ಕರ್ನಾಟಕದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ಕೈಗೊಂಡ ಬಳಿಕ ಪದವಿ, ಡಿಪ್ಲಮೊ, ಇಂಜಿನಿಯರಿಂಗ್, ವೈದ್ಯಕೀಯ, ಫಾರ್ಮಸಿ ಕಾಲೇಜುಗಳೇನೋ ಆರಂಭವಾಗಿವೆ. ಇದು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಂಕಟವನ್ನು ತಂದೊಡ್ಡಿದೆ. ಈವರೆಗೆ ಗ್ರಾಮೀಣ ಭಾಗದಲ್ಲಿ ಬಸ್ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು ಪಾಠ-ಪ್ರವಚನ ಕೇಳಲೂ ಅಡ್ಡಿಯನ್ನುಂಟು ಮಾಡಿದೆ.
ರಾಜ್ಯ ಸರ್ಕಾರ ಕಾಲೇಜುಗಳನ್ನು ಆರಂಭಿಸಿಯೇ ತೀರಬೇಕು ಎಂಬ ಹಟಕ್ಕೆ ಬಿದ್ದಂತೆ ತೀರ್ಮಾನ ಕೈಗೊಂಡಿದೆ. ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ವಿದ್ಯಾರ್ಥಿ, ಪೋಷಕರ ಅಭಿಪ್ರಾಯ ಕೂಡ ಕೇಳಿಲ್ಲ. ಸರ್ಕಾರ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಮೊದಲೇ ಉನ್ನತ ಶಿಕ್ಷಣ ಪಡೆಯಲು ಆಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಮತ್ತಷ್ಟು ದೂರ ಉಳಿಯುವಂತೆ ಮಾಡುವ ಹುನ್ನಾರ ನಡೆದಿದೆ ಎಂಬ ಆರೋಪವೂ ಇದೆ.
ಇದನ್ನೂ ಓದಿ: ಜೈಲು ಖೈದಿಗಳ ಮಕ್ಕಳ ಶಿಕ್ಷಣಕ್ಕೆ 20 ಲಕ್ಷ ಮೀಸಲಿಟ್ಟ ಕೇರಳ ಸರ್ಕಾರ!
ರಾಜ್ಯದ ತಾಲೂಕು ಕೇಂದ್ರಗಳು ಮತ್ತು ಹೋಬಳಿ ಕೇಂದ್ರಗಳಲ್ಲಿ ಪದವಿ ಕಾಲೇಜುಗಳನ್ನು ತೆರೆಯಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವೂ ಹೌದು. ಆದರೆ ಈಗ ಸರ್ಕಾರ ಕಾಲೇಜುಗಳ ಆರಂಭದ ಬಗ್ಗೆ ತೆಗೆದುಕೊಂಡಿರುವ ನಿರ್ಧಾರ ವೈಜ್ಞಾನಿಕವಾಗಿಲ್ಲ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತೆ ಕಂಡುಬರುತ್ತಿಲ್ಲ. ಹಾಗೆ ನೋಡಿದರೆ ಮೇಲ್ನೋಟಕ್ಕೆ ಈ ವಿದ್ಯಾರ್ಥಿಗಳನ್ನು ಕಡೆಗಣಿಸಿರುವುದು ಕಾಣುತ್ತದೆ.
ಎಸ್.ಎಫ್.ಐ ತುಮಕೂರು ಜಿಲ್ಲಾಧ್ಯಕ್ಷ ಹಾಗು ವಿದ್ಯಾರ್ಥಿ ನಾಯಕ ಈ.ಶಿವಣ್ಣ ನಾನುಗೌರಿ.ಕಾಂ ಜೊತೆ ಮಾತನಾಡಿ “ಗ್ರಾಮೀಣ ಭಾಗದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಒಂದೆರಡು ಬಸ್ಗಳನ್ನು ಬಿಟ್ಟಿದ್ದಾರೆ. ಅವು ಯಾವುದೋ ಸಮಯಕ್ಕೆ ಬರುತ್ತವೆ-ಹೋಗುತ್ತವೆ. ಹಾಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಮಸ್ಯೆಯಾಗುತ್ತದೆ. ಇದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರವೂ ನಡೆಯುತ್ತಿದೆ. ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ಗಳನ್ನು ಮೊದಲು ಇದ್ದ ರೀತಿಯಲ್ಲಿ ಬಿಟ್ಟರೆ ಮಾತ್ರ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯ” ಎಂದು ಹೇಳಿದರು.
ಇದನ್ನೂ ಓದಿ: ಮಗು ಕನಸು ಕಾಣುವ-ಚಿಂತಿಸುವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೋರಾಟದ ಸುತ್ತ..
“ಈ ಸಂಬಂಧ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಶೇ. 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ಗಳಲ್ಲಿ ಉಳಿದು ಕೊಳ್ಳಲು ಅವಕಾಶ ಕಲ್ಪಿಸಿದೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಹಾಸ್ಟೆಲ್ ಸೇರಿಕೊಂಡು ಓದುವ ಕನಸಿನೊಂದಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಈ ಸುತ್ತೋಲೆ ಬರಸಿಡಿಲು ಬಡಿದಂತೆ ಆಗಿದೆ. ಸರ್ಕಾರ ಅವರ ಉನ್ನತ ಶಿಕ್ಷಣದ ಕನಸಿಗೆ ತಣ್ಣೀರು ಎರೆಚಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಲ್ಲಿ ಹೋಗಬೇಕು. ಅವರು ವ್ಯಾಸಂಗ ಮಾಡಬಾರದೆ? ಚುನಾವಣೆಯಲ್ಲಿ ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಶೇ. 50 ರ ನೀತಿ ಅನ್ವಯವಾಗುವುದಿಲ್ಲವೇ? ಸ್ಯಾನಿಟೈಜ್ ಮಾಡುವುದಿಲ್ಲ, ಮಾಸ್ಕ್ ಇರುವುದಿಲ್ಲ, ದೈಹಿಕ ಅಂತರವನ್ನು ಕೇಳುವಂತೆಯೇ ಇಲ್ಲ. ರಾಜಕಾರಣಿಗಳು ನಡೆಸುವ ಸಭೆ -ಸಮಾರಂಭಗಳಿಗೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಮಾತ್ರ ನಿಯಮಗಳನ್ನು ವಿಧಿಸಿ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 175ಕ್ಕೂ ಹೆಚ್ಚು ತಾಲೂಕು ಕೇಂದ್ರಗಳಿವೆ. ಪ್ರತಿಯೊಂದು ತಾಲೂಕು ಕೇಂದ್ರದಲ್ಲೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಹೋಬಳಿ ಮಟ್ಟದಲ್ಲೂ ಕಾಲೇಜುಗಳಿವೆ. ವಿದ್ಯಾರ್ಥಿಗಳು ನಿತ್ಯವೂ ಕಾಲೇಜುಗಳಿಗೆ ತಲುಪಲು ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬಸ್ಗಳ ಸಂಚಾರವೂ ಇಲ್ಲ. ಅವುಗಳ ಓಡಾಟಕ್ಕೆ ಅನುಮತಿಯನ್ನೂ ನೀಡಿಲ್ಲ. ಪ್ರಯಾಣಿಕರ ಸಂಖ್ಯೆ ಆಧರಿಸಿ ಕೆಎಸ್ಆರ್.ಟಿ.ಸಿ ಬಸ್ ಬಿಡಲಾಗಿದೆ. ಅದೂ ರಾಜ್ಯ ಹೆದ್ದಾರಿಗಳಲ್ಲಿ ಮಾತ್ರ ಬಸ್ಗಳು ಸಂಚರಿಸುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಹೇಗೆ ತರಗತಿಗಳಿಗೆ ಹಾಜರಾಗಬೇಕು ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಿದಂತೆ ಇಲ್ಲ.
ಇದನ್ನೂ ಓದಿ: ಕೊರೊನಾ ನಂತರ 1.10 ಕೋಟಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ- ಯುನೆಸ್ಕೋ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲ. ನಗರದ ಹಾಸ್ಟೆಲ್ಗಳಲ್ಲಿದ್ದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯೂ ಇಲ್ಲ. ಅರ್ಧ ಮಂದಿಗೆ ಮಾತ್ರ ಹಾಸ್ಟೆಲ್ನಲ್ಲಿ ಉಳಿದುಕೊಳ್ಳಲು ಮತ್ತು ಊಟ ನೀಡುವಂತಹ ಕ್ರಮ ಕೈಗೊಂಡಿರುವ ಸರ್ಕಾರ, ವಿದ್ಯಾರ್ಥಿಗಳನ್ನು ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸಿದೆ. ಅವರ ಶಿಕ್ಷಣದ ಹಕ್ಕನ್ನು ಕಸಿದುಕೊಂಡಿದೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಲಾಭ ಬರುವಂತಿದ್ದರೆ ಎಷ್ಟು ಜನ ಬೇಕಾದರೂ ಸೇರಬಹುದು. ಬಸ್ಗಳಲ್ಲಿ ದೈಹಿಕ ಅಂತರ ಕಾಪಾಡದೆಯೂ ಇರಬಹುದು. ಇದು ನ್ಯಾಯವೇ? ಎಂಬ ಪ್ರಶ್ನೆ ಎದುರಾಗಿದೆ.
ಕಾಲೇಜುಗಳ ಆರಂಭಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, “ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಉಚಿತವಾಗಿ ಬಸ್ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಬೇಕು. ಮಾಸ್ಕ್, ಸ್ಯಾನಿಟೈಜರ್ ವ್ಯವಸ್ಥೆಯನ್ನು ಸರ್ಕಾರವೇ ನೀಡಬೇಕು. ಕೊರೊನ ಸೋಂಕಿನಿಂದ ಕೆಲಸ, ಉದ್ಯೋಗ ಕಳೆದುಕೊಂಡ ಆರ್ಥಿಕ ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಬರಬೇಕು. ಶುಲ್ಕವನ್ನು ವಾಪಸ್ ನೀಡಬೇಕು” ಎಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.
ಇದನ್ನೂ ಓದಿ: ದಮನಿತರಿಗೆ ಶಿಕ್ಷಣಕ್ರಮ ಹೇಗಿರಬೇಕು?: ಪಾಲೊ ಫ್ರೇರಿಯ ‘ಪೆಡಗಾಗಿ ಆಫ್ ದಿ ಅಪ್ರೆಸ್ಡ್’


