Homeಕರ್ನಾಟಕಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ

ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ.ಆದರೆ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ.

- Advertisement -
- Advertisement -

ನ್ಯಾಯಪಥ (ವಾರಪತ್ರಿಕೆ. ಸಂ. 3 ಸಂ. 11. ನವೆಂಬರ್ 18, 2020)ದಲ್ಲಿ ಪ್ರೊ. ಶಿವರಾಮಯ್ಯ ಅವರು ‘ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ’ ಎಂಬ ಲೇಖನದಲ್ಲಿ ಪಂಪ ಮಹಾಕವಿಯ ಮಹಾಭಾರತವನ್ನು ನಿದರ್ಶನವಾಗಿಟ್ಟುಕೊಂಡು ಕನ್ನಡ ರಾಷ್ಟ್ರೀಯತೆಯ ವಿವಿಧ ಆಯಾಮಗಳನ್ನು (ಜಾತಿವಿರೋಧಿ ಸಂಗತಿಗಳನ್ನು ಸೇರಿಸಿಕೊಂಡು) ಕುರಿತಂತೆ ಚರ್ಚಿಸಿದ್ದಾರೆ. ಕವಿರಾಜಮಾರ್ಗಕಾರನಲ್ಲಿನ ಕನ್ನಡ ರಾಷ್ಟ್ರೀಯತೆಯ ಎಳೆಗಳನ್ನು ಗುರುತಿಸಲು ಅವರು ಪ್ರಯತ್ನಿಸಿದ್ದಾರೆ. ಕನ್ನಡ ರಾಷ್ಟ್ರೀಯತೆಗೆ, ಒಕ್ಕೂಟ ರಾಜಕೀಯ ಪ್ರಣಾಳಿಕೆಗೆ ಮತ್ತು ನಾಡಿನ ಬಹುತ್ವ ಸಂಸ್ಕೃತಿಗೆ ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಚರಿತ್ರೆಯಿದೆ. ಕನ್ನಡ ಮನಸ್ಸು ಯಾವತ್ತೂ ವಿಶ್ವಾತ್ಮಕತೆ ಮತ್ತು ಸ್ಥಳೀಯತೆಗಳನ್ನು ಒಟ್ಟಿಗೆ ನಡೆಸಿಕೊಂಡು ಬಂದಿರುವುದಕ್ಕೆ ಇತಿಹಾಸದ ಸಾಕ್ಷಿಯಿದೆ. ಸಾಹಿತ್ಯದ ಮತ್ತು ಕನ್ನಡದ ಎಲ್ಲ ವಿದ್ವಾಂಸರಂತೆ ಪ್ರೊ. ಶಿವರಾಮಯ್ಯ ಅವರೂ ಸಹ ಕವಿರಾಜಮಾರ್ಗಕಾರನ ಪ್ರಸಿದ್ಧ ಕಂದ ಪದ್ಯದಲ್ಲಿನ ಭೌಗೋಳಿಕ ನೆಲೆಗಳನ್ನು ಕುರಿತಂತೆ (ಕಾವೇರಿಯಿಂದ ಆ ಗೋದಾವರಿವರೆಗಿರ್ಪ) ಮಾತನಾಡಿದ್ದಾರೆಯೇ ವಿನಾ ಆ ಪದ್ಯದ ಕೊನೆಯ ಸಾಲು ‘ವಸುಧಾ ವಲಯ ವಿಲೀನ ವಿಷದ ವಿಷಯ ವಿಶೇಷಂ’ ಎಂಬುದರ ಇಂಗಿತಾರ್ಥವನ್ನು ಕುರಿತಂತೆ ಹಚ್ಚು ಚರ್ಚೆಗಳಾಗಿಲ್ಲ. ಈ ಸಾಲಿನಲ್ಲಿ ಕವಿರಾಜಮಾರ್ಗಕಾರನು ಪ್ರಧಾನವಾಗಿ ಒಂದು ನೆಲೆಯಲ್ಲಿ ಬಹುತ್ವವನ್ನು ಮತ್ತೊಂದು ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾನೆ. ವಸುಧೆಯಲ್ಲಿ ವಿಲೀನ ಎಂದರೆ ಅಲ್ಲಿ ಅನೇಕ ಭಾಷೆಗಳು, ಅನೇಕ ಧರ್ಮಗಳು, ಅನೇಕ ಸಂಸ್ಕೃತಿಗಳು, ಅನೇಕ ಪ್ರದೇಶ-ವಿಶಿಷ್ಟತೆಗಳು ಇರುತ್ತವೆ ಎಂದು ಅರ್ಥ (ಬಹುತ್ವ). ವಸುಧೆಯಲ್ಲಿ ವಿಲೀನವಾಗಿದ್ದರೂ ಅದು ವಿಶಿಷ್ಟವಾದುದು ಎಂಬುದು ಒಕ್ಕೂಟ ತತ್ವವನ್ನು ಹೇಳುತ್ತಿದೆ. ಇದನ್ನು ಯಾವ ಸಂಕೋಚವೂ ಇಲ್ಲದೆ ನಾವು ‘ಕನ್ನಡ ರಾಷ್ಟ್ರೀಯತೆ ಪ್ರಣಾಳಿಕೆ’ ಎಂದು ಕರೆಯಬಹುದು. ಈ ಸಾಲಿನಲ್ಲಿ ಮಾರ್ಗಕಾರ ಏನನ್ನು ಹೇಳುತ್ತಿದ್ದಾನೆ?

ಇದನ್ನೂ ಓದಿ: ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಕನ್ನಡ ಜನಪದವು ‘ವಸುಧೆ’ಯಲ್ಲಿ ಲೀನವಾಗಿದೆ. ಅದು ಲೀನವಾಗಿದ್ದರೂ ತನ್ನ ‘ವಿಶಿಷ್ಟತೆ’ಯನ್ನು ಕಾಪಿಟ್ಟುಕೊಂಡು ಬಂದಿರುವುದನ್ನು ಇದು ಹೇಳುತ್ತಿದೆ. ಕನ್ನಡ ಸಂಸ್ಕೃತಿಯು ವಸುಧೆಯಲ್ಲಿನ ಎಲ್ಲ ಅಂಶಗಳನ್ನು ಒಳಗು ಮಾಡಿಕೊಂಡಿದೆ. ಅದೇ ಸಮಯದಲ್ಲಿ ತನ್ನತನವನ್ನು ಅದು ಬಿಟ್ಟುಕೊಟ್ಟಿಲ್ಲ. ಅದು ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ವಿಶ್ವಾತ್ಮಕವಾಗಿದೆ. ‘ವಸುಧಾ ವಲಯ ವಿಲೀನ’ ಎಂಬುದು ವಿಶ್ವಾತ್ಮಕತೆಯನ್ನು (ಕೇಂದ್ರ-ಏಕಾತ್ಮಕತೆ) ‘ವಿಶದ ವಿಷಯ ವಿಶೇಷಂ’ ಎಂಬುದು ಸ್ಥಳೀಯತೆಯನ್ನು (ಉಪರಾಷ್ಟ್ರೀಯತೆ) ಪ್ರತಿನಿಧಿಸುತ್ತಿದೆ. ಅನೇಕ ಕನ್ನಡ ವಿದ್ವಾಂಸರು ಗುರುತಿಸಿರುವಂತೆ ಕವಿರಾಜಮಾರ್ಗ ಕೃತಿಯು ಒಂದು ರಾಜಕೀಯ ಪಠ್ಯ. ಕನ್ನಡದ ಸ್ವಾಯತ್ತತೆಯನ್ನು ಇಲ್ಲಿ ಮಾರ್ಗಕಾರ ಗುರುತಿಸುತ್ತಿದ್ದಾನೆ.

ನಮ್ಮ ನಾಡು (ಭಾರತ) ಚರಿತ್ರೆಯಲ್ಲಿ ಯಾವತ್ತೂ ಏಕಚಕ್ರಾಧಿಪತ್ಯವಾಗಿರಲಿಲ್ಲ. ಉದಾ: ರಾಷ್ಟ್ರಕೂಟ ಚಕ್ರವರ್ತಿ ಎರಡನೆಯ ಪುಲಿಕೇಶಿ ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಪಡೆದಿದ್ದರೆ ಅವನ ಸಮಕಾಲೀನನಾದ ಹರ್ಷವರ್ಧನನು ಉತ್ತರಾಪಥೇಶ್ವರ ಎನಿಸಿಕೊಂಡಿದ್ದನು. ಆದರೆ ಪುಲಿಕೇಶಿಯ ರಾಜ್ಯಾಡಳಿತದಲ್ಲಿ ಹತ್ತಾರು ಸಾಮಂತ ಅರಸರಿದ್ದರು. ಒಂದು ರೀತಿಯಲ್ಲಿ ಅದೊಂದು ಒಕ್ಕೂಟವಾಗಿತ್ತು. ಅದೇ ರೀತಿಯಲ್ಲಿ ಹರ್ಷವರ್ಧನನ ಸಾಮ್ರಾಜ್ಯದಲ್ಲಿಯೂ ಹತ್ತಾರು ಸಾಮಂತ ಅರಸರಿದ್ದರು. ಅದೊಂದು ಒಕ್ಕೂಟವಾಗಿತ್ತು. ಇವೆರಡೂ ಸೇರಿ ಮಹಾ ಒಕ್ಕೂಟವಾಗಿತ್ತು. ಹೀಗೆ ಚರಿತ್ರೆಯುದ್ದಕ್ಕೂ ಭಾರತದ ರಾಜಕೀಯವು ಹೀಗೆ ಒಕ್ಕೂಟ ವ್ಯವಸ್ಥೆಯಾಗಿತ್ತೇ ವಿನಾ ಏಕಚಕ್ರಾಧಿಪತ್ಯವಾಗಿರಲಿಲ್ಲ. ಇಂತಹ ಒಕ್ಕೂಟ ತತ್ವಕ್ಕೆ ನಮ್ಮ ಸಂವಿಧಾನವೂ ಮನ್ನಣೆ ನೀಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯು ಇದಕ್ಕೆ ಒಂದು ನಿದರ್ಶನವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಅನೇಕ ಇತಿಮಿತಿಗಳ ನಡುವೆ ಒಕ್ಕೂಟ ತತ್ವವನ್ನು ಪಾಲಿಸಿಕೊಂಡು ಬರಲಾಗಿದೆ. ಇದೀಗ ಇದಕ್ಕೆ ‘ಅಖಂಡವಾದಿ’ಗಳಿಂದ ಅಪಾಯ ಬಂದಿದೆ. ಇಂದು ಭಾರತ ರಾಜಕಾರಣವು ಅಖಂಡತೆಯ ವ್ಯಸನದಲ್ಲಿ ಮುಳುಗಿಹೋಗಿದೆ. ಒಂದು ದೇಶ-ಒಂದು ಧರ್ಮ, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಮಾರುಕಟ್ಟೆ, ಒಂದು ದೇಶ-ಒಂದು ಬ್ಯಾಂಕು, ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಶಿಕ್ಷಣ, ಒಂದು ದೇಶ-ಒಂದು ಮಹಾಭಾರತ-ರಾಮಾಯಣ ಇತ್ಯಾದಿ ಘೋಷಣೆಗಳು ಶಾಸನವಾಗುವ ಪ್ರಕ್ರಿಯೆಯಲ್ಲಿವೆ. ಈ ಬೆಳವಣಿಗೆಯು ರಾಜಕೀಯವಾಗಿ ಒಕ್ಕೂಟ ವ್ಯವಸ್ಥೆಗೆ, ಭಾಷೆಯ ನೆಲೆಯಲ್ಲಿ ಭಾಷಾವಾರು ಪ್ರಾಂತ ಪ್ರಣಾಳಿಕೆಗೆ, ಸಾಂಸ್ಕೃತಿಕವಾಗಿ ಬಹುತ್ವಕ್ಕೆ, ಕೃಷಿ ವೈವಿಧ್ಯತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ನಮ್ಮ ದೇಶವು ಚರಿತ್ರೆಯಲ್ಲಿ ಯಾವತ್ತೂ ಒಂದು ಆಗಿರಲಿಲ್ಲ. ಇದರರ್ಥ ಭಾರತ ಎಂಬುದಿರಲಿಲ್ಲ ಎಂಬುದಲ್ಲ. ಕವಿರಾಜಮಾರ್ಗಕಾರ ಹೇಳುವಂತೆ ಕನ್ನಡ ಜನಪದÀವು ಹೇಗೆ ಭಾವಿಸಿದ ಸಂಗತಿಯಾಗಿತ್ತೋ ಅದೇ ರೀತಿಯಲ್ಲಿ ಭಾರತವೂ ಒಂದು ಭಾವಿಸಿದ ರಾಷ್ಟ್ರವಾಗಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಒಕ್ಕೂಟ ತತ್ವವು, ಭಾಷಾ ಬಹುತ್ವವು, ಸಾಂಸ್ಕೃತಿಕ ಬಹುವಚನವು ಯಾವ ರೀತಿಯಲ್ಲಿಯೂ, ಯಾವತ್ತೂ ಭಾರತದ ಏಕತೆಗೆ ಕುತ್ತು ಉಂಟುಮಾಡಿಲ್ಲ.

‘ಪ್ರಾಂತೀಯತೆ’ಯನ್ನು ರಾಷ್ಟ್ರೀಯತೆಗೆ ಪ್ರತಿಯಾದುದು ಎಂದು ಭಾವಿಸಬೇಕಾಗಿಲ್ಲ, ಭಾರತದಲ್ಲಿ ಯಾವತ್ತೂ ಪ್ರಾಂತೀಯತೆ ಎನ್ನುವುದು ರಾಷ್ಟ್ರೀಯತೆಗೆ ಎದುರಾಗಿ ನಿಂತಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಮಾತೆಯನ್ನು ‘ಭಾರತ ಜನನಿಯ ತನುಜಾತೆ’ ಎಂದು ಕರೆದಿದ್ದಾರೆ. ಭಾರತದ ಎಲ್ಲ ಪ್ರಾಂತ್ಯಗಳಲ್ಲಿಯೂ ಇದೇ ಭಾವನೆಯು ನೆಲೆಯೂರಿದೆ. ಆದರೆ ಈ ಒಕ್ಕೂಟ ಮೌಲ್ಯವನ್ನು, ಸಾಂಸ್ಕೃತಿಕ ಬಹುತ್ವವನ್ನು ಕಳೆದುಕೊಂಡರೆ ನಾವು ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿಯವರೆಗೆ ನಮ್ಮ ನಾಡನಲ್ಲಿ ಬಹುಭಾಷೆ, ಬಹುಸಾಹಿತ್ಯ, ಬಹುಧರ್ಮ, ಬಹುಳಾಕಾರಿ ಮಾರುಕಟ್ಟೆ, ಪ್ರದೇಶ-ವಿಶಿಷ್ಟ ಕೃಷಿ, ಸ್ಥಳೀಯ ಬ್ಯಾಂಕಿಂಗ್ ವ್ಯವಸ್ಥೆ ಮುಂತಾದ ಬಹುವಚನ ಸಂಸ್ಕೃತಿಯನ್ನು ಪಾಲಿಸುತ್ತಾ ನಡೆಯುತ್ತೇವೆಯೋ ಅಲ್ಲಿಯವರೆಗೆ ನಮ್ಮ ಏಕತೆಗೆ, ಸಮಗ್ರತೆಗೆ ಅಪಾಯವಿರುವುದಿಲ್ಲ. ಅಭಿವೃದ್ಧಿಯ ನೆಲೆಯಲ್ಲಿಯೂ ಒಕ್ಕೂಟವು ಅಗತ್ಯವಾದ ಒಂದು ಪ್ರಣಾಳಿಕೆಯಾಗಿದೆ. ಒಕ್ಕೂಟ ತತ್ವವು ಕೇವಲ ರಾಜಕೀಯ ಸಂಗತಿಯಷ್ಟೇ ಅಲ್ಲ. ಅದಕ್ಕೆ ಭಾಷೆಯ, ಸಂಸ್ಕೃತಿಯ, ಸಾಮಾಜಿಕ ಆಯಾಮವಿದ್ದಂತೆ ಆರ್ಥಿಕ ಮುಖವೂ ಇದೆ.

ಈ ಹಿನ್ನೆಲೆಯಲ್ಲಿ ಇಂದು ಕನ್ನಡ ರಾಷ್ಟ್ರೀಯತೆಗೆ, ಕನ್ನಡ ಭಾಷೆಗೆ, ಕನ್ನಡ ಮನಸ್ಸಿಗೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕೇಂದ್ರದ ಒಕ್ಕೂಟ ಸರ್ಕಾರವು ಕುತ್ತನ್ನುಂಟುಮಾಡುತ್ತಿದೆ. ‘ಕೇಂದ್ರ ಸರ್ಕಾರ’ (ಯೂನಿಯನ್ ಗೌರ್ವನಮೆಂಟ್) ಎಂಬ ನುಡಿಯೇ ಅಸಂಬದ್ಧವಾದುದು. ನಮ್ಮ ಸಂವಿಧಾನದಲ್ಲಿ ಬಳಕೆಯಾಗಿರುವ ನುಡಿ ಒಕ್ಕೂಟ ಸರ್ಕಾರ (ಇಂಡಿಯಾ ದಟ್ ಈಸ್ ಭಾರತ್, ಶಲ್ ಬಿ ಎ ಯೂನಿಯನ್ ಆಫ್ ಸ್ಟೇಟ್ಸ್). ನಮ್ಮಲ್ಲಿರುವುದು ಸಂವಿಧಾನಾತ್ಮಕ ಒಕ್ಕೂಟ ಸರ್ಕಾರವೇ ವಿನಾ ಕೇಂದ್ರ ಸರ್ಕಾರವಲ್ಲ. ಒಕ್ಕೂಟತನವು ಭಾರತದ ಭದ್ರತೆಯ ತತ್ವ. ಪ್ರೊ. ಶಿವರಾಮಯ್ಯ ಅವರು ಸರಿಯಾಗಿ ಗುರುತಿಸಿರುವಂತೆ ಪಂಪ ಭಾರತವೆನ್ನುವುದು ಕನ್ನಡದ ಭಾರತವೇ ವಿನಾ ಭಾರತದ ‘ಭಾರತವಲ್ಲ. ಅಂದರೆ ನಮ್ಮ ದೇಶದಲ್ಲಿ ಪ್ರತಿಭಾಷೆಗೂ ಒಂದೊಂದು ಅಥವಾ ಅನೇಕ ಮಹಾಭಾರತ-ರಾಮಾಯಣಗಳಿವೆ. ಕನ್ನಡದಲ್ಲಿಯೇ ಇದನ್ನು ಕಾಣಬಹುದು.

ಡಾ. ಟಿ. ಆರ್. ಚಂದ್ರಶೇಖರ

ಕನ್ನಡ ರಾಷ್ಟ್ರೀಯತೆಯ ಚಳವಳಿಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಇದೇ ಸಂಪುಟದಲ್ಲಿನ ಟಿ. ಎ. ನಾರಾಯಣಗೌಡ ಅವರು ಕನ್ನಡ ರಾಷ್ಟ್ರೀಯತೆಯ ಸಂಘಟನೆಯ-ಹೋರಾಟದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕನ್ನಡ ರಾಷ್ಟ್ರೀಯತೆಯು ಕನ್ನಡಿಗರ ಬದುಕಿನ, ಉದ್ಯೋಗದ, ಒಕ್ಕಲುತನದ, ವ್ಯಾಪಾರ-ವ್ಯವಹಾರ-ವಹಿವಾಟಿನ, ಉದ್ದಿಮೆರಂಗದ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಎ ಪ್ರಾಮಿಸ್ಡ್ ಲ್ಯಾಂಡ್: ಒಬಾಮಾ ಪುಸ್ತಕದಲ್ಲಿ ನಿಜಕ್ಕೂ ಏನಿದೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...