Homeಅಂಕಣಗಳುಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

- Advertisement -
- Advertisement -

ನಾವು ಸಣ್ಣವರಿದ್ದಾಗ ದೊಡ್ಡವರೆಲ್ಲಾ ಫೈವ್ ಎನ್.ಪಿ, ಟೆನ್ ಎನ್.ಪಿ ಅಂತ ಮಾತಾಡ್ತಿದ್ದರು. ಹಂಗಂದರ ನಯಾ ಪೈಸಾ. ಅದು ಆಣೆ – ಬಿಲ್ಲಿ ಲೆಕ್ಕ ಎಲ್ಲ ಹೋಗಿ ಪೈಸಾ ಬಂದಿದ್ದ ಕಾಲ.

ಅದು ಹಳೇದು ಆತು. ಈಗ ಬಂದಿರೋದು ಎನ್.ಇ.ಪಿ. ಅದು ಒಂದು ಥರ ಆಣೆ – ಬಿಲ್ಲಿ ಲೆಕ್ಕ ಹೋಗಿ ನಯಾ ಪೈಸಾ ಬಂದಂಗ. ಈ ಎನ್.ಇ.ಪಿ ಎನಪಾ ಅಂದ್ರ ಅದು ಹೊಸ ಶಿಕ್ಷಣ ನೀತಿ.

ನೀವು ಇಷ್ಟು ದಿವಸ ಬಹಳ ನೀತಿ- ನಿಯಮ ನೋಡಿರಬಹುಡು. ಅವುಕುರ ಹಣೆಬರಹ ಅಷ್ಟ.

ನೀತಿ ನಿಯಮಗಳು ಬರೇ ಕಾಗದದಾಗ ಇರಬೇಕು, ಜಾರಿಗೆ ಮಾತ್ರ ಬರೋದಿಲ್ಲ ಅಂತ ನೀವು ಏನರ ತಿಳ್ಕೊಂಡಿರಬಹುದು. ಅದು ಗಾಡಿ ಓಡಿಸೋವಾಗ ಎಡಗಡೆಯಿಂದ ಮುಂದಕ್ಕ ಹೋಗಬಾರದು ಅನ್ನೋ ಸರಳ ನಿಯಮ ಇರಬಹುದು ಅಥವಾ ಅಭಯಾರಣ್ಯದಾಗಿನ ಹುಲಿ- ಸಿಂಹ ಎಲ್ಲ ಕೊಂದು ಕಾರಖಾನಿ ಮಾಲೀಕರಿಗೆ ಕೊಡಬಾರದು ಅನ್ನೋ ಸಹಜ ನೀತಿ ಇರಲಿ, ಎಲ್ಲಾನೂ ಮುರಿಯಬಹುದು. ನೀತಿ ನಿಯಮದ ವಿಷಯಕ್ಕ ಬಂದರ ನಮಗ ಪ್ರತಿ ದಿನಾನು ದಸರಾ. ಪ್ರತಿ ಸಂಜೆ ಸೀಮೋಲ್ಲಂಘನ. ಈ ವಿಷಯಕ್ಕ ಬಂದರ ನಾವು ಮಹಿಷ ಕುಲದವರು.

ನಾವು ಧಾರವಾಡದ ಹತ್ತರ ಎಮ್ಮಿಗನೂರಿನ ನಾಡಹಬ್ಬ ಮಾಡಲಿ, ಮಂಡ್ಯದ ಹತ್ತರ ಮಹಿಷಾಸುರ ಊರಿನೊಳಗ ಚಾಮುಂಡಿ ಬೆಟ್ಟದ ಹತ್ತರ ದಸರಾ ಆಚರಿಸಲಿ, ಅದಕ್ಕ ಭಾಳ ವ್ಯತ್ಯಾಸ ಏನೂ ಇಲ್ಲ.

ಈಗ ನೋಡ್ರಿಪಾ, ಆ ನೀತಿ ಕೇಂದ್ರ ಸಚಿವ ಸಂಪುಟದಾಗ ಪಾಸು ಆಗಿ ಮೂರು ದಿವಸ ಆದ ಮ್ಯಾಲೆ ಅದನ್ನ ಕೇಂದ್ರ ಶಿಕ್ಷಣ ಇಲಾಖೆ ಜಾಲತಾಣದಾಗ ಬಿಟ್ಟಾರೂ. ಅದು ಸುಮಾರು 70 ಪುಟ ಐತಿ. ಅದರವು ಕೆಲವು ಪೇಜು ಅಷ್ಟ ನೋಡೋಣ.

ಮೊದಲಿಗೆ ಅದರಾಗ ಛಲೋ ಏನ ಐತಿ ಅನ್ನೋದು ನೋಡೋಣು. ಮೊದಲಿಗೆ, ಸಾಧ್ಯವಾದಷ್ಟು ಮಟ್ಟಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಅಂತ ಒಂದು ಮಾತು ಐತಿ.

ಇದು ಈಗ ಸದ್ಯ ಚಾಲ್ತಿ ಇರೋ ಆಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಪ್ರಕರಣದಾಗ ಸುಪ್ರೀಂ ಕೋರ್ಟು 2013ದೊಳಗ ನೀಡಿದ ತೀರ್ಪಿನ ವಿರುದ್ಧ ಐತಿ. ಯಾರಾದರೂ ಅದನ್ನು ಪ್ರಶ್ನಿಸಿದರ, ದೆಹಲಿಯೊಳಗಿನ ನಮ್ಮ ಲಾರ್ಡ್‍ಗಳು ನ್ಯಾಯಾಲಯದ ಲಾರ್ಡ್‍ಗಳನ್ನು ಹೆಂಗ ಒಪ್ಪಿಸತಾರ ನೋಡಬೇಕು.

ಎರಡನೇದು, ನಮ್ಮಂತಹ ಡ್ರಾಪ್‍ಔಟ್‍ಗಳು ಕಾಲೇಜು ಬಿಟ್ಟು ಹೋಗಿ ಹತ್ತು ವರ್ಷ ಆದ ಮ್ಯಾಲೆ ಮತ್ತ ಓದಬೇಕು ಅಂತ ಅನ್ನಿಸಿದರ ವಾಪಸ್ ಕಾಲೇಜಿಗೆ ಬಂದು ಎಲ್ಲಿಗೆ ಬಿಟ್ಟಿದ್ದಾರೋ ಅಲ್ಲಿಂದ ಶುರು ಮಾಡಬಹುದು.

ಮೂರನೇದು `ರೀಕಾಗ್ನಿಷನ್ ಆಫ್ ಪ್ರಯರ್ ಲರನಿಂಗ್’ ಅಂದ್ರ ಮುಂಚಿನ ಕಲಿಕೆಯನ್ನು ಗುರುತಿಸುವುದು ಅನ್ನೋ ಯೋಜನೆ ಒಳಗ, ಪ್ರಾಥಮಿಕ ಶಿಕ್ಷಣದ ನಂತರ ವಿದ್ಯಾರ್ಥಿಗಳು ಕರಕುಶಲ ಕಲೆ, ವೃತ್ತಿ ಶಿಕ್ಷಣ ಹಾಗೂ ಉದ್ಯೋಗ ಆಧಾರಿತ ಶಿಕ್ಷಣದ ತರಬೇತಿ ತೊಗೋಬಹುದು.

ಇನ್ನೊಂದು ಮಜಾ ಅಂದ್ರ ಎಂ.ಫಿಲ್ ಅಂತ ಒಂದು ಯಾರಿಗೂ ಬ್ಯಾಡಾಗಿದ್ದು ಒಂದು ಕೋರ್ಸ್ ಇತ್ತು. ನಮ್ಮ ಧಾರವಾಡ ಯುನಿವರ್ಸಿಟಿ ಒಳಗ ಒಂದು ಜೋಕು ಇತ್ತು. ಕೆಲಸ ಸಿಗಲಾರದ ಗಂಡು ಮಕ್ಕಳು ಮತ್ತು ಮದುವೆ ಆಗಲಾರದ ಹೆಣ್ಣು ಮಕ್ಕಳು ಸೇರಿಕೊಳ್ಳುವಂತಹ ಯಾವುದಾದರೂ ಕೋರ್ಸ್ ಇತ್ತು ಅಂದ್ರ ಅದು ಎಂ.ಫಿಲ್ ಅಂತ. ಆನಂತರ ನಮ್ಮ ಬಾಗಲಕೋಟೆಯ ಬಜರಂಗಿ ಭಾಯಿಜಾನ ಅರವಿಂದ್ ಲಿಂಬಾವಳಿ ಅವರು ಸಚಿವರಾದ ಮೇಲೆ ಅದನ್ನ ಸರ್ಕಾರಿ ಅಧ್ಯಾಪಕರ ನೇಮಕಾತಿಗೆ ಕಡ್ಡಾಯ ಮಾಡಿದರು. ಹಂಗ ಮಾಡಿದ ಮ್ಯಾಲೆ ನಮ್ಮ ಊರಾಗ ಟೂ ಮಿನಿಟ್ ಮ್ಯಾಗಿ ಮಾಡಿಕೊಂಡು ಇದ್ದ ಸಾವಿರಾರು ಡಬಲ್ ಪದವೀಧರರು ತಮಿಳುನಾಡು- ಒರಿಸ್ಸಾ – ಆಂಧ್ರ- ಗುಜರಾತಿನ ನೂರಾರು ಯೂನಿವರ್ಸಿಟಿಗಳಲ್ಲಿ ಧಿಡೀರ ಎಂ.ಫಿಲ್ ಮಾಡಿಬಿಟ್ಟರು. ಅಷ್ಟೊಂದು ಓದಿದವರಿಗೆ ಹೆಣ್ಣು ಹುಡುಕುವುದು ಕಷ್ಟ ಆಯಿತು. ಎಲ್ಲಿಂದ ಎಂ.ಫಿಲ್ ಮಾಡಿದಿರೋ ಅಲ್ಲಿಂದನ ಹೆಣ್ಣು ತರಬೇಕಾಗಿತ್ತು ಅಂತ ಹಿರೇರು ಹೇಳೋ ಪರಿಸ್ಥಿತಿ ಬಂತು.

ಈ ಎಂ.ಫಿಲ್‍ಅನ್ನ ರದ್ದು ಮಾಡರಿ ಅಂತ ಎನ್.ಇ.ಪಿದಾಗ ಒಂದು ಶಿಫಾರಸು ಐತಿ. ಇದಕ್ಕೂ ಒಂದು ವೆಲ್‍ಕಂ ಇರಲಿ.

ಡಿಗ್ರಿ ಮೂರು ವರ್ಷ ಹೋಗಿ ನಾಕು ಮಾಡಿದಾರು. ಒಂದು ವರ್ಷ ಓದಿದರ ಪ್ರಮಾಣ ಪತ್ರ, ಎರಡು ಓದಿದರ ಡಿಪ್ಲೋಮಾ, ಮೂರು ಓದಿದರ ಡಿಗ್ರಿ, ಹಾಗೂ ನಾಕು ಓದಿದರ ಮಾಸ್ಟರ್ ಡಿಗ್ರಿ ಅಂತ ಐತಿ. ಇನ್ನೊಂದು ವರ್ಷ ಓದರಿ, ನೌಕರಿ ಕೊಡ್ತೇವಿ ಅಂತ ಇರಬೇಕಾಗಿತ್ತು. ಆದರ ಹಂಗ ಇಲ್ಲ.

ಅಮೆರಿಕ – ಯುರೋಪಿನ ಪದ್ಧತಿಯಂತೆ ನಾಕು ವರ್ಷ ಡಿಗ್ರಿ, ಆನಂತರ ನೇರವಾಗಿ ಪಿ. ಎಚ್ ಡಿ. ಅಂತ ನಿಯಮ ಮಾಡಿದಾರು. ಹಂಗಾರ ಎಂಎ, ಎಂ ಕಾಂ, ಎಂಎಸ್ಸಿ ಕಲಿಸಿಗೋತ ನೂರಾರು ಎಕರೆ ಕ್ಯಾಂಪಸ್ಸುದೊಳಗ ಎರಡೂವರೆ ಎಕರೆ ಸರಕಾರಿ ಮನೆ ಒಳಗ ಇರೋ ಯೂಜಿಸಿ ಸಂಬಳದ ಪ್ರೊ.ಲಕ್ಷ್ಮೀಪತಿ ಅವರು ಮುಂದ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಇಲ್ಲ.

ಸರಕಾರಿ ಸಾಲಿ ಒಳಗ ಮೂರನೇ ವರ್ಷದಿಂದ ಮಕ್ಕಳಿಗೆ ಪ್ರವೇಶ ಕೊಡರಿ ಅಂತ ಹೇಳಿದಾರ. ಅದರ ಅದಕ್ಕ ತಕ್ಕ ತರಬೇತಿ, ಮೂಲ ಸೌಕರ್ಯ ಮುಂತಾದರ ಮಾತು ಇಲ್ಲ.

ಎಲ್ಲ ರೀತಿಯ ಉನ್ನತ ಶಿಕ್ಷಣದ ಮೂಗುದಾರ ಹಿಡಿಯಲಿಕ್ಕೆ ಒಂದೇ ಸಂಸ್ಥೆ ಮಾಡ್ತೇವಿ ಅಂತ ಘೋಷಣೆ ಹಾಕಿದಾರು. ಯುಜಿಸಿ, ಎ.ಐ.ಸಿ.ಟಿ.ಇ., ಕೃಷಿ ಶಿಕ್ಷಣ ಪರಿಷತ್ತು, ಮುಂತಾದಾವೆಲ್ಲ ಸೇರಿಸಿ ಒಂದ ಸಂಘಟನೆ ಆಗೋ ವಿಚಾರ ಐತಿ. ಇದು ಒಂದು ಲೆಕ್ಕದಾಗ ಅಪಾಯಕಾರಿ. ಸರಕಾರಿ ಸಂಘಟೆನೆಗಳಿಗೆ ಸಾಮಾನ್ಯವಾಗಿ ರಾಜಕೀಯ ನೇಮಕಾತಿ ಆಗತದ. ಅದರಗೂ ಆಳುವ ಪಕ್ಷದವರು, ಬರೆ ಸಿದ್ಧಾಂತದ ಆಧಾರದ ಮೇಲೆ ನೇಮಕ ಆಗತಾರ. ಏನರ ಓದಿದವರು, ರಾಜಕೀಯ ಕಾರಣಕ್ಕಾಗಿ ಇದರಾಗ ಸೇರಿಕೊಂಡು ಏನೇನರ ಬದಲಾವಣೆ ಮಾಡಲಿಕ್ಕ ಹತ್ತಿದರ ಏನು ಕತಿ?

ಇನ್ನ ಹಳ್ಳಿಯ ಸಣ್ಣ ಶಾಲೆಗಳನ್ನ ಬಂದು ಮಾಡಿ 5-10 ಕಿಲೋಮೀಟರು ಅಂತರದಾಗ ದೊಡ್ಡ ಶಾಲೆ ತಗಿಬೇಕು ಅಂತ ಇದರಾಗ ಒಂದು ಉದ್ಧಘೋಷ ಐತಿ. ಇದು ಖಂಡಿತ ಅಡ್ಡಡ್ಡ ಪರಿಣಾಮ ಬೀರತೇತಿ. ಈಗ ಪ್ರಾಥಮಿಕ ಶಾಲೆಗಳು ಒಂದು ಕಿಲೋಮೀಟರು ಅಂತರದೊಳಗ ಇರಬೇಕು ಅಂತ ಐತಿ. ಇದನ್ನ ತಗದು ಹತ್ತು ಕಿಲೋಮೀಟರು ಅಂತರ ಮಾಡಿದರ ಅದರ ದುಷ್ಪರಿಣಾಮ ಹತ್ತು ಪಟ್ಟುಗಿಂತ ಜಾಸ್ತಿ ಆಗತದ ಅಂತ ಒಂದು ಅಂದಾಜು.

ಸಾವಿರಾರು ವರ್ಷದಿಂದ ಶಿಕ್ಷಣದಿಂದ ದೂರ ಉಳಿದ ಸಮುದಾಯಗಳು ಇವತ್ತು ಸಾಲಿ ಮೆಟ್ಟಲ ಹತ್ತಲಿಕ್ಕೆ ಸಾಧ್ಯ ಆಗಿದ್ದು ಈ ಒಂದು ಕಿಲೋಮೀಟರು ಅಂತರದ ಕಾನೂನಿನಿಂದನ. ಇದು ದೊಡ್ಡವರಿಗೆ ತಿಳಿಯದೇ ಇರಲಿಕ್ಕೆ ಸಾಧ್ಯ ಇಲ್ಲ.

ಈ ಜಿ.ಇ.ಆರ್ ಅಂತ ಒಂದು ಐತಿ. ಅದು ಎಂ.ಜಿ.ಆರ್, ಎನ್.ಟಿ.ಆರ್‍ರಷ್ಟು ಜನಪ್ರಿಯ ಅಲ್ಲ. ಚಾಲ್ತಿ ಒಳಗೂ ಇಲ್ಲ. ಅದು ಏನಪ ಅಂದ್ರ ನಿಮ್ಮ ಊರಾಗ ಒಂದು ನೂರು ಹುಡುಗರು ಒಂದನೇ ತರಗತಿಗೆ ಸಾಲಿಗೆ ಹೋದರ ಆದರಾಗ ಎಷ್ಟು ಮಂದಿ ಯುನಿವರ್ಸಿಟಿಗೆ ಹೋಗತಾರ ಅನ್ನೋ ಲೆಕ್ಕ.

ಅದು ಈಗ ದಕ್ಷಿಣ ಭಾರತದಾಗ ಸುಮಾರು 30-50ರ ಒಳಗ ಐತಿ. ಉತ್ತರ ಹಿಂದೂಸ್ತಾನದಾಗ 5-25 ರವರೆಗೂ ಐತಿ. ಈ ಹಿನ್ನೆಲೆಯೊಳಗ 2035 ರವರೆಗೆ ಸಮಗ್ರ ಭಾರತ ರಾಷ್ಟ್ರದ ಸರಾಸರಿ ಜಿ.ಇ.ಆರ್ ಅನ್ನು 50 ಮಾಡಬೇಕು ಅಂತ ಎನ್.ಇ.ಪಿ ಒಳಗ ಐತಿ.

ಅದರ ಅದನ್ನ ಹೆಂಗ ಮಾಡಬೇಕು ಅನ್ನೋ ಮಾತು ಇದರಾಗ ಇಲ್ಲ. ಈಗ ದೇಶದ ತಲಾ ಉತ್ಪನ್ನದ ಶೇಕಡಾ 2-4 ರ ಒಳಗ ಇರೋ ಬಾಬತ್ತು 4-8 ಆಗಬೇಕು ಅನ್ನೋ ಮಾತು ಇಲ್ಲ. ಇದು ಹೆಂಗ ಅಂದ್ರ ಮನಿಗ ಹಾಲು, ಸಕ್ಕರಿ, ಶಾವಿಗೆ ತಂದು ಕೊಡಲಾರದ ಗಂಡ `ನಾಳೆ ಪಾಯಸ ಮಾಡು ಇಲ್ಲಾಂದರ ಬಡಿತೇನಿ’ ಅಂತ ಹೆಂಡತಿಗೆ ಹೇಳಿದ ಹಂಗ.

ಇನ್ನ ಖಾಸಗಿ ಸಹಭಾಗಿತ್ವದ ಮಾತಿಗೆ ಬರೋಣ. ಖಾಸಗಿ ಕ್ಷೇತ್ರ ಸರಕಾರದ ಭಾರ ಹಂಚಿಕೊಳ್ಳಬೇಕು. ಬಡವರಿಗೆ ಹೊರೆ ಆಗದಂತೆ ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು ಅಂತ ಇದಾರಗ ಒಂದು ಫರಮಾನು ಐತಿ.

ಸರಕಾರಿ ಹಾಗೂ ಖಾಸಗಿ ಶಾಲೆ- ಕಾಲೇಜುಗಳಿಗೆ ಒಂದೇ ಮಾನದಂಡ. ಅವಕ್ಕೆ ಒಂದೇ ನಿಗರಾಣಿ ಸಂಸ್ಥೆ ಅಂತ ಒಂದು ಶೀಲಾಲೇಖ ಐತಿ. ಕಲ್ಲಿನ ಮ್ಯಾಲೆ ಬರದ ಮಾತು ಸುಳ್ಳು ಆಗತದ? ಇಲ್ಲ. ಆ ನಿಗರಾಣಿ ಸಂಸ್ಥೆಯೊಳಗ ನಮ್ಮ ನಿರಾಣಿ ಸಾಹೇಬರು ಅಥವಾ ಅಂತವರು ಸೇರಿಕೊಂಡರ ಮುಂದ ಏನು?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

ಹಿಂದ ಟಿ.ಎಂ.ಎ. ಪೈ ಪ್ರಕರಣದಾಗ ನ್ಯಾಯಾಧೀಶರು `ಯೋಗ್ಯ ಲಾಭ’ ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅದನ್ನು ಕೇಂದ್ರ ಸರಕಾರ 2020 ರೊಳಗ ಅಫಿಶಿಯಲ್ ನೀತಿಯನ್ನಾಗಿ ಪ್ರಕಟಮಾಡಿತು.

ನಮ್ಮ ಪಂಥ ಪ್ರಧಾನ ಸೇವಕರು ಈ ನೀತಿ ನೌಕರಿ ಹುಡುಕುವರನ್ನು ಹುಟ್ಟು ಹಾಕುವುದಿಲ್ಲ. ನೌಕರಿ ಸೃಷ್ಟಿ ಮಾಡುವರನ್ನು ತಯಾರಿಸುತ್ತಾದೆ ಅಂತ ಹೇಳಿದಾರು. ಎಂಥ ಗಹನವಾದ ವಿಷಯಗಳನ್ನು ಅವರು ಎಷ್ಟು ಸರಳವಾದ ಭಾಷೆಯೊಳಗ ತಿಳಿ ಹೇಳತಾರ. ಮತ್ತು ಅದನ್ನ ಕೇಳಿಸಿಕೊಂಡವರು ಹೂಂ ಅಂತ ತಲೆದೂಗಿ ಚಪ್ಪಾಳೆ ತಟ್ಟಿ ವ್ಹಾ ವ್ಹಾ ಅಂತಾರ. ಈ ಗಹನವಾದ ಆಡಳಿತ ನೀತಿಯನ್ನು ಮೊದಲು ನಾವು ತಿಳಿದುಕೊಳ್ಳಬೇಕು.


ಇದನ್ನು ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...