Homeಕಥೆನಮ್ಮ ‘ಬೋರಜ್ಜಿಯ ಬ್ಯುಸಿನೆಸ್ಸು’ ಹೆಂಗಿತ್ತು ಗೊತ್ತಾ?

ನಮ್ಮ ‘ಬೋರಜ್ಜಿಯ ಬ್ಯುಸಿನೆಸ್ಸು’ ಹೆಂಗಿತ್ತು ಗೊತ್ತಾ?

- Advertisement -
- Advertisement -

|ಸಿದ್ದರಾಮು ಕೆ. ಎಸ್|

ಇವತ್ತು ದೀಪಾವಳಿಯ ಮಧ್ಯಾಹ್ನ. ಮಧ್ಯಾಹ್ನವೇ ಮೋಡ ಕವಿದು ಸಂಜೆಯಂತಾಗಿದೆ. ಇನ್ನೇನು ಮಳೆ ಬಂದೇ ಬಿಡಬಹುದು, ಮಳೆಯಲ್ಲದಿದ್ದರೆ ಸಣ್ಣ ಸೋನೆಯಾದರೂ ಬರಬಹುದು. ಹಾಗಾಗಿ ಆದಷ್ಟು ಬೇಗ ವ್ಯಾಪಾರ ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿ ಬೋರಜ್ಜಿ ಕುಳಿತಿದೆ – ಹೆದ್ದಾರಿಯಿಂದ ಅರ್ಧ ಮೈಲಿ ದೂರದಲ್ಲಿರುವ ತನ್ನೂರನ್ನು ಸಂಪರ್ಕಿಸಲು ಇರುವ ಮಣ್ಣು ದಾರಿಯು ಹೆದ್ದಾರಿಗೆ ಕೂಡಿ ಗೇಟು ಎಂದು ಕರೆಯಲ್ಪಡುವ ಜಾಗದಲ್ಲಿ, ತನ್ನಷ್ಟೇ ಮುದಿಯಾಗಿ ಸೊಂಪಾದ ನೆರಳನ್ನೂ ನೀಡಲು ಆಗದ ಸ್ಥಿತಿಯಲ್ಲಿರುವ ಆಲದ ಮರದ ಕೆಳಗೆ ಸರ್ಕಾರದವರು ಕಟ್ಟಿರುವ ಸೇತುವೆಯ ಮೇಲೆ. ಬೆಳಿಗ್ಗೆಯಿಂದ ಅಲ್ಲಿಯೇ ಕೂತಿದ್ದ ಬೋರಜ್ಜಿ ಈಗ ಬುಟ್ಟಿ ಎತ್ತಿಕೊಂಡು ರಸ್ತೆ ಪಕ್ಕಕ್ಕೆ ಬಂದು ಬುಟ್ಟಿಯನ್ನು ಕೆಳಗಿಟ್ಟು ಎರಡೂ ಕೈಯಲ್ಲಿ ಮೂರು ಮೂರು ಸೀಬೆ ಹಣ್ಣು ಹಿಡಿದು ವೇಗವಾಗಿ ಚಲಿಸುತ್ತಿದ್ದ ವಾಹನಗಳ ಗಮನ ಸೆಳೆಯಲು ನಿಧಾನವಾಗಿ ಪ್ರಯತ್ನಿಸುತ್ತಿತ್ತು. ರಸ್ತೆ ಪಕ್ಕದಲ್ಲೇ ಇದ್ದ ಮಾವಿನ ತೋಪಿನೊಳಗೆ ಮೇಯಲು ಕಟ್ಟಿ ಬಂದಿದ್ದ ತನ್ನ ಎಮ್ಮೆಯನ್ನೂ ಕೂಡ ಆಗಾಗ ಗಮನಿಸುವ ಕೆಲಸವನ್ನೂ ಅಲ್ಲಿಂದಲೇ ಮಾಡುತ್ತಿತ್ತು.

ಈಗ ದೀಪಾವಳಿಯ ಸಾಲು ರಜೆಯಾದ್ದರಿಂದ ಈ ರಸ್ತೆಯ ಮೂಲಕ ಇವತ್ತು ಮೈಸೂರಿನ ಕಡೆ ಸಾಕಷ್ಟು ವಾಹನಗಳು ಹೋಗುತ್ತವೆ. ಹಾಗಾಗಿ ಬೇಗ ವ್ಯಾಪಾರ ಮುಗಿಸಿಬಿಡಬಹುದು ಎಂಬ ವ್ಯಾವಹಾರಿಕ ಲೆಕ್ಕಾಚಾರದಲ್ಲಿ ಬೋರಜ್ಜಿ ಬೆಳಿಗ್ಗೆ ಬೇಗ ಎದ್ದು ಎರಡು ರೊಟ್ಟಿ ಬಡ್ಕಂಡು ತಿಂದು, ‘ಮಿಕ್ಕಿದ್ದು ಆಮ್ಯಾಕೆ ಮಾಡಿಕಂಡರಾತು’ ಎಂದು ಎಣಿಸಿ ವ್ಯಾಪಾರಕ್ಕೆ ಬಂದು ಕೂತಿತ್ತು.

ತನ್ನ ಗುಡಿಸಲಿನ ಹಿಂದೆ ಹದಿನೈದು ವರ್ಷಕ್ಕಿಂತಲೂ ಮುಂಚಿನಿಂದ ಇರುವ ಸೀಬೆ ಮರದಿಂದ ಹಣ್ಣು ಕಿತ್ತು ಮಾರಬಹುದು ಎಂದು ಬೋರಜ್ಜಿಗೆ ಎಂದಿಗೂ ಅನ್ನಿಸಿರಲಿಲ್ಲ. ಅಂತಹ ಪರಿಸ್ಥಿತಿಯೂ ಬಂದಿರಲಿಲ್ಲ. ಅವರಿವರ ಹೊಲದಲ್ಲಿ ಮಾಡುತ್ತಿದ್ದ ಸಣ್ಣಪುಟ್ಟ ಕೂಲಿ ಕೆಲಸದಿಂದ ಬರುತ್ತಿದ್ದ ಹಣ, ತನ್ನ ಹರೆಯದಿಂದಲೂ ಜೊತೆಗಿದ್ದ ಒಂದೇ ವಂಶದ ಎಮ್ಮೆಗಳು ಕರೆಯುತ್ತಿದ್ದ ಹಾಲಿನಿಂದ ಬರುತ್ತಿದ್ದ ಹಣ ಬೋರಜ್ಜಿಗೆ ಸಾಕಾಗಿತ್ತು. ಅದರೊಟ್ಟಿಗೆ ಇತ್ತೀಚಿಗೆ ಯೆಡಿಯೂರಪ್ಪನ ನಾನೂರು ರೂಪಾಯಿ ಪಿಂಚಣಿ ಬೇರೆ ಬರಲು ಶುರುವಾಗಿ ಇನ್ನೂ ನಿರಾಳವಾಗಿಯೇ ಜೀವನ ಸಾಗಿತ್ತು. ಮನೆ ಹಿಂದಿನ ಸೀಬೆ ಮರದ ಹಣ್ಣುಗಳು ಊರ ಹುಡುಗರಿಗೇ ಮೀಸಲು ಎನ್ನುವಂತೆ ಭಾವಿಸಿ, ಅದರ ಕುರಿತು ಬೋರಜ್ಜಿ ಮೊದಲಿನಿಂದಲೂ ಒಂದು ರೀತಿಯ ನಿರಾಸಕ್ತಿ ವಹಿಸಿಬಿಟ್ಟಿತ್ತು.

ಹದಿನೈದು ವರ್ಷದ ಹಿಂದೆ ಸಣ್ಣವರಿದ್ದ ಊರ ಹುಡುಗರೆಲ್ಲಾ ಈಗ ಬೆಳೆದು ದೊಡ್ಡವರಾದರು. ಕಾಲೇಜು ಶಿಕ್ಷಣ ಮುಗಿಸಿದರು, ಅದರ ಕರ್ಮಫಲವಾಗಿ ತುಮಕೂರು, ಬೆಂಗಳೂರು ಎಂದು ಹೋಗಿಬಿಟ್ಟರು. ಹೋದಲ್ಲಿಯೇ ಮದುವೆಯಾಗಿ ಮಕ್ಕಳನ್ನೂ ಎತ್ತುಬಿಟ್ಟರು. ಊರಲ್ಲೇ ಉಳಿದ ಸೀಬೆ ಮರದ ಹಣ್ಣಿನ ನೆನಪು ಅವರಿಗೆ ಮರೆತೇ ಹೋಯಿತು. ಹಬ್ಬಕ್ಕೋ, ರಜಕ್ಕೋ ಊರಿಗೆ ಬಂದಾಗ ಊರೊಳಗೆ ಎಲ್ಲಾದರು ಬೋರಜ್ಜಿ ಎದುರಿಗೆ ಸಿಕ್ಕರೆ ಮಾತ್ರ ಅವರಿಗೆ ಬೋರಜ್ಜಿಯ ನೆನಪಾಗುವುದು. ಬೋರಜ್ಜಿಯ ಮನೆಯ ಕಡೆ ಬಂದರೆ, ಸೀಬೆ ಮರದ ಕಡೆ ನೋಡಿದರೆ, ಬಾಲ್ಯವನ್ನು ನೆನಪಿಸಿಕೊಂಡು ಅದರ ಶ್ರಾದ್ಧಕ್ಕೆ ಎಂಬಂತೆ ಮರದಲ್ಲಿ ಹಣ್ಣುಗಳಿದ್ದರೆ ಕೆಳಗೆ ನಿಂತು ಕೈಗೆಟುಕುವ ಎರಡು ಹಣ್ಣು ಕಿತ್ತುಕೊಂಡು ಹೋಗುವರು. ಅದೂ ಅಷ್ಟು ಸಮಯವಿದ್ದರೆ.
ಆದರೆ ಬೋರಜ್ಜಿಯ ಸೀಬೆ ಮರ ಮಾತ್ರ ಕೇಳುವವರಿಲ್ಲದೆಯೂ ಹಾಡುವ ಹಕ್ಕಿಗಳಂತೆ ತಿನ್ನುವವರಿಲ್ಲದಿದ್ದರೂ ವರ್ಷಕ್ಕೊಮ್ಮೆ ಹೂವಾಗಿ ಮೈದುಂಬಿಕೊಂಡು, ಹಣ್ಣಾಗಿ ಬಾಗಿ ನಿಂತುಬಿಡುತ್ತದೆ ಚಿರಯೌವ್ವನದ ಚೆಲುವೆಯಂತೆ. ಹಣ್ಣುಗಳ ತೊಟ್ಟು ಕೊಳೆತು ಒಂದೊಂದೇ ಬಿದ್ದು ಮರದ ಅಡಿಯಲ್ಲೆಲ್ಲಾ ಹಣ್ಣಿನ ರಾಶಿಯಾಗಿಬಿಡುತ್ತದೆ. ಬೋರಜ್ಜಿಗೆ ಇದನ್ನು ಕಂಡು ‘ಕರುಳು ಚುರ್’ ಅಂದರೂ ಏನೂ ಮಾಡಲಾಗದೆ ಸುಮ್ಮನಾಗುತ್ತಾಳೆ.

ಇತ್ತೀಚಿಗೆ ಬೋರಜ್ಜಿಗೆ ಕೂಲಿ ಕೆಲಸಕ್ಕೆ ಹೋಗುವುದು ಕಷ್ಟ. ಇದ್ದ ಎಮ್ಮೆಯನ್ನು ನೋಡಿಕೊಂಡು ಕಾಲ ಹಾಕುವುದೇ ಒಂದು ದೊಡ್ಡ ಕೆಲಸ. ಎಡಿಯೂರಪ್ಪನ ನಾನೂರಕ್ಕೆ ಸಿದ್ದರಾಮಯ್ಯನ ಇನ್ನೂರು ಸೇರಿ ಒಟ್ಟು ಆರ‍್ನೂರು ಬರುವುದರಿಂದ ಜೀವನವೂ ತಕ್ಕ ಮಟ್ಟಿಗೆ ಸಲೀಸು.
ಲೈಟ್ ಬಿಲ್ ಕಲೆಕ್ಟರ್ ಲೋಕೇಶ ಪ್ರತೀ ತಿಂಗಳು ಬೋರಜ್ಜಿಯ ಮನೆಯ ಕಡೆಗೆ ಬಂದಾಗ ಸೀಬೇಹಣ್ಣು ಕಂಡರೆ ತಪ್ಪದೇ ಬಂದು ಒಂದೆರೆಡು ಹಣ್ಣು ತಿಂದು ಕವರಿನಲ್ಲಿ ಒಂದಷ್ಟು ಹಣ್ಣುಗಳನ್ನು ತುಂಬಿಕೊಂಡು ಹೋಗುವನು. ಪ್ರತೀಬಾರಿ ಸೀಬೆ ಹಣ್ಣು ಒಯ್ಯುವಾಗಲೂ ಕೃತಜ್ಞತೆಗೆ ಎಂಬಂತೆ ಬೋರಜ್ಜಿಗೆ ಈ ‘ಬ್ಯುಸಿನೆಸ್ಸು ಐಡಿಯ’ ಕೊಡಲು ಮರೆಯುತ್ತಿರಲಿಲ್ಲ – “ಅಜ್ಜಿ, ಸಂಜೆ ಹೊತ್ತು ಹೈವೇ ಪಕ್ಕ ಒಂದೈವತ್ತು ಹಣ್ಣು ಇಟ್ಕಂಡು ಕುತ್ಕೊ. ಹತ್ತು ರುಪಾಯಿಗೆ ಎರಡು ಅಂದರೂ ಅರಾಮಾಗಿ ತಗಳ್ತಾರೆ ಜನ. ಹಿಂಗ್ ಬಿದ್ದು ವೇಸ್ಟ್ ಆಗೋದೂ ತಪ್ಪುತ್ತೆ, ನಿನಗೂ ಖರ್ಚಿಗೆ ಕಾಸಾಗುತ್ತೆ”.

ಆರಂಭದಲ್ಲಿ ಇದು ಬೋರಜ್ಜಿಗೆ ಹುಡುಗಾಟ ಅನ್ನಿಸುತ್ತಿತ್ತು. ಲೋಕೇಶನ ಸಲಹೆಯನ್ನು ಪದೇ ಪದೇ ಕೇಳಿದ ಮೇಲೂ, ಆನಾಡಿ ಹಣ್ಣುಗಳು ಬಿದ್ದು ಹಾಳಾಗುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗಲಿಲ್ಲ. ಕಡೆಗೊಂದು ದಿನ ಅಜ್ಜಿ ತೀರ್ಮಾನ ಮಾಡೇ ಬಿಟ್ಟಿತು. ಸೂರ್ಯ ಇಳಿಯುವ ಹೊತ್ತಿಗೆ ಬುಟ್ಟಿಯಲ್ಲಿ ಇಪ್ಪತ್ತು-ಮೂವತ್ತು ಆರಿಸಿದ ಸೀಬೆಕಾಯಿಗಳನ್ನು ತುಂಬಿಕೊಂಡು ಹೋಗಿ ರಸ್ತೆ ಪಕ್ಕ ಕೂರುತ್ತಿತ್ತು. ಪ್ರಾರಂಭದಲ್ಲಿ ಒಂದು ರೀತಿಯಲ್ಲಿ ಮುಜುಗರವಾದರೂ ಆನಂತರದಲ್ಲಿ ನಿಧಾನವಾಗಿ ಅಭ್ಯಾಸವಾಗಿ ಹೋಯಿತು. ಹತ್ತು ರೂಪಾಯಿಗೆ ಎರಡು, ಕೆಲವೊಮ್ಮೆ ಮೂರು, ಕೆಲವೊಮ್ಮೆ ಐದರವರೆಗೂ ಮಾರುತ್ತಿತ್ತು. ಒಂದು ವೇಳೆ ವ್ಯಾಪಾರವಾಗದೇ ಉಳಿದರೆ ದಾರಿಯಲ್ಲಿ ಸಿಕ್ಕವರಿಗೆ ಉಚಿತವಾಗಿಯೂ ಕೊಟ್ಟು ಬರುತ್ತಿತ್ತು. ಲೋಕೇಶನ ಈ ಬ್ಯುಸಿನೆಸ್ಸು ಐಡಿಯಾದಿಂದ ಬೋರಜ್ಜಿಗೆ ವರಮಾನ ಬಂದಿದ್ದಕ್ಕಿಂತ ಹೆಚ್ಚಾಗಿ ಕಾಲ ಕಳೆಯಲು ಒಂದು ಒಳ್ಳೆಯ ದಾರಿ ಸಿಕ್ಕಂತಾಗಿತ್ತು.

ಇವತ್ತು ದೀಪಾವಳಿಯಾಗಿದ್ದರಿಂದ ಬೇಗ ವ್ಯಾಪಾರ ಮುಗಿಸಿ ಮನೆಗೆ ಬಂದು ಹಬ್ಬ ಮಾಡುವ ಸಲುವಾಗಿ ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಗೇ ಬಂದು ಕೂತಿತ್ತು. ಮಧ್ಯಾಹ್ನ ಎರಡು ಗಂಟೆಯಾದರೂ ವ್ಯಾಪಾರವಿಲ್ಲ! ವಾಹನಗಳಂತೂ ರಸ್ತೆ ತುಂಬ ಹೋಗುತ್ತಿವೆ; ಆದರೆ ನಿಲ್ಲಿಸುವವರು ಯಾರೂ ಇಲ್ಲ. ‘ಇನ್ನೊಂದು ಅರ್ಧ ಗಂಟೆ ನೋಡಿ ಹೋಗನ’ ಎಂದು ತೀರ್ಮಾನಿಸಿ ಬೋರಜ್ಜಿ ಎದ್ದು ಬಂದು ರಸ್ತೆಯ ಬುಡಕ್ಕೇ ನಿಂತು ಕೈಯಾಡಿಸಲು ಶುರು ಮಾಡಿತ್ತು. ಕೈಯಾಡಿಸಲು ಶುರು ಮಾಡಿ ಸರಿಯಾಗಿ ಅರ್ಧಗಂಟೆಗೆ ಒಟ್ಟಿಗೆ ಬಂದ ಮೂರು ಬೈಕುಗಳು ಬೋರಜ್ಜಿಯನ್ನು ಗಮನಿಸಿ ಹತ್ತಿರ ಬಂದು ನಿಂತವು. ವ್ಯಾಪಾರ ಶುರು ಆಯಿತು. ‘ಹತ್ತು ರೂಪಾಯಿಗೆ ಐದು ಮಾಡಿ ಕೊಡ್ತಿನಿ ತಗಳ್ರಪ್ಪ’ ಅಂತು ಅಜ್ಜಿ. ಇದ್ದ ಒಟ್ಟು ಆರು ಜನರಿಂದ ಮೂವತ್ತು ರೂಪಾಯಿಯ ವ್ಯಾಪಾರ ಆಯಿತು. ವ್ಯಾಪಾರ ಮುಗಿಸಿ ಹೊರಡುವ ಮುನ್ನ ಸೀಬೇ ಹಣ್ಣಿನ ವ್ಯಾಪಾರದ ‘ಮೆಮೊರಿ’ಗಾಗಿ ಬಂದವರು ಸೆಲ್ಫಿಗಳನ್ನು ತೆಗೆಯಲು ಶುರು ಮಾಡಿದರು.

ಹಣ್ಣುಗಳನ್ನು ಕೈಯಲ್ಲಿ ಇಟ್ಟುಕೊಂಡು, ಬಾಯಲ್ಲಿ ಇಟ್ಟುಕೊಂಡು, ತಲೆ ಮೇಲೆ ಹೊತ್ತುಕೊಂಡು!, ಕೈಗಳನ್ನು ತಿರುಗಿಸಿ, ಮುಖವನ್ನು ತಿರುಗಿಸಿ ಇನ್ನೂ ವಿಧವಿಧವಾದ ಭಂಗಿಗಳು ನಡೆದೇ ಇದ್ದವು. ಇವರ ಅವತಾರಗಳನ್ನು ನೋಡಿಕೊಂಡು ನಗುತ್ತಿದ್ದ ಬೋರಜ್ಜಿಯ ಜೊತೆಗೂ ಕೆಲವು ಸೆಲ್ಫಿಗಳಾದವು – “ಸೆಲ್ಪಿ ವಿತ್ ಸ್ಮೈಲಿಂಗ್ ಏಂಜೆಲ್” ಎಂದು! ಬಂದವರ ಗುಂಪಿನಲ್ಲಿದ್ದ ಹುಡುಗಿಯೊಬ್ಬಳು ಬುಟ್ಟಿಯನ್ನೇ ಎತ್ತಿಕೊಂಡು ತಲೆಯ ಮೇಲೆ ಮತ್ತು ಕಂಕುಳಲ್ಲಿ ಇಟ್ಟುಕೊಂಡು ಪೋಟೋ ತೆಗಿಸಿಕೊಂಡಳು. ಹಾಗೆಯೇ ಮುಂದುವರೆದು ಸರ್ಕಾರದವರ ಸೇತುವೆಯ ಮೇಲೆ ಹತ್ತಿ ನಿಂತು ದೇಹವನ್ನು ಬಳುಕಿಸುತ್ತಾ ವಿವಿಧ ಭಂಗಿಗಳಲ್ಲಿ ಫೋಟೋ ತೆಗಿಸಿಕೊಳ್ಳುವುದರಲ್ಲಿ ಮಗ್ನಳಾಗಿದ್ದಳು.

ಅದೇ ಸಮಯಕ್ಕೆ ರಸ್ತೆಯಲ್ಲಿ ಬಂದ ಲಾರಿಯೊಂದು ನಿದ್ದೆಯಲ್ಲಿ ಭಯಬಿದ್ದು ಒಮ್ಮೆಲೇ ಎಚ್ಚರಗೊಂಡು ಜೋರಾಗಿ ಚೀರುವವರಂತೆ, ರಸ್ತೆ ಪಕ್ಕದಲ್ಲಿ ಸಾಲುಗಟ್ಟಿ ನಿಂತಿದ್ದ ಬೈಕುಗಳನ್ನು ಕಂಡು ಜೋರಾಗಿ ಹಾರನ್ನು ಮಾಡಿಬಿಟ್ಟಿತು. ಇದ್ದಕ್ಕಿದ್ದಂತೆ ಬಂದ ಸದ್ದಿಗೆ ಬೆಚ್ಚಿದಂತಾಗಿ ಸೇತುವೆ ಮೇಲಿದ್ದ ಹುಡುಗಿಯು ಆಯತಪ್ಪಿ ಸೇತುವೆಯ ಹಿಂಭಾಗದಲ್ಲಿದ್ದ ಗುಂಡಿಯ ಒಳಕ್ಕೆ ಬುಟ್ಟಿಯ ಸಮೇತ ಬಿದ್ದುಬಟ್ಟಳು. ನಿನ್ನೆ ಮೊನ್ನೆ ಬಿದ್ದಿದ್ದ ಮಳೆಯಿಂದಾಗಿ ಗುಂಡಿಯೊಳಗೆ ನಿಂತಿದ್ದ ಸ್ವಲ್ಪ ನೀರಿನಲ್ಲಿ ಹುಡುಗಿ ಕೆಸರಾಗಿ ಹೋದಳು. ಬುಟ್ಟಿ ಮುರಿದು ಸೀಬೆಹಣ್ಣುಗಳೂ ಕೊಳಕಾದವು. ಉಳಿದವರು ಹುಡುಗಿಯನ್ನು ನಿಧಾನವಾಗಿ ವಿಡಿಯೋ ಸಮೇತ ಎತ್ತಿದರು. ಚೇಷ್ಟೆಯೂ ಆಯಿತು. ಹುಡುಗನೊಬ್ಬ ನಿಧಾನವಾಗಿ ಮುರಿದು ಹೋಗಿದ್ದ ಬುಟ್ಟಿಯನ್ನು ತೆಗೆದುಕೊಂಡು ಬಂದ. ಬೋರಜ್ಜಿ ಬುಟ್ಟಿಯನ್ನು ನೋಡಿ ಮಂಕಾಗಿ ಹೋಯಿತು. ಕೆಸರಾಗಿದ್ದ ಹುಡುಗಿ “ನಾನು ಬೇಗ ಫ್ರೆಶ್ ಅಪ್ ಆಗಬೇಕು” ಎಂದು ಒಂದೇ ಸಮ ಹಠ ಮಾಡತೊಡಗಿದ್ದಳು.

ಹುಡುಗನೊಬ್ಬ ಅಜ್ಜಿಯ ಬಳಿ ಬಂದು “ಸಾರಿ ಅಜ್ಜಿ. ಬೇಜಾರಾಗ್ಬೇಡಿ. ಹೊಸ ಬುಟ್ಟಿ ತಗೊಳಿ ಪ್ಲೀಸ್” ಎಂದು ಐದು ನೂರು ತೆಗೆದು ಅಜ್ಜಿಯ ಕೈಗಿಟ್ಟನು. ಉಳಿದವರೂ ‘ಸಾರಿ’ ಸೇರಿಸಿದರು. ಪುಣ್ಯಕ್ಕೆ ಸಾರಿಯ ‘ಮೆಮೊರಿ’ಗಾಗಿ ಮತ್ತೊಂದು ಸೆಲ್ಫಿ ತೆಗೆದುಕೊಳ್ಳುವ ಗೋಜಿಗೆ ಹೋಗದೆ ಬೈಕು ಹತ್ತಿ ಹೊರಟುಬಿಟ್ಟರು.

ಬೋರಜ್ಜಿಗೆ ತನ್ನ ತಿಳಿವಳಿಕೆ ಮತ್ತು ಅನುಭವದ ಆಧಾರದಲ್ಲಿ ಈ ಘಟನೆಯನ್ನು ವಿಶ್ಲೇಷಿಸಲು ಸಾಧ್ಯವಾಗಲೇ ಇಲ್ಲ. ಎಮ್ಮೆ ಅಟ್ಟಿಕೊಂಡು ಮನೆಗೆ ಬಂದು ಹಬ್ಬ ಸುರು ಮಾಡಿತು. ಸಗಣಿ ಸಾರಿಸಿ, ಪೂಜೆ ಮುಗಿಸಿ ಎಡೆಗೆ ಮಾಡಿದ್ದ ಪಾಯಸ ಹಾಕಿಕೊಂಡು ಊಟಕ್ಕೆ ಕೂತಾಗ ಸಂಜೆ ಐದು ಗಂಟೆಯಾಗಿತ್ತು. ಒಂದೆರೆಡು ತುತ್ತು ತಿನ್ನುವಷ್ಟರಲ್ಲಿ ಬೋರಜ್ಜಿಗೆ ಊಟ ಸಾಕೆನಿಸತೊಡಗಿತು. ಮತ್ತೊಂದು ತುತ್ತು ಬಲವಂತದಿಂದ ಗಂಟಲಿಗೆ ಇಳಿಸಲು ಹೋದಾಗ ವಾಕರಿಕೆ ಬಂದಂತೆ ಆಯಿತು. ತಟ್ಟೆಯಲ್ಲಿದ್ದ ಊಟವನ್ನು ಮುಸುರೆಗೆ ಹಾಕಿ ಕೈ ತೊಳೆದುಕೊಂಡು, ಮುಸುರೆ ಬಕೇಟು ಎತ್ತಿಕೊಂಡು ಎಮ್ಮೆಗೆ ಇಡಲು ಕೊಟ್ಟಿಗೆ ಕಡೆಗೆ ಹೊರಟಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...