ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರಿಗೆ ಜಿಲ್ಲಾ ಕೊರೊನಾ ನಿಯಂತ್ರಣ ವಿಭಾಗದಿಂದ ಶನಿವಾರ ಕರೆ ಬಂದಿದ್ದು, ತಮಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಕ್ವಾರಂಟೈನ್ ನಲ್ಲಿರುವಂತೆ ಹೇಳಲಾಗಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ವ್ಯಕ್ತಿಯೊಬ್ಬರು ಕೊರೊನಾ ಪರೀಕ್ಷೆ ವೇಳೆ ತಮ್ಮ ನಂಬರ್ ಬದಲಿಗೆ ಜಿಲ್ಲಾಧಿಕಾರಿ ನಂಬರ್ ನೀಡಿದ್ದಾರೆ ಎಂಬುದು ತದನಂತರ ತಿಳಿದುಬಂದಿದೆ.
ಕರೆ ಬಂದ ನಂತರ ಆಶ್ಚರ್ಯಗೊಂಡ ಶಂಕರ್ ತಾನು ಜಿಲ್ಲಾಧಿಕಾರಿ ಎಂದು ಹೇಳಿದ್ದಾರೆ. ಇದರ ಕುರಿತು ಹೆಚ್ಚಿನ ವಿವರಗಳಿಗಾಗಿ ನಿಯಂತ್ರಣ ಕೊಠಡಿ ಸಿಬ್ಬಂದಿಯನ್ನು ವಿಚಾರಿಸಿದಾಗ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದಾತ ಪರೀಕ್ಷೆ ವೇಳೆ ತಮ್ಮ ನಂಬರ್ ನೀಡಿದ್ದಾನೆ ಎಂದು ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ತಪಾಸಣೆ ವೇಳೆ ತಪ್ಪು ನಂಬರ್ ನೀಡಿದ್ದಾರೆ. ಒಂದು ವೇಳೆ ಪಾಸಿಟಿವ್ ಬಂದರೆ ಕ್ವಾರಂಟೈನ್ಗೆ ಒಳಗಾಗಲು, ಅಥವಾ ಆಸ್ಪತ್ರೆಗೆ ದಾಖಲಾಗಲು ಹಿಂಜರಿಯುವವರು ಮಾಡಿರುವ ಕೆಲಸ ಇದು. ಈ ಕುರಿತು ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.
“ನಾವು ಆ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದೇವೆ. ಇದು ಮತ್ತೆ ಸಂಭವಿಸದಂತೆ ನಾವು ಜಾಗರೂಕತೆ ವಹಿಸಬೇಕು. ಜನರಿಂದ ಮಾಹಿತಿ ಸಂಗ್ರಹಿಸುವುದು ರೋಗಿಗಳಿಗೆ ತೊಂದರೆ ಅಥವಾ ಶಿಕ್ಷೆ ನೀಡುವುದಕ್ಕಲ್ಲ. ಹಾಗಾಗಿ ಜನರು ಸರಿಯಾದ ಡೇಟಾವನ್ನು ನೀಡಬೇಕು” ಎಂದು ಜಿಲ್ಲಾದಿಕಾರಿ ತಿಳಿಸಿದರು.
“ಕೆಲವೊಮ್ಮೆ ಅವರು ತಪ್ಪು ನಂಬರ್ ಗಳನ್ನು ನೀಡುತ್ತಿರುವುದರಿಂದ ಅಥವಾ ಅವರ ಫೋನ್ಗಳನ್ನು ರಿಸೀವ್ ಮಾಡದ ಕಾರಣ ಸೋಂಕು ದೃಡಪಟ್ಟಿರುವವರೊಂದಿಗೆ ಸಂಪರ್ಕ ಹೊಂದಿರುವವರನ್ನು ಸಹ ತಲುಪಲು ನಮಗೆ ಸಾಧ್ಯವಾಗುವುದಿಲ್ಲ. ಹೀಗೆ ತಪ್ಪಿಸಿಕೊಳ್ಳುವುದರಿಂದ ಅವರಿಗೆ ಏನು ಲಾಭ ಎಂದು ನಮಗೆ ತಿಳಿದಿಲ್ಲ. ಅವರಿಗೆ ಸೋಂಕು ತಗುಲಿದ್ದರೆ ಅದು ಅವರಿಗೆ ತಿಳಿದಿರುವುದಿಲ್ಲ” ಎಂದು ಅವರು ಹೇಳಿದರು.
ಬಹುಶಃ ಜನರು ಸಾಮಾಜಿಕವಾಗಿ ಕಳಂಕಿತರಾಗುವರೆನೋ ಎಂಬ ಭಯಕ್ಕೆ ಹೀಗೆ ಮಾಡುತ್ತಿರಬಹುದು. ಆದರೆ, ತಮ್ಮ ಬಗ್ಗೆ ಸರಿಯಾದ ಸಂಪರ್ಕ ವಿವರಗಳನ್ನು ಮತ್ತು ಇತರ ಸಂಬಂಧಿತ ಸಂಪರ್ಕವನ್ನು ಪತ್ತೆಹಚ್ಚುವ ಮಾಹಿತಿಯನ್ನು ನೀಡುವಂತೆ ಮತ್ತು ಇದು ಸೋಂಕು ಹರಡುವ ಪ್ರಮಾಣವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಅತಿ ಹೆಚ್ಚು ಅಂಕ ಗಳಿಸಿದ 12 ನೇ ತರಗತಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಘೋಷಿಸಿದ ಪಂಜಾಬ್ ಸಿಎಂ!