ಮಟಮಟ ಮಧ್ಯಾಹ್ನದ ಉರಿ ಬಿಸಿಲು. ಸೂರ್ಯ ನೆತ್ತಿಯ ಮೇಲಿದ್ದ. ಕೆಲಸ ಕಳೆದುಕೊಂಡ ಆ ಹುಡುಗರು ಮೂತಿಗೆ ಕರವಸ್ತ್ರಗಳನ್ನು ಬಿಗಿದು ಬೆನ್ನಿಗೆ ಚೀಲಗಳನ್ನು ತಗಲುಹಾಕಿಕೊಂಡು ಹೆಜ್ಜೆ ಹಾಕುತ್ತ ಬರುತ್ತಿದ್ದರು. ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಆ ಹುಡುಗರು ನಿಧಾನವಾಗಿ ನಡೆದು ಹೋಗುತ್ತಿದ್ದರು. ನಾವು ಬರುತ್ತಿದ್ದ ಕಾರನ್ನು ನಿಲ್ಲಿಸಿ ವಿಚಾರಿಸಿದಾಗ ಮಾಲಿಕ ರಾಮು ಆ ಕಾರ್ಮಿಕರನ್ನು ನಿರ್ದಯವಾಗಿ ರೂಮುಗಳಿಂದ ಹೊರಹಾಕಿದ್ದ. ಊಟವನ್ನೂ ಕೊಡದೆ ಕೆಲಸವಿಲ್ಲ ನಡೀರಿ ಎಂದು ಹೇಳಿಕಳಿಸಿದ್ದ. ಆ ವಲಸೆ ಕಾರ್ಮಿಕರ ಮುಖದಲ್ಲಿ ತಮ್ಮ ಊರುಗಳಿಗೆ ಸೇರುವ ಧಾವಂತವಿತ್ತು. ಮಾಲಿಕನ ಧೋರಣೆಗೆ ಬೇಸರವಿತ್ತು. ಆತಂಕದ ಗೆರೆಗಳು ಅವರ ಮುಖದಲ್ಲಿ ಎದ್ದುಕಾಣುತ್ತಿದ್ದವು.
ಹೌದು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ತುಮಕೂರು ತಾಲೂಕು ಮಲ್ಲಸಂದ್ರಕ್ಕೂ ಮೊದಲೇ ಬಲಭಾಗದಲ್ಲಿ ಸಿಗುವ ಗಜೇಂದ್ರ ಹಾರ್ಡ್ ವೇರ್ ನಲ್ಲಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ಅವರು. 12 ಜನರಿದ್ದ ಆ ಬಿಹಾರಿ ಕಾರ್ಮಿಕರು ಕಳೆದ ಒಂದು ವರ್ಷದಿಂದ ‘ಅಡಕೆಪಟ್ಟೆ ತಟ್ಟೆ’ ತಯಾರು ಮಾಡುತ್ತಿದ್ದರು. ಅಲ್ಲಿಗೆ ಹೋಗಿ ನೋಡಿದರೆ ಪಾಳುಬಿದ್ದ ಗೋಡೋನ್ ಬಳಿಯೇ ಕೆಲಸ. ಮಾಲಿಕ ರಾಮು ಹೃದರಾಬಾದ್ ನವನು. ಇಲ್ಲಿಯವರೆಗೂ ಕಾರ್ಮಿಕರಿಂದ ದುಡಿಸಿಕೊಂಡಿದ್ದ ಮಾಲಿಕ ಮೇ 12ರಂದು ರಾತ್ರಿ ಎಲ್ಲರಿಗೂ ಸಂಬಳ ನೀಡಿ ರೂಮುಗಳಿಂದ ಹೊರಹಾಕಿದ್ದಾನೆ.
ಹಾಗಾಗಿ ಆ ಯುವ ವಲಸೆ ಕಾರ್ಮಿಕರು ಅನಿವಾರ್ಯವಾಗಿ ಏನೂ ತೋಚದೆ ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಆ ಕಾರ್ಮಿಕರಿಗೆ ಪಿಎಫ್, ಇಲ್ಲ, ಸಂಬಳ ಚೀಟಿಯೂ ನೀಡಿಲ್ಲ. ಒಂದು ವರ್ಷ ನಿರಂತರವಾಗಿ ಪ್ರತಿನಿತ್ಯ 12 ಗಂಟೆ ದುಡಿಸಿಕೊಂಡು ಅವರನ್ನು ಅಡಕೆಪಟ್ಟೆ ತಟ್ಟೆ ತಯಾರಿಕೆ ಫ್ಯಾಕ್ಟರಿಯಿಂದ ಮಾಲಿಕ ಹೊರಹಾಕಿದ್ದ. ಬೀದಿಗೆ ಬಿದ್ದ ಕಾರ್ಮಿಕರು ತಮ್ಮ ಊರಾದ ಬಿಹಾರದ ಮಾಧವ್ ಪುರ್ ಮಲಾಟುಲಕ್ಕೆ ತೆರಳುತ್ತಿದ್ದರು. ನಾವು ತಡೆದಿದ್ದಕ್ಕಾಗಿ ಮರದ ನೆರಳಲ್ಲಿ ಸ್ವಲ್ಪಕಾಲ ವಿಶ್ರಮಿಸಿದರು. ಬಿಹಾರದ 12 ಮಂದಿ ವಲಸೆ ಕಾರ್ಮಿಕರು ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಅವರಲ್ಲಿ ಹಿರಿಯರೊಬ್ಬರು ಮಾತ್ರ ತಾಂತ್ರಿಕ ತೊಂದರೆ ಆಗಿ ನೋಂದಣಿ ಮಾಡಿಸಿರಲಿಲ್ಲ. ನೋಂದಣಿ ಮಾಡಿಸಿದವರಿರೂ ಇನ್ನೂ ಮೆಸೇಜ್ ಬಂದಿರಲಿಲ್ಲ.
ಇದನ್ನು ಮಾಲಿಕ ರಾಮುಗೆ ಹೇಳಿದರೆ ‘ನಾನೇನು ಮಾಡಲು ಸಾಧ್ಯವಿಲ್ಲ. ನಿಮ್ಮ ಊರಿಗೆ ತೆರಳಿ ಎಂದು ಬ್ಯಾಗ್ ಗಳನ್ನು ಹೊರ ಎಸೆದು ರೂಮುಗಳಿಗೆ ಬೀಗಹಾಕಿದ್ದಾನೆ. ಇದರಿಂದ ನೊಂದ ಆ ಯುವ ವಲಸೆ ಕಾರ್ಮಿಕರು ತುಮಕೂರಿನತ್ತ ಸಾಗುತ್ತಿದ್ದರು. ಅವರನ್ನು ತಡೆದು ನಿಲ್ಲಿಸಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸಾಮಾಕಿ ಕಾರ್ಯಕರ್ತ ತಾಜುದ್ದೀನ್ ಷರೀಫ್ ಮತ್ತು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಸಮಸ್ಯೆ ಏನೆಂಬುದನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಲಸೆ ಕಾರ್ಮಿಕ ಪ್ಯಾರೆಲಾಲ್, ಗಜೇಂದ್ರ ಹಾರ್ಡ್ ವೇರ್ ಮಾಲಿಕ ರಾಮು ಸಂಬಳ ನೀಡಿ, ನಿಮಗೆ ಇನ್ನು ಕೆಲಸವಿಲ್ಲ. ಇಲ್ಲಿಂದ ಹೊರಡಿ ಎಂದು ಫ್ಯಾಕ್ಟರಿಯಿಂದ ಹೊರಹಾಕಿದರು. ಶೀಟ್ ಡ್ಯಾಮೇಜ್ ಮಾಡಿದ್ದಕ್ಕಾಗಿ 12 ಸಾವಿರ ರೂಪಾಯಿ ಹಿಡಿದುಕೊಂಡಿದ್ದಾರೆ. ಊಟ ಕೊಟ್ಟಿಲ್ಲ. ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಸಿದ್ದೇವೆ. ಅಲ್ಲಿಂದ ಖಚಿತ ಮಾಹಿತಿ ಬಂದ ಮೇಲೆ ಊರಿಗೆ ತೆರಳುತ್ತೇವೆ. ಅಲ್ಲಿಯ ವರೆಗೂ ಇಲ್ಲಿರಲು ಅವಕಾಶ ಕೊಡಿ ಎಂದು ಮನವಿ ಮಾಡಿದೆವು. ಆದರೆ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೊರಹಾಕಿದರು ಎಂದು ಅಳಲುತೋಡಿಕೊಂಡರು.
ಪಕ್ಕದಲ್ಲಿಯೇ ಇದ್ದ ಫ್ಯಾಕ್ಟರಿಗೆ ಮಾಲಿಕರನ್ನು ಕಾಣಲು ಹೋದೆವು. ಆಗ ನಮ್ಮ ಎದುರಿಗೇ ಕಾರೊಂದು ಬಂತು. ನಿಲ್ಲಿಸಿ “ಇಲ್ಲಿ ಗಜೇಂದ್ರ ಹಾರ್ಡ್ ವೇರ್ ಇದೆಯಂತೆ ಎಲ್ಲಿ? ಅದರ ಮಾಲಿಕ ರಾಮು. ಅವರನ್ನು ಭೇಟಿ ಮಾಡಬೇಕೆಂದು ಕಾರಿನಲ್ಲಿದ್ದವರನ್ನು ಕೇಳಿದೆವು. ಆ ಹೆಸರಿನ ಮಾಲಿಕರೂ ಇಲ್ಲ. ಫ್ಯಾಕ್ಟರಿಯೂ ಇಲ್ಲ ಎಂದು ಹೇಳಿ ಹೋದರು. ಸ್ಥಳಕ್ಕೆ ಹೋದರೆ ಅಡಕೆಪಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಳೆಯ ಗೋಡನ್ ನಲ್ಲಿ ಅಡಕೆಪಟ್ಟೆಗಳನ್ನು ಸಂಗ್ರಹಿಸಿಡಲಾಗಿತ್ತು. ಅದೇ ಅಡಕೆಪಟ್ಟೆ ತಟ್ಟೆ ತಯಾರಿಸುವ ಜಾಗವೆಂದು ತಿಳಿಯಿತು. ಅಲ್ಲಿದ್ದವರನ್ನು ವಿಚಾರಿಸಿದರೆ ವಿನಯ್ ಎಂಬಾತ ಮೊದಲು ದರ್ಪದಿಂದಲೇ ಮಾತನಾಡಿದ. ನಾವು ಜೋರು ಮಾಡುತ್ತಿದ್ದಂತೆ ನಾನು ಈ ನೆಲದ ಮಾಲಿಕ. ಬಾಡಿಗೆಗೆ ನೀಡಿದ್ದೇನೆ. ರಾಮು ಎಂಬುವರು ಫ್ಯಾಕ್ಟರಿ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು..

ನಂತರ ರಾಮುಗೆ ಪೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಮತ್ತೆ ವಲಸೆ ಕಾರ್ಮಿಕರ ಬಳಿ ಹೋಗಿ ಮಾತುಕತೆ ನಡೆಸಿದೆವೆ. ಅರ್ಧ ಗಂಟೆ ಬಳಿಕ ಮಾಲಿಕ ರಾಮ ಅಲ್ಲಿಗೆ ಬಂದು ಮಳ್ಳನಂತೆ ಮಾತುಕತೆ ಆಲಿಸುತ್ತಿದ್ದ. ಈ ನಡುವೆ ನಾನು ಕಾರ್ಮಿಕರನ್ನು ಕಳಿಸಿಲ್ಲ ಎಂದು ರಾಮು ಸುಳ್ಳು ಹೇಳಿದ. ಅಷ್ಟೊತ್ತಿಗಾಗಲೇ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಆಗಿತ್ತು. ಸಾಮಾಜಿಕ ಕಾರ್ಯಕರ್ತರು ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು. ಮಾಲೀಕ ಮಾತ್ರ ಒಂದಕ್ಕೂ ಉತ್ತರಿಸದೆ ಮೌನ ವಹಿಸಿದ್ದ. ಆದರೆ ಜಮೀನಿನ ಮಾಲೀಕ ವಿನಯ್ ‘ಸರ್ ಇರಲು ಕಾರ್ಮಿಕರಿಗೆ ಅವಕಾಶ ಕೊಡುತ್ತೇನೆ. ಕುಡಿಯಲು ನೀರು ಒದಗಿಸುತ್ತೇನೆ. ಊಟದ ವ್ಯವಸ್ಥೆ ಆಗೋಲ್ಲ’ ಅಂದ್ರು ಒಂದು ತೀರ್ಮಾನಕ್ಕೆ ಬಂದು ಕಾರ್ಮಿಕರಿಗೆ ಅಲ್ಲೇ ಇರಲು ವ್ಯವಸ್ಥೆ ಮಾಡಲಾಯಿತು.
ಆದರೂ ವಲಸೆ ಕಾರ್ಮಿಕರಲ್ಲಿ ಆತಂಕವಿತ್ತು. ಭದ್ರತೆಯ ಕೊರತೆ ಇತ್ತು. ಊಟದ ಸಮಸ್ಯೆ ಇತ್ತು. ಮಾಲೀಕರು ಏನು ಮಾಡುತ್ತಾರೋ ಎಂಬ ಭಯವಿತ್ತು. ಇದರ ನಡುವೆ ಊರಿಗೆ ಹೋಗುವ ಕಾತರವೂ ಇತ್ತು. ಮನಸ್ಸು ಇಬ್ಬಂದಿಯಾಗಿತ್ತು. ಇರುವುದೋ, ಹೋಗುವುದೋ ಎಂಬ ಪ್ರಶ್ನೆ ಎದುರಾಗಿತ್ತು. ಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ವ್ಯವಸ್ಥೆ ಏನು ಎಂಬ ಪ್ರಶ್ನೆಗಳು ಅವರ ಮನದಲ್ಲಿ ಮೂಡಿದ್ದವು.


