ಜೂನ್ 14 ರಂದು ನಟ ಸುಶಾಂತ್ ಸಿಂಗ್ ರಜಪೂತ್ ತನ್ನ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಪ್ರಾಥಮಿಕ ತನಿಖೆಯನ್ನಾಧರಿಸಿ ಮುಂಬೈ ಪೊಲೀಸರು ಅದನ್ನು ಆತ್ಮಹತ್ಯೆಯೆಂದು ಕರೆದಿದ್ದರು. ಆದರೆ ಅದು ಕೊಲೆಯೆಂದು, ಮುಂಬೈ ಪೊಲೀಸರು ಪ್ರಕರಣ ಮುಚ್ಚಿಹಾಕುತ್ತಿದ್ದಾರೆ ಎಂದು ಆರೋಪಿಸಿ, ಸುಶಾಂತ್ ಸಿಂಗ್ಗೆ ನ್ಯಾಯ ಬೇಕೆಂದು ಆಗ್ರಹಿಸಿ ದೊಡ್ಡ ಪ್ರಚಾರಾಂದೋಲನ ನಡೆದಿತ್ತು. ಇದಕ್ಕಾಗಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 80,000ಕ್ಕೂ ಹೆಚ್ಚು ಫೇಕ್ ಅಕೌಂಟ್ಗಳನ್ನು ರಚಿಸಲಾಗಿತ್ತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ವಿದೇಶಗಳಿಂದಲೂ ಖಾತೆ ತೆರೆದು ವಿದೇಶಿ ಭಾಷೆಗಳಿಂದಲೂ ಸೇರಿ #justiceforsushant, #sushantsinghrajput #SSR ಹ್ಯಾಷ್ಟ್ಯಾಗ್ಗಳನ್ನು ಟ್ರೆಂಡ್ ಮಾಡಲಾಗಿತ್ತು. ಹಲವಾರು ಟ್ವೀಟ್ಗಳು ಇಟಲಿ, ಜಪಾನ್, ಪೋಲಾಂಡ್, ಸ್ಲೋವೇನಿಯ, ಇಂಡೋನೇಷ್ಯ, ತುರ್ಕಿ, ಫ್ರಾನ್ಸ್, ಥೈಲ್ಯಾಂಡ್, ರೋಮೇನಿಯ ದೇಶಗಳಿಂದ ದಾಖಲಾಗಿವೆ ಎಂದು ಮುಂಬೈ ಪೊಲೀಸರ ಸೈಬರ್ ವಿಭಾಗ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
ಮುಂಬೈ ಪೊಲೀಸರನ್ನು ಕೆಳಮಟ್ಟದ ಭಾಷೆಯಲ್ಲಿ ಹಣಿಯಲು ಮತ್ತು ಅದು ಕೊಲೆ ಎಂದು ಬಿಂಬಿಸಲು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲಾಗಿತ್ತು. ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಸುಶಾಂತ್ ಕುಟುಂಬ ಕೊಲೆ ಎಂದು ಆರೋಪಿಸಿದ ನಂತರ ಬಿಹಾರ ಪೊಲೀಸರ ಒತ್ತಾಯದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಎರಡು ತಿಂಗಳು ಕಳೆದರೂ ಕೊಲೆ ಎಂದು ಸಾಬೀತುಪಡಿಸಲು ಸಿಬಿಐಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ಮೊನ್ನೆ ಏಮ್ಸ್ನ 7 ವೈದ್ಯರ ತಂಡವು ಸುಶಾಂತ್ ಸಿಂಗ್ ಸಾವಿನ ಕುರಿತು ವೈದ್ಯಕೀಯ ತನಿಖೆ ಪೂರ್ಣಗೊಳಿಸಿದ್ದು, ಇದು ಸ್ಪಷ್ಟವಾದ ಆತ್ಮಹತ್ಯೆ, ಕೊಲೆಯಲ್ಲ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ‘ಕೊಲೆ ಸಿದ್ದಾಂತ’ ಸಂಪೂರ್ಣ ಸುಳ್ಳು: ಏಮ್ಸ್ ಮೂಲಗಳು
ಈ ಅಕೌಂಟ್ಗಳ ಕುರಿತು ತನಿಖೆ ನಡೆಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಸೈಬರ್ ವಿಭಾಗಕ್ಕೆ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ನಿರ್ದೇಶಿಸಿದ್ದಾರೆ.
ಕೊಲೆ ಎಂಬ ಪ್ರಚಾರದ ಹಿಂದಿದೆ ಬಿಜೆಪಿ ಪಾತ್ರ
ಸುಶಾಂತ್ ಕೊಲೆ ಸಿದ್ಧಾಂತದ ಹಿಂದೆ ಬಿಜೆಪಿ ಪಕ್ಷದ ಕಾರ್ಯಕರ್ತರು ವ್ಯವಸ್ಥಿತವಾಗಿ ಕೆಲಸ ಮಾಡಿದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆ ತಿಳಿಸಿದೆ. ಜೂನ್ 14 (ಸುಶಾಂತ್ ಸಾವಿನ ದಿನ) ರಿಂದ ಸೆಪ್ಟಂಬರ್ 12 ರವರೆಗಿನ ಸಾಮಾಜಿಕ ಜಾಲತಾಣದಲ್ಲಿನ ಟ್ರೆಂಡ್ಗಳು, ಪ್ರವೃತ್ತಿಗಳು, ಹ್ಯಾಂಡಲ್ಗಳು ಮತ್ತು ರಾಜಕಾರಣಿಗಳು, ಬಾಲಿವುಡ್ ನಟ-ನಟಿಯರು ಮತ್ತು ಮಾಧ್ಯಮಗಳ ಟ್ವೀಟ್ಗಳನ್ನು ಅಧ್ಯಯನ ಮಾಡಲಾಗಿದೆ. ಇವೆಲ್ಲವುಗಳ ಆಧಾರದಲ್ಲಿ ಬಿಜೆಪಿ ಮತ್ತು ಬಿಜೆಪಿ ಪರವಿರುವ ಕಾರ್ಯಕರ್ತರು ಕೊಲೆ ಸಿದ್ಧಾಂತವನ್ನು, ಊಹಾಪೋಹಗಳನ್ನು ಹರಿಯಬಿಟ್ಟಿದ್ದಾರೆ. ಹಲವು ಟ್ರೋಲ್ ಪೇಜ್ಗಳು ಮುಂಬೈ ಪೊಲೀಸರನ್ನು ಗುರಿಯಾಗಿಸಿಕೊಂಡಿವೆ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರ ಎಕ್ಸ್ಪೊಸ್ಡ್, ಗೃಹಮಂತ್ರಿ ಅನಿಲ್ ದೇಶ್ಮುಖ್ ಸುಶಾಂತ್ ಕೊಲೆಯ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ, ಮುಂಬೈ ಪೊಲೀಸರು ಅಡಿಯಾಳುಗಳು ಎಂದೆಲ್ಲಾ ಪ್ರಚಾರ ಮಾಡಲಾಯ್ತು. ನಿಜವಾಗಿಯೂ ಸುಶಾಂತ್ ಆತ್ಮಹತ್ಯೆಯನ್ನು ಮಾನಸಿಕ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಚರ್ಚಿಸಲು ಇದ್ದ ಅವಕಾಶವನ್ನು ಕೊಲೆ ಎಂದು ದಿಕ್ಕುತಪ್ಪಿಸಲಾಯ್ತು ಎಂದು ಸಂಶೋಧನೆ ತಿಳಿಸಿದೆ.
ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು
ಸುಶಾಂತ್ ಸಾವನ್ನು ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧ ಕಲ್ಪಿಸಲಾಯ್ತು. ಬಿಜೆಪಿ ಪಕ್ಷವು ತನ್ನ ಬ್ಯಾನರ್ಗಳಲ್ಲಿ ಸುಶಾಂತ್ಗೆ ನ್ಯಾಯಕೊಡಿಸುತ್ತೇವೆ ಎಂದು ಚಿತ್ರ ಸಮೇತ ಪ್ರಕಟಿಸಿಕೊಂಡಿದ್ದರು. ರಿಪಬ್ಲಿಕ್ ಟಿವಿ ಸೇರಿದಂತೆ ಕೆಲ ಮಾಧ್ಯಮಗಳು ಪ್ರತಿದಿನ ಇದೇ ಸುದ್ದಿಯನ್ನು ಬಿತ್ತರಿಸಿದ್ದರು. ಒಟ್ಟಿನಲ್ಲಿ ನಟನೊಬ್ಬನ ಸಾವನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ದೇಶದ ದುರಂತವಾಗಿದೆ.
ಇದನ್ನೂ ಓದಿ: ಸುಶಾಂತ್ ಸಾವನ್ನು ಬಿಹಾರ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ!