Homeಮುಖಪುಟನಟ – ನಿರ್ದೇಶಕನಿಂದ ಡೆಲಿವರಿ ಬಾಯ್ ಆದ ಅನುಭವ: ಗಿಗ್ ಜಾಬ್ ಗಳು ಸೃಷ್ಟಿಸುತ್ತಿರುವ ಅವಾಂತರಗಳು...

ನಟ – ನಿರ್ದೇಶಕನಿಂದ ಡೆಲಿವರಿ ಬಾಯ್ ಆದ ಅನುಭವ: ಗಿಗ್ ಜಾಬ್ ಗಳು ಸೃಷ್ಟಿಸುತ್ತಿರುವ ಅವಾಂತರಗಳು ಏನು?

- Advertisement -
- Advertisement -

ಜೀವಕ್ಕೆ ನೆಮ್ಮದಿ ಬೇಕು. ಇದ್ದಷ್ಟು ಕಾಲ ನೆಮ್ಮದಿ ಹುಡುಕುವುದೇ ಒಂದು ಕೆಲಸ. ನಾವು ಇರುವ ರೀತಿಯಲ್ಲಿಯೇ, ಹೊಟ್ಟೆಪಾಡಿನ ದುಡಿಮೆಯ ಹಾದಿಯಲ್ಲಿ, ಒಟ್ಟಿನಲ್ಲಿ ಬದುಕಲು ಬೇಕಿರುವ “ಅನ್ನ ಸಂಪಾದನೆಯ” ಹಾದಿಯ ಮೂಲಕ ನೆಮ್ಮದಿಯನ್ನು ಹುಡುಕಿಕೊಳ್ಳಳು ಸದಾ ಪ್ರಯತ್ನಿಸುತ್ತಿರುತ್ತೇವೆ. ನಮಗೆ ಇವತ್ತು ಅನ್ನ ದಕ್ಕಿದಂತೆ ಮುಂದಿನ ದಿನ, ಮರುದಿನ, ಮುಂದೆ ಮತ್ತೊಂದು ದಿನ ಹೀಗೇ ಹೆಚ್ಚುಕಾಲದವರೆಗೆ ಅದರ ವ್ಯವಸ್ಥೆ ಆದಲ್ಲಿ ನೆಮ್ಮದಿ ಎನ್ನಿಸುತ್ತದೆ. ಹಾಗೆ ಹೆಚ್ಚಿನ ಕಾಲದವರೆಗೂ ಅನ್ನ ಉತ್ಪಾದಿಸಿಕೊಳ್ಳಲಾಗುವ ಒಂದು ದುಡಿಮೆಗಾಗಿ, ಅಂಥ ದುಡಿಮೆಯಿಂದ ಸಿಕ್ಕುವ ಆತ್ಮಗೌರವಕ್ಕಾಗಿ ನಾವು ಏನೆಲ್ಲ ಮಾಡುವೆವು. ಆದರೆ, ಅದರಿಂದ ಏನೆಲ್ಲಾ ಆಗುವುದು?

ನಮ್ಮಂತೆ ಯೋಚಿಸುವವರನ್ನು ಒಟ್ಟಾಗಿ ಸೇರಿಸಿ, ಅಂದರೆ ದುಡಿಯುವ, ದುಡಿದು ಆತ್ಮಗೌರವ ಸಂಪಾದಿಸುವ, ನೆಮ್ಮದಿಯ ಬದುಕು ಗಳಿಸುವ ನಮಗಿರುವ ಈ ಅನಿವಾರ್ಯತೆಯನ್ನ ಬಳಸಿಕೊಂಡು, ಆದರೆ ಅದರ ಲಾಭವನ್ನು ಮಾತ್ರ ಕೆಲವರೇ ಪಡೆದಾಗ? ನಾನು ಇಷ್ಟೆಲ್ಲ ಪೀಠಿಕೆ ಹಾಕಿ ನಮ್ಮ ಬದುಕಿನ ಮೂಲಭೂತ ವ್ಯವಸ್ಥೆಯನ್ನ ನೆನಪಿಸುತ್ತಿರುವುದು ಯಾಕೆ ಅಂದರೆ, ಇದೆ ಕಾರಣಕ್ಕಾಗಿ ಸಾಗಿದ ಬದುಕಿನ ಬಂಡಿ ಈಗ ಎಂಥ ಹಂತ ತಲುಪಿದೆ ಅನ್ನುವುದನ್ನ ಅವಲೋಕಿಸಲು..

ನಮ್ಮಂತೆ ಯೋಚಿಸಿದರೂ ಅವರಲ್ಲಿ ಕೆಲವರು ತಮ್ಮ ಲಾಭವನ್ನಷ್ಟೆ ಗುರಿಯಾಗಿಸಿಕೊಂಡಿರುವ ಅಭ್ಯಾಸದಿಂದ ದೊಡ್ಡ ಬಿಕ್ಕಟ್ಟು ಏರ್ಪಟ್ಟಿದೆ. ಹಳ್ಳ ಇದ್ದಲ್ಲಿ ನೀರು ನಿಂತಂತೆ ಅನುಕೂಲಸ್ಥರೇ ಹೆಚ್ಚು ಅನುಕೂಲ ಪಡೆವಂಥ ಹಂತಕ್ಕೆ ನಾವು ತಲುಪಿರೂವುದೂ ಬಿಕ್ಕಟ್ಟಿನ ಪರಿಸ್ಥಿತಿಯೇ. ಆದರೂ ನೇರವಾಗಿ ನಾನು ಈ ವಿಷಯಕ್ಕೆ ಇಳಿಯುತ್ತಿಲ್ಲ. ಅದನ್ನ ಜಗತ್ತಿನ ಕೆಲ ಅರ್ಥಶಾಸ್ತ್ರ ತಜ್ಞರು ಹೇಳುತ್ತಿದ್ದಾರೆ. ಇವುಗಳ ಬಗ್ಗೆ ಮಾತಾಡಲು ಸೂಕ್ಷ್ಮ ಅಧ್ಯಯನ ಬೇಕು. ನಾನು ಅಂತಹ ಅಧ್ಯಯನ ಮಾಡಿಲ್ಲವಾದರೂ ಸ್ವಂತ ಅನುಭಗಳಿಂದ ಕೆಲವು ವಿಷಯಗಳನ್ನು ಚರ್ಚಿಸಬೇಕು ಎಂದುಕೊಂಡಿದ್ದೇನೆ. ಈಗ ಬಂದಿರುವ ಕೊರೋನ ಮಹಾಮಾರಿಯ ಸಂದರ್ಭದಲ್ಲಿ, ಅಸ್ತವ್ಯಸ್ತತೆಯ ನಡುವೆ ಸಾಗಿರುವ ನನ್ನಂತಹ ಯುವಕರ  ದಾರಿಯನ್ನ ನನಗೆ ಕಂಡ, ನಾನು ಅನುಭವಿಸಿದ ರೀತಿಯಲ್ಲಿ ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುತ್ತಿರುವೆ ಅಷ್ಟೆ.

2007 ರಿಂದ 2019ರ ವರೆಗೂ ನಾನು ನಟನಾಗಿ, ನಿರ್ದೇಶಕನಾಗಿ, ನಟನಾ ತರಬೇತುದಾರನಾಗಿ ರಂಗಭೂಮಿ ಮತ್ತು ಸಿನಿಮಾ ಮಾಧ್ಯಮಗಳಲ್ಲಿ ನನ್ನ “ಅನ್ನ ದುಡಿದುಕೊಳ್ಳುವ” ಮೂಲಕ ಬದುಕಿದ್ದೆ. ಇಲ್ಲಿಯವರೆಗೂ ಹಲವುಸಲ ಬದುಕಲು ಬೇರೇನಾದರೂ ದುಡಿಮೆ ಮಾಡಬೇಕು ಅನ್ನಿಸಿದರೂ ಅದಕ್ಕಾಗಿ ಬೇರೆ ದಾರಿಗಳನ್ನ ಹುಡುಕಲು ಸೋಮಾರಿಯಾಗಿದ್ದ ನಾನು ಈಗ 2020ರ ಮಾರ್ಚ್ ತಿಂಗಳಲ್ಲಿ “ಫುಡ್ ಡೆಲಿವರಿ” ಮಾಡುವ ಕೆಲಸ ಶುರುಮಾಡಿದ್ದೆ.

ನಾನು ಕೆಲಸ ಶುರುಮಾಡಿ ವಾರವೂ ಆಗಿರಲಿಲ್ಲ ಕರೋನ ಇಂದಾಗಿ ನಮ್ಮ ದೇಶದಾದ್ಯಂತ “ಲಾಕ್ ಡೌನ್” ಘೋಶಿಸಲಾಯಿತು.

ಇಲ್ಲಿಂದ ಶುರುವಾಯ್ತು ನನ್ನ ವಿಚಿತ್ರ ಮತ್ತು ಸಚಿತ್ರ ಅನುಭವ. ಹೊರದೇಶದಿಂದ ಬಂದವರನ್ನ ಗಂಭೀರ ಪರೀಕ್ಷೆ ಮತ್ತು ನಜರ್ ಬಂದಿಯಲ್ಲಿ ಇರಿಸುವಲ್ಲಿ ನಮ್ಮ ಸರಕಾರಗಳು ಸೋತಿದ್ದರಿಂದಾಗಿ, ಈಗ ನಮ್ಮಲ್ಲಿ ಯಾರ್ಯಾರಿಗೆ ಈ ವೈರಸ್ ಹರಡಿರುವುದೋ ಖಾತ್ರಿ ಇಲ್ಲದ ಕಾರಣ,ಇದು ಹರಡುವುದನ್ನ ತಡೆಯಲು ಮಾಡಿದ ಉಪಾಯ ಲಾಕ್ ಡೌನ್. ಆದರೆ ನಾನು ಫುಡ್ ಡೆಲಿವರಿ ಮಾಡುವ ಕೆಲಸ ಶುರುಮಾಡಿದ್ದರಿಂದ, ಇಂಥ ಪರಿಸ್ಥಿತಿಯಲ್ಲಿ ನಮ್ಮ ಹಲವು ಕಲಾವಿದರಂತೆ “ನನಗೆ ತೊಂದರೆ ಆಗಿದೆ ಸಹಾಯ ಮಾಡಿ” ಅಂತ ಕೈ ಒಡ್ಡುವ ಪರಿಸ್ಥಿತಿ ಇರಲಿಲ್ಲ. ಆದರೆ ನಾನು ಯಾವ ಸುರಕ್ಷತೆಯೂ ಇಲ್ಲದೆ ಫುಡ್ ಡೆಲಿವರಿ ಮಾಡಬೇಕಿರುವ ಅನಿವಾರ್ಯತೆಗೆ ಸಿಕ್ಕಿಕೊಂಡಿರುವ ಡೇಂಜರ್ ಕೂಡ ಇದೆ.

ನಾನು ಒಂದು ದೊಡ್ಡ ಅಪಾರ್ಟ್ಮೆಂಗೆ ಡೆಲಿವರಿ ಮಾಡಲು ಅಲ್ಲಿಗೆ ತಲುಪಿದಾಗ ನಡೆದ ಒಂದು ಸಣ್ಣ ಘಟನೆ ಹೇಳುವೆ. ಕೊರೋನ ಇರುವುದರಿಂದ ಡೆಲಿವರಿ ಮಾಡುವ ನಾವು ಅಪಾರ್ಟ್ಮೆಂಟ್ ಗೇಟಿನ ಹೊರಗೆ ಕಾಯಬೇಕು. ಈ ದೊಡ್ಡ ಅಪಾರ್ಟ್ಮೆಂಟ್’ನಿಂದ ಆರ್ಡರ್ ಮಾಡುವ ಕಸ್ಟಮರ್ ಗೇಟಿನ ಬಳಿ ಬಂದು ನಮ್ಮ ಬಳಿ ಫುಡ್ ಕಲೆಕ್ಟ್ ಮಾಡಲು ಕೆಲವು ಸಲ 15 ರಿಂದ 20 ನಿಮಿಷಗಳೂ ಆಗಬಹುದು. ಕಾರಣ ಎಕರೆಗಟ್ಟಲೆ ಇರುವ ಅಪಾರ್ಟ್ಮೆಂಟ್’ನ ಒಂದು ಮೂಲೆಯಿಂದ ಇನ್ನೊಂದು ಮೂಲೆಯಲ್ಲಿರುವ ಗೇಟಿನ ಬಳಿ ಬರಬೇಕಾಗಿರುವ ಸಮಸ್ಯೆ ಅವರಿಗೇ ಗೊತ್ತು. ಹೀಗೆ ಒಮ್ಮೆ ನಾನು  ಕಾಯುತ್ತಿರಬೇಕಾದರೆ ಸಮಯ ರಾತ್ರಿ ಸುಮಾರು 10 ಘಂಟೆ. ಕಣ್ಣಳತೆಯಲ್ಲಿ ರೋಡಿನ ಮೇಲೆ ನನ್ನಂತೆ ಡೆಲಿವರಿ ಮಾಡವ ಮತ್ತೊಂದು ಕಂಪನಿಯವ ನಿಂತು ಫೋನಾಯಿಸುತ್ತಿದ್ದ.  ಕಂಗಾಲಾಗಿ ನಿಂತಿದ್ದ. ಓಡಾಡಿ ಓಡಾಡಿ ದಣಿದಿರಬೇಕು ಇವ ಎಂದೆನಿಸಿತು ನನಗೆ. ಅವನ ಹತ್ತಿರ ಹೋಗಿ “ಅಲ್ಲ ನಮ್ಮ ಕಂಪನಿ ನಮಗೆಲ್ಲ ಒಂದು ಬ್ಯಾಗ್ ಕೊಡ್ತದೆ. ಹೆಚ್ಚೆಂದರೆ ಒಂದೇ ದಾರಿಯಲ್ಲಿ ತಗಲುವ 2 ಅಥವ ಒಮ್ಮೊಮ್ಮೆ 3 ಡೆಲಿವರಿ ಆರ್ಡರ್ ಕೊಡ್ತದೆ. ಆದರೆ ಇದೇನು ನಿಮ್ಮ ಕಂಪನಿ ನಿಮಗೆ ಗಾಡಿಯೇ ಕಾಣದಷ್ಟು ಬ್ಯಾಗುಗಳನ್ನ ಹೊರಸಿ ಕಳಸುತ್ತಲ್ಲ ಹೇಗೆ ಇದು” ಅಂದೆ. ಯಾವುದೋ ಚಿಂತೆಯಲ್ಲಿದ್ದವ ನನಗೆ “ಇಷ್ಟೆಲ್ಲ ಆರ್ಡರ್ ಬಂದಮೇಲೆ ನಮಗೆ ಒಟ್ಟಿಗೇ ಹೊರಿಸಿ ಕಳಿಸ್ತಾರೆ” ಅಂದ. ನಾನಾಗ ಮನಸ್ಸಲ್ಲೇ ನನ್ನ ಮತ್ತೆ ಅವನ ಕೆಲಸಗಳ ನಡುವೆ ವ್ಯತ್ಯಾಸಗಳೇನು, ಅನುಕೂಲಗಳೆಷ್ಟು, ಅನಾನುಕೂಲಗಳೆಷ್ಟು ಎಂದು ಲೆಕ್ಕಹಾಕತೊಡಗಿದೆ. ಅಷ್ಟರಲ್ಲಿ ನನ್ನ ಲೆಕ್ಕಚಾರ ಬುಡಮೇಲಾಗುವ ವಿಚಾರ ಅವನಿಂದ ನನಗೆ ಅಪ್ಪಳಿಸಿತು. “ಸಾರ್ ನನ್ ಗಾಡಿಲಿ ಪೆಟ್ರೋಲ್ ಖಾಲಿ ಆಗಿದೆ, ನಿಮ್ ಗಾಡಿ ಕೊಟ್ರೆ ಇಲ್ಲೆ 2 ಕಿಲೋಮಿಟರ್ ಒಳಗೆ ಒಂದು ಪೆಟ್ರೋಲ್ ಬಂಕಿದೆ ಅಲ್ಲಿಂದ ಪೆಟ್ರೋಲ್ ತಂದುಕೋತಿನಿ ಪ್ಲೀಸ್, ನಮ್ ಕಂಪನಿಯವರಿಗೆ ಫೋನ್ ಮಾಡಿದ್ರೆ ಸರಿಯಾಗಿ ರಿಸ್ಪಾಂಡ್ ಮಾಡ್ತಿಲ್ಲ. ಒಂದು 5 ನಿಮಿಷ ಬಂದ್ಬಿಡ್ತಿನಿ ಪ್ಲೀಸ್” ಅಂತ ಒಂದೇ ಉಸಿರಲ್ಲಿ ಹೇಳಿಬಿಟ್ಟ. ನನಗೆ ಆತನ ಒದ್ದಾಟ ನೋಡಿ ಮಾತೇ ಹೊರಡದೆ, ಸೀದ ನನ್ನ ಕೈಲಿದ್ದ ನನ್ನ ಗಾಡಿಯ ಕೀ ಅವನೆಡೆ ಮಾಡಿದೆ, ಕೈ ಚಾಚಿ. ಅವ ನನ್ ಗಾಡಿ ಒಂಚೂರ್ ನೋಡ್ಕೊಳ್ಳಿ ಸರ್ ಪ್ಲೀಸ್ ಎಂದವನೆ ನನ್ನ ಗಾಡಿ ತೊಗೊಂಡು ಹೊರಟ. ಕೆಲ ಕ್ಷಣಗಳಲ್ಲಿ ನಾನು ಯಾರಿಗಾಗಿ ಕಾಯುತಿದ್ದೆನೋ ಆ ಕಸ್ಟಮರ್ ಬಂದರು. ನಾನು ಅವರಿಗೆ ಅವರ ಫುಡ್ ಡೆಲಿವರಿ ಮಾಡಲು ಹೋಗುವಾಗ ನನ್ನ ತಲೇಲಿ, ಇಲ್ಲಿ ಈ ಇನ್ನೊಬ್ಬಾತ ನೋಡಿಕೋ ಎಂದು ನಿಲ್ಲಿಸಿ ಹೋಗಿರುವ ಗಾಡಿಗೆ ಜೋತು ಬಿದ್ದಿರುವ ಆಹಾರ ಪದಾರ್ಥಗಳು ತುಂಬಿರುವ ಚೀಲಗಳಿಗೆ, ಅಲ್ಲೇ ಅಲೆದಾಡುತ್ತಿರುವ ಯಾವುದರು ನಾಯಿ ಬಾಯಿ ಹಾಕಿದರೆ ಎಂದು ಗಾಬರಿ ಆಯಿತು. ನಾನು ಇತ್ತ ಒಂದು ಕಣ್ಣಿಟ್ಟುಕೊಂಡೇ ಹೋಗಿ ನನ್ನ ಕಸ್ಟಮರ್ ಗೆ ಡೆಲಿವರಿ ಮಾಡಿ, ವಾಪಾಸು ಬಂದೆ. ಡೆಲಿವರಿ ಮಾಡಿದೆ ಎಂದು ನಾನು ಬಟನ್ ಒತ್ತಿದರೆ, ಮತ್ತೊಂದು ಹೊಸ ಡೆಲಿವರಿ ಆರ್ಡರ್ ಬರಬಹುದು. ಹಾಗಾಗಿ ನನ್ನ ಗಾಡಿ ವಾಪಾಸು ಬರುವವರೆಗೂ ಕಾದು, ಅವ ಬಂದ ನಂತರ ಈಗ ಇಲ್ಲಿಯ ಡೆಲಿವರಿ ಮುಗಿಯಿತು ಎಂದು ಬಟನ್ ಒತ್ತಿದೆ.

ಹೀಗೆ ದೂರದಲ್ಲಿ ಎಲ್ಲೋ ನನ್ನ ಗಾಡಿಯ ಪೆಟ್ರೋಲ್ ಖಾಲಿ ಆಗಲಿ, ಅಥವಾ ಪಂಚರ್ ಆಗಲಿ ನಾನು ಅದನ್ನ ಡೆಲಿವರ್ ಮಾಡುವುದು ನನ್ನ ಜವಾಬ್ದಾರಿ ಮತ್ತು ನನ್ನ ಸಹಾಯಕ್ಕೆ ಕಂಪನಿ ಬರದು ಎಂತಾದರೆ ಎಂಥ ಅಸಹಾಯಕ ಸ್ಥಿತಿಗೆ ನಮ್ಮನ್ನ ತಳ್ಳಿಬಿಡಲಾಗಿದೆ ಎನಿಸಿ ಬೆಚ್ಚಿದೆ. ಇನ್ನೊಂದು ಘಟನೆ ನನ್ನನ್ನ ವಿಚಿತ್ರ ಮೌನಕ್ಕೆ ದೂಡಿತ್ತು. ರಾತ್ರಿ 11ಕ್ಕೆ ಕಂಪನಿಯ ಪ್ರಕಾರ ನನ್ನ ಕೆಲಸದ ಸಮಯ ಪೂರ್ತಿ ಆಗುತ್ತದೆ. ಅವತ್ತು ಸಮಯ ಸರಿಯಾಗಿ ರಾತ್ರಿ 11:30. ನಾನು ಮನೆಕಡೆ ಹೊರಟಿದ್ದೆ. ಕಂಪನಿಯ ಪ್ರಕಾರ ನನ್ನ ಡೆಲಿವರಿ ಯಾಪ್ ಅನ್ನ ನಾನು ಆಫ್ ಮಾಡಿರಲಿಲ್ಲ. ಕಾರಣ ನಾನು ಹೋಗುವ ದಾರಿಲಿ ಅದೇ ದಿಕ್ಕಿನ  ಯಾವುದರ ಆರ್ಡರ್ ಬಂದರೆ ಒಳ್ಳೆಯದು. ಹಾಗೇ ಕೊಟ್ಟು ಮನೆಗೆ ಹೋದರಾಯ್ತು ಅಂತ.

ನಾನು ಮನೆಗೆ ಹತ್ತಿರದಲ್ಲಿರುವಾಗ, ನನಗೆ 12 ಕಿಲೋ ಮೀಟರ್ ದೂರ ಹೋಗುವ ಆರ್ಡರ್ ಬಂದು ಬಿಟ್ಟಿತು. ನನಗೋ ಹೊಟ್ಟೆ ಹಸಿತಿದೆ, ನಿದ್ದೆ ಬರಹತ್ತಿದೆ, ಸತತ ಗಾಡಿ ಓಡಿಸಿದ್ದರಿಂದ ಸೀಟು ಉರಿಯುತ್ತಿದೆ, ಭುಜ ಬೆನ್ನುಗಳು ಪದ ಹಾಡುತ್ತಿವೆ. ನಾನು ಅದನ್ನ ರಿಜೆಕ್ಟ್ ಮಾಡಿದೆ. ಕನ್ಫರ್ಮೇಶನ್ ಕೇಳಿತು ಯಾಪ್: “ನೋಡು ನೀನು ಈ ಆರ್ಡರ್ ರಿಜೆಕ್ಟ್ ಮಾಡಿದರೆ ನಿನ್ನ ದುಡಿಮೆ ಇಂದ 40 ರೂಪಾಯಿ ಕಡಿತವಾಗುತ್ತದೆ” ಅಂತ. ದಿನವೆಲ್ಲ ದುಡಿದರೆ 450 ರಿಂದ 500 ಆಗುವುದು ಕಷ್ಟ ಅದರಲ್ಲಿ ಪೆಟ್ರೋಲಿನ ಖರ್ಚು ತೆಗೆದರೆ ಮಿಕ್ಕುವುದು ಬರೋಬ್ಬರಿ ಅರ್ಧದಷ್ಟೇ.

ಅದರಲ್ಲಿ ನಲವತ್ತು ರೂ ಒಂದೇ ಏಟಿಗೆ ಕಡಿತ ಆದರೆ? ಇದ್ಯಾವ ರೀತಿಯ ಧಮಕಿ ಅನ್ನಿಸಿತು ನನಗೆ. ಸುಸ್ತು ತಡಿಯಲಾಗದೆ ರಿಜೆಕ್ಟ್ ಮಾಡಿದೆ. ನನಗೆ ಅವತ್ತಿನ ಯಾರೋ ಕಸ್ಟಮರ್ ಕೊಟ್ಟಿದ್ದ ಟಿಪ್ 40/- ಅಲ್ಲಿ ಅನಿವಾರ್ಯವಾಗಿ ಹೋಯಿತು.

 

ನನ್ನ ಆರೋಗ್ಯ ಸುರಕ್ಷತೆಯಿಂದ ಹಿಡಿದು ಯಾವ ಭದ್ರತೆಯನ್ನೂ ಯಾರೂ ಕೊಡರು. ಆದರೆ ನಾನು ನನ್ನ ನೆಮ್ಮದಿಗಾಗಿ ದುಡಿಯಬೇಕಿರುವ ಅನಿವಾರ್ಯತೆಯನ್ನ ಬಳಸಿಕೊಳ್ಳಲಾಗುತ್ತಿದೆ ಅಷ್ಟೇ. ಡೆಲಿವರಿ ಮಾಡುವವರನ್ನ ಹೀರೋಗಳೆಂದು ಕರೆದು ಕಸ್ಟಮರ್’ಗಳಿಂದ ಮತ್ತು ಇತರರಿಂದ “ನೋಡಿ ನಮ್ಮ ಡೆಲಿವರಿ ಹೀರೋಗಳು ಇಂಥ ಸಂದರಭದಲ್ಲೂ ನಿಮಗಾಗಿ ದುಡಿಯುತಿರುವರು ಅವರಿಗೆ ಸಹಾಯ ಮಾಡಿ” ಎಂದು ಕಂಪನಿಗಳು ನಮ್ಮ ಹೆಸರಲ್ಲಿ ಚಂದ ಎತ್ತುತ್ತಿದ್ದಾರೆ. ಆದರೆ ಡೆಲಿವರಿ ಮಾಡುವವರ ಪಾಡು ಮಾತ್ರ ಸುಧಾರಿಸದು.

ಇನ್ನು ಫುಡ್ ಆರ್ಡರ್ ಮಾಡುವ ಗ್ರಾಹಕರಿಗೆ ಈ ಕಂಪನಿಯು ಕೊಡುತ್ತಿರುವ ಭರವಸೆ  “ನಾವು ನಮ್ಮ ಡೆಲಿವರಿ ಪಾರ್ಟ್ನರ್’ಗಳನ್ನ ಪ್ರತಿನಿತ್ಯ ಚೆಕ್ ಮಾಡುತ್ತೇವೆ ಆ ಮೂಲಕ ನಿಮ್ಮ ಸುರಕ್ಷತೆಯನ್ನೂ ಕಾಪಾಡುತ್ತೇವೆ” ಎನ್ನುವುದು. ಆದರೆ ನನ್ನಂತೆ ಹಲವು ಡೆಲಿವರಿ ಮಾಡುವವರನ್ನ ಯಾರೂ ಸರಿಯಾಗಿ ಚೆಕ್ ಮಾಡುತ್ತಿಲ್ಲ ಎಂಬುದೆ ಸತ್ಯ.

ಮತ್ತೆ ಆರ್ಡರ್ ಮಾಡುವ ಕಸ್ಟಮರ್’ಗಳು ಯಾರೂ ಕಾಣದ, ಅಡುಗೆ ತಯ್ಯಾರಾಗುವ ಕಿಚನ್ ನಲ್ಲಿ ಹಲವು ವಿಷಯಗಳು ನನ್ನ ಕಣ್ಣಿಗೆ ಬಿದ್ದಿವೆ.

  1. ಪ್ಲಾಸ್ಟಿಕ್ ಟೇಬಲ್ಲು ಅಥವಾ ಪ್ಲಾಸ್ಟಿಕ್ ಮಣೆಯ ಮೇಲೆ ತರಕಾರಿಗಳನ್ನ ಕತ್ತರಿಸುವರು. ಕತ್ತರಿಸಿದ ತರಕಾರಿಯೊಡನೆ ತಳದಲ್ಲಿಯ ಪ್ಲಾಸ್ಟಿಕ್’ನ ಅತಿ ಸಣ್ಣ ಕಣಗಳು ತರಕಾರಿಯೊಡನೆ ಬೆರೆಯದೇ ಇರವು.
  2. ಸಾರಿನಂಥ ಯಾವುದನ್ನೇ ದ್ರಾವಣ ಆಗಲಿ ಕವರ್ ಒಂದಕ್ಕೆ ಹಾಕಿ ಅದಕ್ಕೆ ರಬ್ಬರ್ ಬ್ಯಾಂಡ್ ಹಾಕುವಾಗ ಪ್ರತಿಸಲ ಪ್ಯಾಕ್ ಮಾಡುತ್ತಿದ್ದ ಹುಡುಗ ತನ್ನ ಎಡಗೈಲಿ ಸಾರು ಅಥವಾ ಸೂಪ್ ಅಥವಾ ಗ್ರೇವಿ ತುಂಬಿರುವ ಕವರ್ ಹಿಡಿದು ಬಲಗೈ ಇಂದ ರಬ್ಬರ್ ಬ್ಯಾಂಡ್ ಒಂದನ್ನ ತೊಗೊಂಡು, ತನ್ನ ಹಲ್ಲುಗಳಿಂದ ಅದನ್ನ ಕಚ್ಚಿ ಹಿಡಿದು ಹಿಗ್ಗಿಸಿ,ತನ್ನ ಬಲಗೈಯ್ಯ ಬೆರಳುಗಳಿಂದ ಹಿಗ್ಗದ ರಬ್ಬರ್ ಬ್ಯಾಂಡ್ ಹಿಡಿದು ಕವರಿಗೆ ನಾಕೈದು ಸುತ್ತು ಹಾಕುವುದು.
  3. ಡೆಲಿವರಿ ಮಾಡುವವರಿಗೆ ಅಂತ ಒಂದು ಚಿಕ್ಕ ಸ್ಯಾನಿಟೈಸರ್ ಡಬ್ಬಿಯನ್ನು ಕೊಟ್ಟಿಲ್ಲ. ಆಯಾ ಸ್ಥಳಗಳಲ್ಲಿ ಸಂಗ್ರಹ ಮಾಡುವಾಗ ಗೋಡೆಗೆ ಇರುವ ಸ್ಯಾನಿಟೈಸರ್ ಅನ್ನು ಮಾತ್ರ ಬಳಸಬೇಕು. ಇನ್ನು ಹಲವೆಡೆ ಇಂಥ ಯಾವ ವ್ಯವಸ್ಥೆ ಇಲ್ಲ. ಗಾಡಿ ಓಡಿಸುವ ಡೆಲಿವರಿಯ ನಾವು ಏನೇನನ್ನ ಮುಟ್ಟಿರುವೆವೋ ನಮಗೇ ನೆನಪಿರದು. ಅವೇ ಕೈಗಳಿಂದ ಕೆಲ ಅಂಗಡಿಗಳಲ್ಲಿ ಪ್ಯಾಕಿಂಗ್ ಕವರ್ ಇಲ್ಲದ್ದರಿಂದಾಗಿ ಐಸ್ ಕ್ರೀಮ್ ಕೋನುಗಳನ್ನ, ಡಬ್ಬಿಗಳನ್ನ ಪ್ರತಿಸಲವು ಕೈಯಲ್ಲಿ ಮುಟ್ಟುವ ಅನಿವಾರ್ಯತೆ ಏರ್ಪಡುತ್ತದೆ.

ಇಡೀ ವಿಶ್ವ ಎದುರಿಸುತ್ತಿರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ಈ ವಿಷಯಗಳ ಗಂಭೀರತೆ ಯಾರಿಗೂ ಬೇಡವಾಗಿದೆ. ಕೋಟ್ಯಂತರ ಜನರ ಅನಿವಾರ್ಯತೆಗಳನ್ನ ಬೆರಳೆಣಿಕೆಯ ಜನರ ಸಂಪತ್ತು ವೃದ್ಧಿಗಾಗಿ ಬಳಸಿಕೊಳ್ಳುವುದರಲ್ಲಿ ಜಗತ್ತು ಇಂಥ ಕೊರೊನ ಸಂದರ್ಭದಲ್ಲಿಯೂ ಮುಳುಗಿದೆ. ಮುಂದೆ ಇದು ಇಲ್ಲಿಂದ ಎಲ್ಲಿಗೆ ಹೋಗುತ್ತದೆಯೋ – ಊಹಿಸಲೂ ಕಷ್ಟ!

  • ಸಿದ್ಧಾರ್ಥ ಮಾಧ್ಯಮಿಕ

ಕವಲುದಾರಿ, ಶುದ್ಧಿ, ಭಿನ್ನ ಇತ್ಯಾದಿ ಸಿನೆಮಾಗಳಲ್ಲಿ ನಟರಾಗಿ ಗಮನ ಸೆಳೆದಿದ್ದಾರೆ. ಬಹುಮುಖಿ ನಾಟಕ ನಿರ್ದೇಶನಕ್ಕೆ ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚಿಗೆ ಇವರು ನಿರ್ದೇಶಿಸಿದ ‘ಫೂ’ ನಾಟಕ ಕರ್ನಾಟಕದಾದ್ಯಂತ ಹತ್ತಾರು ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಗಳಿಸಿತ್ತು. ಕೊರೊನ ಸಮಯದಲ್ಲಿ ಖಾಸಗಿ ಸಂಸ್ಥೆಯೊಂದಿಗೆ ಡೆಲಿವರಿ ಪಾರ್ಟನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ತನ್ನ ದಿನದ ತುತ್ತಿಗೆ. . ದುಡಿವ ಎಲ್ಲ ದುಡಿಮೆಗಾರನ ಹಣೆಬರಹ ಈ unsecured feeling ಏ .. ಗೆಳೆಯ

  2. ತುಂಬಾ ಚನ್ನಾಗಿ ನಿರ್ಲಿಪ್ತವಾಗಿ ಬರೆದಿದ್ದಿರಿ. ನಿಮ್ಮ ಯಾವ ಸಾಲೂ ಆರೋಪನಲ್ಲೂ ಆರೋಪ, ಆಕ್ರೋಶ, ಸಿಟ್ಟು, ಬೇಸರ ಕಾಣಲಿಲ್ಲ.
    ಆದ್ರೆ ಹಿಂಗೆಲ್ಲ ಬರೆದರೆ ಸಿಕ್ಕ ಕೆಲಸಾನೂ ಕಳಕೋತಿರಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...