ಇಂದು ಭಾರತವು ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ”ನಮಗೆ ಸ್ವಾತಂತ್ರ್ಯವೇನೋ ಸಿಕ್ಕಿತ್ತು, ಆದರೆ ನಮ್ಮ ಸ್ವಾಯುತ್ತತೆ ಕಳೆದುಹೋಯಿತು” ಎಂದು ಕನ್ನಡಿಗರು ಕೂಗು ಹಾಕಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಕೊಡದ, ಕಾಯ್ದೆ ಕಾನೂನುಗಳನ್ನು ಸ್ಥಳೀಯ ಭಾಷೆಯಲ್ಲಿ ಒದಗಿಸದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡಿಗರು, ಹಿಂದಿ ಹೇರಿಕೆಯ ವಿರುದ್ಧ ಕಿಡಿಕಾರಿದ್ದಾರೆ.
ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಆರಂಭವಾಗಿರುವ ಸ್ವಾತಂತ್ರ ಬಂತು ಸ್ವಾಯತ್ತತೆ ಹೋಯ್ತು ಅಭಿಯಾನವು ಇಂದು ಸ್ವಾತಂತ್ರ್ಯ ದಿನಾಚರಣೆಯಂದು ಬಿರುಸು ಪಡೆದುಕೊಂಡಿದೆ. ನೂರಾರು ಕನ್ನಡಿಗರು ಕೇಂದ್ರ ಸರ್ಕಾರದ ಸ್ಥಳೀಯ ಭಾಷೆಗಳ ನಿರ್ಲಕ್ಷ್ಯವನ್ನು ಎತ್ತಿತೋರಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಕುವೆಂಪು ಮತ್ತು ಬೇಂದ್ರೆಯವರ ಹೇಳಿಕೆಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ದನೆಯೆತ್ತಲಾಗಿದೆ.
ಭಾರತ ಸರಕಾರ ಕನ್ನಡದಲ್ಲಿ ಕಾನೂನು ರೂಪಿಸುವ/ತಿದ್ದುಪಡಿ ಮಾಡುವ ಅಂಶವನ್ನು ಕನ್ನಡದಲ್ಲಿ ನೀಡದಿರಲು ಸುಪ್ರಿಂ ಕೋರ್ಟಿಗೆ ಹೋಗಿದೆ. ಇದರಿಂದ ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಾದ ಅಂಶವಿಷ್ಟೆ – ಸ್ವಾತಂತ್ರ ಬಂತು ಸ್ವಾಯತ್ತತೆ ಹೋಯ್ತು ಎಂದು ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.
ಕನ್ನಡ ನಾಡಿನಲ್ಲಿರುವ ಕೇಂದ್ರ ಸರಕಾರದ ಇಲಾಖೆಗಳಲ್ಲಿ ನಮ್ಮ ಮಂದಿ ಮುಂಬಡ್ತಿ ಪಡೆಯಲು, ದಿನಕ್ಕೊಂದು ಹಿಂದಿ ಪದ ಕಲಿಯಬೇಕು, ಹಿಂದಿಯಲ್ಲಿ ಸಹಿ ಹಾಕುವುದನ್ನು ಕಲಿಯಬೇಕು, ಹಿಂದಿ ಸಪ್ತಾಹದಲ್ಲಿ ಭಾಗವಹಿಸಬೇಕು. ಇದು ವೈವಿದ್ಯತೆಯನ್ನು ಗೌರವಿಸುವ ಒಕ್ಕೂಟವೇ? ಇದು ನಮಗೆ ಸ್ವಾತಂತ್ರದಿಂದ ಸಿಕ್ಕ ಉಡುಗೊರೆಯೇ? ಎಂದು ಮಲ್ಲಿಕಾರ್ಜುನ್ ಎಂಬುವವರು ಪ್ರಶ್ನಿಸಿದ್ದಾರೆ.
ನಮ್ಮ ಹಕ್ಕಿನ ಅರಿವಿನ ಅಭಿಯಾನ ಇದು.
ಭಾಷಾ ಹಕ್ಕು ,ಕೆಲಸದ ಹಕ್ಕು , ಆರ್ಥಿಕ ಹಕ್ಕು , ಅಧಿಕಾರದ ಹಕ್ಕು ಕಳೆದುಕೊಂಡಿರುವ ಸ್ವಾತಂತ್ರ್ಯಕ್ಕೆ ಎಷ್ಟು ತೂಕ ಇದೆ ಈಗ?ನಮ್ಮ ಹಕ್ಕನ್ನು ಪಡೆಯಲು ಹೋರಾಟ ಮುಖ್ಯ, ಪಕ್ಷ ನಿಷ್ಠೆ ಮುಖ್ಯ ಅಲ್ಲ.
ಹಕ್ಕನ್ನು ಪಡೆಯೋಣ. ನಿಜವಾದ ಸ್ವತಂತ್ರ ಪಡೆಯೋಣ.#ಸ್ವತಂತ್ರಬಂತುಸ್ವಾಯತ್ತತೆಹೋಯ್ತು pic.twitter.com/IWGzG8s6SI— Syed Jeelan (@SyedJeelani9480) August 14, 2020
ನಮ್ಮೂರಿನ ವಿಮಾನ ನಿಲ್ದಾಣಗಳಿಗೆ ನಮಗೆ ಬೇಕಾದ ಹೆಸರಿಡುವ ಸ್ವಾತಂತ್ರ ನಮಗಿಲ್ಲ. ಕನ್ನಡಿಗರನ್ನು ದೆಹಲಿಯಿಂದ ಹಿಂದಿ ಮಂದಿ ಆಳೋದನ್ನ ಸ್ವಾತಂತ್ರ ಎನ್ನಲಾದೀತೆ ? ಕನ್ನಡಿಗರೇ, ರಾಜಕೀಯ ಸ್ವಾಯತ್ತತೆ ಇಲ್ಲದ ಸ್ವಾತಂತ್ರಕ್ಕೆ ಯಾವುದೇ ಅರ್ಥವಿಲ್ಲ ಎಂದು ಎಂ ರಾಮಚಂದ್ರರವರು ಅಭಿಪ್ರಾಯಪಟ್ಟಿದ್ದಾರೆ.
ಜಿಎಸ್ಟಿ ಒಪ್ಪಿಕೊಂಡ ದಿನವೇ ನಮ್ಮ ಹಣಕಾಸಿನ ಸ್ವಾತಂತ್ರ್ಯವನ್ನು ಕಳೆದುಕೊಂಡೆವು. ನಮ್ಮ ತೆರಿಗೆ ಹಣವನ್ನ ಡೆಲ್ಲಿಯವರಿಗೆ ಒಪ್ಪಿಸದೆ ನಮ್ಮವರ ಏಳಿಗೆಗಾಗಿ, ನಾಡಿನ ಏಳಿಗೆಗಾಗಿ ಬಳಸುವ ದಿನ ಬಂದಾಗಲೆ, ಈ ಗುಲಾಮಗಿರಿಯ ಸಂಕೋಲೆಗಳಿಂದ ಬಿಡುಗಡೆ ಎಂದು ಶೃತಿ ಎಚ್.ಎಂ ತಿಳಿಸಿದ್ದಾರೆ.
ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು
ಪಠ್ಯದಲ್ಲಿ ಭಾಷಾ ಆಯ್ಕೆಯ ಸ್ವತಂತ್ರ ನಮಗೆ ಸಿಕ್ಕಿದೆಯೆ? ನಮ್ಮ ನೆಲದಲ್ಲಿ ನಮ್ಮ ನುಡಿಯಲ್ಲಿ ಸೇವೆ ದೊರೆಯುವ ಸ್ವತಂತ್ರ ಸಿಕ್ಕಿದೆಯೆ? ಅನಾವಶ್ಯಕ ಹಿಂದಿ ಹೇರಿಕೆಯಿಂದ ಸ್ವತಂತ್ರ ಸಿಕ್ಕಿದೆಯೆ? ಹಿಂದಿಗಿರುವ ಪ್ರಾಶಸ್ತ್ಯ ಕನ್ನಡಕ್ಕೆ ಸಿಕ್ಕಿದೆಯೆ? ಎಂದು ಚೈತ್ರರವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸರ್ಕಾರ ಒಕ್ಕೂಟ ಧರ್ಮಪಾಲಿಸುತ್ತಿಲ್ಲ. ಹಿಂದಿವಾಲಾಗಳಿಗೆ ಕೇಳದೆಯೇ ಎಲ್ಲಾ ಸೇವೆಗಳು ಅವರ ಭಾಷೆಯಲ್ಲಿ ಸಿಗುತ್ತೆ. ಹಿಂದಿಯೇತರರು ಬೇಡಿಕೊಂಡರು ಅವರ ನುಡಿಯಲ್ಲಿ ಸೇವೆ ಕೊಡಲ್ಲ. ಏಕೆ ಈ ತಾರತಮ್ಯ? ಭಾರತವೆಂದರೆ ಹಿಂದಿಯೆಂದು ಪ್ರತಿಹಂತದಲ್ಲೂ ಬಿಂಬಿಸಲು ಹೊರಟಿದೆ. ಇದು ಒಕ್ಕೂಟಕ್ಕೆ ಮಾಡುವ ದ್ರೋಹವೇ ಸರಿ ಎಂದು ಕನ್ನಡಿಗ ಸಾಗರ್ ರವಿನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಸ್ವಾತಂತ್ರ್ಯ ನಮಗೆ ಕೊಡಿ.. ಸ್ವತಂತ್ರರಾಗಿದ್ದವರನ್ನ ಒಕ್ಕೂಟದಲ್ಲಿ ಕಟ್ಟಿಹಾಕಿ, ಬಂಧಿಮಾಡಿ, ಹಿಂದಿ ಹೇರಿಕೆ ಮಾಡಿ, ಎಲ್ಲವನ್ನ ಕಿತ್ತುಕೊಂಡು ಉತ್ತರದವರನ್ನು ಮಾತ್ರ ಬೆಳೆಸಿದರು. ಕನ್ನಡದೇಶದ ಜನರು ಸರ್ವಸ್ವತಂತ್ರರು. ನಮ್ಮ ಹಕ್ಕನ್ನ ನಮಗೆ ಕೊಡಿ ಎಂದು ಅಶೋಕ್ ಪೂಜಾರಿ ಮಡಿಕೇರಿ ಎಂಬುವವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಹಿಂದಿ ಹೇರಿಕೆ ಚರ್ಚೆ: ಕನಿಮೊಳಿ ಪರ ದನಿಯೆತ್ತಿದ ಎಚ್.ಡಿ ಕುಮಾರಸ್ವಾಮಿ, ಚಿದಂಬರಂ