“ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಪರ ಪ್ರಚಾರ ಮಾಡುವುದಕ್ಕಾಗಿ ತನ್ನ ಚಿತ್ರವನ್ನು ಬಿಜೆಪಿಯು ಬಳಸಿಕೊಂಡಿದೆ” ಎಂದು ಆರೋಪಿಸಿ ಮಂಗಳವಾರ ರೈತರೊಬ್ಬರು ಬಿಜೆಪಿಗೆ ಕಾನೂನು ನೋಟಿಸ್ ನೀಡಿದ್ದಾರೆ.
ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಲ್ಲಿ ಒಬ್ಬರಾದ ಹೊಶಿಯಾರ್ಪುರ ನಿವಾಸಿ ಹರ್ಪ್ರೀತ್ ಸಿಂಗ್, ಜಾಹೀರಾತಿನಲ್ಲಿ ತನ್ನ ಭಾವಚಿತ್ರ ಬಳಸಲಾಗಿದೆ ಎಂಬ ವಿಚಾರ ತಿಳಿದ ತಕ್ಷಣ ಮಂಗಳವಾರ ಸಂಜೆ ನೋಟಿಸ್ ಕಳುಹಿಸಿದ್ದಾರೆ. ಈ ಘಟನೆಯ ನಂತರ ಬಿಜೆಪಿ ತನ್ನ ಜಾಹೀರಾತನ್ನು ಹಿಂಪಡೆದಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ: FIR ರದ್ದತಿ ಕೋರಿದ್ದ ಮನವಿ ತಿರಸ್ಕರಿಸಿದ ಹೈಕೋರ್ಟ್
“ಪಂಜಾಬ್ ಬಿಜೆಪಿಯ ಫೇಸ್ಬುಕ್ ಪೇಜ್ನಲ್ಲಿ ಹಾಕಲಾಗಿರುವ ಜಾಹೀರಾತಿನಲ್ಲಿ ನನ್ನ ಫೋಟೊವನ್ನು ಬಳಸಲಾಗಿದೆ ಎಂದು ನನ್ನ ಸ್ನೇಹಿತ ಸೋಮವಾರ ಮಾಹಿತಿ ನೀಡಿದ. ನನ್ನ ಪೋಟೊ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಪೇಜ್ಗಳಲ್ಲಿ ಲಭ್ಯವಿತ್ತು” ಎಂದು ನಟ ಹಾಗೂ ಚಿತ್ರ ನಿರ್ಮಾಪಕನೂ ಆಗಿರುವ ಹರ್ಪ್ರೀತ್ ಸಿಂಗ್ ತಿಳಿಸಿದ್ದಾರೆ.
“ಬಿಜೆಪಿ ಹಾಗೂ ಇತರರು ತಮ್ಮ ಜಾಹೀರಾತಿಗಾಗಿ ನನ್ನ ಫೋಟೊವನ್ನು ಈ ಹಿಂದೆಯೂ ಬಳಸಿದ್ದರು. ಆದರೆ ಈ ಬಾರಿ ನನ್ನ ಅನುಮತಿ ಪಡೆಯದೆ, ರೈತರ ಪ್ರತಿಭಟನೆಯಂತಹ ಸಮಯದಲ್ಲಿ ಹೀಗೆ ಮಾಡಿದ್ದಾರೆ. ಮೂರು ಕೃಷಿ ಕಾನೂನುಗಳಿಂದ ಪಂಜಾಬ್ ರೈತರು ಖುಷಿಯಾಗಿದ್ದಾರೆಂದು ತೋರಿಸಲು ನನ್ನ ಫೋಟೊವನ್ನು ಅವರು ಬಳಸಿಕೊಂಡಿದ್ದಾರೆ. ಸತ್ಯಾಂಶವೇನೆಂದರೆ ಪಂಜಾಬ್ ರೈತರು ಕೃಷಿ ಕಾನೂನಿನಿಂದ ಸಂತೃಪ್ತರಾಗಿಲ್ಲ. ಇದನ್ನು ರದ್ದುಪಡಿಸಲು ಆಗ್ರಹಿಸಿ ಅವರು ಪ್ರತಿಭಟಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾತ್ರಿ ಕರ್ಫ್ಯೂ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ