ದೇಶಕ್ಕೆ ಸ್ವಾತಂತ್ರ್ಯ ಬಂದ ಏಳು ದಶಕಗಳು ಉರುಳಿದರೂ ಸರಿಯಾದ ರಸ್ತೆ ಕಾಣದ ಹಲವು ಹಳ್ಳಿಗಳು ನಮ್ಮ ಕಣ್ಣಮುಂದೆ ಇವೆ. ರಸ್ತೆಗಳ ಅಭಿವೃದ್ಧಿಗಾಗಿ ಕೋಟಿಕೋಟಿ ರೂಪಾಯಿ ಬಿಡುಗಡೆಯಾದರೂ ಇಂದಿಗೂ ಹಲವು ರಸ್ತೆಗಳು ಟಾರಿನ ಮುಖ ಕಂಡಿಲ್ಲ. ಹಾಗಾಗಿ ಜನರ ಗೋಳನ್ನು ಕೇಳೋರೇ ಇಲ್ಲವಾಗಿದೆ.
ಹೌದು, ಇಂತಹ ಸಮಸ್ಯೆಗೆ ಸಾಕ್ಷಿಯಾಗಿದೆ ತುಮಕೂರು ತಾಲೂಕು ಪೆರುಮನಹಳ್ಳಿ ರಸ್ತೆ. ತುಮಕೂರು ಮಹಾ ನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಮಲ್ಲಸಂದ್ರಕ್ಕೆ ಕೂಗಳತೆ ದೂರದಲ್ಲಿ ಪೆರುಮನಹಳ್ಳಿ ಮತ್ತು ದೊಡ್ಡನಾರವಂಗಲ ಇವೆ. ಈ ಎರಡು ಗ್ರಾಮಗಳ ನಡುವೆ ಇರುವ ರಸ್ತೆ ಮಳೆಗಾಲದಲ್ಲಿ ಅಕ್ಷರಶಃ ಗದ್ದೆಯಾಗುತ್ತದೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬರುವ ಬೆಳ್ಳಾವಿ ಹೋಬಳಿಯ ಈ ಭಾಗದ ರಸ್ತೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ. ಎರಡು ಬಾರಿ ಶಾಸಕರಾಗಿದ್ದ ಬಿ.ಸುರೇಶ್ ಗೌಡ ಹೆಬ್ಬೂರು ಭಾಗದ ರಸ್ತೆ ಅಬಿವೃದ್ಧಿಗೆ ಹೆಚ್ಚು ಒತ್ತು ನೀಡಿದರೇ ಹೊರತು ಬೆಳ್ಳಾವಿ ಹೋಬಳಿಯ ಅಭಿವೃದ್ಧಿಯನ್ನ ಕಡೆಗಣಿಸುತ್ತಾ ಬಂದರು. ಇದಕ್ಕೆ ಇಲ್ಲಿನ ರಸ್ತೆಗಳೇ ಸಾಕ್ಷಿಯಾಗಿವೆ.
ಶಾಸಕರು ಮತ್ತು ಸಂಸದರ ನಿಧಿಗೆ ಕೋಟ್ಯಂತರ ರೂಪಾಯ ಅನುದಾನ ಬರುತ್ತದೆ. ಈ ಹಣವನ್ನು ರಸ್ತೆಗಳ ಅಭಿವೃದ್ದಿಗೆ ಬಳಸಲು ಅವಕಾಶವಿದೆ. ಜೊತೆಗೆ ರಸ್ತೆಗಳ ಡಾಂಬರೀಕರಣಕ್ಕೆ ಹಣ ಬಿಡುಗಡೆ ಆಗುತ್ತದೆ. ಆದರೂ ರಸ್ತೆಗಳಿಗೆ ಟಾರ್ ಹಾಕಿಲ್ಲ. ಇದು ಸೇಡಿನ ರಾಜಕಾರಣದ ಒಳಸುಳಿ ಎಂದು ವಿಶ್ಲೇಷಿಸಲಾಗುತ್ತಿದೆ.ಈ ಸಂಬಂಧ ಸ್ಥಳೀಯ ನಿವಾಸಿ ಶ್ರೀನಿವಾಸಮೂರ್ತಿ ನಾನುಗೌರಿ.ಕಾಂ ಜೊತೆ ಸಮಸ್ಯೆ ಬಿಡಿಸಿಟ್ಟರು. ಮಳೆ ಬಂದರೆ ಸಮಸ್ಯೆ ಎದುರಾಗುತ್ತದೆ. ದೊಡ್ಡನಾರವಂಗಲ ಮತ್ತು ಬೆಳ್ಳಾವಿಗೆ ಇದೇ ರಸ್ತೆಯಲ್ಲಿ ಹೋಗಬೇಕು. ಇಲ್ಲವೇ ಸುತ್ತುಬಳಸಿ ಬರಬೇಕು. ಬೈಕ್ ಗಳಲ್ಲಿ ಹೋದರೆ ಮಡ್ ಗಾರ್ಡ್ ತೆಗೆದು ಬೈಕಿನ ಜೊತೆ ಮುಖಕ್ಕೆ ಕೆಸರು ಸಿಡಿಸಿಕೊಂಡು ಬೀಳದ ಹಾಗೆ ಸಮತೋಲನವಾಗಿ ಹೋಗುವುದು ಸವಾಲಿನ ಕೆಲಸ.
ಹೆಂಗಸರು, ವೃದ್ದರು ಮತ್ತು ಮಕ್ಕಳು ಕೆಸರುಗದ್ದೆ ರಸ್ತೆಯಲ್ಲಿ ಬೀಳದೆ ಇರಲಾರರು. ಬೈಕ್ ಬಿಟ್ಟರೆ ದಪ್ಪಲಿ ಕೈಯಲ್ಲಿಡಿದುಕೊಂಡು ನಡೆಯಬೇಕು. ಬುರುಜೆ ಮತ್ತಿಕೊಂಡು ಕಷ್ಟಪಟ್ಟು ಮನೆ ಸೇರಬೇಕು. ಪೆರುಮನಹಳ್ಳಿ ಗಂಗಣ್ಣ ಮತ್ತು ರುದ್ರೇಶ್ ಪ್ರಯತ್ನದಿಂದ ಒಂದಿಷ್ಟು ದೂರ ಉತ್ತಮ ರಸ್ತೆಯ ಭಾಗ್ಯ ದೊರೆಕಿತ್ತು. ಈಗ ಯಾರಿಗೇಳೋದು ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ನೋವು ತೋಡಿಕೊಂಡರು.
ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಪಾದಾಚಾರಿಗಳು ಜೀವ ಕೈಯಲ್ಲಿಡಿದುಕೊಂಡು ಭಯದಲ್ಲೇ ತೆರಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಎರಡು ಬಾರಿ ಶಾಸಕರಾಗಿದ್ದ ಬಿ.ಸುರೇಶ್ ಗೌಡ ನಮ್ಮ ಗ್ರಾಮಗಳನ್ನು ನಿರ್ಲಕ್ಷಿಸಿದರು. ನಾವು ಸುರೇಶ್ ಗೌಡರಿಗೆ ಓಟು ಹಾಕಿದ್ದೇವೆ. ಆದರು ನಮ್ಮ ಕಡೆ ವಕ್ರ ದೃಷ್ಟಿ ಬೀರಿದ್ದಾರೆ. ಈಗಿನ ಶಾಸಕ ಗೌರಿ ಶಂಕರ್ ಅವರಿಗೆ ರಸ್ತೆಗೆ ಡಾಂಬರೀಕರಣ ಮಾಡಿಸಿ ಎಂದು ಮನವಿ ಮಾಡಿದ್ದೇವೆ. ಮಾಡಿಸಿಕೊಡುವ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಪೆರುಮನಹಳ್ಳಿ ಗ್ರಾಮಸ್ಥರು.
ಈ ಭಾಗದಲ್ಲಿ ಕೆಲವು ಕೈಗಾರಿಕೆಗಳು ಇದ್ದು, ನಿತ್ಯವೂ ಲಾರಿಗಳು ಓಡಾಡುತ್ತವೆ. ಆದರೆ ರಸ್ತೆ ಹಾಳಾಗಿರುವುದರಿಂದ ಜನ ಸಂಚಾರಕ್ಕೆ ತೊಂದರೆಯಾಗಿದೆ. ಜನರು ರಸ್ತೆಗೆ ಇಳಿಯುವುದೇ ದುಸ್ಥರವಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬಂದರೆ ಸಾಕು ಕೆಸರು ಸ್ನಾನವಾಗುತ್ತದೆ ಎಂದು ಉಭಯ ಗ್ರಾಮಸ್ಥರು ದೂರಿದ್ದಾರೆ.
ಓದಿ: ಬಾಯ್ಕಟ್ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?