ಲಾಕ್ಡೌನ್ ಕಾರಣಕ್ಕೆ ಸಂಕಷ್ಟದಲ್ಲಿರುವ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲಾ ಸಕ್ರಿಯ ಮತ್ತು ನೋಂದಾಯಿತ ಜಾಬ್ ಕಾರ್ಡ್ ಹೊಂದಿರುವವರಿಗೆ ಮುಂಚಿತವಾಗಿ ವೇತನ ನೀಡುವಂತೆ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಏಕರೂಪದ ಮಾರ್ಗಸೂಚಿಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ಅರುಣಾ ರಾಯ್ ಮತ್ತು ನಿಖಿಲ್ ಡೇಯವರ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿ ಸಲ್ಲಿಸಿದ್ದು, ಭಾರತ ಸಂವಿಧಾನದ 14 ಮತ್ತು 21 ರ ವಿಧಿ ಅಡಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯ 7.6 ಕೋಟಿಗೂ ಹೆಚ್ಚು ಸಕ್ರಿಯ ಜಾಬ್ ಕಾರ್ಡ್ ಹೊಂದಿರುವವರ ಆರೋಗ್ಯ ಮತ್ತು ಜೀವನೋಪಾಯದ ಮೂಲಭೂತ ಹಕ್ಕುಗಳ ರಕ್ಷಣೆ ನೀಡುವಂತೆ ಒತ್ತಾಯಿಸಲಾಗಿದೆ.
ಅಲ್ಲದೇ ಲಾಕ್ಡೌನ್ ಕಾರಣದಿಂದ ನಗರಗಳಿಂದ ಹಳ್ಳಿಗಳಿಗೆ ವಲಸೆ ಹೋದವರಿಗೂ ಸಹ ಹೊಸ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ಗಳನ್ನು ನೀಡುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಲಾಕ್ಡೌನ್ ಸಮಯದಲ್ಲಿಯೂ ಕೆಲವು ರಾಜ್ಯಗಳು ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ಇದು ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವವನ್ನು ಅಪಾಯಕ್ಕೆ ತಳ್ಳುತ್ತದೆ. ದೇಶದ ಎಲ್ಲಾ ಜಿಲ್ಲೆಗಳಿಗೂ ಕೊರೊನಾ ಹರಡಿರುವುದರಿಂದ ಕೂಡಲೇ ಅವರ ಕೆಲಸ ನಿಲ್ಲಿಸುವಂತೆ ಮತ್ತು ಲಾಕ್ಡೌನ್ ಮುಗಿಯುವವರೆಗೂ ಎಲ್ಲರಿಗೂ ಪೂರ್ಣ ವೇತನ ನೀಡುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಅರ್ಜಿಯಲ್ಲಿ ಕೋರಿದ ಮನವಿಗಳು ಹೀಗಿವೆ:
1. 24.03.2020 ರಿಂದ ಪ್ರಾರಂಭವಾಗುವ ಲಾಕ್ಡೌನ್ ಅವಧಿಯ ಸಂಪೂರ್ಣ ಅವಧಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೋಂದಾಯಿತ ಎಲ್ಲಾ ಸಕ್ರಿಯ ಕುಟುಂಬಗಳು ಕೆಲಸದಲ್ಲಿದ್ದಾರೆ ಎಂದು ಪರಿಗಣಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವುದು. ಅದಕ್ಕೆ ಅನುಗುಣವಾಗಿ ಅವರ ಪೂರ್ಣ ವೇತನವನ್ನು ಪಾವತಿಸುವುದು.
2. ನಗರಗಳಿಂದ ತಮ್ಮ ಸ್ಥಳೀಯ ಹಳ್ಳಿಗಳಿಗೆ ಮರಳಿದ ಎಲ್ಲ ವಲಸಿಗ ಕಾರ್ಮಿಕರಿಗೂ 15 ದಿನಗಳಲ್ಲಿ ವೈಯಕ್ತಿಕ ತಾತ್ಕಾಲಿಕ ಉದ್ಯೋಗ ಖಾತರಿ ಕಾರ್ಡ್ಗಳನ್ನು ನೀಡಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವುದು.
3. ಕೊರೊನಾ ಸಾಂಕ್ರಾಮಿಕ ಮುಗಿದ ನಂತರ ಹೆಚ್ಚಿನ ಉದ್ಯೋಗದ ಭರವಸೆ ನೀಡಬೇಕು.
4. ಹೊಸ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸಲು 100 ದಿನಗಳ ಕೆಲಸದ ಸಮಯದಿಂದ ಪ್ರತಿ ಮನೆಗೆ 200 ದಿನಗಳವರೆಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವುದು.
ಈ ಅರ್ಜಿಯು ಏಪ್ರಿಲ್ 7 ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಬಾಯಿಲ್ಲದವರ ಪರವಾಗಿ ದನಿ ಎತ್ತುವ ವಕೀಲರು, ನಮ್ಮ ದೇಶದಲ್ಲಿ ಇದ್ದಾರೆ ಎಂಬುದು ಸಮಾಧಾನಕರ ಮತ್ತು ಸಂತೋಷದ ಸುದ್ದಿ.