ಗುಮ್ಮಿಡಿಪೂಂಡಿಯದ ಅತ್ತುಪಾಕಂನಲ್ಲಿನ ಜಾತಿ-ತಾರತಮ್ಯದ ವಿರುದ್ಧ ವರದಿ ಮಾಡಿದ್ದಕ್ಕಾಗಿ, ಪ್ರಮುಖ ತಮಿಳು ಸುದ್ದಿ ವಾಹಿನಿಯ ಪತ್ರಕರ್ತನ ಮೇಲೆ, ಅಲ್ಲಿನ ಪಂಚಾಯಿತಿಯ ಪದಾಧಿಕಾರಿಗಳು ಮಂಗಳವಾರ ಹಲ್ಲೆ ನಡೆಸಿದ್ದಾರೆ.
ಅತ್ತುಪಾಕಂನ ಪಂಚಾಯತಿಯ ಮುಖಂಡರಾದ ಅಮೃತಂ ದಲಿತೆ ಎಂಬ ಕಾರಣಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ನೀಡಿರಲಿಲ್ಲ. ಇದರ ಕುರಿತು, ಅವರು ಎದುರಿಸುತ್ತಿರುವ ಜಾತಿ ಆಧಾರಿತ ತಾರತಮ್ಯದ ಬಗ್ಗೆ ವರದಿ ಮಾಡಲು ವರದಿಗಾರ ಸ್ಥಳಕ್ಕೆ ಭೇಟಿ ನೀಡಿದ್ದರು.
ಪುದಿಯ ತಲೈಮುರೈ ಚಾನೆಲ್ನಲ್ಲಿ ಕೆಲಸ ಮಾಡುತ್ತಿರುವ ವರದಿಗಾರ ಎಳಿಲ್ ತನ್ನನ್ನು ಪರಿಚಯಿಸಿಕೊಂಡ ಕೂಡಲೇ, ಅತ್ತುಪಾಕಂನಲ್ಲಿ ಸುಮಾರು ಐದು ಮಂದಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಿಷಯವನ್ನು ವರದಿ ಮಾಡಲು ಮುಂದೆ ಬಂದಿದ್ದಕ್ಕಾಗಿ ಅವರನ್ನು ವೈಯಕ್ತಿಕ ಬಂಧನದಲ್ಲಿರಿಸಲಾಗಿತ್ತು.
ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ ಎಳಿಲ್, “ಉಪಾಧ್ಯಕ್ಷರ ಪತಿ ಮತ್ತು ಪಂಚಾಯತ್ ಕಾರ್ಯದರ್ಶಿ ಸೇರಿದಂತೆ ಐದು ಜನರು ನನ್ನ ಮೇಲೆ ಹಲ್ಲೆ ನಡೆಸಿದರು. ಅವರು ನನ್ನ ಫೋನ್ ಕಿತ್ತು ಬೆಳಿಗ್ಗೆ 10.30 ಕ್ಕೆ ನನ್ನನ್ನು ಕೋಣೆಗೆ ತಳ್ಳಿ ಬೀಗ ಹಾಕಿದರು. ದಾಳಿಯಲ್ಲಿ, ನನ್ನ ಕಣ್ಣು ಮತ್ತು ಎದೆಗೆ ಗಾಯಗಳಾಗಿವೆ” ಎಂದು ಹೇಳಿದ್ದಾರೆ.
“ನಾನು ಗುಮ್ಮುಡಿಪೂಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಇಬ್ಬರನ್ನು ಬಂಧಿಸಲಾಗಿದೆ” ಎಂದು ಅವರು ಹೇಳಿದರು.
“ನಾವು ದೂರಿನ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಈಗಾಗಲೆ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಗುಮ್ಮುಡಿಪೂಂಡಿ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರನ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆಗೆ ಶಿಕ್ಷೆ), ಸೆಕ್ಷನ್ 342 (ತಪ್ಪಾಗಿ ಬಂಧನಕ್ಕೊಳಪಡಿಸಿದ್ದಕ್ಕೆ ಶಿಕ್ಷೆ) ಮತ್ತು ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡಿರುವುದಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪಂಚಾಯತ್ನ ಮುಖಂಡರಾದ ಅಮೃತಂ ದಲಿತ ಮಹಿಳೆಯಾಗಿರುವ ಕಾರಣಕ್ಕೆ, ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಪಂಚಾಯತ್ ಪದಾಧಿಕಾರಿಗಳು ಮತ್ತು ಜಾತಿವಾದಿಗಳು ಅವಕಾಶ ಕೊಟ್ಟಿರಲಿಲ್ಲ. ಈ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಕಾಯ್ದಿರಿಸಿದ ಸ್ಥಾನವೆಂದು ಘೋಷಿಸಿದ ನಂತರ ಅಮೃತಂ ಅವರು ಅತ್ತುಪಕ್ಕಂನಿಂದ ಆಯ್ಕೆಯಾದ ಮೊದಲ ಪಂಚಾಯತ್ ನಾಯಕಿಯಾಗಿದ್ದರು.
ಕಳೆದ ವಾರ, ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರಧ್ವಜವನ್ನು ಹಾರಿಸಲು ಅಮೃತಂ ಅವರನ್ನು ಶಾಲೆಯ ಮುಖ್ಯೋಪಾಧ್ಯಾಯರು ಆಹ್ವಾನಿಸಿದ್ದರು. ಆದರೆ ಮುಖ್ಯೋಪಾಧ್ಯಾಯರು ಮತ್ತೆ ಆವರಿಗೆ ಕರೆಮಾಡಿ ಕಾರ್ಯಕ್ರಮಕ್ಕೆ ಬರಬಾರದೆಂದು ಹೇಳಿದ್ದರು.
ಅಮೃತಂ ಅವರು ಇದೇ ರೀತಿಯ ತಾರತಮ್ಯವನ್ನು ಹಲವು ಬಾರಿ ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಪಂಚಾಯತ್ ಅಧ್ಯಕ್ಷರು ತಮ್ಮನ್ನು ಮಾತಿನಿಂದ ನಿಂದಿಸಿದ್ದಾರೆ. ಪಂಚಾಯತ್ ಕಾರ್ಯದರ್ಶಿ, ನಾನು ಸಹಿ ಮಾಡಬೇಕಾದ ಪತ್ರಗಳನ್ನು ನನಗೆ ಓದಲು ಸಾಧ್ಯವಾಗದಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪಂಚಾಯತ್ ಮುಖಂಡರಿಗೆ ಮೀಸಲಾದ ಕುರ್ಚಿಯನ್ನು ಬಳಸಲು ಅವರಿಗೆ ಅನುಮತಿ ಇಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮೇಲ್ಜಾತಿಗಳಿಗೆ 10% ಮೀಸಲಾತಿಯೆಂಬುದು ಮಹಾ ವಂಚನೆ


