HomeUncategorizedಯುವತಿ ಅನುಮಾನಾಸ್ಪದ ಸಾವು!: ಮರ್ಯಾದಾಹೀನ ಹತ್ಯೆಯೋ-ನಿರ್ಲಕ್ಷ್ಯತೆಯಿಂದಾದ ಹತ್ಯೆಯೋ?

ಯುವತಿ ಅನುಮಾನಾಸ್ಪದ ಸಾವು!: ಮರ್ಯಾದಾಹೀನ ಹತ್ಯೆಯೋ-ನಿರ್ಲಕ್ಷ್ಯತೆಯಿಂದಾದ ಹತ್ಯೆಯೋ?

ನಮ್ಮ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದುದ್ದಕ್ಕೆ ನನ್ನ ಪೋಷಕರು ಬೆದರಿಸಿ ಬಲವಂತವಾಗಿ ಗೃಹಬಂಧನದಲ್ಲಿಟ್ಟಿದ್ದಾರೆ. ನನ್ನನ್ನು ರಕ್ಷಿಸಿ ಎಂದು ಮೃತಳಾದ ಮೀನಾಕ್ಷಿ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಎಸ್.ಪಿ ಕಛೇರಿಗೆ ಇ-ಮೇಲ್ ಮಾಡಿದ್ದಳು.

- Advertisement -
- Advertisement -

ಪೊಲೀಸರ ನಿರ್ಲಕ್ಷ್ಯ, ಮಹಿಳಾ ಎನ್‌ಜಿಓಗಳ ಉಡಾಫೆ ಮತ್ತು ಪೋಷಕರ ಬಂಡತನಕ್ಕೆ ಮೈಸೂರು ತಾಲ್ಲೂಕಿನ ದೊಡ್ಡಕಾನ್ಯ ಗ್ರಾಮದಲ್ಲಿ 24 ವರ್ಷದ ಯುವತಿಯೊರ್ವಳು ಬಲಿಯಾಗಿದ್ದಾಳೆ. ಸೆಪ್ಟಂಬರ್ 4 ರಂದು ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹವು ಪತ್ತೆಯಾದ ನಂತರ ಇದು ಮರ್ಯಾದಾಹೀನ ಹತ್ಯೆಯೋ- ಪೊಲೀಸರ ನಿರ್ಲಕ್ಷ್ಯತೆಯಿಂದಾದ ಹತ್ಯೆಯೋ ಎಂಬ ಪ್ರಶ್ನೆ ಸುಳಿದಾಡುತ್ತಿದೆ.

ಈ ಪ್ರಶ್ನೆಗಳಿಗೆ ಇಂಬುಕೊಡುವಂತೆ ತನ್ನ ಸಹೋದರಿಯ ಸಾವು ಅನುಮಾನಾಸ್ಪದ ಎಂದು ಮೃತಳ ಸಹೋದರಿ ಜೈಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತಳಾದ ಮೀನಾಕ್ಷಿ ಎಂಬ ಯುವತಿ ತನ್ನ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಇದಕ್ಕೆ ಪೋಷಕರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಕುಟುಂಬದವರು ತನ್ನನ್ನು ಬಲವಂತದ ಗೃಹಬಂಧನದಲ್ಲಿಟ್ಟಿದ್ದಾರೆಂದು, ಚಿತ್ರ ಹಿಂಸೆ ನೀಡುತ್ತಿದ್ದಾರೆಂದು, ನನ್ನನ್ನು ರಕ್ಷಿಸಿ ಎಂದು ಯುವತಿ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಮೈಸೂರಿನ ಎಸ್.ಪಿ ಕಛೇರಿಗೆ ಎರಡೂವರೆ ತಿಂಗಳ ಹಿಂದೆಯೇ ಇ-ಮೇಲ್ ಮಾಡಿದ್ದರೂ ಸಹ ಒಡನಾಡಿ ಸಂಸ್ಥೆ ಮತ್ತು ಪೊಲೀಸರೇಕೆ ನಿರ್ಲಕ್ಷ್ಯ ವಹಿಸಿದರು ಎಂಬುದು ದೊಡ್ಡ ಪ್ರಶ್ನೆಯಾಗಿದೆ.

“ನಾನು ಇದೇ ಊರಿನ ಎಸ್.ಸಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದೇನೆ. ಆದರೆ ಇದಕ್ಕೆ ನನ್ನ ಕುಟುಂಬದವರ ವಿರೋಧವಿದೆ. ನನ್ನನ್ನು ಬಲವಂತವಾಗಿ ಗೃಹಬಂಧನದಲ್ಲಿಟ್ಟಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ” ಎಂದು ಜೂನ್ 16 ರಂದು ಆ ಯುವತಿ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಎಸ್‌ಪಿ ಕಛೇರಿಗೆ ಈ-ಮೇಲ್ ನಲ್ಲಿ ಮನವಿ ಮಾಡಿದ್ದಾಳೆ. ಈ-ಮೇಲ್‌ನ ಸ್ಕ್ರೀನ್ ಶಾಟ್ ಇಲ್ಲಿದೆ.

 

ಆದರೆ ಈ ಮೇಲ್‌ ಅನ್ನು ಒಡನಾಡಿ ಸಂಸ್ಥೆ ಗಮನಿಸಿಲ್ಲ. ಪೊಲೀಸರು ಮಾತ್ರ ಗಮನಿಸಿ ಆಕೆಯ ಕುಟುಂಬವನ್ನು ಕರೆಸಿ ಮಾತನಾಡಿದ್ದಾರೆ.

ಒಡನಾಡಿ ಸಂಸ್ಥೆ ಮಾಡಿದ್ದೇನು?

“ಆಗಸ್ಟ್ 6 ರಂದು ನಮಗೆ ಸಂದೇಶ ಬಂದ ತಕ್ಷಣ, ನಾವು ಯುವತಿಯನ್ನು ಒಡನಾಡಿಗೆ ಬರುವಂತೆ ಕೇಳಿಕೊಂಡೆವು. ಆದರೆ ಕಾರಣಾಂತರಗಳಿಂದ ಆಕೆ ನಮ್ಮ ಸಂಸ್ಥೆಗೆ ಬಂದಿರುವುದಿಲ್ಲ. ಕೊರೊನಾ ಇದ್ದ ಕಾರಣ, ನಮ್ಮ ಸಂಸ್ಥೆಯಲ್ಲಿ ಹಲವು ಚಿಕ್ಕಮಕ್ಕಳಿರುವುದರಿಂದ ನಾವು ಖುದ್ದಾಗಿ ಭೇಟಿ ನೀಡಲು ಆಗಲಿಲ್ಲ. ಹಾಗಾಗಿ,  ಮೈಸೂರು ದಕ್ಷಿಣ ವಿಭಾಗದ ಪೊಲೀಸ್ ಠಾಣೆಗೆ ದೂರು ನೀಡಿದೆವು” ಎಂದು ಸಂಸ್ಥೆಯ ಪ್ರದೀಪ್ ನಾನುಗೌರಿ.ಕಾಂ ಗೆ ಹೇಳಿದರು. ಆದರೆ ಜೂನ್ 16 ರಂದೇ ಆ ಹುಡುಗಿ ಮೇಲ್ ಮಾಡಿರುವುದನ್ನು ಒಡನಾಡಿ ಗಮನಿಸದೇ ಮರೆತುಬಿಟ್ಟಿದೆ.

ಈ ವಿಷಯವನ್ನು ಆಗಸ್ಟ್ 6, 2020 ರಂದು ಒಡನಾಡಿ ಸಂಸ್ಥೆಯ ಸಾಂತ್ವಾನದಲ್ಲಿ ದಾಖಲಿಸಿಕೊಂಡು, ಆಗಸ್ಟ್ 9, 2020 ರಂದು ಮೈಸೂರಿನ ದಕ್ಷಿಣ ವಲಯ ಪೊಲೀಸ್ ಠಾಣೆಗೆ ಕರೆಮಾಡಿ ವಿಷಯ ಮುಟ್ಟಿಸಿದ್ದಾರೆ. ಈಗಾಗಲೇ ಈ ವಿಚಾರವನ್ನು ತನಿಖೆ ನಡೆಸುತ್ತಿರುವ ಜೈಪುರ ಸಬ್ ಇನ್ಸ್ ಪೆಕ್ಟರ್ ವರದರಾಜುರವರು “ಈ ಸಂಬಂಧ ಯುವತಿ ಮತ್ತು ಕುಟುಂಬದವರನ್ನು ಠಾಣೆಗೆ ಕರೆಸಿ, ಈ ರೀತಿ ತೊಂದರೆ ನೀಡಬಾರದೆಂದೂ ಪೋಷಕರಿಗೆ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಸಲಾಗಿದೆ. ಯುವತಿ ತಾನು ಕೆ.ಪಿ.ಎಸ್.ಸಿ ಗೆ ಓದುತ್ತಿದ್ದೇನೆ ಎಂಬುದಾಗಿಯೂ, ನನಗೆ ಇಲ್ಲಿರಲು ಸಾಧ್ಯವಿಲ್ಲ ಹಾಗಾಗಿ ಯಾವುದಾದರೂ ಪೇಯಿಂಗ್ ಗೆಸ್ಟ್‌ಗೆ ಸೇರಿಸಿ ಎಂದು ಕೇಳಿಕೊಂಡಿದ್ದಳು. ಆದರೆ ಕೊರೊನಾ ಇದ್ದಿದ್ದರಿಂದ ಯಾವುದೇ ಪಿಜಿಗಳೂ ತೆರೆದಿರಲಿಲ್ಲ. 20 ದಿನದ ನಂತರ ಬಂದು ಪೇಯಿಂಗ್ ಗೆಸ್ಟ್‌ಗೆ ಸೇರಿಸುವುದಾಗಿ ಹೇಳಿದ್ದೇವೆ. ಹಾಗಾಗಿ ತನ್ನ ಸಹೋದರಿಯಾದ ಗೀತಾಳ ಮನೆಯಲ್ಲಿ ಇರುವುದಾಗಿ ಮೀನಾಕ್ಷಿ ಹೇಳಿದ್ದಳು” ಎಂದು ಹೇಳಿದ್ದಾರೆ. ಪೊಲೀಸರ ಈ ಯಥಾವತ್ ಹೇಳಿಕೆಯನ್ನು ಒಡನಾಡಿಯ ಸಂಸ್ಥೆಯು ತನ್ನ ದಾಖಲೆ ಪುಸ್ತಕದಲ್ಲಿ ವರದಿ ಮಾಡಿದೆ.

“ನಂತರ  ಆಗಸ್ಟ್ 19, 2020 ರಂದು ಮತ್ತೊಮ್ಮೆ ಅನುಸರಣಾ ವಿಚಾರಣೆಗಾಗಿ, ನಮ್ಮ ಸಂಸ್ಥೆಯ ವತಿಯಿಂದ ಪೊಲೀಸರಿಗೆ ಕರೆಮಾಡಿ ವಿಚಾರಿಸಿದಾಗ, “ನನಗೆ ಪೋಷಕರಿಂದ ಯಾವುದೇ ತೊಂದರೆಯಿಲ್ಲ ಹಾಗೂ ಮನೆಯಲ್ಲಿ ತೋರಿಸಿದ ಹುಡುಗನನ್ನೇ ವಿವಾಹವಾಗುತ್ತೇನೆ ಎಂದೂ, ಸದ್ಯಕ್ಕೆ ತನ್ನ ಸಹೋದರಿಯ ಮನೆಯಲ್ಲಿರುವುದಾಗಿ ಯುವತಿ ಹೇಳಿದ್ದರು” ಎಂಬುದಾಗಿ ಎಸ್.ಐ ವರದರಾಜು ಹೇಳಿದ್ದಾರೆ” ಎಂದು ಒಡನಾಡಿ ಸಂಸ್ಥೆಯ ವಿನುತಾ ಹೇಳಿದರು.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಠಾಣಾ ಎಸ್.ಐ ವರದರಾಜು ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿತು. “ಮೊದಲಿಗೆ ಯುವತಿ ಮತ್ತು ಕುಟುಂಬದವರನ್ನು ಠಾಣೆಗೆ ಕರೆಸಿ ಎಚ್ಚರಿಸಲಾಯಿತು. ನಂತರ ಮತ್ತೊಮ್ಮೆ ಒಡನಾಡಿಯಿಂದ ಕರೆ ಮಾಡಿ, ಆಕೆ ಹಿಂಸೆ ಅನುಭವಿಸುತ್ತಿರುವುದಾಗಿ, ಹಾಗಾಗಿ ಸಮಾಲೋಚನೆ ಮಾಡಿ ಎಂದು ಹೇಳಿದರು. ಈ ಸಂಬಂಧ ಮೀನಾಕ್ಷಿಯವರನ್ನು ಠಾಣೆಗೆ ಕರೆಸಿ ಮಾತನಾಡಿದಾಗ, ನನಗೆ ಪೋಷಕರಿಂದ ಯಾವುದೇ ತೊಂದರೆಯಿಲ್ಲ ಎಂದೂ, ಸದ್ಯಕ್ಕೆ ತನ್ನ ಸಹೋದರಿಯ ಮನೆಯಲ್ಲಿರುವುದಾಗಿ ಹೇಳಿದ್ದರು. ಆದರೆ ಈಗ ಸಾವಾಗಿದೆ. ನಾವು ತನಿಖೆ ನಡೆಸುತ್ತಿದ್ದು ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ” ಎಂದು ತಿಳಿಸಿದರು.

ಆದರೆ ಈ ಪ್ರಕರಣದಲ್ಲಿ ಹಲವು ಅನುಮಾನಕರ ಸಂಗತಿಗಳು ಕಂಡುಬರುತ್ತಿವೆ. ಅದೇನೆಂದರೆ, ಯುವತಿಯು ಆಗಸ್ಟ್‌ನಲ್ಲಿಯೂ ಸಹ ತನಗೆ ತೊಂದರೆ ಇರುವುದಾಗಿ ಎರಡನೇ ಮೇಲ್ ಮಾಡಿರುವುದನ್ನು ಎರಡೂ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿಲ್ಲ. ಆಗಸ್ಟ್ 6 ರಂದು ಒಡನಾಡಿ ಸಂಸ್ಥೆಗೆ ಮೀನಾಕ್ಷಿ ಎರಡನೇ ಮೇಲ್ ಮಾಡಿ, ಪೊಲೀಸರೇನೊ ಬಂದು ಹೋಗಿದ್ದಾರೆ. ಆದರೆ ನಾನು ಮನೆಯಲ್ಲಿ ಇರಲು ಆಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೆಕು ಎನಿಸುತ್ತಿದೆ. ಮತ್ತೆ ಪೊಲೀಸರು ಬರುತ್ತಾರೆ ಎಂದು ಕಾದು ಸಾಕಾಗಿದೆ. ದಯವಿಟ್ಟು ಬಂದು ನನ್ನನ್ನು ಬಂಧಮುಕ್ತಗೊಳಿಸಿ ಎಂದು ಮನವಿ ಮಾಡಿದ್ದಾರೆ. ಈ ಮೇಲ್ ಅನ್ನು ಒಡನಾಡಿ ಸಂಸ್ಥೆಗೆ ಮಾತ್ರ ಕಳಿಸಲಾಗಿದೆ.

ಇದರಿಂದ ತಿಳಿದುಬಂದ ಸಂಗತಿ, ಈ ಯುವತಿ ಜೂನ್ 16ರಂದು ಪೊಲೀಸರಿಗೆ ಮತ್ತು ಒಡನಾಡಿಗೆ ದೂರು ನೀಡಿದ್ದಳು. ಆದರೆ ಈ ಮೇಲ್ ಅನ್ನು ಒಡನಾಡಿ ಸಂಸ್ಥೆ ಗಮನಿಸಿರಲಿಲ್ಲ. ಆದರೆ ಮೈಸೂರಿನ ದಕ್ಷಿಣ ವಲಯದ ಮೊಲೀಸರು ಇದನ್ನು ಗಮನಿಸಿ ಯುವತಿ ಮತ್ತು ಕುಟುಂಬವನ್ನು ಠಾಣೆಗೆ ಕರೆಸಿ ಎಸ್.ಐ ವರದರಾಜು ಅವರು ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಆದರೆ ಯುವತಿ ಪೇಯಿಂಗ್ ಗೆಸ್ಟ್‌ನಲ್ಲಿರಲು ಕೇಳಿದ್ದಳು. ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. 20 ದಿನದಲ್ಲಿ ಬಂದು ನಾವೇ ಕರೆದುಕೊಂಡು ಹೋಗುತ್ತೇವೆ ಎಂದು ಪೊಲೀಸ್ ಹೇಳಿದ್ದರು. ಆದರೆ ಅವರು ಬಾರದಿದ್ದಕ್ಕೆ ಮತ್ತು ಮನೆಯಲ್ಲಿನ ಹಿಂಸೆ ಹೆಚ್ಚಾಗಿದ್ದುದ್ದಕ್ಕೆ ನಿರಾಸೆಗೊಂಡ ಯುವತಿ ಆತ್ಮಹತ್ಯೆಯ ಮನಸ್ಸು ಮಾಡಿರಬಹುದು ಎನ್ನಲಾಗುತ್ತಿದೆ.

ಒಡನಾಡಿಗೆ ಮಾಡಲಾದ ಮೇಲ್ ನಲ್ಲಿ, ತನಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಾಗಿತ್ತು ಎಂದು ಯುವತಿ ಹೇಳಿದ್ದರೂ,  ಆ ಹುಡುಗಿಯನ್ನು ಸಂಪರ್ಕಿಸುವುದಕ್ಕಾಗಲೀ, ಧೈರ್ಯ ತುಂಬುವುದಾಗಲಿ, ಕೌನ್ಸೆಲಿಂಗ್ ಮಾಡುವುದಾಗಲಿ, ಶೀಘ್ರ ಕ್ರಮ ತೆಗೆದುಕೊಳ್ಳುವುದಕ್ಕಾಗಲೀ (ಉದಾ: ಆಗಸ್ಟ್ 6ರಂದು ಬಂದ ಮೇಲ್ ಗೆ ಸಂಬಂಧಿಸಿದಂತೆ, ಆಗಸ್ಟ್ 9 ರಂದು ದೂರು ನೀಡಲು ಮುಂದಾಗಿದ್ದಾರೆ) ಸಂಸ್ಥೆಯ ವತಿಯಿಂದ ಯಾವುದೇ ಪ್ರಯತ್ನ ನಡೆದಿಲ್ಲ. ಅದಾಗ್ಯೂ ಎಲ್ಲಾ ಜವಾಬ್ದಾರಿಯನ್ನೂ ಪೊಲೀಸರ ಮೇಲೆ ಹಾಕಿ ಸುಮ್ಮನಾಗಿದ್ದಾರೆ.

ಎರಡನೇ ಈ-ಮೇಲ್ ಗೆ ಸಂಬಂಧಿಸಿದಂತೆ ಒಡನಾಡಿ ದೂರು ನೀಡಿದಾಗ, ಪೊಲೀಸರು ಮೊದಲನೇ ಈ-ಮೇಲ್ ಗೆ ಸಂಬಂಧಿಸಿದ್ದು ಎಂದು ತಿಳಿದು, ಈಗಾಗಲೇ ಪ್ರಕರಣ ಇತ್ಯರ್ಥಗೊಂಡಿದೆ ಎಂದು ಈ ಒಡನಾಡಿಯ ದೂರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆ ‘ಆಕೆ ಕ್ಷೇಮವಾಗಿದ್ದಾಳೆ’ ಎಂದು ಒಡನಾಡಿಗೆ ತಿಳಿಸಿದ್ದಾರೆ. ಈಕಡೆ ಒಡನಾಡಿಯೂ ಕೂಡ ಪೊಲೀಸರ ಮಾತನ್ನು ನಂಬಿ ಈ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಆದರೆ ಹುಡುಗಿಯು ತನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತಿದೆ ಎಂದು ಬರೆದಿದ್ದರೂ ಸಹ ಈ ಎರಡೂ ಇಲಾಖೆಗಳು ತಾವೀಗಾಗಲೇ ತಮ್ಮ ಕೆಲಸ ಮಾಡಿದ್ದೇವೆ ಎಂದು ನಿರ್ಲಕ್ಷ್ಯ ತಾಳಿರುವುದು ಸ್ಪಷ್ಟವಾಗಿದೆ. ಇವರಿಬ್ಬರ ನಿರ್ಲಕ್ಷ್ಯದಿಂದ ಆ ಹುಡುಗಿ ಕುಟುಂಬದ ಹಿಂಸೆಯ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅನುಮಾನ ಮೂಡುತ್ತಿದೆ.

ಅದೇ ಸಮಯದಲ್ಲಿ ಮೃತಳ ಸಹೋದರಿ, ಈ ಸಾವನ್ನು ಅನುಮಾನಸ್ಪದವೆಂದು ಕರೆದು ದೂರು ನೀಡಿದ್ದಾರೆ. ಮೊದಲ ಬಾರಿ ನಾನುಗೌರಿಯೊಂದಿಗೆ ಮಾತನಾಡಿದ ಅವರು, ನಂತರ ನಮ್ಮ ಯಾವುದೇ ಫೋನ್‌ ರಿಸೀವ್ ಮಾಡುತ್ತಿಲ್ಲ. ಬಹುಶಃ ಅವರಿಗೂ ಕುಟುಂಬದಿಂದ ಒತ್ತಡ ಬಂದಿರಬಹುದೆಂಬ ಅನುಮಾನಗಳು ಕಾಡುತ್ತಿವೆ.

ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ತಿಳಿದು ಬಂದರೆ ಇದು ಮರ್ಯಾದಾಹೀನ ಹತ್ಯೆಯ ಪ್ರಕರಣವಾಗಲಿದೆ. ಅಥವಾ ಆತ್ಮಹತ್ಯೆ ಎಂದು ವರದಿ ಬಂದರೆ, ಇದಕ್ಕೆ ನೇರ ಹೊಣೆ ಕುಟುಂಬ, ಒಡನಾಡಿ ಸೇವಾ ಸಂಸ್ಥೆ ಮತ್ತು ಜೈಪುರ ಪೋಲೀಸರೇ ಆಗಲಿದ್ದಾರೆ.

ಇನ್ನು ಈ ಕುಟುಂಬವು ಯಾರೊಂದಿಗೂ ಈ ವಿಚಾರದ ಕುರಿತು ಮಾತನಾಡುತ್ತಿಲ್ಲ. ಇಷ್ಟೆಲ್ಲ ನಡೆದರೂ ಈ ಹುಡುಗಿಯನ್ನು ಪ್ರೀತಿಸುತ್ತಿದ್ದ ಅದೇ ಊರಿನ ಹುಡುಗ ಯಾರು ಎಂಬುದನ್ನು ಯಾರೂ ಬಾಯಿ ಬಿಡುತ್ತಿಲ್ಲ. ಅಷ್ಟರಮಟ್ಟಿಗೆ ಗೌಪ್ಯತೆ ಕಾಪಾಡಿರುವುದು ಕುಟುಂಬದ ಮೇಲೆ ಅನುಮಾನ ಮೂಡಲು ಕಾರಣವಾಗುತ್ತದೆ.

ಈ ಕುರಿತು ದೂರಿನ ಸಂಪೂರ್ಣ ವಿವರ ತಿಳಿಯಲು, ಪ್ರಕರಣ ದಾಖಲಿಸಿದ ಮೃತಳ ಸಹೋದರಿ ಗೀತಾಳನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಯಿತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಸಂಪರ್ಕ ಸಿಕ್ಕಲ್ಲಿ ಇದನ್ನು ಅಪ್‌ಡೇಟ್‌ ಮಾಡಲಾಗುವುದು.


ಜೀವ ಅಮೂಲ್ಯವಾಗಿದೆ ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ವೈದ್ಯ ಆತ್ಮಹತ್ಯೆ:‌ ಮೈಸೂರು ಜಿಲ್ಲಾ ಪಂಚಾಯಿತಿ‌ ಅಧಿಕಾರಿ ವಿರುದ್ಧ ಎಫ್‌ಐಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...