Homeಅಂಕಣಗಳುಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ದಿಲ್ಲಿಯ 5 ಜನ ಸವರ್ಣೀಯ ಗಂಡಸರುಳ್ಳ ಈ ಸಮಿತಿ, ನಾಗಾಲ್ಯಾಂಡ್‍ನಿಂದ ಗುಜರಾತ್‍ವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಈ ಉದ್ದಗಲದ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವ ಮೂರು ಮೂಲ ಕಾನೂನುಗಳ ಪುನರ್ರಚನೆ ಕೆಲಸವನ್ನು ಹೇಗೆ ಕೈಗೊಳ್ಳುತ್ತದೆ?

- Advertisement -
- Advertisement -

ಕೆಲವು ವಾರಗಳ ಹಿಂದೆ, ರಾಜ್ಯದ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ, ಖ್ಯಾತ ಸಾಹಿತಿ ಹಾಗು ವಕೀಲರಾದ ಭಾನು ಮುಷ್ತಾಕ್ ಅವರು, ಜನ ಸಂಕಷ್ಟದಲ್ಲಿರುವಾಗ, ರಾಜ್ಯ ಸರ್ಕಾರ ಬಲಶಾಲಿ ಶಕ್ತಿಗಳಿಗೆ ಅನುಕೂಲವಾಗುವ ‘ಸುಗ್ರೀವಾಜ್ಞೆಗಳ ಸುಗ್ಗಿ’ಗೆ ಮುಂದಾಗಿರುವುದನ್ನು ಖಂಡಿಸಿದರು. ಕೋವಿಡ್ ಸಮಯದಲ್ಲಿ ಕಾನೂನುಗಳನ್ನು ತಿದ್ದುಪಡಿ ಮಾಡಿ, ವ್ಯವಸ್ಥೆಯನ್ನು ಸಂವಿಧಾನದಿಂದ ದೂರ ಮಾಡಿದ ರಾಜ್ಯ ಸರ್ಕಾರ, ತನ್ನ ಸ್ವಇಚ್ಛೆಯಿಂದ ಇದನ್ನು ಮಾಡಲಿಲ್ಲ, ಬದಲಿಗೆ ದಿಲ್ಲಿಯ ಒತ್ತಡದಿಂದ ಮಾಡಿತ್ತು.

ದೂರದ ದಿಲ್ಲಿ ಅಲ್ಲಿಗೆ ನಿಲ್ಲುತ್ತಿಲ್ಲ. ಈಗ ದೇಶದ ಅತ್ಯಂತ ಮುಖ್ಯ ಹಾಗು ಐತಿಹಾಸಿಕ ಕಾನೂನುಗಳಾದ ಭಾರತ ದಂಡಸಂಹಿತೆ 1860 (ಐ.ಪಿ.ಸಿ), ಭಾರತ ದಂಡ ಪ್ರಕ್ರಿಯ ಸಂಹಿತೆ (ಸಿ.ಆರ್.ಪಿ.ಸಿ) 1973, ಭಾರತ ಸಾಕ್ಷ್ಯ ಅಧಿನಿಯಮ 1872 (ಎವಿಡೆನ್ಸ್ ಆಕ್ಟ್)ಗಳಿಗೆ ಕೈಹಾಕಿದೆ. ಇದೊಂದು ಗಂಭೀರವಾದ ಪ್ರಕ್ರಿಯೆ.

ಯಾವ ಕೃತ್ಯಗಳು ಅಪರಾಧವಾಗುತ್ತದೆ ಮತ್ತು ಅದನ್ನು ತೀರ್ಮಾನಿಸುವುದು ಹೇಗೆ ಮತ್ತು ಯಾರು, ಅದಕ್ಕೆ ಶಿಕ್ಷೆಯೇನು, ಪೊಲೀಸರಿಗೆ ಇರುವ ಅಧಿಕಾರವೇನು, ಅದರ ಮಿತಿಯೇನು ಎಂದು ಈ ಮೂಲ ಕಾನೂನುಗಳೂ ತೀರ್ಮಾನಿಸುತ್ತವೆ. ಇದರೆ ಬಗ್ಗೆ ಜನಸಾಮಾನ್ಯರು ಏಕೆ ಚಿಂತಿಸಬೇಕು? ಏಕೆಂದರೆ, ಈ ಮೂರು ಕಾನೂನುಗಳು ದೇಶದ ಪ್ರತಿ ಪ್ರಜೆಗೂ ಮತ್ತು ಪ್ರಭುತ್ವಕ್ಕೂ ಇರುವ ಸಂಬಂಧವನ್ನು ನಿಯಂತ್ರಿಸುತ್ತಿದೆ, ಅದಕ್ಕೆ.

ಈ ಹಿಂದೆ ನಡೆದ ಕೆಲವು ಘಟನೆಗಳನ್ನು ಗಮನಿಸಿ – ದಾನಮ್ಮ ಅವರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಹಾಗು ದಿಲ್ಲಿಯಲ್ಲಿ ಸಂವಿಧಾನ ಉಳಿಸಲು ಹಾಗು ಸಿ.ಎ.ಎ. ತೊಲಗಿಸಲು ಹೋರಾಟ ಮಾಡಿದವರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳು, ಕೋವಿಡ್ ಸಮಯದಲ್ಲಿ ಜನರ ಓಡಾಟ ಹಾಗು ಸಾರ್ವಜನಿಕ ಚಟುವಟಿಕೆಗಳನ್ನು ನಿಯಂತ್ರಿಸಲು ತಂದ ಕೆಲವು ಸರ್ಕಾರಿ ಆದೇಶಗಳು – ಇವೆಲ್ಲವುದರಲ್ಲೂ ಈ ಕಾನೂನುಗಳ ಮುಖ್ಯ ಪಾತ್ರವಿದೆ. ಈ ಕಾನೂನುಗಳ ದುರುಪಯೋಗದಿಂದ ದೇಶದ ಸೆರೆಮನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ದಲಿತರು, ಮುಸಲ್ಮಾನರು ಮತ್ತು ಬಡವರು.

ಈ ಕಾನೂನುಗಳನ್ನು ಸರಿಯಾಗಿ ಜಾರಿಗೆ ತರದೆ ದಲಿತರನ್ನ ಹಾಗು ಮುಸಲ್ಮಾನರನ್ನ, ದೌರ್ಜನ್ಯಕ್ಕೆ ಒಳಗಾದ ಅನೇಕರನ್ನ ಸೆರೆಮನೆಯಲ್ಲಿ ಹಾಕಿ, ಮಹಿಳೆಯರನ್ನ ಅವಮಾನಿಸಿದ, ಫೇಕ್ ನ್ಯೂಸ್ ಹಬ್ಬಿಸುವ ಸಂಘಪರಿವಾರದ ಬಲಿಷ್ಟರನ್ನ ಮುಕ್ತವಾಗಿ ಓಡಾಡಲು ವ್ಯವಸ್ಥೆ ಬಿಟ್ಟಿದೆ. ಈ ಸಂಗತಿಗಳನ್ನೆಲ್ಲಾ ಪ್ರಸ್ತಾಪಿಸಿದ ಕಾರಣ, ಈ ಕಾನೂನುಗಳ ಪ್ರಾಮುಖ್ಯತೆ ಏನು ಮತ್ತು ಇವುಗಳು ಅಂಚಿನಲ್ಲಿರುವ ಸಮುದಾಯಗಳ ಮೇಲೆ ಬೀರುವ ಪರಿಣಾಮಗಳನ್ನು ಮನಗಾಣಿಸುವುದಕ್ಕೆ.

ಹಾಗಾಗಿ, ಈ ಕಾನೂನುಗಳ ಮೂಲ ಅಂಶಗಳನ್ನೇ ತಿದ್ದುಪಡಿ ಮಾಡಲು ಕೈಗೊಂಡಿರುವ ಪ್ರಕ್ರಿಯೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಖಂಡಿತವಾಗಿ ಅಪರಾಧಿ ಕಾನೂನುಗಳ ತಿದ್ದುಪಡಿಯ ಅಗತ್ಯವಿದೆ – ಉದಾಹರಣೆಗೆ ರಾಜದ್ರೋಹದ ಅಪರಾಧವನ್ನು ಕೈಬಿಡುವುದು, ವೈವಾಹಿಕ ಅತ್ಯಾಚಾರ (ಮ್ಯಾರಿಟಲ್ ರೇಪ್) ಅನ್ನು ಅಪರಾಧಗಳ ಪಟ್ಟಿಗೆ ಸೇರಿಸುವುದು – ಈ ಕೆಲವು ಇವತ್ತಿನ ತುರ್ತು. ಆದರೆ ಸದ್ಯದಲ್ಲೇ ನಡೆಯಲಿರುವ ತಿದ್ದುಪಡಿ ಪ್ರಕ್ರಿಯೆ ಉಪಯುಕ್ತತೆಗೆ ಹೋಲಿಸಿದರೆ ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಹಲವು ಪ್ರಶ್ನೆಗಳಿವೆ.

ಸಾಮಾನ್ಯವಾಗಿ ಈ ರೀತಿ ಪ್ರಮುಖ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾಡುವ ಮುನ್ನ, ಸರ್ಕಾರದಿಂದ ಸ್ವತಂತ್ರವಾಗಿರುವ ಕಾನೂನು ಆಯೋಗವು ಇದರ ಬಗ್ಗೆ ದೀರ್ಘವಾದ ಅಧ್ಯಯನ ನಡೆಸಿ ವರದಿ ಸಲ್ಲಿಸುತ್ತದೆ. ಆದರೆ ಹಲವು ಪ್ರಕರಣಗಳ ಸುಳಿಯಲ್ಲಿ ಸಿಕ್ಕಿಕೊಂಡಿರುವ ಗೃಹ ಸಚಿವರಾದ ಅಮಿತ್ ಶಾ ಅವರ ಆದೇಶದ ಮೇರೆಗೆ, ದಿಲ್ಲಿ ನಗರಕ್ಕೆ ಸೇರಿದ 5 ಜನರ ಸಮಿತಿಯೊಂದನ್ನು ರಚಿಸಿ, ಅದಕ್ಕೆ ಈ ಕಾನೂನುಗಳನ್ನು ತಿದ್ದುಪಡಿ ಮಾಡಲು ಕೇವಲ ಆರು ತಿಂಗಳ ಸಮಯ ಕೊಡಲಾಗಿದೆ.

ಈ ಪ್ರಕ್ರಿಯಯನ್ನು ಕೈಬಿಡಬೇಕೆಂದು ದೇಶಾದ್ಯಂತ ಕೂಗು ಕೇಳಿಬರುತ್ತಿದೆ. 12 ನಿವೃತ್ತ ನ್ಯಾಯಾಧೀಶರು, 52 ಹಿರಿಯ ವಕೀಲರು ಸಮಿತಿಗೆ ಪತ್ರ ಬರೆದು ಈ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಹೇಳಿದ್ದಾರೆ. ಹಾಗೆಯೆ ದಿಲ್ಲಿ ಉಚ್ಚ ನ್ಯಾಯಾಲಯದ ಮಹಿಳಾ ವಕೀಲರು ಸಹ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ; ಬೆಂಗಳೂರಿನ ಹಲವು ವಕೀಲರು ಹಾಗು ಸಂಘ ಸಂಸ್ಥೆಗಳು ಕೂಡ ಅದನ್ನೇ ಆಗ್ರಹಿಸಿವೆ.

ಈ ಎಲ್ಲ ಮನವಿಗಳನ್ನು ಗಮನಿಸಿದರೆ, ಈ ಪ್ರಕ್ರ್ರಿಯೆಯಲ್ಲಿರುವ ಸಮಸ್ಯೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಮೊದಲನೆಯದಾಗಿ, ಕೋವಿಡ್ ಸೋಂಕಿನ ಪ್ರಕರಣಗಳು 14 ಲಕ್ಷ ದಾಟಿದ್ದು, ಸಾವಿರಾರು ಜನ ಪ್ರಾಣ ಕಳೆದುಕೊಂಡು, ಕೋಟ್ಯಂತರ ಜನ ಕೆಲಸ ಕಳೆದುಕೊಂಡಿರುವ ಸಮಯದಲ್ಲಿ ಅಪರಾಧಿ ಕಾನೂನಿನ ತಿದ್ದುಪಡಿಗಳ ಅಗತ್ಯವೇನು? ಇಂತಹ ಒಂದು ಪ್ರಮುಖ ಕಾನೂನನ್ನು ತಿದ್ದುಪಡಿ ಮಾಡಲು ಇದು ಸರಿಯಾದ ಸಮಯವೇ?

16 ವರ್ಷಗಳ ಸುದೀರ್ಘ ಚರ್ಚೆಯ ನಂತರ ಐ.ಪಿ.ಸಿ ರಚನೆಗೊಂಡಿತು, ಸಿ.ಆರ್.ಪಿ.ಸಿ ರಚಿಸಲು ಕೆಲವು ದಶಕಗಳೇ ಆದವು ಹಾಗು 1961 ರಲ್ಲಿ ಅದನ್ನು ತಿದ್ದುಪಡಿ ಮಾಡಲು ಹೊರಟಾಗ, ಆ ಪ್ರಕ್ರಿಯೆ 12 ವರ್ಷಗಳ ಕಾಲ ತೆಗೆದುಕೊಂಡಿತು. ಅದೇ ರೀತಿ ಎವಿಡೆನ್ಸ್‍ಗೆ ಸಂಬಂಧಪಟ್ಟ ಕಾಯ್ದೆ ರಚಿಸಲು ಕೆಲವು ದಶಕಗಳೇ ಆದವು. ಈಗ ಈ ಮೂರು ಕಾನೂನುಗಳನ್ನು, ಕೋವಿಡ್ ಪಿಡುಗಿನ ನಡುವೆ ಆರು ತಿಂಗಳ ಕಾಲದಲ್ಲಿ ಹೇಗೆ ತಿದ್ದುಪಡಿ ಮಾಡುತ್ತೀರ ಎಂದು ಕೇಳಲಾಗಿದೆ.

ಇಂತಹ ಕಾನೂನು ತಿದ್ದುಪಡಿಗಳನ್ನು ಮಾಡಲು ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು, ಸಾರ್ವಜನಿಕ ಅಹವಾಲು ಸ್ವೀಕರಿಸಬೇಕು ನಂತರ ಹಲವು ಕಡೆ ಸಭೆಗಳು ನಡೆಯಬೇಕು, ಹಲವು ಚರ್ಚೆಗಳಾಗಬೇಕು ಇದಕ್ಕೆಲ್ಲ ವರ್ಷಗಟ್ಟಲೆ ಹಿಡಿಯುತ್ತದೆ. ಸೋಂಕಿನ ನಡುವೆ ಸಭೆಗಳನ್ನು ನಡೆಸುವುದಾದರೂ ಹೇಗೆ ಹಾಗು ಜನ ತಮ್ಮ ಜೀವದ ಬಗ್ಗೆ ಆತಂಕದಿಂದ ಇರುವಾಗ ಹಾಗು ಹಲವು ಜನ ಪ್ರಾಣ ಕಳೆದುಕೊಳ್ಳುತ್ತಿರಬೇಕಾದರೆ, ಸಮಾಜ ಹಾಗು ಸಾಮಾಜಿಕ ಕಾರ್ಯಕರ್ತರು ಕಾನೂನು ತಿದ್ದುಪಡಿ ಬಗ್ಗೆ ಯೋಚಿಸಬೇಕೋ ಅಥವ ಜನರ ಜೀವ ಉಳಿಸಲು ಪೂರಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಯೋಚಿಸಬೇಕೋ?

ಇಂತಹ ಮುಖ್ಯ ಕೆಲಸ ನಿರ್ವಹಿಸಲು ಸಮಿತಿಯ ಸದಸ್ಯತ್ವದಲ್ಲಿ ಪ್ರಾತಿನಿಧಿತ್ವದ ಕೊರತೆ ಎದ್ದು ಕಾಣುತ್ತದೆ. ಬರೀ ರಾಜಧಾನಿ ದಿಲ್ಲಿಯ 5 ಜನ ಸವರ್ಣೀಯ ಗಂಡಸರುಳ್ಳ ಈ ಸಮಿತಿ, ನಾಗಾಲ್ಯಾಂಡ್‍ನಿಂದ ಗುಜರಾತ್‍ವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಈ ಉದ್ದಗಲದ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವ ಮೂರು ಮೂಲ ಕಾನೂನುಗಳ ಪುನರ್ರಚನೆ ಕೆಲಸವನ್ನು ಹೇಗೆ ಕೈಗೊಳ್ಳುತ್ತದೆ?

ಮಹಿಳೆಯರ ಮೇಲೆ ನಡೆಯುವ ಎಲ್ಲ ದೌರ್ಜನ್ಯಗಳನ್ನು ಈ ಕಾನೂನುಗಳ ವ್ಯಾಪ್ತಿಗೆ ಬರುತ್ತದೆ, ಆದರೆ ಸಮಿತಿಯಲ್ಲಿ ಒಬ್ಬರೂ ಮಹಿಳೆಯರಿಲ್ಲ. ಪೊಲೀಸ್ ದೌರ್ಜನ್ಯಕ್ಕೆ ಹೆಚ್ಚು ಒಳಗಾಗಿರುವುದು ಆದಿವಾಸಿಗಳು, ದಲಿತರು ಮತ್ತು ಮುಸಲ್ಮಾನರು. ಆದರೆ ಈ ಸಮುದಾಯದವರು ಒಬ್ಬರೂ ಇಲ್ಲವೇಕೆ? ಲೈಂಗಿಕ ಹಾಗು ಲಿಂಗತ್ವ ಅಲ್ಪಸಂಖ್ಯಾತರು ಸಹ ಈ ದೇಶದ ಪೊಲೀಸ್ ದೌರ್ಜನ್ಯಕ್ಕೆ ಹಾಗು ಶೋಷಣೆಗೆ ಒಳಗಾಗಿದ್ದಾರೆ. ಈ ಸಮುದಾಯದಿಂದಲೂ ಸಹ ಪ್ರತಿನಿಧಿ ಯಾರಿಲ್ಲ.

ಇಷ್ಟಲ್ಲದೆ, ಈ ಕಾಯ್ದೆಯಡಿ ಪ್ರಕರಣಗಳ ವಿಚಾರಣೆ ನಡೆಯುವ ಟ್ರಯಲ್ ನ್ಯಾಯಾಲಯಗಳಲ್ಲಿ ಪ್ರತಿಪಾದಿಸುವ ವಕೀಲರೇ ಇಲ್ಲ! ಯಾರು ಈ ಕಾನೂನುಗಳನ್ನು ದಿನಬೆಳಗಾದರೆ ಉಪಯೋಗಿಸುತ್ತಾರೋ ಆ ವಕೀಲರೆ ಈ ಸಮಿತಿಯಲ್ಲಿಲ್ಲ! ಬಹುಮುಖ್ಯವಾಗಿ, ದಿಲ್ಲಿ ಬಿಟ್ಟು ಬೇರೆ ಯಾವ ಊರಿನವರೂ ಈ ಸಮಿತಿಯಲ್ಲಿಲ್ಲ! ದೇಶದ ಪ್ರತಿ ನಗರಕ್ಕೆ ಹಳ್ಳಿಗೆ ಅನ್ವಯವಾಗುವ ಕಾನೂನುಗಳನ್ನು ಕೇವಲ ದಿಲ್ಲಿ ಏಕೆ ತೀರ್ಮಾನಿಸಬೇಕು? ದೇಶದ ಫೆಡರೆಲಿಸ್ಮ್ (ಒಕ್ಕೂಟ ವ್ಯವಸ್ಥೆ) ಅನ್ನು ಹಂತಹಂತವಾಗಿ ಕೇಂದ್ರ ಸರ್ಕಾರ ನಾಶ ಮಾಡುತ್ತಿದೆ ಅನ್ನುವುದಕ್ಕೆ ಇದು ಇನ್ನೊಂದು ತಾಜಾ ಉದಾಹರಣೆ.

ಸಮಿತಿಯ ಸದಸ್ಯತ್ವದಲ್ಲಿ ಪ್ರಾತಿನಿಧಿತ್ವ ಸರಿ ಇಲ್ಲದಿರುವ ಲೋಪದ ಬಗ್ಗೆ ಮಹಿಳಾ ವಕೀಲರ ಮನವಿಯಲ್ಲಿ ಹೀಗೆ ಹೇಳಿದ್ದಾರೆ:

“ಸಮಿತಿಯ ಪ್ರಶ್ನಾವಳಿಯ ಹೆಚ್ಚಿನ ಭಾಗವನ್ನು ನಿರ್ದಿಷ್ಟವಾಗಿ ಲೈಂಗಿಕ ಅಪರಾಧಗಳ ಸುಧಾರಣೆಗೆ ಮೀಸಲಿಟ್ಟಾಗ, ಸಮಿತಿಯಲ್ಲಿ ಅಪರಾಧ ಕಾನೂನಿನ ಪ್ರಕರಣಗಳನ್ನು ಪ್ರತಿಪಾದಿಸುವ ಮಹಿಳಾ ವಕೀಲರನ್ನೆ ಸೇರಿಸದೇ ಇರುವುದು ನಮಗೆ ಅಸಂಬದ್ಧವಾಗಿ ಕಂಡಿದೆ. ಸಮಿತಿಯಲ್ಲಿ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಸೇರಿಸದೆ ಗೌರವ ಹತ್ಯೆ ಅಥವ ಮಾಬ್ ಲಿಂಚಿಂಗ್ ಅನ್ನು ಅಪರಾಧೀಕರಿಸುವ ಕುರಿತು ಚರ್ಚೆ ಅರ್ಥಪೂರ್ಣವಾಗಬಹುದೆ? ಇವು ಕೇವಲ ಕೆಲವು ಉದಾಹರಣೆಗಳು. ನಾವು ಒತ್ತಿಹೇಳುವುದೇನೆಂದರೆ, ಕಾನೂನಿನ ಸುಧಾರಣೆಯ ಪ್ರತ್ರಿಯೆ ಪ್ರಜಾಸತ್ತಾತ್ಮಕವಾಗಿ ಸಂಪೂರ್ಣವಾಗಿರಬೇಕಾದರೆ ಬಹುತ್ವ ದೃಷ್ಟಿಕೋನಗಳು ಹಾಗು ಸುದೀರ್ಘ ಚರ್ಚೆ ಬೇಕಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಏಕೈಕ ಮಾರ್ಗವೆಂದರೆ ವೈವಿಧ್ಯತೆ ಮತ್ತು ಸಮರ್ಪಕ ಪ್ರತಿನಿಧಿತ್ವವನ್ನು ಖಚಿತಪಡಿಸುವುದು.”

ಅಲ್ಲದೆ ಸಂಪೂರ್ಣ ಪ್ರಕ್ರಿಯೆ ಇಂಗ್ಲಿಷ್ ಭಾಷೆಯಲ್ಲಿ ಮತ್ತು ಆನಲೈನ್‍ನಲ್ಲಿ ನಡೆಯುತ್ತದೆ. ಹೀಗಾದರೆ ಎಲ್ಲರ ಭಾಗವಹಿಸುವಿಕೆ ಖಚಿತಪಡಿಸುವುದು ಹೇಗೆ ಸಾಧ್ಯ? ಅಪರಾಧಿ ಕಾನೂನು ಜಾರಿಗೆ ತರುವುದರಲ್ಲಿ ಅಥವಾ ಅದರ ಅಡಿ ಬರುವ ಅಪರಾಧಿಗಳ ಹಕ್ಕುಗಳನ್ನು ಕಾಪಾಡುವುದರಲ್ಲಿ, ರಾಜಧಾನಿಗಳಲ್ಲಿ ಒಂದು ರೀತಿಯ ಸಮಸ್ಯೆಗಳಿದ್ದರೆ ದೂರದ ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆಗಳು ಇರುತ್ತವೆ. ಭಾರತದ ಪಟ್ಟಣಗಳಲ್ಲಿ ಪ್ರತಿಪಾದಿಸುವ ಅನೇಕ ವಕೀಲರಿಗೆ ಇಂಗ್ಲಿಷ್ ಭಾಷೆಯನ್ನು ಉಪಯೋಗಿಸುವುದು ಕಷ್ಟ. ಅವರ ಭಾಗವಹಿಸಿಕೆಯನ್ನು ಖಚಿತಪಡಿಸುವುದು ಹೇಗೆ? ದೇಶದ ಬಹುಪಾಲು ಜನರಿಗೆ ಇಂಗ್ಲಿಷ್ ಬರುವುದಿಲ್ಲ, ಇಂಟರ್ನೆಟ್ ಉಪಯೋಗಿಸಲು ಸಾಧ್ಯವಿಲ್ಲ. ಇದು ಅವರನ್ನು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಡ್ಡಿಪಡಿಸುತ್ತಿದೆ.

ಈ ಇಡೀ ಪ್ರಕ್ರಿಯೆಯಲ್ಲಿರುವ ಸಮಸ್ಯೆಗಳ ಬಗ್ಗೆ ಹಲವು ಮನವಿಗಳನ್ನು ಸಮಿತಿಗೆ ಸಲ್ಲಿಸಲಾಗಿದೆ, ಅದರಲ್ಲಿ ಕೆಲವು ಅಂಶಗಳಿಗೆ ಸಮಿತಿ ಉತ್ತರಿಸಿದೆ. ಆದರೆ ಆ ಉತ್ತರಗಳು ಇನ್ನೂ ಹೆಚ್ಚು ಆತಂಕಗಳನ್ನು ಸೃಷ್ಟಿಸಿದೆ. ಸಮಿತಿಯನ್ನು ರಚನೆ ಮಾಡಿದ್ದು ಅಮಿತ್ ಶಾರ ಕೆಳಗೆ ಕೆಲಸ ಮಾಡುವ ಗೃಹ ಸಚಿವಾಲಯ. ಸಮಿತಿಗೆ ಸಚಿವಾಲಯದಿಂದ ಸ್ವಾತಂತ್ರವಿಧೆಯೆ, ಸಮಿತಿಯ ವರದಿಯನ್ನು ಸಚಿವಾಲಯದೊಂದಿಗೆ ಜಂಟಿಯಾಗಿ ತಯಾರಿಸಲ್ಪಡುವುದೇ ಎನ್ನುವ ಪ್ರಶ್ನೆಗೆ ಸಮಿತಿ ಉತ್ತರಿಸಲೇ ಇಲ್ಲ! ಅಲ್ಲದೆ, ಸಮಿತಿಗೆ ಸರ್ಕಾರ ನೀಡಿರುವ ಟರ್ಮ್ಸ್ ಆಫ್ ರೆಫೆರೆನ್ಸ್ ಅನ್ನೂ ಸಾರ್ವಜನಿಕಗೊಳಿಸಿಲ್ಲ!

ಹಾಗಾಗಿ ಈ ಪ್ರಕ್ರಿಯೆಯನ್ನು ಕೂಡಲೆ ಕೈಬಿಡಬೇಕೆಂದು ದೇಶದ ಪ್ರಜ್ಞಾವಂತರ ಕೂಗಾಗಿದೆ. ಕೋವಿಡ್ ಸೋಂಕಿನ ಬಿಕ್ಕಟ್ಟನ್ನು ದಾಟಿದ ನಂತರ, ಪಾರದರ್ಶಕವಾಗಿ, ದೇಶದ ಸಾಮಾಜಿಕ ವೈವಿಧ್ಯತೆಯನ್ನು ಅರ್ಥಪೂರ್ಣವಾಗಿ ಪ್ರತಿನಿಧಿಸುವ ಹಾಗು ಸುದೀರ್ಘ, ಸಮರ್ಪಕ ಚರ್ಚೆಗೆ ಅವಕಾಶ ಉಳ್ಳಂತಹ ಪ್ರಕ್ರಿಯೆಯನ್ನು ಕೈಗೊಳ್ಳಬಹುದಲ್ಲ ಎಂದು ಅನೇಕರ ವಾದ.

ಸಮಾಜದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಈ ಪ್ರಕ್ರಿಯೆ ಬಗ್ಗೆ ಗಮನ ವಹಿಸಬೇಕಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಕಾರ್ಖಾನೆಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಧರಣಿ ಮಾಡಿದಾಗ ಪೊಲೀಸರು ಪ್ರಕರಣವನ್ನು ದಾಖಲಿಸುವುದು ಕಾರ್ಮಿಕರ ಮೇಲೆ; ದಲಿತ ಯುವಕರ ಮೇಲೆ ಹಲ್ಲೆ ಆದಾಗ ಅವರನ್ನು ರಾಜಿ ಮಾಡಿಸಲು ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತದೆ; ಸರ್ಕಾರ ತನ್ನ ವೈಫಲ್ಯತೆಯಿಂದ ಜನರ ಗಮನ ಸೆಳೆಯಲು ಒಮ್ಮೊಮ್ಮೆ ಮುಸಲ್ಮಾನರ ಮೇಲೆ ಸುಳ್ಳ ಪ್ರಕರಣ ದಾಖಲಿಸುತ್ತದೆ.

ಹೀಗೆ ಅಪರಾಧಿ ಕಾನೂನು ಅನ್ನೋದು ಎಲ್ಲರ ಜೀವನವನ್ನು ತಟ್ಟುತ್ತದೆ. ಅದನ್ನು ಅಮಿತ್ ಶಾ ನೇತೃತ್ವದ ಸಚಿವಾಲಯ ತಿದ್ದುಪಡಿ ಮಾಡಲು ಹೊರಟಿದೆ ಎಂದರೆ ಅದು ಜನಪರವಾದೀತೆ? ಹತ್ತಾರು ವರ್ಷಗಳ, ನೂರಾರು ಜನರ ಶ್ರಮದಿಂದ, ಸಾವಿರಾರು ಸಭೆಗಳ ಮೂಲಕ ರಚನೆಯಾದ ಈ ಕಾನೂನಿನ ಮೂಲ ಅಂಶಗಳನ್ನು ಈ ಸಮಿತಿಯಲ್ಲಿರುವ 5 ದಿಲ್ಲಿಯ ಸವರ್ಣೀಯ ಪುರುಷರಿಗೆ ತಿದ್ದುಪಡಿ ಮಾಡಲು ಬಿಟ್ಟರೆ, ನಮ್ಮ ಸ್ವಾತಂತ್ರವನ್ನು, ನಮ್ಮ ಸಂವಿಧಾನಿಕ ಹಕ್ಕುಗಳನ್ನು ನಾವೆ ಅಡವಿಟ್ಟು ಕೈಬಿಟ್ಟಂತಾಗುತ್ತದೆ.

-ವಿನಯ್ ಕೂರಗಾಯಲ ಶ್ರೀನಿವಾಸ ( ಲೇಖಕರು ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು)


ಓದಿ:

ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈ ಲೇಖನವನ್ನು ಡಾಬಸ್ಪೇಟೆ ವಾಯ್ಸ್ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿಸಬೇಕಾಗಿ ವಿನಂತಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...