ಕ್ರಾಂತಿಕಾರಿ ಕವಿ ವರವರ ರಾವ್ ಅವರ ಆರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ವರದಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ನಾನಾವತಿ ಆಸ್ಪತ್ರೆಗೆ ನಿರ್ದೇಶಿಸಿದೆ ಎಂದು ’ಲೈವ್ ಲಾ’ ವರದಿ ಮಾಡಿದೆ.
ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ವರವರ ರಾವ್ ಇತ್ತೀಚೆಗಷ್ಟೇ ಕೊರೊನಾ ಪಾಸಿಟಿವ್ ಆಗಿದ್ದರು. ಅವರ ಆರೋಗ್ಯದ ಬಗ್ಗೆ ಹಾಗೂ ಅವರ ಚಿಕಿತ್ಸೆಯ ಬಗ್ಗೆ ಕುಟುಂಬವು ಆತಂಕ ಮತ್ತು ಹತಾಶೆಯನ್ನು ವ್ಯಕ್ತಪಡಿಸಿತ್ತು.
ನ್ಯಾಯಮೂರ್ತಿಗಳಾದ ಆರ್.ಡಿ. ಧನುಕಾ ಮತ್ತು ವಿ. ಜಿ. ಬಿಶ್ತ್ ಅವರ ವಿಭಾಗೀಯ ನ್ಯಾಯಪೀಠವು ಮಧ್ಯಂತರ ಜಾಮೀನು ನಿರಾಕರಣೆ ವಿರುದ್ಧ ರಾವ್ ಅವರ ಮನವಿ ಮತ್ತು ತಾಲೋಜ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿತು. ವರವರ ರಾವ್ ಅವರನ್ನು ಜೂನ್ 2, 2020 ರಂದು ಜೆಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ನಂತರ ಜೈಲಿನ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ವರವರ ಅವರ ಪರವಾಗಿ ಹಾಜರಾದ ವಕೀಲ ಸುದೀಪ್ ಪಾಸ್ಬೋಲಾ ಆಸ್ಪತ್ರೆಯಿಂದ ಅಥವಾ ಜೈಲು ಅಧಿಕಾರಿಗಳಿಂದ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಪಡೆಯಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಿದ್ದಾರೆ.
ಓದಿ: ಕವಿ ವರವರ ರಾವ್ ಬಿಡುಗಡೆಗೊಳಿಸಿ: ಸಾಹಿತಿ, ಚಿಂತಕರ ಆಗ್ರಹ
ಅವರ ಕುಟುಂಬವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಮಹಾರಾಷ್ಟ್ರದ ಗೃಹ ಸಚಿವರಿಗೆ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರ ಬರೆದಿದ್ದು, ಹನ್ನೆರಡು ದಿನಗಳಿಂದ ರಾವ್ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಎನ್ಐಎ ಸಲಹೆಗಾರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ “ಕುಟುಂಬವು ಅವರನ್ನು ಮಾತನಾಡಲು ಅಥವಾ ಭೇಟಿಯಾಗಲು ಬಯಸಿದರೆ ಹಾಗೂ ಆಸ್ಪತ್ರೆ ಅನುಮತಿಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾನಾವತಿ ಆಸ್ಪತ್ರೆ ಅತ್ಯುತ್ತಮ ಆಸ್ಪತ್ರೆ ಮತ್ತು ಅವರ ಆರೋಗ್ಯದ ಬಗ್ಗೆ ಅಥವಾ ಚಿಕಿತ್ಸೆ ಬಗ್ಗೆ ಯಾವುದೇ ಕುಂದುಕೊರತೆ ಇರುವುದಿಲ್ಲ” ಎಂದು ಹೇಳಿದರು
ಇದಕ್ಕೆ ಪ್ರತಿಕ್ರಿಯಿಸಿದ ಪಾಸ್ಬೋಲಾ, ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವಾಗ ಯಾವುದೇ ಕುಂದುಕೊರತೆ ಇಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಈ ಸಮಯದಲ್ಲಿ ಅವರ ಆರೋಗ್ಯ ಮಾಹಿತಿಯನ್ನು ಹಂಚಿಕೊಂಡರೆ ಏನಾದರೂ ಸಮಸ್ಯೆ ಇದೆಯೇ ಎಂದು ನ್ಯಾಯಪೀಠ ರಾಜ್ಯವನ್ನು ಕೇಳಿದೆ. ಯಾವುದೇ ಮಾಹಿತಿ ಹಂಚಿಕೊಳ್ಳಲು ಕುಟುಂಬಕ್ಕೆ ಯಾವುದೇ ಆಕ್ಷೇಪವಿಲ್ಲದಿದ್ದರೆ ವರದಿ ಸಲ್ಲಿಸಲು ಆಸ್ಪತ್ರೆಗೆ ನಿರ್ದೇಶನ ನೀಡಬಹುದು ಎಂದು ಪಿಪಿ ದೀಪಕ್ ಠಾಕ್ರೆ ಹೇಳಿದ್ದಾರೆ.
ಹೀಗಾಗಿ, ರಾವ್ ಅವರ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ನಾನಾವತಿ ಆಸ್ಪತ್ರೆಗೆ ನಿರ್ದೇಶಿಸಿತು. ಈ ವಿಷಯದ ಮುಂದಿನ ವಿಚಾರಣೆಯ ದಿನಾಂಕ ಆಗಸ್ಟ್ 7 ರಂದು ನಡೆಯಲಿದೆ.
ಓದಿ: ವರವರ ರಾವ್ ಅನಾರೋಗ್ಯದ ಸ್ಥಿತಿಯನ್ನು ದುರುಪಯೋಗ ಮಾಡುತ್ತಿದ್ದಾರೆ; ಅವರಿಗೆ ಜಾಮಿನು ನೀಡಕೂಡದು: NIA