ಚೀನಾದ ಸಂಸ್ಥೆಗಳಿಂದ ಹಣ ಸ್ವೀಕರಿಸುವುದೆಂದರೆ ಉಯ್ಯಾಲೆಯಲ್ಲಿ ಜಾಗ ಹಂಚಿಕೊಳ್ಳುವಷ್ಟೇ ಸಹಜ ಮತ್ತು ಸ್ವೀಕಾರಾರ್ಹ ಎನಿಸಿದ್ದ ಕಾಲವಿತ್ತು. ಹಾಗಿದ್ದರೂ ಬಿಜೆಪಿಯು ಗಾಲ್ವಾನ್ ಪ್ರಮಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಧಾವಂತದಲ್ಲಿ ಒಂದು ಆಡುಮಾತನ್ನು ಮರೆತುಬಿಟ್ಟಿದೆ. ಅದೆಂದರೆ ನೀವು ಬೇರೆಯವರ ಕಡೆಗೆ ಬೆರಳು ತೋರಿಸಿದಾಗ ಮೂರು ಬೆರಳುಗಳು ನಿಮ್ಮನ್ನು ತೋರಿಸುತ್ತವೆ. ಈ ಪ್ರಕರಣದಲ್ಲಿ ಕನಿಷ್ಟ ಎರಡು ಬೆರಳುಗಳು ಬಿಜೆಪಿಯ ಆಂತರಿಕ ವ್ಯವಸ್ಥೆಯತ್ತ ತೋರಿಸುತ್ತಿವೆ.
ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಅವರ ಮಗನ ವಿದೇಶಾಂಗ ಧೋರಣೆಯ ಚಿಂತನಾ ಚಾವಡಿಯಾದ “ದಿ ಒಬ್ಸರ್ವರ್ ರಿಸರ್ಚ್ ಫೌಂಡೇಶನ್” (ಓಆರ್ಎಫ್) 2016ರಲ್ಲಿ ಕೋಲ್ಕತ್ತಾದ ಸೇರಿದಂತೆ ಚೀನಾದ ಉಪರಾಯಭಾರ ಕಚೇರಿಗಳಿಂದ (ಕಾನ್ಸ್ಯೂಲೇಟ್) ಹಣಕಾಸು ಪಡೆದಿದೆ. ಅಲ್ಲದೇ ಓಆರ್ಎಫ್ಗೆ ರಿಲಯನ್ಸ್ ಇಂಡಸ್ಟ್ರೀಸ್ನ ಹಣಕಾಸು ಬೆಂಬಲವೂ ಇದೆ.

ಆರೆಸ್ಸೆಸ್ಗೆ ಹತ್ತಿರವಾಗಿರುವ ಇನ್ನೊಂದು ಚಿಂತನಾ ಚಾವಡಿಯಾಗಿರುವ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ತನ್ನ ವೆಬ್ಸೈಟಿನಲ್ಲಿ, ತಾನು ವಿದೇಶಾಂಗ ಮತ್ತು ಕಾರ್ಯವ್ಯೂಹಾತ್ಮಕ ಧೋರಣೆಯ ವಿಷಯದಲ್ಲಿ ಒಂಬತ್ತು ಚೀನಿ ಸಂಸ್ಥೆಗಳೊಂದಿಗೆ ವೃತ್ತಿಪರ ಸಂಬಂಧ ಹೊಂದಿರುವುದಾಗಿ ಘೋಷಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ (ವಿಐಎಫ್)ನ ಸ್ಥಾಪಕ ನಿರ್ದೇಶಕರಾಗಿದ್ದು, ಅದು ಬಿಜೆಪಿ ಮತ್ತು ಆರೆಸ್ಸೆಸ್ ಜೊತೆ ನಿಕಟ ನಂಟು ಹೊಂದಿದೆ. ಈ ಎರಡೂ ಸಂಸ್ಥೆಗಳು ಈ ಮಾಹಿತಿಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊಂಡಿವೆ.

ಒಂದು ವೇಳೆ ಬಿಜೆಪಿಯು 2005-06ರಷ್ಟು ಹಿಂದೆ ಪಡೆದ ಹಣವನ್ನು ಆಧರಿಸಿ ಕಾಂಗ್ರೆಸ್ ಪಕ್ಷವು ಚೀನಾ ನಂಟು ಹೊಂದಿದೆ ಎಂದು ಆರೋಪಿಸಿ ನಗಣ್ಯ ವಿಷಯವನ್ನು ಒಂದು ದೊಡ್ಡ ರಾಷ್ಟ್ರೀಯ ಭದ್ರತಾ ವಿಷಯವನ್ನಾಗಿ ಮಾಡಲು ಹೊರಡದಿದ್ದರೆ, ಈ ಎರಡೂ ಸಂಸ್ಥೆಗೆ ದೇಣಿಗೆ ನೀಡಿದ ದಾನಿಗಳ ಗುರುತು ಪರಿಚಯ ಯಾರ ಗಮನವನ್ನೂ ಸೆಳೆಯುತ್ತಿರಲಿಲ್ಲ. ವಿಶ್ವದಾದ್ಯಂತ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯುವುದು ಸಾಮಾನ್ಯವಾಗಿದೆ.
ವಿದೇಶಾಂಗ ಸಚಿವರ ಮಗ ಧ್ರುವ ಜೈಶಂಕರ್ ಒಬ್ಸರ್ವರ್ ರಿಸರ್ಚ್ ಫೌಂಡೇಶನ್ನಲ್ಲಿ ಕಳೆದ ವರ್ಷ ಯುಎಸ್ಎಗೆ ಸಂಬಂಧಿಸಿದ ವಿಷಯಗಳ ನಿರ್ದೇಶಕರಾದರು. ಚೀನಾ ದೇಶಕ್ಕೆ ಭಾರತದ ಮಾಜಿ ರಾಯಭಾರಿಯೂ ಆಗಿರುವ ವಿದೇಶಾಂಗ ಸಚಿವರು ಓಆರ್ಎಫ್ಗೆ ನಿಯಮಿತವಾಗಿ ಭೇಟಿ ನೀಡಿ, ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಉಪನ್ಯಾಸಗಳನ್ನು ನೀಡುತ್ತಾರೆ.

ಜೈಶಂಕರ್ ಅವರ ಓಆರ್ಎಫ್ನ ವೆಬ್ಸೈಟಿನಲ್ಲಿ ವಿದೇಶಿ ದಾನಿಗಳ ಪಟ್ಟಿಯನ್ನು ನೀಡಲಾಗಿದ್ದು, ಅವರಿಂದ ಪಡೆದ ಹಣದ ಮೊತ್ತವನ್ನೂ ನಮೂದಿಸಲಾಗಿದೆ. ಅದರಂತೆ, ಓಆರ್ಎಫ್ 2016ಲ್ಲಿ ಚೀನಾದ ಉಪರಾಯಭಾರಿ (ಕಾನ್ಸ್ಯೂಲೇಟ್ ಜನರಲ್)ಯಿಂದ ಒಟ್ಟು 1.25 ಕೋಟಿ ರೂ. ಮೊತ್ತದ ಮೂರು ದೇಣಿಗಳನ್ನು ಮತ್ತು ಮರುವರ್ಷ 50 ಲಕ್ಷ ರೂ.ಗಳ ದೇಣಿಗೆಯನ್ನು ಪಡೆದಿತ್ತು.
ಸಂಸ್ಥೆಯು ಕೊಲ್ಕತ್ತಾದ “ಕಾನ್ಸ್ಯೂಲೇಟ್ ಜನರಲ್ ಆಫ್ ರಿಪಬ್ಲಿಕ್ ಆಫ್ ಚೈನಾ”ದಿಂದ ಎಪ್ರಿಲ್ 29, 2016ರಂದು 7.7 ಲಕ್ಷ ರೂ., ಅದೇ ವರ್ಷ ನವಂಬರ್ 4ರಂದು 11.55 ಲಕ್ಷ ರೂ. ಮತ್ತೊಮ್ಮೆ ಡಿಸೆಂಬರ್ 1, 2017ರಂದು 50 ಲಕ್ಷ ರೂ. ದೇಣಿಗೆ ಪಡೆದಿದೆ.

ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ತಾನು ಸಂಬಂಧ ಹೊಂದಿರುವ ಚೀನಾದ ಸಂಸ್ಥೆಗಳ ಪಟ್ಟಿ ನೀಡಿದೆ. ಅವುಗಳೆಂದರೆ, ಬೀಜಿಂಗ್ನ ಚೈನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟ್ರಾಟಜಿಕ್ ಸ್ಟಡೀಸ್; ಬೀಜಿಂಗ್ನ ಚೈನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್; ಬೀಜಿಂಗ್ನ ಸೆಂಟರ್ ಫಾರ್ ಸೌತ್ ಏಷ್ಯನ್ ಸ್ಟಡೀಸ್; ಬೀಜಿಂಗ್ನ ಪೆಕಿಂಗ್ ಯುನಿವರ್ಸಿಟಿ; ಕುನ್ಮಿಂಗ್ನ ಯುನಾನ್ ಯುನಿವರ್ಸಿಟಿ ಆಫ್ ಫೈನಾನ್ಸ್ ಎಂಡ್ ಇಕನಾಮಿಕ್ಸ್ನ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಇಂಡಿಯನ್ ಓಶನ್ ಸ್ಟಡೀಸ್; ಬೀಜಿಂಗ್ನ ಚೈನೀಸ್ ಅಕಾಡೆಮಿ ಆಫ್ ಸೋಷಿಯಲ್ ಸಾಯನ್ಸಸ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟ್ರಾಟಜಿ; ಚೆಂಗ್ಡೂವಿನ ಸೆಂಟರ್ ಫಾರ್ ಸೌತ್ ಏಷ್ಯಾ ಎಂಡ್ ವೆಸ್ಟ್ ಚೈನಾ ಕೊಅಪರೇಷನ್ ಎಂಡ್ ಡೆವಲಪ್ಮೆಂಟ್ ಯುನಿವರ್ಸಿಟಿ; ಚೆಂಗ್ಡೂವಿನ ಸಿಚುವಾನ್ ಯುನಿವರ್ಸಿಟಿಯ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್; ಬೀಜಿಂಗ್ನ ಸಿಲ್ಕ್ ರೋಡ್ ಥಿಂಕ್ ಟ್ಯಾಂಕ್ ನೆಟ್ವರ್ಕ್ ಡೆವಲಪ್ಮೆಂಟ್ ರಿಸರ್ಚ್ ಕೌನ್ಸಿಲ್; ಮತ್ತು ಶೆನ್ಝೆನ್ನ ಸೆಂಟರ್ ಫಾರ್ ಇಂಡಿಯನ್ ಸ್ಟಡೀಸ್.

ರಕ್ಷಣಾ ವಲಯದ ಮೂಲಗಳ ಪ್ರಕಾರ ಈ ಎರಡು ಚಿಂತನಾ ಚಾವಡಿಗಳ ಸದಸ್ಯರಿಗೆ ಆಡಳಿತದ ನಾರ್ಥ್ ಬ್ಲಾಕ್ ಮತ್ತು ಸೌತ್ ಬ್ಲಾಕ್ (ಹಣಕಾಸು ಮತ್ತು ವಿದೇಶಾಂಗ ಸಚಿವಾಲಯಗಳು)ಗಳಿಗೆ ಸಾಕಷ್ಟು ಮುಕ್ತವಾದ ಪ್ರವೇಶವಿದೆ.
ಎರಡೂ ಸಂಸ್ಥೆಗಳನ್ನು ಇ- ಮೈಲ್ ಮತ್ತು ಟ್ವಿಟ್ಟರ್ ಮೂಲಕ ಸಂಪರ್ಕಿಸಿದಾಗ ಯಾವುದೇ ವಿವರಣೆ ಬಂದಿಲ್ಲವಾದರೂ, ಈ ವರದಿಯು ಈ ದೇಣಿಗೆಗಳು ಕಾನೂನುಬದ್ಧವಲ್ಲ ಎಂದು ಸೂಚಿಸುತ್ತಿಲ್ಲ.
ಆದರೆ, ತನ್ನ ವಿದೇಶಾಂಗ ಸಚಿವರು ಮತ್ತು ಸರಕಾರದ ಭದ್ರತಾ ಸಲಹೆಗಾರರು ಭಾಗಿಯಾಗಿರುವ ಮತ್ತು ತನಗೆ ನಿಕಟವಾಗಿರುವ ಸಂಸ್ಥೆಗಳು ಚೀನಾದ ಸರಕಾರ ಮತ್ತು ಸಂಸ್ಥೆಗಳಿಂದ ದೇಣಿಗೆ ಪಡೆದಿರುವಾಗ, ಒಂದೂವರೆ ದಶಕದ ಹಿಂದೆ ಕಾಂಗ್ರೆಸ್ ಪಡೆದುಕೊಂಡ ದೇಣಿಗೆಯನ್ನು ಹಿಡಿದುಕೊಂಡು ರಾಷ್ಟ್ರೀಯ ಭದ್ರತಾ ಪ್ರಶ್ನೆಯನ್ನು ಎತ್ತಿರುವ ಬಿಜೆಪಿ ನಡೆಯು ತನ್ನ ಬಟ್ಟಲಿನಲ್ಲಿ ಹೆಗ್ಗಣ ಇಟ್ಟುಕೊಂಡು, ಕಾಂಗ್ರೆಸ್ ಬಟ್ಟಲಿನಲ್ಲಿ ನೊಣವನ್ನು ತೋರಿಸಿದಂತಾಗಿದೆ.
ಕೃಪೆ: ಟೆಲಿಗ್ರಾಫ್ಇಂಡಿಯಾ
ಅನುವಾದ: ನಿಖಲ್ ಕೋಲ್ಪೆ
ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!


