- Advertisement -
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ತುಮಕೂರಿನಲ್ಲಿ 200ಕ್ಕೂ ಹೆಚ್ಚು ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಲಾಕ್ಡೌನ್ ಆಗಿದೆ. ಸಚಿವರು ಇತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ಕರೆದು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಿಲ್ಲ. ಕೇವಲ ಅಧಿಕಾರಿಗಳು ಮಾತ್ರ ಸಭೆ ನಡೆಸುತ್ತಿದ್ದಾರೆಯೇ ಹೊರತು ಸಚಿವರು ಸಭೆಗಳಿಗೆ ಹಾಜರಾಗಿ ಅಧಿಕಾರಿಗಳಲ್ಲಿ ಉತ್ಸಾಹ ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರತೊಡಗಿವೆ.
ತುಮಕೂರು ಜಿಲ್ಲೆಯಲ್ಲಿ ಒಟ್ಟು 63 ವೆಂಟಿಲೇಟರ್ ಗಳಿವೆ. ಈ ವೆಂಟಿಲೇಟರ್ ಬಳಸಿಕೊಳ್ಳುವ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆರೋಗ್ಯ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ವೈದ್ಯರೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ ಇದುವರೆಗೂ ಅಂತಹ ಯಾವುದೇ ಬೆಳೆವಣಿಗೆಗಳೂ ನಡೆದಿಲ್ಲ. ಜೆ.ಸಿ.ಮಾಧುಸ್ವಾಮಿ ಅವರು ಕೊರೊನ ವೈರಸ್ ನಿಯಂತ್ರಣದ ಬಗ್ಗೆ ಒಂದು ಸಭೆಯನ್ನು ಮಾಡಿಲ್ಲ. ಆದರೆ ಜಿಲ್ಲಾಧಿಕಾರಿಗಳು ನಿರಂತರ ಸಭೆಗಳನ್ನು ಮಾಡುತ್ತ ಪ್ರಸಕ್ತ ಸನ್ನಿವೇಶದ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಇರುವ ಎರಡು ವೆಂಟಿಲೇಟರ್ಗಳು ಬೇರೆ ರೋಗಿಗಳನ್ನು ಇಡಲು ಅವಕಾಶವಿದೆ. ಬೇರೆ ಆಸ್ಪತ್ರೆಗಳಲ್ಲೂ ಸಾಮಾನ್ಯ ರೋಗಿಗಳು ಬಂದರೆ ಮಾತ್ರ ಇರಿಸಲು ವೆಂಟಿಲೇಟರ್ಗಳು ಇವೆ. ವಿಶೇಷವಾಗಿ ಕೊರೊನಾ ರೋಗಿಗಳಿಗೆ ವೆಂಟಿಲೇಟರ್ಗಳ ಕೊರತೆ ಇದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳ ಸಭೆ ಕರೆದು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿ ಕ್ರಮಕೈಗೊಂಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ಜಿಲ್ಲೆಯಾದ್ಯಂತ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿರುವ ಎಲ್ಲಾ 63 ವೆಂಟಿಲೇಟರ್್ಗಳು ಕೂಡ ಖಾಸಗಿ ನರ್ಸಿಂಗ್ ಹೋಂಗಳಲ್ಲಿಯೇ ಇವೆ. ತುರ್ತು ಸಂದರ್ಭದಲ್ಲಿ ಅವಗಳನ್ನು ರೋಗಿಗಳಿಗಾಗಿ ಬಳಸಿಕೊಳ್ಳಲು ಮುಂದಾಗಬೇಕು. ಇದುವೆರೆಗೆ ಸಿದ್ದಗಂಗಾ ಆಸ್ಪತ್ರೆ ಮತ್ತು ಸಿದ್ದಾರ್ಥ ಮತ್ತು ಶ್ರೀದೇವಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲವು ಹಾಸಿಗೆಗಳನ್ನು ಮಾತ್ರ ಕೊರೊನಾ ಸೋಂಕು ಪೀಡಿತರನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಸರಿಯಾದ ಕ್ರಮ. ಆದರೆ ವೆಂಟಿಲೇಟರ್ಗಳ ಕೊರತೆ ಇದ್ದು ಜಿಲ್ಲೆಯ ಜನರ ಆರೋಗ್ಯದ ಕುರಿತು ಸಚಿವ ಮಾಧುಸ್ವಾಮಿ ಹೆಚ್ಚು ಕಾಳಜಿ ವಹಿಸಬೇಕಿತ್ತು. ಸಚಿವರು ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತರಾಗಿದ್ದಾರೆಯೇ ಹೊರತು ಜಿಲ್ಲೆಯ ಸಮಸ್ಯೆಗಳನ್ನು ಪರಿಗಣಿಸುತ್ತಿಲ್ಲ ಎಂದು ಜನತೆ ಪ್ರಶ್ನಿಸತೊಡಗಿದ್ದಾರೆ.
ಖಾಸಗಿ ನರ್ಸಿಂಗ್ ಹೋಂನಲ್ಲಿ ಕೊರೊನಾ ಸೋಂಕಿತರನ್ನು ಇಟ್ಟುಕೊಳ್ಳುವುದು ಅಪರೂಪ. ಯಾಕೆಂದರೆ ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡುವ ನರ್ಸಿಂಗ್ ಹೋಂಗಳು ಅಷ್ಟು ಸುಲಭವಾಗಿ ವೆಂಟಿಲೇಟರ್ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಕೊರೊನಾ ಸೋಂಕಿತರನ್ನು ನರ್ಸಿಂಗ್ ಹೋಂನಲ್ಲಿಟ್ಟರೆ ಅಲ್ಲಿಗೆ ಬರುವ ರೋಗಿಗಳು ಬರದಂತಾಗುತ್ತಾರೆ ಎಂಬ ಮಾತುಗಳು ಇವೆ. ಜೊತೆಗೆ ನರ್ಸಿಂಗ್ ಹೋಂಗಳಲ್ಲಿ ಒಂದು ದಿನ ವೆಂಟಿಲೇಟರ್್ನಲ್ಲಿಡಲು ಕನಿಷ್ಠ 10 ರಿಂದ 20 ಸಾವಿರ ರೂಪಾಯಿ ನಿಗದಿ ಮಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಸಚಿವರು ಈ ನಿಟ್ಟಿನಲ್ಲಿ ಮಾತುಕತೆ ನಡೆಸಿ ವ್ಯವಸ್ಥೆ ಮಾಡಬೇಕಿತ್ತು.
ತುಮಕೂರು ಜಿಲ್ಲೆಯ ಮೂಲಕ ರಾಜ್ಯದ 23 ಜಿಲ್ಲೆಗಳಿಗೆ ಜನರು ಪ್ರಯಾಣಿಸುತ್ತಾರೆ. ಇದು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ಮಾತೂ ಇದೆ.. ಜೊತೆಗೆ ತುಮಕೂರು ನಗರದ ಬಹುತೇಕರು ಬೆಂಗಳೂರು ನಗರವನ್ನು ಕೆಲಸಕ್ಕಾಗಿ ಆಶ್ರಯಿಸಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಂಡು ಬಂದಿದ್ದು, ಅಲ್ಲಿನ ಸಂಪರ್ಕ ಹೊಂದಿರುವ ತುಮಕೂರು ನಗರದ ಜನತೆಗೂ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲಿದ್ದ ಜನರು ತುಮಕೂರಿಗೆ ಆಗಮಿಸಿದ್ದಾರೆ ಮತ್ತು ವಿದೇಶಗಳಿಂದಲೂ ತುಮಕೂರಿಗೆ ಬಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ಕರೆದು ಸಮನ್ವಯತೆ ಸಾಧಿಸುವಂತಹ ಕೆಲಸ ಮಾಡಬೇಕಿತ್ತು. ಅಂತಹ ಕೆಲಸ ಇದುವರೆಗೂ ನಡೆದಿಲ್ಲ.
ಎಲ್ಲವನ್ನೂ ಅಧಿಕಾರಿಗಳೇ ನಿಭಾಯಿಸುತ್ತಿದ್ದಾರೆ. ಕೊರೊನಾ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಲಕ್ಷ್ಯ ವಹಿಸುತ್ತಿಲ್ಲ. ಈಗಾಗಲೇ ಜಿಲ್ಲಾಸ್ಪತ್ರೆಗೆ 10 ಮಂದಿ ಶಂಕಿತ ಕೊರೊನ ವೈರಸ್ ಸೋಂಕಿತರು ದಾಖಲಾಗಿದ್ದು ಅವರ ರಕ್ತ ಮತ್ತು ಕಫಾ ಮಾದರಿಗಳನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿದೆ. ಇನ್ನು ವರದಿ ಬಂದಿಲ್ಲ. ಈ ವರದಿ ಬರುವ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕೊರೊನಾ ಹರಡದಂತೆ ಕ್ರಮ ವಹಿಸಬೇಕಾಗಿದೆ.
- Advertisement -