ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್ಎಸ್ಎ) ಬಂಧನದಲ್ಲಿದ್ದ ಉತ್ತರ ಪ್ರದೇಶದ ಡಾ. ಕಫೀಲ್ ಖಾನ್ ತಡರಾತ್ರಿ ಬಿಡುಗಡೆಯಾಗಿದ್ದು, ನಂತರ ಮಾತನಾಡಿದ ಅವರು ‘ನನ್ನ ವೈದ್ಯ ಹುದ್ದೆಯನ್ನು ಮರಳಿಕೊಡಿ, ದೇಶಸೇವೆಗೆ ಸಿದ್ಧನಿದ್ದೇನೆ’ ಎಂದು ಘೋಷಿಸಿದ್ದಾರೆ.
ಮಥರು ಜೈಲಿನಿಂದ ಬಿಡುಗಡೆಗೊಂಡ ಅವರು, “ಮುಂಬೈನಿಂದ ಮಥುರಾಗೆ ಕರೆತರುವಾಗ ನನ್ನನ್ನು ಎನ್ಕೌಂಟರ್ ಮಾಡದಿರುವುದಕ್ಕೆ ಉಳಿದಿದ್ದೇನೆ. ಅಲಹಾಬಾದ್ ನ್ಯಾಯಾಲಯವು ನನ್ನ ಮೇಲಿನ ಆರೋಪಗಳನ್ನು ಮುಕ್ತಗೊಳಿಸಿರುವುದಕ್ಕೆ ನ್ಯಾಯಾಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ” ಎಂದಿದ್ದಾರೆ.
ಡಾ.ಕಫೀಲ್ ಖಾನ್ರವರ ಭಾಷಣವು ಹಿಂಸೆಗೆ ಅನುವು ಮಾಡಿಕೊಡುವ ಅಥವಾ ಪ್ರಚೋದನಾಕಾರಿಯಾಗಿಲ್ಲ. ಅವರ ಮೇಲೆ ಎನ್ಎಸ್ಎ ಪ್ರಕರಣ ಹಾಕಿರುವುದು ಕಾನೂನುಬಾಹಿರ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮತ್ತು ಅವರ ಮೇಲಿನ NSA ಪ್ರಕರಣ ಕೈಬಿಡುವಂತೆ ನಿನ್ನೆ ಆದೇಶಿಸಿತ್ತು.
ಏನೂ ಅಪರಾಧ ಮಾಡದ ನನ್ನ ಮಗನನ್ನು 8 ತಿಂಗಳು ಜೈಲಿನಲ್ಲಿ ಕೂಡಿ ಹಾಕಲಾಯಿತು. ಇಂದು ಕೊನೆಗೂ ಆತನನ್ನು ಮುಟ್ಟುವ, ಅಪ್ಪುವ ಅವಕಾಶ ನಮಗೆ ಸಿಕ್ಕಿದೆ ಎಂದು ಅವರ ತಾಯಿ ತಿಳಿಸಿದ್ದಾರೆ.
2017ರಲ್ಲಿ ಗೋರಖ್ ಪುರದ ಬಿಆರ್ಡಿ ವೈದ್ಯಕೀಯ ಆಸ್ಪತ್ರೆ ಆಕ್ಸಿಜನ್ ಕೊರತೆ ದುರಂತ ಪ್ರಕರಣದಲ್ಲಿ ಕಫೀಲ್ ಖಾನ್ ಅಮಾನತು ಮತ್ತು 9 ತಿಂಗಳ ಜೈಲುವಾಸಕ್ಕೆ ಒಳಗಾಗಿದ್ದರು. ಬಿಆರ್ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಡಾ.ಕಫೀಲ್ ಅವರ ಮೇಲಿತ್ತು. ಆದರೆ ನ್ಯಾಯಾಲಯ ಅವರು ಅಮಾಯಕರು ಮತ್ತು ಉದ್ದೇಶಪೂರ್ವಕವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿ ಪ್ರಕರಣ ಕೈಬಿಟ್ಟಿತ್ತು. ಆದರೂ ಉತ್ತರ ಪ್ರದೇಶದ ಯೋಗಿ ಸರ್ಕಾರ ಡಾ.ಕಫೀಲ್ ಖಾನ್ ಮೇಲೆ ಮರು ತನಿಖೆ ನಡೆಸುವುದಾಗಿ ಹೇಳಿದೆ.
ಈಗಲೂ ಸಹ ಸಿಎಎ ವಿರೋಧಿ ಹೋರಾಟಗಳು ಉತ್ತುಂಗದಲ್ಲಿದ್ದಾಗ 2019 ರ ಡಿಸೆಂಬರ್ 13 ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಾ.ಕಫೀಲ್ ಖಾನ್ ಅವರನ್ನು ಜನವರಿಯಲ್ಲಿ ಮುಂಬೈನಲ್ಲಿ ಬಂಧಿಸಲಾಗಿತ್ತು.
ಒಬ್ಬ ಜನಾನುರಾಗಿ ಯುವ ವೈದ್ಯನ ವಿರುದ್ಧ ಕ್ಲುಲಕ ವಿಚಾರಗಳನ್ನಿಟ್ಟುಕೊಂಡು, ಆತ ಅನ್ಯ ಧರ್ಮೀಯ ಎಂಬ ಕಾರಣಕ್ಕೆ ಯೋಗಿ ಸರ್ಕಾರವು ಇಲ್ಲಸಲ್ಲದ ಕೇಸುಗಳನ್ನು ಹಾಕಿ ಜೈಲಿಗೆ ಅಟ್ಟುತ್ತಿದೆ ಎಂದು ಆರೋಪ ಪ್ರಗತಿಪರ ವಲಯದಲ್ಲಿ ಕೇಳಿಬಂದಿದೆ.
ಈಗ ಬಿಡುಗಡೆಯಾಗಿರುವ ಕಫೀಲ್ ಖಾನ್ ದೇಶಸೇವೆ ಸಿದ್ದನಿರುವುದಾಗಿ ಘೋಸಿಷಿದ್ದಾರೆ. ಜನವರಿಯಲ್ಲಿಯೂ ಸಹ ಕೊರೊನಾ ಪ್ರಕರಣಗಳು ಆರಂಭವಾಗಿದ್ದಾಗ ತಾನು ವೈದ್ಯನಾಗಿ ಕೊರೊನಾ ವಿರುದ್ಧ ಕೆಲಸ ಮಾಡುತ್ತೇನೆ ಎಂದು ಕಫೀಲ್ ಖಾನ್ ಹೇಳಿದ್ದರು.
ಇದನ್ನೂ ಓದಿ: ಕರ್ತವ್ಯನಿಷ್ಠ, ಪ್ರಾಮಾಣಿಕ ಪ್ರತಿಭಾನ್ವಿತ ವೈದ್ಯ ಹೋರಾಟಗಾರ ಡಾ. ಕಫೀಲ್ಖಾನ್
Also Read: Dr. Kafeel Khan released at midnight: thankful to Judiciary and people of India


