ರಾರಂಭವಾಗಬೇಕಿದ್ದ, ಎನ್ಪಿಆರ್ ಪ್ರಕ್ರಿಯೆಯನ್ನು ಅನಿರ್ಧಿಷ್ಟಾವಧಿ ಕಾಲ ಮುಂದೂಡಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಪ್ರಧಾನಿಯವರಿಗೆ ಪತ್ರ ಬರೆದಿದ್ದ ನವೀನ್ ಪಟ್ನಾಯಕ್ ಅವರು “ಸದ್ಯಕ್ಕೆ ನಾವೆಲ್ಲ ಕೊರೊನಾ ಸಾಂಕ್ರಾಮಿಕವನ್ನು ತಡೆಯುವುದಕ್ಕೆ ಹೋರಾಟದಲ್ಲಿ ನಿರತರಾಗಿದ್ದೇವೆ. ಈ ಸಮಯದಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಎಲ್ಲ ಚಟುವಟಿಕೆಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವುದು ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಚಟುವಟಿಕೆಗಳನ್ನು ಮುಂದೂಡಬೇಕು” ಎಂದು ಹೇಳಿದ್ದರು.
ನವೀನ್ ಪಟ್ನಾಯಕ್ ಅವರು ಕೇಂದ್ರ ಸರ್ಕಾರ ಹೊಸ ನಾಗರಿಕ ತಿದ್ದುಪಡಿ ಕಾಯ್ದೆಗೆ (ಸಿಎಎ) ಒಪ್ಪಿಗೆ ಸೂಚಿಸಿದ್ದರೂ, 2020ರ ಎನ್ಪಿಆರ್ ಪ್ರಕ್ರಿಯೆಯಲ್ಲಿ, ಕೇಳಲಿದ್ದ ತಂದೆ-ತಾಯಿಯರ ಹುಟ್ಟಿದ ದಿನಾಂಕ ಮತ್ತು ಜನ್ಮ ಸ್ಥಳಗಳ ಮಾಹಿತಿ ಬಗೆಗಿನ ಪ್ರಶ್ನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.
2020ನೇ ಜನಗಣತಿ ಮತ್ತು ಎನ್ಪಿಆರ್ ಪ್ರಕ್ರಿಯೆ ನಡೆಸಲು ಜನಸಂಪನ್ಮೂಲವನ್ನು ರಾಜ್ಯ ಸರ್ಕಾರಗಳೇ ಒದಗಿಸಬೇಕಾಗಿರುವ ಸಂದರ್ಭ ಇರುವುದರಿಂದ, ಕೊರೊನ ಭೀತಿಯ ಈ ಸಮಯದಲ್ಲಿ ಇದು ಹೆಚ್ಚಿನ ಸಮಸ್ಯೆ ಒಡ್ಡಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸಾಮಾನ್ಯವಾಗಿ ಜನಗಣತಿ ಮಾಡಲು ಶಾಲಾಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಶಾಲಾ ಶಿಕ್ಷಕ ಶಿಕ್ಷಕಿಯರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡುವುದು ವಾಡಿಕೆ. ಈಗ ಕೊರೊನಾ ಸಾಂಕ್ರಾಮಿಕ ಭೀತಿಯಲ್ಲಿ ಶಿಕ್ಷಕರು ಮನೆಮನೆಗೆ ತೆರಳಿ ಈ ಕೆಲಸ ಮಾಡುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯಲಾಗಿದೆ.
ಪಟ್ನಾಯಕ್ ಅವರು ಬರೆದ ಪತ್ರದಲ್ಲಿ “ದೇಶದ ಮೊದಲ ಹಂತದ ಜನಗಣತಿಯಲ್ಲಿ ಸುಮಾರು 30 ಲಕ್ಷ ಜನ ಮನೆ ಮನೆಗೆ ತೆರಳಬೇಕಿದೆ. ಅವರಿಗೆಲ್ಲಾ ವಿಸ್ತೃತ ತರಬೇತಿ ನೀಡಬೇಕಿದೆ” ಆದುದರಿಂದ ಈ ಸಮಯದಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಹೇಳಿದ್ದಾರೆ.
ಜನಗಣತಿಗೆ ಎಲ್ಲ ರಾಜ್ಯಗಳು ಸಹಕರಿಸಲೇಬೆಕಿದೆ. ಆದರೆ ಎನ್ಪಿಆರ್ಗೆ ಆ ನಿರ್ಬಂಧ ಇಲ್ಲ. ಈಗಾಗಲೇ ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಚತ್ತೀಸ್ ಘಡ ಮತ್ತು ಪುದುಚೆರಿ ವಿಧಾನಸಭೆಗಳಲ್ಲಿ ಎನ್ಪಿಆರ್ ಪ್ರಕ್ರಿಯೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಎನ್ಪಿಆರ್ ಪ್ರಕ್ರಿಯೆ ಅನಿರ್ಧಿಷ್ಟ ಕಾಲಾವಧಿಯವರೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಇನ್ನೊಂದೆಡೆ ಎನ್ಪಿಆರ್ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವೇ ನವೀನ್ ಪಟ್ನಾಯಕ್ರವರಿಗೆ ಹೇಳಿ ಪತ್ರ ಬರೆಸಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.