ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಹಾಗೂ ಮಧುಗಿರಿ ಇಒ ಮತ್ತು ಬ್ಯಾಲ್ಯ ಪಿಡಿಒರಿಂದ ತಾರತಮ್ಯ ವಿರೋಧಿಸಿ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹೋರಾಟ ಸಮಿತಿ ಮುಖಂಡರು ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಎಸ್ಪಿ ಅವರಿಗೆ ಮನವಿ ಸಲ್ಲಿಸಿದೆ.
ತುಮಕೂರು ಜಿಲ್ಲೆಯಲ್ಲಿ ನೂರಾರು ದಲಿತ ಕುಟುಂಬಗಳು ನಿವೇಶನವಿಲ್ಲದೆ ಮನೆಯಿಲ್ಲದೆ ತೊಂದರೆ ಅನುಭವಿಸುತ್ತಿವೆ. ಹಲವು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಿವೇಶನ ರಹಿತ ದಲಿತ ಕುಟುಂಬಗಳ ಜೊತೆ ಈ ಅಧಿಕಾರಿಗಳು ಚಲ್ಲಾಟವಾಡುತ್ತಿದ್ದಾರೆ ಎಂದು ಸಮಿತಿ ದೂರಿದೆ.
ಇದನ್ನೂ ಓದಿ: ಸಿಂದಗಿ ದಲಿತ ಯುವಕನ ಹತ್ಯೆ: ಬಿಜೆಪಿ ನೀಡುತ್ತಿರುವ ಬೆಂಬಲವೇ ಕೃತ್ಯಕ್ಕೆ ಕಾರಣವೆಂದ ಸಿದ್ದರಾಮಯ್ಯ
ಭೂಮಿ ಮತ್ತು ವಸತಿಗಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಿವೇಶನ ಕೊಡಿಸುವ ಭರವಸೆ ನೀಡಿದರು. ಆದರೆ ಕೆಳಹಂತ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆಸುಕೊಳ್ಳುತ್ತಿದ್ದಾರೆ ಎಂದು ಸಂಚಾಲಕ ಹಂದ್ರಾಳ್ ನಾಗಭೂಷನ್ ಆರೋಪಿಸಿದರು.
“ಮಧುಗಿರಿ ತಾಲೂಕು ಬ್ಯಾಲ್ಯ ಗ್ರಾಮದಲ್ಲಿ 10 ದಲಿತ ಕುಟುಂಬಗಳು ಮನೆಯಿಲ್ಲದೆ ರಸ್ತೆ ಬದಿಯಲ್ಲಿ ವಾಸ ಮಾಡುತ್ತಿವೆ. ಇವರಿಗೆ ಗ್ರಾಮಠಾಣದಲ್ಲಿ ನಿವೇಶನ ನೀಡಬೇಕು ಎಂದು ಮನವಿ ಸಲ್ಲಿಸಿದೆ. ಜಿಲ್ಲಾಧಿಕಾರಿಗಳು ಕೂಡಲೇ ಜಾಗ ಗುರುತಿಸಿ ನಿವೇಶನ ನೀಡುವಂತೆ ಸೂಚಿಸಿದರು. ಆದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಕುಮ್ಮಕ್ಕಿನ ಮೇಲೆ ಪಿಡಿಒ ಮತ್ತು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಬೇಕೆಂದೇ ಕರ್ತವ್ಯ ಲೋಪ ಎಸಗಿ ಬಡಕುಟುಂಬಗಳಿಗೆ ಅನ್ಯಾಯ ಮಾಡಿವೆ” ಎಂದು ಅವರು ಟೀಕಿಸಿದರು.
ಇಒ ದೊಡ್ಡಸಿದ್ದಪ್ಪ ಮತ್ತು ಬ್ಯಾಲ್ಯ ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ್ ಸಿಂಗ್ ಮೇಲ್ಜಾತಿಯವರ ಪರ ನಿಂತಿದ್ದಾರೆ. ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಮೌಖಿಕ ನಿರ್ದೇಶನವನ್ನು ಧಿಕ್ಕರಿಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷರೊಂದಿಗೆ ಶಾಮೀಲಾಗಿ ಕರ್ತವ್ಯಲೋಪ ಎಸಗಿರುವ ಪಿಡಿಒ, ಇಒ ಮತ್ತು ಅಧ್ಯಕ್ಷರ ವಿರುದ್ದ ದಲಿತ ದೌರ್ಜನ್ಯ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ನೊಂದ ಕುಟುಂಬಗಳು ಆಗ್ರಹಿಸಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ- ಆತನ ಮೇಲೆಯೇ ದೂರು ದಾಖಲಿಸಿದ ಪೊಲೀಸರು