ಹೈದರಾಬಾದ್ ಹೊರವಲಯದಲ್ಲಿರುವ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಡಗಿಗಳೆಂದು ಗುರುತಿಸಲಾದ ಈ ಹತ್ತು ಮಂದಿ ಕಾರ್ಮಿಕರು ಜಾರ್ಖಂಡ್ ಮೂಲದವರಾಗಿದ್ದು, ಹೈದರಾಬಾದ್ನಿಂದ ತಮ್ಮ ಸ್ವಂತ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರು. ಔಟರ್ ರಿಂಗ್ ರೋಡ್(ORR) ಎಕ್ಸ್ಪ್ರೆಸ್ವೇಯಲ್ಲಿ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪತಂಚೇರು ಬಳಿ ಇವರ ಎಸ್ಯುವಿ ವಾಹನಕ್ಕೆ ಹಿಂದಿನಿಂದ ವ್ಯಾನ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: #MigrantLivesStillMatter: ವಲಸೆ ಕಾರ್ಮಿಕರ ಗೋಳು ಕೇಳಿ – ಟ್ವಿಟ್ಟರ್ ಅಭಿಯಾನ
“ವ್ಯಾನ್ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಎಸ್ಯುವಿ ವಾಹನ ನಿಯಂತ್ರಣ ಕಳೆದುಕೊಂಡು ಸ್ಥಳದಲ್ಲೇ ಆರು ಜನ ಮೃತಪಟ್ಟಿದ್ದಾರೆ. ಕಾರ್ಗೆ ಗುದ್ದಿದ ವ್ಯಾನ್ ಸ್ಥಳದಿಂದ ಪರಾರಿಯಾಗಿದೆ. ಆದರೆ ವ್ಯಾನ್ನ ಕೆಲವು ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ ”ಎಂದು ಪತಂಚೇರು ಇನ್ಸ್ಪೆಕ್ಟರ್ ರಾಮಿ ರೆಡ್ಡಿ ಮಾಹಿತಿ ನೀಡಿದ್ದಾರೆ.
ಮೃತಪಟ್ಟವರನ್ನು ಕಮಲೇಶ್ ಲೋಹರೆ, ಹರಿ ಲೋಹರೆ, ಪ್ರಮೋದ್ ಬುಹಾರೆ, ವಿನೋದ್ ಬುಹಾರೆ ಮತ್ತು ಪವನ್ ಕುಮಾರ್ ಎಮದು ಗುರುತಿಸಲಾಗಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಎಲ್ಲರೂ ಜಾರ್ಖಂಡ್ನ ರಾಮ್ಗಢ ಜಿಲ್ಲೆಯವರು.
ಗಂಭೀರ ಗಾಯಗಳಿಂದ ಬಳಲುತ್ತಿದ್ದವರನ್ನು ಪತಂಚೇರುವಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಗಾಯಾಳುಗಳು ಕೂಡ ಜಾರ್ಖಂಡ್ನ ಗೋರಖ್ಪುರದ ಪ್ರಮೋದ್ ಕುಮಾರ್, ಅರ್ಜುನ್, ಆನಂದ್ ಕುಮಾರ್ ಮತ್ತು ಚಂದ್ರ ವಂಸಿ ಎಂದು ತಿಳಿದುಬಂದಿದೆ.