ತೀವ್ರ ವಿವಾದ ಸೃಷ್ಟಿಸಿದ್ದ ರಫೇಲ್ ಯುದ್ದ ವಿಮಾನಗಳನ್ನು ಅಂಬಾಲದ ಭಾರತೀಯ ವಾಯುನೆಲೆ ನಿಲ್ದಾಣಕ್ಕೆ ಯಶಸ್ವಿಯಾಗಿ ಇಳಿಸಲಾಯಿತು. ಮೊದಲ ಬ್ಯಾಚ್ನ ಐದು ಯುದ್ದ ವಿಮಾನಗಳ ಸೇರ್ಪಡೆ ಮೂಲಕ ಭಾರತೀಯ ವಾಯುಪಡೆಗೆ ಬಲ ಬಂದಂತಾಗಿದೆ ಎಂದು ಹೇಳಲಾಗುತ್ತಿದೆ.
ಭಾರತಕ್ಕೆ ರಫೇಲ್ ವಿಮಾನಗಳ ಆಗಮನವು ಸರಿಯಾದ ಸಮಯಕ್ಕೆ ಐಎಎಫ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಿದೆ. ನಮ್ಮ ದೇಶಕ್ಕೆ ಎದುರಾಗಬಹುದಾದ ಯಾವುದೇ ಬೆದರಿಕೆಯನ್ನು ತಡೆಯಲು ಇದು ಬಲಶಾಲಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮೊದಲ ಫೈಟರ್ ಜೆಟ್ ಅನ್ನು ಔಪಚಾರಿಕವಾಗಿ ಸ್ವೀಕರಿಸಲು ಕಳೆದ ವರ್ಷ ಫ್ರಾನ್ಸ್ಗೆ ಪ್ರಯಾಣಿಸಿದ್ದ ಸಿಂಗ್, ಬಹು-ಪಾತ್ರದ ವಿಮಾನದ ಸಾಮಥ್ರ್ಯದ ಬಗ್ಗೆ ಮತ್ತು 36 ಫೈಟರ್ ಜೆಟ್ಗಳನ್ನು ಖರೀದಿಸುವ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿದ್ದಾರೆ.
ಚೀನಾವನ್ನು ಹೆಸರಿಸದೆ ಲೈನ್ ಆಫ್ ಕಂಟ್ರೋಲ್ನಲ್ಲಿ ತಂಟೆ ಮಾಡುವವರಿಗೆ ಇನ್ನು ಮುಂದೆ ಉತ್ತರ ಕೊಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
“ಐಎಎಫ್ನ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಪೂರೈಸುವ ರಫೇಲ್ ಜೆಟ್ಗಳನ್ನು ಖರೀದಿಸಲಾಗಿದೆ. ಈ ಪ್ರಕ್ರಿಯೆಯ ವಿರುದ್ಧದ ಆಧಾರರಹಿತ ಆರೋಪಗಳಿಗೆ ಈಗಾಗಲೇ ಉತ್ತರಿಸಲಾಗಿದೆ ಮತ್ತು ಇತ್ಯರ್ಥಪಡಿಸಲಾಗಿದೆ” ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
The Rafale jets were purchased when they fully met the operational requirements of the IAF. The baseless allegations against this procurement have already been answered and settled.
— Rajnath Singh (@rajnathsingh) July 29, 2020
“ಯಾರಾದರೂ ಭಾರತೀಯ ವಾಯುಪಡೆಯ ಈ ಹೊಸ ಸಾಮರ್ಥ್ಯದ ಬಗ್ಗೆ ಸಂಶಯಪಟ್ಟರೆ ಅವರು ನಮ್ಮ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರಲು ಬಯಸುವವರು ಆಗಿರಬೇಕು” ಎಂದು ಅವರು ಕಿಡಿಕಾರಿದ್ದಾರೆ.
ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಫೇಲ್ ಫೈಟರ್ ಜೆಟ್ ವಿಮಾನಗಳು ಇಂದು ಮಧ್ಯಾಹ್ನ 2 ಗಂಟೆಗೆ ಹರಿಯಾಣ ರಾಜ್ಯದ ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿವೆ. ಹೀಗಾಗಿ ಅಂಬಾಲಾ ಜಿಲ್ಲಾಡಳಿತವು ವಾಯುಪಡೆ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಸಂಜೆ 5 ಗಂಟೆಯವರೆಗೆ ನಿಷೇಧಿಸಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಫೇಲ್ ಒಂದು ಗೇಮ್ ಚೇಂಜರ್, ಚೀನಾದ ಜೆ20 ಇದಕ್ಕೆ ಸಮವಲ್ಲ: ಮಾಜಿ ವಾಯುದಳ ಮುಖ್ಯಸ್ಥ