Homeಮುಖಪುಟಉತ್ತರ ಸಂವಿಧಾನದಲ್ಲಿದೆ, ಮೀಸಲಾತಿ ವಿರೋಧಿ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ: ಅನಂತನಾಯಕ್ ಎನ್

ಉತ್ತರ ಸಂವಿಧಾನದಲ್ಲಿದೆ, ಮೀಸಲಾತಿ ವಿರೋಧಿ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ: ಅನಂತನಾಯಕ್ ಎನ್

ಮೀಸಲಾತಿಯೇ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಹೋರಾಟ ಬಲಗೊಳಿಸಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ಜನಸಮುದಾಯಗಳು ಐಕ್ಯ ಹೋರಾಟಕ್ಕೆ ಮುಂದಾಗಬೇಕು.

- Advertisement -
- Advertisement -

ಒಳಮೀಸಲಾತಿ ಚರ್ಚೆಯ ಹಿನ್ನಲೆಯಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಅನಂತನಾಯಕ್‌ರವರ ಸಂದರ್ಶನ.

  1. ಒಳಮೀಸಲಾತಿಯ ಬಗ್ಗೆ ನಿಮ್ಮ ನಿಲುವೇನು?

ಎಲ್ಲಾ ವಂಚಿತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಬೇಕು. ಅದು ನನ್ನ ಬಲವಾದ ನಂಬಿಕೆ. ಜಾತಿಗಳ ಜನಸಂಖ್ಯೆವಾರು ಮೀಸಲಾತಿ ವೈಜ್ಞಾನಿಕವಾಗಿ ಹಂಚಿಕೆಯಾಗಬೇಕು. ಈ ಹಂಚಿಕೆಗೆ ಪೂರಕ ಆಧಾರವಾಗಲು ಎಲ್ಲಾ ಜಾತಿಗಳ ಸ್ಥಿತಿಗತಿ, ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಯಬೇಕು. ಜಾತಿಗಳ ಹಿಂದುಳಿದಿರುವಿಕೆ, ಸರ್ಕಾರದಲ್ಲಿ ಅವರ ಪ್ರಾತಿನಿಧ್ಯ ಆಧರಿಸಿ ವಂಚಿತರನ್ನೂ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಬೇಕು.

2. ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯೂ ಭಿನ್ನವೇ ಅಥವಾ ಒಂದೆಯೇ?

ಇದು ಇನ್ನೂ ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠದಲ್ಲಿ ಚರ್ಚೆಗೆ ಬರಬೇಕಿದೆ, ಕಾಯೋಣ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಬೇಕೆನ್ನುವುದು ನಮ್ಮ ಸಂವಿಧಾನದ ಮೂಲ ತತ್ವ. ನಾವು ಅದಕ್ಕೆ ಬದ್ಧರಾಗಿರಬೇಕು. ಸಮತೆಯನ್ನು ಸಾಧಿಸಲು ಮಾರ್ಗ ಯಾವುದಾದರೇನು.

3. ಮೀಸಲಾತಿಗೆ ಶೇ.50 ರ ಮಿತಿ ಹೇರಿಕೆ, ಶೇ.3 ರಷ್ಟಿರುವ ಸಮುದಾಯಗಳಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದರ ವಿರುದ್ಧ ಹೋರಾಟಗಳಾಗಲಿಲ್ಲವೇಕೆ?

ಮೀಸಲಾತಿಯ ಮಿತಿಯನ್ನು ಶೇ.50 ಮೀರದಂತೆ ಸುಪ್ರೀಂಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಹೇಳಿದೆ. ಈ ಕುರಿತು ಆಕ್ಷೇಪಗಳೂ ಬಂದಿವೆ. ಸಕಾರಣಗಳನ್ನು ಸಾಬೀತುಪಡಿಸಿ ಕೆಲ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ.

ಬ್ರಾಹ್ಮಣ ಮತ್ತಿತರ ಸಮುದಾಯಗಳನ್ನು ಅರ್ಥಿಕ ದುರ್ಬಲ ವರ್ಗಗಳೆಂದು ಗುರುತಿಸಿ (EWS) ಶೇ.10 ಮೀಸಲಾತಿ ಕೊಡಲಾಗಿದೆ. ಇಂದಿನ ರಾಜಕಾರಣ ಸಂಪೂರ್ಣ ಬ್ರಾಹ್ಮಣೀಕರಣಗೊಂಡಿರುವುದಕ್ಕೆ ಸ್ಪಷ್ಟ ಉದಾಹರಣೆ ಇದು. ಎಡ ಮತ್ತು ಬಹುಜನ ಸಿದ್ಧಾಂತದ ಪಕ್ಷಗಳು ಕೂಡ ಈ ಬಗ್ಗೆ ಸ್ಪಷ್ಟ ಅಭಿಪ್ರಾಯಗಳನ್ನು ದೊಡ್ಡ ಪ್ರಮಾಣದಲ್ಲಿ ದಾಖಲಿಸಲಿಲ್ಲ. ಇದನ್ನು ಪ್ರತಿಭಟಿಸಲಿಲ್ಲ.

‘ಮೀಸಲಾತಿ ಬರೀ ಆರ್ಥಿಕ ಸಬಲೀಕರಣದ ಕಾರ್ಯಕ್ರಮ ಅಲ್ಲ’. ಅಸ್ಪೃಶ್ಯತೆ, ಸಾಮಾಜಿಕ ಕಳಂಕ ಹೊತ್ತವರನ್ನು ಮುಖ್ಯವಾಹಿನಿಗೆ ತರುವ ಸಾಧನ. ಮಾನವ ಘನತೆಯನ್ನು ಹೆಚ್ಚಿಸುವ ಮಾರ್ಗ ಮೀಸಲಾತಿ.

ಸಮಾಜದ ಎಲ್ಲಾ ಅಪಮಾನಿತರಿಗೆ ಸೂಕ್ತ ಪ್ರತಿನಿಧಿತ್ವ ಇರಬೇಕೆಂದು ಮೀಸಲಾತಿಯ ಮೂಲ ತತ್ವ. ಬ್ರಾಹ್ಮಣರಾದಿಯಾಗಿ ಕೆಲವರಲ್ಲಿ ಬಡತನ ಇರಬಹುದು. ಅದನ್ನು ಹೊಗಲಾಡಿಸಲು ಇಲ್ಲಿಯವರೆಗೆ ಅನೇಕ ಅರ್ಥಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರಲಾಗುತ್ತಿದೆ. ಅಗತ್ಯವಿದ್ದರೆ ಅವುಗಳನ್ನು ಹೆಚ್ಚಿಸೋಣ, ಮುಂದುವರೆಸೋಣ. ಆದರೆ, SC, ST, OBCಗಳಿಗೆ ಅಂಟಿಸಲಾದ ಸಾಮಾಜಿಕ ಕಳಂಕ ಮತ್ತು ತಾರತಮ್ಯ ನಿವಾರಿಸಲೆಂದು ಪ್ರಯೋಗಿಸಲಾದ ಮೀಸಲಾತಿ ನಿಯಮವನ್ನು ಬಡತನ ನಿರ್ಮೂಲನೆ ಹೆಸರಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಮೀಸಲಾತಿ ತತ್ವವನ್ನು ಅಪಮೌಲ್ಯಗೊಳಿಸಲು ಈ EWS ಮೀಸಲು ಮೂಲಕ ಪ್ರಯತ್ನ ಮಾಡಲಾಗಿದೆ. ಹಾಗಾಗಿ 10% EWS ಮೀಸಲಾತಿಯನ್ನು ಒಪ್ಪಲಾಗದು.

4. ಸ್ಪೃಶ್ಯರನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಚಾತುವರ್ಣ ಹೇರಲ್ಪಟ್ಟ ಸಮಾಜ ನಮ್ಮದು. ಪಿರಮಿಡ್ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸಂವಿಧಾನಿಕ ಮೀಸಲಾತಿ ನೀಡುವಾಗಲೇ ಇದನ್ನು ಗುರುತಿಸಲಾಗಿದೆ. ಹೀಗಿರುವಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವವರಲ್ಲಿ ಸ್ಪೃಶ್ಯ- ಅಸ್ಪೃಶ್ಯ, ಎಡ-ಬಲ ಅಂತ ಬೇರ್ಪಡಿಸಲಾಗದು. ಹೀಗೆ ಗುರುತಿಸುವುದು ಕೂಡ ಕಾನೂನುಬಾಹಿರ. ಇಂದಿಗೂ ಮುಟ್ಟಿಸಿಕೊಳ್ಳಲಾಗದಂತೆ ಈ ಸಮಾಜದ ಕಟ್ಟಕಡೆಯಲ್ಲಿ ಬದುಕುತ್ತಿರುವ ದಕ್ಕಲಿಗ ಮುಂತಾದ ಸಮುದಾಯದ ಗೋಳು ಕೇಳುವವರ್ಯಾರು? ಇಂತಹ ಆಲಕ್ಷಿತ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಗುರುತಿಸುವ ಮಾನದಂಡ ಯಾವುದು ಎಂಬುದು ಮುಖ್ಯ. ಜಾತಿ ಪಟ್ಟಿಗೆ ಸೇರಿಸುವುದಕ್ಕೆ ಮತ್ತು ತೆಗೆದು ಹಾಕಲು ಸಂಸತ್ತು ಮತ್ತು ರಾಷ್ಟ್ರಪತಿ ಅವರಿಗೆ ಅಧಿಕಾರ ಇದೆ. ಅದನ್ನು ಗಮನಿಸೋಣ.

ಅಸ್ಪೃಶ್ಯತೆ ಎಂದರೇನು? ಬಾಧಿತರು ಯಾರು? ಯಾರನ್ನು ಸ್ಪೃಶ್ಯರು ಎಂದು ಕರೆಯಲಾಗುತ್ತಿದೆ? ಅದಕ್ಕೆ ಮಾನದಂಡ ಯಾವುದು? ಅದಕ್ಕೆ ಸಾಂವಿಧಾನಿಕ ಬಲವಿದೆಯೇ? ಪರಿಶಿಷ್ಟ ಜಾತಿಗಳ ಕುರಿತು ಸಂವಿಧಾನದ ವ್ಯಾಖ್ಯಾನವನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಇವುಗಳನ್ನು ಸರಿಯಾಗಿ ಅರ್ಥೈಸದಿದ್ದರೆ ಮೀಸಲಾತಿ ಹಾಳಾಗಲಿ, ಕನಿಷ್ಠ ಸಹಬಾಳ್ವೆಯನ್ನು ಉಳಿಸಿಕೊಳ್ಳಲಾಗದು.

ಮೀಸಲಾತಿಯೇ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಹೋರಾಟ ಬಲಗೊಳಿಸಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ಜನಸಮುದಾಯಗಳು ಐಕ್ಯ ಹೋರಾಟಕ್ಕೆ ಮುಂದಾಗಬೇಕು. ಅದು ಸದ್ಯ ನಮ್ಮ ಮುಂದಿರುವ ಸವಾಲು.

5. ಕೆಲವು ಬಲಗೈ ರಾಜಕಾರಣಿಗಳು ಒಳಮೀಸಲಾತಿ ವಿರುದ್ಧವಾಗಿ ದನಿ ಎತ್ತಿದ ಕಾರಣಕ್ಕೆ ಹೊಲೆಮಾದಿಗರ ನಡುವೆ ಭಿನ್ನತೆ ಉಂಟಾಯಿತು ಎನ್ನಲಾಗುತ್ತದೆ. ನಿಜಕ್ಕೂ ಆಯಾ ದಲಿತ ಜಾತಿಗಳನ್ನು ಪ್ರತಿನಿಧಿಸುವ ಪ್ರಾಮಾಣಿಕ ರಾಜಕಾರಣಿಗಳು ಇಂದಿಗೂ ಇದ್ದಾರೆಯೇ?

ಈ ಪ್ರಶ್ನೆಯೇ ತಪ್ಪು. ನಮ್ಮ ಸಮುದಾಯಗಳ ರಾಜಕಾರಣಿಗಳನ್ನು ವಿಲನ್‍ಗಳಾಗಿಸಲು ಇಂತಹ ಪ್ರಶ್ನೆಗಳನ್ನು ಹರಿಬಿಡಲಾಗುತ್ತಿದ್ದೆ. ಮೀಸಲಾತಿ ವಿರೋಧಿ ಸವರ್ಣೀಯ ರಾಜಕಾರಣಿಗಳನ್ನು ಸುಧಾರಕರಂತೆ ಬಿಂಬಿಸಲಾಗುತ್ತಿದೆ. ಇದನ್ನು ಪರಿಶಿಷ್ಟರು ಎಚ್ಚರಿಕೆಯಿಂದ ಗಮನಿಸಬೇಕು. ಇನ್ನೂ ಸುಧಾರಿಸಬೇಕಾದ ಸಂಸದೀಯ ವ್ಯವಸ್ಥೆಯ ಮಿತಿಯೊಳಗೆ ನಮ್ಮವರು ಒಂದಷ್ಟು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದಾರೆ. ಇನ್ನಷ್ಟು ನೀರಿಕ್ಷೆ ಮಾಡೊಣ. ನಮ್ಮವರ ಮಧ್ಯೆ ಅನಗತ್ಯ ದ್ವೇಷ ಬಿತ್ತುವುದು ಬೇಡ.

ಜಾತಿ ತಾರತಮ್ಯ ವಿನಾಶಕ್ಕಾಗಿ ಮತ್ತು ದಲಿತ ಸಮುದಾಯಗಳ ಪ್ರಗತಿಗಾಗಿ ಹಲವು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಬಲಗೈ ಸಮುದಾಯದವರು ಇದಕ್ಕೆ ವಿರೋಧ ಇದ್ದಾರೆ ಎಂಬುದು ತಪ್ಪು. ವೈಜ್ಞಾನಿಕವಾಗಿ ಅಧ್ಯಯನವಾಗಲಿ ಎಂದು ಎಲ್ಲರೂ ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ವೈದಿಕ ಮನಸ್ಥಿತಿಯ ಸವರ್ಣೀಯರು ಇದಕ್ಕೆ ಅವಕಾಶ ಕೊಡುತ್ತಿಲ್ಲ.

6. ಒಳಮೀಸಲಾತಿ ದಲಿತರನ್ನು ಒಡೆದು ಆಳುತ್ತದೆ ಎಂದು ಆರಂಭದಲ್ಲಿ ಭಯ ಬೀಳಿಸಿದ್ದಿದೆ. ಆದರೆ ಈಗ ಒಳಮೀಸಲಾತಿ ಜಾರಿಯಾಗದಿದ್ದರೆ ದಲಿತರ ಒಗ್ಗಟ್ಟು ಸಂಪೂರ್ಣ ಮುರಿದು ಬೀಳುತ್ತದೆ ಎಂಬ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಇದು ತಪ್ಪು ಅಭಿಪ್ರಾಯ. ಅಂತಹ ಪರಿಸ್ಥಿತಿ ಇಲ್ಲ. ಅಂತಹ ಪರಿಸ್ಥಿತಿ ಸೃಷ್ಟಿಸುವ ಪಿತೂರಿಗಳು ನಡೆಯುತ್ತಿವೆ. ಒಳಮೀಸಲಾತಿ ‘ಬರೀ ಪರಿಶಿಷ್ಟ ಜಾತಿಗಳ ಮಧ್ಯೆ ಮಾತ್ರ ಹಂಚಿಕೆ ಆಗಲಿ’ ಎಂಬ ಚರ್ಚೆಯೇ ಅಪಾಯಕಾರಿ. ಜಾತಿ ಜನಸಂಖ್ಯೆವಾರು ಮೀಸಲಾತಿ ಹಂಚಿಕೆ ಪ್ರಕ್ರಿಯೆ ಮೊದಲಿಗೆ EWS, OBC, ST, ಕೊನೆಗೆ SCಗಳಿಗೆ ಅನ್ವಯವಾಗಲಿ. ಸಮಾನ ಪಾಲನ್ನು ಹಂಚಿತಿನ್ನುವ ದಲಿತರಲ್ಲಿ ಮೂಲತಃ ಇದೆ. ಇದು ಸಮಾನತೆ ಸಾಧಿಸುವ ಮಾರ್ಗ. ಹೀಗಾದಾಗ ದಲಿತರ ಐಕ್ಯತೆ ಹಾಳಾಗೊಲ್ಲ. ಸಾಮಾಜಿಕ ನ್ಯಾಯ ಬಲಗೊಳ್ಳುತ್ತೆ. ಪರಿಶಿಷ್ಟ ಜಾತಿಗಳನ್ನೇ ಗುರಿಯಾಗಿಸುವ ಚರ್ಚೆ ದುರುದ್ದೇಶಪೂರಿತ. ಅವೇಶಕ್ಕೊಳಗಾಗದೆ ಸೌಹಾರ್ದಯುತವಾಗಿ ಕೂತು ಚರ್ಚಿಸಿದರೆ ಪರಿಹಾರ ಸಾದ್ಯ.

7. ಸದಾಶಿವ ಆಯೋಗದ ವರದಿ ಜಾರಿ ಮಾಡುವುದರ ಕುರಿತು ನಿಮ್ಮ ಅನಿಸಿಕೆ ಏನು?

ನ್ಯಾ. ಸದಾಶಿವ ಆಯೋಗದ ವರದಿ ಮೊದಲು ಬಹಿರಂಗ ಚರ್ಚೆಗೆ ಬಿಡುಗಡೆ ಆಗಲಿ. ಅದರ ಶಿಫಾರಸ್ಸುಗಳ ಸತ್ಯಾಸತ್ಯಾತೆ ಕುರಿತು ಅನಂತರ ಚರ್ಚಿಸೋಣ. ಈ ವರದಿ ಜನಪರವಾಗಿದ್ದರೆ ಒಪ್ಪೋಣ, ಜನವಿರೋಧಿ ಆಗಿದ್ದರೆ ತಿರಸ್ಕರಿಸೋಣ. ಭಾಗಶಃ ಸರಿಯಿದ್ದರೆ ಮತ್ತಷ್ಟು ಅವಲೋಕಿಸಿ ನಿರ್ಧರಿಸೋಣ. ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡು, ಚರ್ಚಿಸಿ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಬಹುದು. ಆದರೆ ಈ ವರದಿಯನ್ನು ಬಚ್ಚಿಟ್ಟು ರಾಜಕೀಯ ಮಾಡಲಾಗುತ್ತಿದೆ. ಸಹೋದರ ಸಮುದಾಯಗಳ ಮಧ್ಯೆ ಅನಗತ್ಯ ದ್ವೇಷ ಹುಟ್ಟುಹಾಕಲಾಗುತ್ತಿರುವುದು ಬೇಸರದ ಸಂಗತಿ. ಇದಕ್ಕೆಲ್ಲಾ ಸಂವಿಧಾನದಲ್ಲಿ ಉತ್ತರವಿದೆ. ಮೀಸಲಾತಿ ವಿರೋಧಿಸುತ್ತಲೇ ಬಂದಿರುವ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ. ನಮಗೆಲ್ಲ ಬಾಬಾ ಸಾಹೇಬ್ ಬೆಳಕಾಗಬಹುದು, ಕಾದು ನೋಡೊಣ.

  • ಅನಂತನಾಯಕ್ ಎನ್

(ಹೈಕೋರ್ಟ್ ವಕೀಲರು, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು. ವಿದ್ಯಾರ್ಥಿ ದೆಸೆಯಿಂದ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.)


ಇದನ್ನೂ ಓದಿ: ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿದ ಈ ಎರಡು ಮಹತ್ವದ ತೀರ್ಪುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...