ಈ ವರೆಗೆ ಪಿಎಂ ಕೇರ್ಸ್ಗೆ ಸುಮಾರು ರೂ.60,000 ಕೋಟಿ ಸಂಗ್ರಹವಾಗಿದೆ. ಇದು ಜನರ ದೇಣಿಗೆ, ಈ ಹಣದ ಬಗ್ಗೆ ಸರ್ಕಾರ ಜನರಿಗೆ ಲೆಕ್ಕ ಕೊಡಬೇಕಲ್ಲವೇ ಎಂದು ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎಂದು ರಾಜ್ಯ ಸರ್ಕಾರವೂ ಜನರಿಗೆ ಹೇಳಬೇಕು. ಈ ಕಾರಣಕ್ಕಾಗಿಯೇ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ನಾನು ಒತ್ತಾಯಿಸಿದ್ದು. ಮೆಡಿಕಲ್ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ. ಇದಕ್ಕೆ ಸಮರ್ಥನೆಗಳಿಲ್ಲ ಎಂದು ಆರ್ಥಿಕ ಇಲಾಖೆ ಟಿಪ್ಪಣಿ ಇದೆ. ಈ ಪ್ರಕರಣದಲ್ಲಿ ಸುಮಾರು ರೂ.2,200 ಕೋಟಿ ಅವ್ಯವಹಾರ ನಡೆದಿದೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಾರ್ಚ್ 24 ಕ್ಕೆ ಮುಂಚೆ ವಿಶ್ವದಲ್ಲಿ 4 ಲಕ್ಷದ 25 ಸಾವಿರ ಸಕ್ರಿಯ ಕೊರೊನಾ ಪ್ರಕರಣಗಳಿದ್ದವು, ಸುಮಾರು 19,000 ಮಂದಿ ಸಾವಿಗೀಡಾಗಿದ್ದರು. ಆಗ ಭಾರತದಲ್ಲಿ 536 ಮಂದಿಗೆ ಕೊರೊನಾ ದೃಢಪಟ್ಟಿತ್ತು ಮತ್ತು 10 ಜನ ಕೊರೊನಾದಿಂದ ಸಾವಿಗೀಡಾಗಿದ್ದರು. ಆದರೆ ಈಗ ಭಾರತ ಕೊರೊನಾ ಸೋಂಕಿನಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ. ಮಾರ್ಚ್ನಿಂದ ಈ ವರೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯವಿದ್ದಾಗ್ಯೂ ಕೊರೊನಾ ವ್ಯಾಪಕವಾಗಿ ಹರಡಿದೆ. ಇದಕ್ಕೆ ಎರಡೂ ಸರ್ಕಾರಗಳ ನಿರ್ಲಕ್ಷ್ಯ ಮತ್ತು ತಪ್ಪು ನಿರ್ಧಾರಗಳೇ ಕಾರಣ ಎಂದು ಅವರು ದೂರಿದ್ದಾರೆ.
ವಿಶ್ವದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿರುವ ಜನರ ಪ್ರಮಾಣ ತುಂಬಾ ಕಡಿಮೆಯಿದೆ. ಅಮೆರಿಕಾದಲ್ಲಿ ಪ್ರತಿ 10 ಲಕ್ಷ ಮಂದಿಗೆ 1 ಲಕ್ಷ ಜನರನ್ನು, ಇಟಲಿಯಲ್ಲಿ 90 ಸಾವಿರ, ಇಂಗ್ಲೆಂಡ್ನಲ್ಲಿ 75 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಭಾರತದಲ್ಲಿ ಪ್ರತಿ 10 ಲಕ್ಷ ಮಂದಿಗೆ 6,943 ಜನರನ್ನು, ಕರ್ನಾಟಕದಲ್ಲಿ 9,741 ಜನರನ್ನು ಪರೀಕ್ಷೆ ಒಳಪಡಿಸಲಾಗುತ್ತಿದೆ. ಇದರಿಂದ ಸೋಂಕಿತರ ಪತ್ತೆ ವಿಳಂಬವಾಗಿ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ನಿಯಂತ್ರಣದಲ್ಲಿ ಭಾರತ ನಂ.1 ಎನ್ನುತ್ತಿದ್ದರು, ಇತರೆ ದೇಶಗಳೊಂದಿಗೆ ಎಲ್ಲಿದೆ ಸಾಮ್ಯತೆ ಎಂದು ಸಿದ್ದು ಪ್ರಶ್ನಿಸಿದ್ದಾರೆ.
ಮೊನ್ನೆ ಬಳ್ಳಾರಿಯಲ್ಲಿ ಕೊರೊನಾದಿಂದ ಮೃತಪಟ್ಟ ನಾಲ್ವರ ಶವಗಳನ್ನು ಅಮಾನವೀಯವಾಗಿ ಒಂದೇ ಗುಂಡಿಯಲ್ಲಿ ಶವ ಸಂಸ್ಕಾರ ಮಾಡಲಾಯಿತು. ಆರೋಗ್ಯ ಸಚಿವರ ಜಿಲ್ಲೆಯಲ್ಲೇ ಇಷ್ಟು ನಿರ್ಲಕ್ಷ್ಯವಾದರೆ ಹೇಗೆ? ಇಷ್ಟು ದಿನಗಳಾದರೂ ಸರ್ಕಾರ ಶವ ಸಂಸ್ಕಾರಕ್ಕೆ ಕನಿಷ್ಠ ಒಂದು ನಿಯಮ ರೂಪಿಸದೆ ಇರುವುದು ದುರಾದೃಷ್ಟದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ತುಮಕೂರಿನ ಮಹಿಳೆಯೊಬ್ಬರು ಕೊರೊನಾ ಚಿಕಿತ್ಸೆಗೆ ಹಾಸಿಗೆ ಸಿಗದೆ ನಾಲ್ಕೈದು ಗಂಟೆ ಒದ್ದಾಡಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿ ದುಃಖವಾಯಿತು. ಕೊರೊನಾ ಸೋಂಕು ಕಂಡುಬಂದು 3 ತಿಂಗಳಾಯಿತು, ಇನ್ನೂ ಅಗತ್ಯ ಪ್ರಮಾಣದ ಹಾಸಿಗೆಗಳು ಲಭ್ಯವಿಲ್ಲ. ರಾಜ್ಯದಲ್ಲಿ ಸರ್ಕಾರ ಇನ್ನೂ ಜೀವಂತವಾಗಿದೆಯೇ ಎಂದು ಕೇಳಿದ್ದಾರೆ.
ಸರ್ಕಾರವೇ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ ಒಟ್ಟು ಹಾಸಿಗೆಗಳ ಪ್ರಮಾಣ 4,663, ಇದರಲ್ಲಿ 2,694 ಹಾಸಿಗೆಗಳು ಬಳಕೆಯಾಗುತ್ತಿದ್ದು, 1,969 ಹಾಸಿಗೆಗಳು ಲಭ್ಯವಿದೆಯಂತೆ. ನನ್ನ ಪ್ರಕಾರ ಈ ವೇಳೆಗೆ ರಾಜ್ಯದಲ್ಲಿ ಕನಿಷ್ಠ 30,000 ಹಾಸಿಗೆಗಳು ಲಭ್ಯವಿರಬೇಕಿತ್ತು. ನಮ್ಮ ರಾಜ್ಯದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳೇ 6000ಕ್ಕೂ ಹೆಚ್ಚಿದೆ, ಬೆಂಗಳೂರು ನಗರವೊಂದರಲ್ಲೇ ನಿತ್ಯ 900 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಎಲ್ಲಾ ಕೊರೊನಾ ಚಿಕಿತ್ಸಾ ಕೇಂದ್ರಗಳ ಹಾಸಿಗೆಗಳು ಭರ್ತಿಯಾದರೆ ಉಳಿದವರ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ.
ಮಣಿಪಾಲ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ಅವರು ಮುಂದಿನ ಒಂದೂವರೆ ತಿಂಗಳಿನಲ್ಲಿ ಬೆಂಗಳೂರು ನಗರವೊಂದರಲ್ಲೇ 40,000 ಜನ ಸೋಂಕಿಗೆ ಒಳಗಾಗಲಿದ್ದಾರೆ ಎಂದಿದ್ದಾರೆ. ಈ ರೀತಿ ಹಿಂದೆಯೂ ಹಲವು ತಜ್ಞರು ಎಚ್ಚರಿಕೆ ನೀಡಿದ್ದರ ಹೊರತಾಗಿಯೂ ಸರ್ಕಾರ ಯಾರ ಮಾತನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿನಿತ್ಯ ಕೊರೊನಾ ಸೋಂಕಿತರಿಗೆ ಅಗತ್ಯ ಪ್ರಮಾಣದ ಆಹಾರ, ಔಷಧಿ, ವೆಂಟಿಲೇಟರ್ ಮತ್ತು ಹಾಸಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವಸ್ತುನಿಷ್ಠ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮ ಮಿತ್ರರಿಗೆ ನನ್ನ ಧನ್ಯವಾದಗಳು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಶುಲ್ಕ ಪಾವತಿಸದಿದ್ದರೆ ದಾಖಲಾತಿ ರದ್ದು ಬೆದರಿಕೆ: ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ಖಾಸಗಿ ಶಾಲೆ


