Homeಮುಖಪುಟ21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

“ಲಾಕ್‌ಡೌನ್‌ ” ಭಾಗಶಃ ಈ ಪದವನ್ನು ಈ ಹಿಂದೆ ಭಾರತೀಯರು ಎಂದಿಗೂ ಕೇಳಿರಲಿಕ್ಕಿಲ್ಲವೇನೋ? ಆದರೆ ಕಳೆದ 10 ದಿನಗಳಿಂದ ಈ ಪದವನ್ನು ಕೇಳುವುದಿರಲಿ, ಲಾಕ್‌ಡೌನ್‌ ನೀಡುತ್ತಿರುವ ಎಫೆಕ್ಟ್‌ಗೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನಿನ್ನೆ ಮೊನ್ನೆವರೆಗೆ ಆಫೀಸು, ಕೆಲಸ, ಮೋಜು ಮಸ್ತಿ ಎಂದು ಕೈಲಿ ಬೈಕ್-ಕಾರು ಹಿಡಿದು ಜಾಲಿ ರೌಂಡ್ ಹೊಡೆಯುತ್ತಿದ್ದವರು ಇಂದು ಮೈ ಮುದುಡಿ ಮನೆಯಲ್ಲೇ ಕೂರುವಂತಾಗಿದೆ.

- Advertisement -
- Advertisement -

ಮನೆಯಲ್ಲಿ ಇದ್ದು ಬೇಸರವಾಗಿ ರೌಂಡ್ ಹೊಡೆಯಲು ಹೊರ ಬಂದವರಿಗೆ ಪೊಲೀಸರು ಬೀಸುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 176. ಆದರೆ ಕಳೆದ 10 ದಿನದ ಅವಧಿಯಲ್ಲಿ ಪೊಲೀಸರ ಲಾಠಿ ರುಚಿ ಕಂಡವರ ಸಂಖ್ಯೆ 5600 ನ್ನೂ ಮೀರುತ್ತಿದೆ. ಅಲ್ಲದೆ ಸಿಎಂ ಸ್ವಕ್ಷೇತ್ರ ಶೀಕಾರಿಪುರದಲ್ಲಿ ಪೊಲೀಸರ ಏಟು ತಾಳಲಾರದೆ ಸುರೇಶ್ ನಾಯ್ಕ ಎಂಬ ಓರ್ವ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

130 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತದಂತಹ ದೇಶದಲ್ಲಿ ದಿಢೀರನೆ ಲಾಕ್ಡೌನ್ ಘೋಷಣೆ ಮಾಡಿದರೆ ಜನ ಹೇಗೆ ನಲುಗಬಹುದು ಎಂಬುದು ಭಾರತೀಯರಿಗೆ ಈಗ  ಅರ್ಥವಾಗಿರಬೇಕು. ಆದರೆ ಕಳೆದ 70 ವರ್ಷಗಳಲ್ಲಿ ಕಾಶ್ಮೀರದಲ್ಲಿ ಎಷ್ಟು ಬಾರಿ ಲಾಕ್‌ಡೌನ್‌ ಮಾಡಲಾಗಿದೆ. ಕಳೆದ ವರ್ಷ ಕಲಂ 370 ರದ್ದು ಪಡಿಸುವ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಸತತ 6 ತಿಂಗಳ ಕಾಲ ಲಾಕ್‌ಡೌನ್‌ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅಲ್ಲಿನ ಜನ ಹೇಗೆ ಕಷ್ಟಪಟ್ಟಿರಬೇಕು? ಜನ ಜೀವನ ಎಷ್ಟರ ಮಟ್ಟಿಗೆ ನಲುಗಿರಬೇಕು? ಆ 6 ತಿಂಗಳ ಅವಧಿಯಲ್ಲಿ ಅಲ್ಲಿನ ವ್ಯಾಪಾರ ವಹಿವಾಟು ಎಷ್ಟು ನಷ್ಟ ಅನುಭವಿಸಿರಬೇಕು? ಇದ್ಯಾವುದರ ಬಗ್ಗೆಯಾದರೂ ನಮಗೆ ಮಾಹಿತಿ ಇದೆಯಾ? ಈ ಕುರಿತು ಯೋಚಿಸುವ ಗೋಜಿಗೂ ನಾವು ಹೋಗಿರಲಿಕ್ಕಿಲ್ಲವೇನೋ? ಆದರೆ ಈಗ ಆ ಸಂದರ್ಭ ಎದುರಾಗಿದೆ. ಕಾಶ್ಮೀರದ ಆ 180 ದಿನದ ಲಾಕ್‌ಡೌನ್‌ ಎಂಬ ಕಪ್ಪು ದಿನದ ಕತೆಗಳನ್ನು ಹಾಗೂ ಅಲ್ಲಿನ ಬದುಕನ್ನು ಯೋಚಿಸಬೇಕಿದೆ.

6 ತಿಂಗಳು ಮನೆಯಲ್ಲೇ ಬಂದಿ

ಕೊರೋನಾ ಕಾರಣಕ್ಕೆ ಭಾರತದಲ್ಲಿ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಈ 21 ದಿನಗಳ ಕಾಲ ನಾವು ಮನೆಯಲ್ಲಿ ಕೂರುವುದೇ ನಮಗೆ ಕಷ್ಟವಾಗಿದೆ. ಆದರೆ, ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನ ಕಲಂ 370ನ್ನು ರದ್ದುಗೊಳಿಸಿದ ನಂತರ ಕಳೆದ ಆಗಸ್ಟ್ 05ರ ನಂತರ 6 ತಿಂಗಳು ಕಣಿವೆ ರಾಜ್ಯದ ಜನ ಮನೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಯಿತು.

ಅಗತ್ಯ ವಸ್ತುಗಳ ಖರೀದಿ ಹೊರತಾಗಿ ಬೇರೆ ಯಾವುದೇ ವಿಚಾರಕ್ಕೆ ಅವರು ಮನೆಯಿಂದ ಹೊರ ಬರುವಂತಿರಲಿಲ್ಲ. ರಾಜ್ಯದಲ್ಲಾದರೂ ಲಾಕ್‌ಡೌನ್‌ ಪಾಲನೆಗೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ, ಕಾಶ್ಮೀರದಲ್ಲಿ ಮಿಲಿಟರಿಯನ್ನೇ ನೇಮಕ ಮಾಡಲಾಗಿತ್ತು ಎಂದರೆ ಮನೆಯಿಂದ ಹೊರ ಬಂದವರಿಗೆ ಶಿಕ್ಷೆ ಹೇಗಿರುತ್ತಿತ್ತು ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.

ಕಣಿವೆ ರೈತರ ಗೋಳು ಕೇಳುವರ್ಯಾರು?

ದೇಶದಲ್ಲಿ ಯಾವುದೇ ಮೂಲೆಯಲ್ಲಿ ಓರ್ವ ರೈತ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಅದು ರಾಷ್ಟ್ರೀಯ ಸುದ್ದಿ. ಇನ್ನು ರಾಜ್ಯದಲ್ಲಿ ಓರ್ವ ರೈತ ಸತ್ತರೆ ಆಡಳಿತ ಪಕ್ಷದ ಕಾಲೆಳೆಯಲು ಟೀಕಿಸಲು ವಿರೋಧ ಪಕ್ಷಕ್ಕೆ ಸಿಕ್ಕ ದೊಡ್ಡ ಆಯುಧ. ಇನ್ನು ಮಾಧ್ಯಮಗಳಿಗೆ ಅದು ಹಾಟ್ ಬ್ರೇಕಿಂಗ್ ನ್ಯೂಸ್.

ಆದರೆ, ಕಾಶ್ಮೀರದಲ್ಲಿ ರೈತರು ಇಲ್ಲವೇ? ಅವರಿಗೆ ಸಾಲ ಇಲ್ಲವೇ? ಅಲ್ಲಿನ ರೈತರೂ ಮನುಷ್ಯರಲ್ಲವೇ? ಕಾಶ್ಮೀರದಲ್ಲಿ ಸಾಲದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವ ರೈತರ ಕುರಿತು ನಾವು ಮರುಗುವುದು ಬೇಡ, ಎಂದಾದರೂ ಈ ಕುರಿತು ಕನಿಷ್ಟ ಯೋಚನೆ ಮಾಡಿದ್ದೇವೆಯೇ ಎಂದು ನಮ್ಮ ಆತ್ಮಸಾಕ್ಷಿಯನ್ನು ನಾವು ಪ್ರಶ್ನೆ ಮಾಡಿಕೊಂಡರೆ ಉತ್ತರ ದಕ್ಕುತ್ತದೆ.

ಅಸಲಿಗೆ ಕಾಶ್ಮೀರದ ಪ್ರಮುಖ ಬೆಳೆ ಸೇಬು ಮತ್ತು ಕೇಸರಿ. ಭಾರತಕ್ಕೆ ಶೇ.90 ರಷ್ಟು ಸೇಬಿನ ಹಣ್ಣು ಕಣಿವೆ ರಾಜ್ಯ ಕಾಶ್ಮೀರದಿಂದಲೇ ಲಭ್ಯವಾಗುತ್ತದೆ. ಇನ್ನು ಶೇ.100 ರಷ್ಟು ಕೇಸರಿ ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ಕಾಶ್ಮೀರದ ಕೇಸರಿಗೆ ವಿಶ್ವದಾದ್ಯಂತ ಡಿಮ್ಯಾಂಡ್ ಇದೆ. ವಿಶ್ವದ ಕೇಸರಿ ಉತ್ಪಾದನೆಯಲ್ಲಿ ಕಾಶ್ಮೀರದ ಪಾಲು ಶೇ.07 ರಷ್ಟು. ಕಾಶ್ಮೀರದ ಸೇಬು ಸಹ ಸಾಕಷ್ಟು ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತದೆ.

2019ರಲ್ಲಿ ಕೇಸರಿ ಮತ್ತು ಸೇಬಿನ ಬೆಳೆ ಕಾಶ್ಮೀರಿ ರೈತರಿಗೆ ಉತ್ತಮವಾಗಿಯೇ ಕೈಸೇರಿತ್ತು. ಆದರೆ ಈ ಬೆಳೆ ಮಾರುಕಟ್ಟೆಗೆ ಸೇರುವ ಹೊತ್ತಿಗೆ ಲಾಕ್‌ಡೌನ್‌ ಘೋಷಿಸಿಯಾಗಿತ್ತು. ಪರಿಣಾಮ ಕಾಶ್ಮೀರ ಸೇಬು ಉದ್ಯಮ ಆಗಸ್ಟ್‌ನಿಂದ ಅಕ್ಟೋಬರ್ ವರೆಗಿನ ಕೇವಲ ಎರಡು ತಿಂಗಳಿನಲ್ಲಿ ಅನುಭವಿಸಿದ ನಷ್ಟ ಬರೋಬ್ಬರಿ 12,000 ಕೋಟಿ ಎನ್ನುತ್ತಿವೆ ಆರ್ಥಿಕ ವಿಶ್ಲೇಷಣೆಗಳು.

ಅಕ್ಟೋಬರ್ ನಂತರ ಕೇಂದ್ರ ಸರ್ಕಾರವೇ ನೇರ ಸೇಬು ಕೊಳ್ಳಲು ಮುಂದಾದರೂ ಅಷ್ಟರೊಳಗಾಗಲೇ ಶೇ. 60ಕ್ಕೂ ಹೆಚ್ಚು ಸೇಬು ಕೊಳೆತು ಅನುಪಯುಕ್ತವಾಗಿ ಹೋಗಿತ್ತು. ಆಕ್ಟೋಬರ್ ನಂತರವೂ ಅಲ್ಲಿನ ರೈತನ ಪರಿಸ್ಥಿತಿ ಸುಧಾರಿಸಿರಲಿಲ್ಲ.

ಇನ್ನೂ ಕುರಿ ಸಾಕಾಣಕೆ ಮತ್ತು ಉತ್ಕೃಷ್ಟ ಉಣ್ಣೆ ತಯಾರಿಕೆ ಇಲ್ಲಿನ ಉಪ ಕಸುಬು. ವರ್ಷಕ್ಕೆ ಸಾವಿರಾರು ಕೋಟಿ ಹಣ ಸಂಚಯಿಸುವ ಮತ್ತೊಂದು ದೊಡ್ಡ ಉದ್ಯಮವೇ ಸರಿ. ಆದರೆ, ಸತತ 6 ತಿಂಗಳ ಲಾಕ್‌ಡೌನ್‌ ಇಲ್ಲಿನ ಉಣ್ಣೆ ಉದ್ಯಮವನ್ನೂ ಇನ್ನಿಲ್ಲದಂತೆ ಕಾಡಿತ್ತು, ಅತ್ತ ಪ್ರಮುಖ ಉದ್ಯಮವಾದ ಸೇಬು ಕೇಸರಿಯೂ ಕೈಕೊಟ್ಟಿತ್ತು, ಇತ್ತ ಉಪ ಕಸುಬು ಇಲ್ಲದೆ ಇಲ್ಲಿನ ರೈತ ಸಂಕಷ್ಟಕ್ಕೆ ಒಳಗಾದದ್ದು ಹೊರ ಜಗತ್ತಿಗೆ ತಿಳಿಯಲೇ ಇಲ್ಲ.

ಪ್ರವಾಸೋದ್ಯಮವೂ ಮಕಾಡೆ ಮಲಗಿತ್ತು

ಪ್ರವಾಸೋದ್ಯಮ ಕಣಿವೆ ರಾಜ್ಯದ ಪ್ರಮುಖ ಉದ್ಯಮಗಳಲ್ಲೊಂದು. ಇಲ್ಲಿನ ಜನ ಅತಿಹೆಚ್ಚು ಅವಲಂಬಿತವಾಗಿರುವುದು ಪ್ರವಾಸೋದ್ಯಮವನ್ನೆ. ಪ್ರವಾಸೋದ್ಯಮ ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಮ್ಲ ಜನಕ ಎಂದರೂ ತಪ್ಪಾಗಲಾರದು. ಪ್ರವಾಸೋದ್ಯಮವನ್ನೇ ನಂಬಿ ಇಲ್ಲಿ ಸಾವಿರಾರು ಕುಟುಂಬಗಳು ಬದುಕುತ್ತಿವೆ.

ಆದರೆ, ದಿಢೀರನೆ ಬಂದೆರಗಿದ ಲಾಕ್ಡೌನ್ ಈ ಭಾಗದಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದವರ ಬದುಕನ್ನೇ ಕಸಿದಿತ್ತು. ಭಾರತದಲ್ಲೇ ಅತಿಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕಾಶ್ಮೀರವೂ ಒಂದು. ನಿರುದ್ಯೋಗದ ಜೊತೆಗೆ ಲಾಕ್‌ಡೌನ್‌‌ನಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕಿದ್ದವರ ಬದುಕು ಬೀದಿಗೆ ಬಂದದ್ದು ಈ ಕಾಲಾವಧಿಯಲ್ಲಿ, ಅಲ್ಲಿನ ಬಡತನ ರೇಖೆಗಿಂತ ಕೆಳಗಿದ್ದ ಶೇ.21.63 ರಷ್ಟು ಜನ ಅನುಭವಿಸಿದ ಕಷ್ಟವನ್ನು ಯಾವ ಅಂತಾರಾಷ್ಟ್ರೀಯ ಮಾಧ್ಯಮಗಳೂ ಸೆರೆ ಹಿಡಿಯಲೇ ಇಲ್ಲ.

ಲಾಕ್‌ಡೌನ್‌ ನೆಪದಲ್ಲಿ ಇಂಟರ್ನೆಟ್ ತಡೆ

ಭಾರತದಲ್ಲಿ ಇದೀಗ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಲಾಕ್‌ಡೌನ್‌ ನಡುವೆಯೂ ಎಲ್ಲಾ ಜನರಿಗೆ 4ಜಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಜನ ಮನೆಯಲ್ಲೇ ಇದ್ದೂ ವಿಶ್ವದ ಆಗುಹೋಗುಗಳನ್ನು ತಿಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಆದರೆ ಲಾಕ್‌ಡೌನ್‌ ಸಮಯದಲ್ಲಿ ಕಾಶ್ಮೀರದಲ್ಲಿ ಇಂಟರ್ನೆಟ್ ಮತ್ತು ಟೆಲಿಫೋನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು. ಪರಿಣಾಮ ಕಣಿವೆ ರಾಜ್ಯ 50 ವರ್ಷಗಳಷ್ಟು ಹಿಂದುಳಿಯುವಂತಾಗಿತ್ತು.

ಶಾಲಾ ಕಾಲೇಜುಗಳನ್ನು ಸತತ 6 ತಿಂಗಳು ಬಂದ್ ಮಾಡಲಾಗಿತ್ತು. ಮಕ್ಕಳಿಗೆ ಶಿಕ್ಷಣವೂ ದೂರ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಕ್ಡೌನ್ ತೆರವಾದ ನಂತರವೂ ಕಾಶ್ಮೀರಕ್ಕೆ ಸಮರ್ಪಕ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ. ಪರಿಣಾಮ ಅಲ್ಲಿನ ಶಾಲಾ ಬಾಲಕನೊಬ್ಬ ದಯವಿಟ್ಟು ಇಂಟರ್ನೆಟ್ ಕೊಡಿ ಇಲ್ಲಿ ಶಾಲೆಯೂ ಇಲ್ಲ ಇಂಟರ್ನೆಟ್ ಸಹ ಇಲ್ಲದೆ ನಾವು ಏನನ್ನೂ ಕಲಿಯಲಾಗುತ್ತಿಲ್ಲ. ದಶಕಗಳಷ್ಟು ಹಿಂದುಳಿದಂತೆ ಭಾಸವಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಭಾಗಶಃ ಯಾರೂ ಮರೆತಿರಲು ಸಾಧ್ಯವಿಲ್ಲ.

ಕಳೆದ 70 ವರ್ಷಗಳ ಅವಧಿಯಲ್ಲಿ ಎರಡು ರಾಷ್ಟ್ರಗಳ ರಾಜಕೀಯ ಲಾಭಕ್ಕೆ ಇಲ್ಲಿನ ಜನ ಬಲಿಯಾಗಿದ್ದಾರೆ, ಇಲ್ಲಿನ ಜನರ ಬದುಕು ಹರಿದು ಮೂರಾಬಟ್ಟೆಯಾಗಿದೆ ಎಂಬುದೂ ಎಷ್ಟು ಸತ್ಯವೋ, ಅಲ್ಲಿನ ಜನರ ಬದುಕಿನ ಕುರಿತು ದೇಶದ ಯಾವ ಭಾಗದ ಜನರಿಗೂ ಅಷ್ಟಾಗಿ ಆಸಕ್ತಿ ಇಲ್ಲ ಎಂಬುದು ಅದಕ್ಕಿಂತ ದೊಡ್ಡ ಸತ್ಯ.

ಭಾರತದ 21 ದಿನಗಳ ಲಾಕ್‌ಡೌನ್‌ ನೆಪದಲ್ಲಿ ಈಗಲೂ ನಾವು ಕಾಶ್ಮೀರದ ವ್ಯಥೆಯನ್ನು, ಕಪ್ಪು ಇತಿಹಾಸವನ್ನು, ಇಲ್ಲಿನ ಜನರ ಬದುಕಿನೊಳಗೆ ನುಸುಳಿ ಬದುಕನ್ನೇ ಹರಿದು ಹಾಕಿದ ಸ್ವಾರ್ಥ ರಾಜಕಾರಣದ ಕುರಿತು ಅವಲೋಕಿಸದಿದ್ದರೆ ಇನ್ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಶ್ಟೊ ಇಶ್ಟೋ ಪ್ಯಾಕೇಜ್ ಕರೋನಾ ಪ್ಯಾಕೇಜ್ ಸಾರಲಾಗಿದೆ.
    ಅಲ್ಲಿ!

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...