ಕೆಂಪೆಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ನಲ್ಲಿ ಆಮ್ಲಜನಕ ವಿತರಣೆಯ ಕೊರತೆಯಿಂದ, ಕೊರೊನಾ ವೈರಸ್ ರೋಗಿಗಳು ಮತ್ತು ಆಮ್ಲಜನಕದ ಬೆಂಬಲದಲ್ಲಿರುವ ಇತರ ರೊಗಿಗಳು ಸೇರಿದಂತೆ ಸುಮಾರು 50 ರೋಗಿಗಳನ್ನು ಸೋಮವಾರ ರಾತ್ರಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.
ಸೋಮವಾರ ತಡರಾತ್ರಿ ಕಿಮ್ಸ್ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ, ಆಂಬ್ಯುಲೆನ್ಸ್ಗಳಲ್ಲಿ ರೋಗಿಗಳು ಹೋಗುತ್ತಿರುವ ವೀಡಿಯೋ ದೃಶ್ಯಗಳು ಹರಿದಾಡುತ್ತಿವೆ.
ದ್ರವ ಆಮ್ಲಜನಕ ಪೂರೈಕೆಗಾಗಿ ಇನ್ನು ಮುಂದೆ ಕಾಯುವುದಿಲ್ಲ ಮತ್ತು ರೋಗಿಗಳನ್ನು ಇತರ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಪ್ರಾರಂಭಿಸಬಹುದು ಎಂದು ಆಸ್ಪತ್ರೆಯ ಅಧಿಕಾರಿಗಳು ನಿರ್ಧರಿಸಿದ ನಂತರ ರೋಗಿಗಳನ್ನು ಸ್ಥಳಾಂತರಿಸಲು 45 ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿತ್ತು.
ಖಾಸಗಿ ಆಸ್ಪತ್ರೆ ಕಿಮ್ಸ್ನಲ್ಲಿ ಆಮ್ಲಜನಕದ ಕೊರತೆಯ ಬಗ್ಗೆ ತಿಳಿದ ಕೂಡಲೇ ಆಂಬುಲೆನ್ಸ್ ಮೂಲಕ ರೋಗಿಗಳನ್ನು ನಗರದ ವಿಕ್ಟೋರಿಯಾ, ಬೌರಿಂಗ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕಿಮ್ಸ್ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರುವುದು ನನ್ನ ಗಮನಕ್ಕೆ ಬಂದ ಕೂಡಲೇ ಹೆಚ್ಚು ರೋಗಿಗಳನ್ನು ವಿಕ್ಟೊರಿಯಾ, ಬೌರಿಂಗ್ & ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲು ಅಂಬುಲನ್ಸ್ ವ್ಯವಸ್ಥೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ 20 ಭಾರೀ ಗಾತ್ರದ ಆಕ್ಸಿಜನ್ ಸಿಲಿಂಡರ್ ಗಳನ್ನು ಕಿಮ್ಸ್ ಗೆ ಕಳುಹಿಸಲಾಗಿದೆ.
— Dr Sudhakar K (@mla_sudhakar) August 17, 2020
ಗಂಭೀರ ರೋಗಿಗಳ ಚಿಕಿತ್ಸೆಗಾಗಿ 20 ಆಕ್ಸಿಜನ್ ಸಿಲಿಂಡರ್ಗಳನ್ನು ಕಿಮ್ಸ್ ಗೆ ಕಳುಹಿಸಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಕೊರೊನಾ ಹೊಂದಿರುವವರು ಸೇರಿದಂತೆ ಸುಮಾರು 50 ರೋಗಿಗಳನ್ನು ಸ್ಥಳಾಂತರಿಸಲಾಗಿದೆ.
ಉತ್ಪಾದನಾ ಕಂಪನಿಯಿಂದ ದ್ರವ ಆಮ್ಲಜನಕದ ಕೊರತೆಯಿಂದಾಗಿ, ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಹಾಗಾಗಿ ಇತರ ಪೂರೈಕೆದಾರರಿಂದ ದ್ರವ ಆಮ್ಲಜನಕದ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ ಎಂದು ಕಿಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.
‘ಆಮ್ಲಜನಕ ಅವಲಂಬಿತ ರೋಗಿಗಳಿಗೆ ಕಡಿಮೆ ಆಮ್ಲಜನಕದ ಪರಿಮಾಣದ ಹೈಪೊಕ್ಸಿಕ್ ಬಿಕ್ಕಟ್ಟು ಸಂಭವಿಸಬಹುದು ಎಂದು ನಾವು ಊಹಿಸಿದ್ದೇವೆ. ಹಾನಿ ನಿಯಂತ್ರಣಕ್ಕಾಗಿ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಗಾಗಿ, ನಾವು ಎಲ್ಲಾ ಆಮ್ಲಜನಕ-ಅವಲಂಬಿತ ರೋಗಿಗಳನ್ನು ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಯೋಜಿಸಿದ್ದೇವೆ’ ಎಂದು ತಿಳಿಸಲಾಗಿದೆ.
“ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ತಕ್ಷಣವೇ ನಮ್ಮ ಕರೆಗೆ ಸ್ಪಂದಿಸಿದರು ಮತ್ತು ರೋಗಿಗಳ ಜೀವ ಉಳಿಸಲು ಮ್ಯಾನೇಜ್ಮೆಂಟ್ ನೊಂದಿಗೆ ಕೈಜೋಡಿಸುವ ಮೂಲಕ ನಮಗೆ ಬೆಂಬಲ ನೀಡಿದರು. ಅವರ ಸಹಕಾರಕ್ಕಾಗಿ ನಾವು ಋಣಿಯಾಗಿದ್ದೇವೆ” ಎಂದು ಅದು ಹೇಳಿದೆ.
ನೇಮಕಗೊಂಡ ಗುತ್ತಿಗೆದಾರರು ಎರಡು ದಿನಗಳಿಂದ ಆಮ್ಲಜನಕವನ್ನು ತಲುಪಿಸುವಲ್ಲಿ ವಿಫಲವಾದ ಕಾರಣ ಆಸ್ಪತ್ರೆಯ ಅಧಿಕಾರಿಗಳು ಕಳವಳಗೊಂಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಕೋವಿಡ್ ನಿಜಪರೀಕ್ಷೆ: ಖಾಸಗಿ ಆಸ್ಪತ್ರೆಗಳು ಖಳನಾಯಕರಾಗುವರೇ?