HomeUncategorizedಇವಿಎಂ ಚರ್ಚೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ

ಇವಿಎಂ ಚರ್ಚೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ

- Advertisement -
- Advertisement -

| ಯೋಗೇಂದ್ರ ಯಾದವ್‍ |

ಕನ್ನಡಕ್ಕೆ : ರಾಜಶೇಖರ್ ಅಕ್ಕಿ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಚುನಾವಣೆಯ ಸಮಯದಲ್ಲಿ ಇವಿಎಮ್ ಚರ್ಚೆಗೆ ಮುಕ್ತಾಯ ನೀಡಲು ಸುಪ್ರೀಮ್ ಕೋರ್ಟಿನ ಹಸ್ತಕ್ಷೇಪದಿಂದ ಒಂದು ಒಳ್ಳೆಯ ಅವಕಾಶ ಒದಗಿಬಂದಿದೆ. ನಮಗೆ ಬೇಕಾಗಿರುವುದು ಇಷ್ಟೆ, ಚುನಾವಣಾ ಆಯೋಗ ತಾನು ಪಟ್ಟುಹಿಡಿದ ನಿಲುವನ್ನು ಸಡಿಲಗೊಳಿಸಬೇಕು.
ಇವಿಎಮ್ ಬಗ್ಗೆಯ ಚರ್ಚೆ ಅನವಶ್ಯಕ ಹಾಗೂ ಹಾನಿಕಾರಕ ಎಂದು ನಾನು ಕೆಲಸಮಯದಿಂದ ವಾದಿಸುತ್ತಲೇ ಬಂದಿದ್ದೇನೆ. ಇವಿಎಮ್‍ಗಳನ್ನು ಬಿಟ್ಟುಕೊಡುವ ಬದಲಾಗಿ, ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಲು ಸದ್ಯಕ್ಕೆ ಬಳಸಲಾಗುತ್ತಿರುವ ವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ನಾನು ಸೂಚಿಸಿದ್ದೆ.
ಒಂದು, ಇವಿಎಮ್‍ಗಳನ್ನು ನಿಯೋಜಿಸುವುದಕ್ಕೂ ಮುಂಚೆ ರಾಜಕೀಯ ಪಕ್ಷಗಳಿಗೆ ಅವುಗಳನ್ನು ಪರೀಕ್ಷಿಸಲು ಅನುವು ಮಾಡಿಕೊಡಬೇಕು. ಎರಡು, ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಇವಿಎಮ್‍ಗಳನ್ನು ಬೇರೆ ಬೇರೆ ಕ್ಷೇತ್ರಗಳಿಗೆ ಯಾದೃಚ್ಛಿಕವಾಗಿ(ರ್ಯಾಂಡಮ್ ಆಗಿ) ನಿಗದಿ ಮಾಡಬೇಕು. ಮೂರು, ತಾವು ಮತ ಹಾಕಿದ ಪಕ್ಷಕ್ಕೆ ಪೇಪರ್ ಸ್ಲಿಪ್‍ಗಳು ಹೋಲಿಕೆಯಾಗದಿದ್ದಲ್ಲಿ ಆ ಮತದಾರರಿಗೆ ತಮ್ಮ ದೂರನ್ನು ನೀಡಲು ಅನುವು ಮಾಡಿಕೊಡಬೇಕು. ನಾಲ್ಕು, ಯಾವುದೇ ಇವಿಎಮ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಅದನ್ನು ಮೂವತ್ತು ನಿಮಿಷಗಳಲ್ಲಿ ಬದಲಾಯಿಸಬೇಕು. ಹಾಗೂ ಐದು, ಪ್ರತಿ ಅಸೆಂಬ್ಲಿ ಕ್ಷೇತ್ರಕ್ಕೆ ಒಂದು ಬೂತ್‍ನ ವಿವಿಪ್ಯಾಟ್‍ನ ಆಡಿಟ್ ಮಾಡುವ ಸದ್ಯದ ಈ ಆಚರಣೆಯನ್ನು 14 ಬೂತ್‍ಗಳಿಗೆ ಹೆಚ್ಚಿಸಬೇಕು.
ನನ್ನ ಈ ಸಲಹೆಗಳಿಗೆ ಚುನಾವಣಾ ಆಯೋಗದ ಕಾರ್ಯದರ್ಶಿಯು ಪ್ರತಿಕ್ರಿಯೆ ನೀಡಿದ್ದರಿಂದ ನನಗೆ ಆಶ್ಚರ್ಯದೊಂದಿಗೆ ಸಂತೋಷವೂ ಆಯಿತು. ನನ್ನ ಮೊದಲ ಮೂರು ಸಲಹೆಗಳು ಚುನಾವಣಾ ನಿಯಮಗಳ ಭಾಗವಾಗಿವೆ ಮತ್ತು ಅವುಗಳನ್ನು ಪಾಲಿಸಲಾಗುತ್ತಿದೆ ಎಂದು ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಎಲ್ಲಾ ಇವಿಎಮ್‍ಗಳನ್ನು ಮೊದಲ ಹಂತದಲ್ಲಿ ಪರೀಕ್ಷಿಸುವ ಆಚರಣೆ ಚಾಲ್ತಿಯಲ್ಲಿದೆ. ಇವಿಎಮ್‍ಗಳನ್ನು ಎರಡು ಹಂತದಲ್ಲಿ ಯಾದೃಚ್ಛಿಕವಾಗಿ (ರ್ಯಾಂಡಮ್) ನಿಯೋಜಿಸಲು ಒಂದು ವಿಧಾನ ಚಾಲ್ತಿಯಲ್ಲಿದೆ ಹಾಗೂ ಈ ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ನಡೆಸಿಕೊಡಲಾಗುತ್ತದೆ.
ಮತದಾರ ತಾನು ಮತಹಾಕಿದ ಪಕ್ಷ ಮತ್ತು ಪೇಪರ್ ಸ್ಲಿಪ್‍ಗಳು ಹೊಂದಾಣಿಕೆ\ ಆಗುತ್ತಿಲ್ಲ ಎಂದು ಸಂಶಯ ಪಟ್ಟಲ್ಲಿ ಆ ಮತದಾರರು ತಮ್ಮ ಆಕ್ಷೇಪಣೆಯನ್ನು ದಾಖಲಿಸಲು (ಚುನಾವಣಾ ನಿಯಮಗಳ ನಡವಳಿಕೆಯ ನಿಯಮ 49 ಎಮ್‍ಏ, 1961) ಅವಕಾಶ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ, ಆ ಮತಗಟ್ಟೆಯ ಅಧ್ಯಕ್ಷೀಯ ಅಧಿಕಾರಿ ಒಂದು ವಿಶೇಷ `ಟೆಸ್ಟ್ ವೋಟ್’ ಹಾಕಲು ಆದೇಶಿಸಬಹುದಾಗಿದೆ. ಅಲ್ಲಿಯೂ ಹೊಂದಾಣಿಕೆ ಆಗದಿದ್ದಲ್ಲಿ ಆ ಮತಗಟ್ಟೆಯಲ್ಲಿ ಮತದಾನ ನಿಲ್ಲಿಸಬೇಕಾಗುತ್ತದೆ. ಸದ್ಯಕ್ಕೆ ಕಾರ್ಯನಿರತವಾಗಿರುವ ಒಬ್ಬ ಅಧಿಕಾರಿಯು ನನಗೆ ಒಂದು ವಿವರವಾದ ಪ್ರತಿಕ್ರಿಯೆಯನ್ನು ನೀಡಿ ನನ್ನ ಅನೇಕ ಸಂಶಯಗಳನ್ನು ದೂರಮಾಡಿದರು. ಈಗ ಉಳಿಯುವುದು ಒಂದು ಮಾತ್ರ: ವಿವಿಪ್ಯಾಟ್‍ನ ಆಡಿಟ್‍ನ ಪ್ರಕ್ರಿಯೆ ಮತ್ತು ಸಂಖ್ಯೆ.
ಇದಕ್ಕೆ ಸ್ವಲ್ಪ ವಿವರಣೆಯ ಅವಶ್ಯಕತೆ ಇದೆ. ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ (ವಿವಿಪಿಏಟಿ) ಗಳನ್ನು ಫ್ರಾರಂಭಿಸಿರುವುದರಿಂದ ಈಗ ಪ್ರತಿ ಮತಗಟ್ಟೆಯ ಮತಗಳನ್ನು ಎಣಿಸಲು ಎರಡು ಸ್ವತಂತ್ರ ವಿಧಾನಗಳಿವೆ.


ಒಂದು ಇವಿಎಮ್‍ನ ಪ್ರದರ್ಶನ ಫಲಕ, ಒಂದು ಬಟನ್ ಒತ್ತಿದೊಡನೆ, ಪ್ರತಿಯೊಂದು ಅಭ್ಯರ್ಥಿ ಪಡೆದ ಮತಗಳು ಆ ಫಲಕದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗೂ ವಿವಿಪ್ಯಾಟ್‍ಗಳಿಂದ ಬಂದ ಪೇಪರ್ ಸ್ಲಿಪ್‍ಗಳು, ಮತಚಲಾಯಿಸಿದ ನಂತರ ಅವುಗಳು ಸೀಲ್ ಮಾಡಲಾದ ಒಂದು ಪೆಟ್ಟಿಗೆಯೊಳಗೆ ಹೋಗುತ್ತವೆ. ಆ ಪೆಟ್ಟಿಗೆಗಳನ್ನು ತೆಗೆದು ಅಲ್ಲಿರುವ ಪೇಪರ್ ಸ್ಲಿಪ್‍ಗಳನ್ನು ಕೈಯಾರೆ ಎಣಿಸುವುದು ಇನ್ನೊಂದು ವಿಧಾನ. ಈ ವಿವಿಪ್ಯಾಟ್‍ಗಳನ್ನು ಪ್ರಾರಂಭಿಸಲು ಇದ್ದ ಒಂದೇ ಕಾರಣ; ಮತದಾರರು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಹೆಚ್ಚಿನ ವಿಶ್ವಾಸ ಮೂಡಿಸುವುದು. ಇವಿಎಮ್‍ಗಳನ್ನು ಈಗ `ವಿವಿಪ್ಯಾಟ್’ ಆಡಿಟ್‍ಗೆ ಒಳಪಡಿಸಬಹುದು, ಅಂದರೆ, ಪ್ರತಿಯೊಬ್ಬ ಅಭ್ಯರ್ಥಿ ಪಡೆದ ಮತಗಳನ್ನು, ಇವಿಎಮ್‍ನ ಫಲಕದಲ್ಲಿ ಕಾಣಿಸುವ ಸಂಖ್ಯೆಯನ್ನು ಪೇಪರ್ ಸ್ಲಿಪ್‍ಗಳನ್ನು ಕೈಯಾರೆ ಎಣಿಸುವುದರಿಂದ ತಾಳೆ ಹಾಕುವುದು. ಆದರೆ, ಸದ್ಯಕ್ಕೆ ನ್ಯಾಯಾಲಯಗಳು ಮಾತ್ರ ಈ ತಾಳೆ ಮಾಡುವ ಪ್ರಕ್ರಿಯೆಯನ್ನು ಮಾಡಬಹುದಾಗಿದೆ. ಇದು ಎಲ್ಲಾ ಸಂಶಯ ಮತ್ತು ವಿವಾದಗಳನ್ನು ನಿವಾರಿಸಬಹುದಾಗಿದೆ. ಆದರೆ, ಈ ಸಾಧ್ಯತೆಯನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮತಎಣಿಕೆ ಆದ ನಂತರ ಬರೀ ಒಂದು ಮತಗಟ್ಟೆಯನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿ, ಈ ವಿವಿಪ್ಯಾಟ್‍ನ ಆಡಿಟ್ ಅನ್ನು ಮಾಡಬಹುದು ಎಂದು ಚುನಾವಣಾ ಆಯೋಗ ಹೇಳುತ್ತದೆ. ಅಲ್ಲಿ ಇನ್ನೊಂದು ನಿಯಮವೂ ಇದೆ, ಮತಎಣಿಕೆಯ ನಂತರ ಹಾಗೂ ಫಲಿತಾಂಶ ಪ್ರಕಟಣೆಯ ಮುಂಚೆ ಯಾವುದೇ ಅಭ್ಯರ್ಥಿ ಆ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲಿ ಅಥವಾ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಆಡಿಟ್ ಮಾಡಲು ವಿನಂತಿ ಮಾಡಬಹುದು. ಆದರೆ, ಆ ಆಡಿಟ್ ಮಾಡಬೇಕೋ ಇಲ್ಲವೋ ಎನ್ನುವ ನಿರ್ಣಯ ಅಲ್ಲಿಯ ರಿಟರ್ನಿಂಗ್ ಅಧಿಕಾರಿಯ ವಿವೇಚನೆಗೆ ಬಿಟ್ಟಿದ್ದು. ಹಾಗಾಗಿ, ವಿವಿಪ್ಯಾಟ್ ಆಡಿಟ್‍ನ ಪ್ರಕ್ರಿಯೆ ಮತ್ತು ಸಂಖ್ಯೆ ಈ ಸಮಸ್ಯೆಯ ಮೂಲವಾಗಿದೆ.
ಕಳೆದ ಎರಡು ತಿಂಗಳಲ್ಲಿ ಎಲ್ಲಾ ಕಡೆಗಳಿಂದ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿವೆ. ಪ್ರತಿಪಕ್ಷಗಳು ಇವಿಎಮ್ ಬಗ್ಗೆ ತಮಗಿದ್ದ ಸಿನಿಕತೆಯನ್ನು ಬದಿಗಿಟ್ಟಿವೆ ಮತ್ತು ಪೇಪರ್ ಮತಪತ್ರಕ್ಕೆ ಮರಳುವ ಬೇಡಿಕೆಯನ್ನೂ ಕೈಬಿಟ್ಟಿವೆ. ಸುಪ್ರೀಮ್ ಕೋರ್ಟಿಗೆ ಎಲ್ಲಾ ಪ್ರಮುಖ ಪಕ್ಷಗಳು ಸೇರಿ ಸಲ್ಲಿಸಿರುವ ಅರ್ಜಿಯನ್ನು ನೋಡಿದರೆ ಇವಿಎಮ್ ಬಗ್ಗೆ ಎಲ್ಲರೂ ಒಂದೇ ತಿಳುವಳಿಕೆ ಹೊಂದಿರುವುದು ಸ್ಪಷ್ಟವಾಗುತ್ತದೆ. ಪ್ರತೀ ಕ್ಷೇತ್ರದಲ್ಲಿಯ ಅರ್ಧದಷ್ಟು ಮತಗಟ್ಟೆಗಳಲ್ಲಿ (50%) ವಿವಿಪ್ಯಾಟ್ ಆಡಿಟ್ ಆಗಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ. ನಿವೃತ್ತ ಅಧಿಕಾರಿಗಳ ಗುಂಪೆದು ಈ ವಿಷಯದ ಆಳಕ್ಕೆ ಒತ್ತುಕೊಟ್ಟು ಒಂದು ಅತ್ಯಂತ ವಿವೇಚನೆಯುಳ್ಳ ಅರ್ಜಿಯನ್ನು ಬರೆದಿದ್ದಾರೆ; ಇವಿಎಮ್ ವರ್ಸಸ್ ಪೇಪರ್ ಮತಪತ್ರ ಎನ್ನುವುದು ವಿಷಯವಲ್ಲ, ನಿಜವಾದ ವಿಷಯವಿರುವುದು ಪರ್ಯಾಪ್ತ ಆಡಿಟ್ ಇಲ್ಲದ ವಿವಿಪ್ಯಾಟ್ ಮತ್ತು ಅವಶ್ಯಕತೆ ಇದ್ದಷ್ಟು ಆಡಿಟ್‍ನೊಂದಿಗಿರುವ ವಿವಿಪ್ಯಾಟ್. ಚುನಾವಣಾ ಆಯೋಗ ಒಂದು ಹಠಮಾರಿ ನಿಲುವನ್ನು ತೆಗೆದುಕೊಂಡು ಒಂದು ಕ್ಷೇತ್ರದಲ್ಲಿ ಒಂದೇ ಮತಗಟ್ಟೆಯ ವಿವಿಪ್ಯಾಟ್ ಆಡಿಟ್ ಸಾಕು ಎಂದು ಸುಪ್ರೀಮ್ ಕೋರ್ಟಿಗೆ ಹೇಳಿದೆ. ಆದರೆ ಸುಪ್ರೀಮ್ ಕೋರ್ಟ್ ಈ ವಾದದಿಂದ ಸಂತುಷ್ಟವಾಗಿಲ್ಲ. ಹಾಗಾಗಿ 28ರ ಮಾರ್ಚ್ ಒಳಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಪ್ಯಾಟ್ ಆಡಿಟ್ ಮಾಡುವ ಪ್ರಸ್ತಾಪವನ್ನು ಒಂದು ಅಫಿಡವಿಟ್ ಮೂಲಕ ನೀಡುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. 1ನೇ ಎಪ್ರಿಲ್‍ರಂದು ಈ ಪ್ರಕರಣ ನ್ಯಾಯಾಲಯದೆದುರಿಗೆ ಬರಲಿದೆ.
ಈ ವಿವಾದವನ್ನು ಸುಲಭವಾಗಿ ನಿವಾರಿಸಬಹುದು ಎನ್ನುವುದು ನನ್ನ ಅನಿಸಿಕೆ. ಒಂದು ಕ್ಷೇತ್ರಕ್ಕೆ ಒಂದೇ ಮತಗಟ್ಟೆಯಲ್ಲಿ ವಿವಿಪ್ಯಾಟ್ ಆಡಿಟ್ ಸಾಕು ಎನ್ನುವ ಚುನಾವಣಾ ಆಯೋಗದ ಪಟ್ಟು ಈ ಆಡಿಟ್‍ನ ಪ್ರಕ್ರಿಯೆನ್ನು ಸಂಶಯಕ್ಕೆ ಎಡೆಮಾಡಿಕೊಡುತ್ತದೆ ಹಾಗೂ ಆಯೋಗದ ಅಸಡ್ಡೆಯನ್ನು ತೋರಿಸುತ್ತದೆ. ದೇಶಾದ್ಯಂತ ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಕೇವಲ 497 ಮತಗಟ್ಟೆಗಳಲ್ಲಿ ವಿವಪ್ಯಾಟ್ ಆಡಿಟ್ ಮಾಡಬೇಕೆಂದು ಹೆಸರಾಂತ ಸಂಖ್ಯಾಶಾಸ್ತ್ರಜ್ಞರ ಸಮಿತಿಯು ಸೂಚಿಸಿತ್ತು. ಚುನಾವಣಾ ಆಯೋಗ ಈ ವರದಿಯನ್ನೇ ನೆಚ್ಚಿಕೊಂಡಂತಿದೆ. ಆ ತಜ್ಞರು ತಪ್ಪೇನೂ ಹೇಳಿಲ್ಲ. ಈವಿಎಮ್ ಎಣಿಕೆಯ ವಿಶ್ವಾಸಾರ್ಹತೆಯನ್ನು ಸಮಗ್ರವಾಗಿ ಪರೀಕ್ಷಿಸಲು ಇಂತಹ ಸಣ್ಣ ಮಾದರಿ ಸೂಕ್ತವಾಗಿದೆ. ಆದರೆ, ಇಲ್ಲಿರುವುದು ಕಾರ್ಯನಿರ್ವಹಣೆಯ ಪ್ರಶ್ನೆಯಲ್ಲ. ಈಗ ಅವಶ್ಯಕತೆ ಇರುವುದು ಪ್ರತಿಯೊಂದು ಕ್ಷೇತ್ರದ ವ್ಯವಸ್ಥೆಯನ್ನು ಪರೀಕ್ಷಿಸುವುದು ಹಾಗೂ ಇದು ಬರೀ ಅಂಕಿಅಂಶಗಳ ಮಾನದಂಡಗಳ ಪ್ರಶ್ನೆಯಾಗಿರದೇ ಜನತೆಯ ವಿಶ್ವಾಸವನ್ನು ಹೆಚ್ಚಿಸುವ ವಿಷಯವಾಗಿದೆ. ಚುನಾವಣಾ ಆಯೋಗದ ಪ್ರಸ್ತಾಪ ಇವೆರಡನ್ನೂ ಮಾಡುವುದಿಲ್ಲ.


ಇನ್ನೊಂದೆಡೆ, ಶೇಕಡಾ ಐವತ್ತು ಮತಗಟ್ಟೆಗಳಲ್ಲಿ ಆಡಿಟ್ ಮಾಡಬೇಕೆನ್ನುವ ಪ್ರತಿಪಕ್ಷಗಳ ಬೇಡಿಕೆ ಅನಗತ್ಯವಾಗಿದೆ ಹಾಗೂ ಇದರಿಂದ ಅತ್ಯಂತ ದೊಡ್ಡ ಹೊರೆ ಬೀಳಲಿದೆ. ಯಾವುದನ್ನೂ ಖಾತ್ರಿಪಡಿಸಿಕೊಳ್ಳಲು ಐವತ್ತು ಪರ್ಸೆಂಟ್ ಮಾದರಿಯ ಅವಶ್ಯಕತೆ ಇರುವುದಿಲ್ಲ. ಮತಗಟ್ಟೆಗಳ ಒಟ್ಟು ಸಂಖ್ಯೆಯ ಶೇಕಾಡಾವಾರು ಲೆಕ್ಕದಲ್ಲಿ ಮಾದರಿಗಳನ್ನು ಪರೀಕ್ಷಿಸಬೇಕಿಲ್ಲ ಎಂದು ತಜ್ಞರು ಹೇಳುತ್ತಾರೆ. ಪರೀಕ್ಷೆ ಮಾಡಿದ ಮತಗಟ್ಟೆಗಳ ನಿಜವಾದ ಸಂಖ್ಯೆ ಮುಖ್ಯವಾಗುತ್ತದೆಯೇ ಹೊರತು ಶೇಕಾಡಾವಾರು ಪ್ರಮಾಣವಲ್ಲ.
ಈ ಎರಡು ಅವಶ್ಯಕತೆಗಳನ್ನೂ ಪೂರ್ಣಗೊಳಿಸುವ, ನಾನು ಈ ಮುಂಚೆ ಹೇಳಿದ ಸಲಹೆಗಳನ್ನು ಮತ್ತೊಮ್ಮೆ ಹೇಳುತ್ತೇನೆ. ಮೊದಲನೆಯದು, ಪ್ರತೀ ಅಸೆಂಬ್ಲಿ ಕ್ಷೇತ್ರಕ್ಕೆ(ಅಥವಾ ಸಂಸದೀಯ ಕ್ಷೇತ್ರದೊಳಗಿನ ಒಂದು ಅಸೆಂಬ್ಲಿ ಘಟಕ) 14 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಆಡಿಟ್ ಮಾಡಬೇಕು. ಈ 14 ಎನ್ನುವ ಸಂಖ್ಯೆ ಯಾವುದೇ ಜಾದೂ ಹೊಂದಿಲ್ಲ, ಅದಕ್ಕೆ ಕಾರಣವಿಷ್ಟೆ, ಪ್ರತಿಯೊಂದು ಅಸೆಂಬ್ಲಿ ಘಟಕದಲ್ಲಿ ಮತಎಣಿಕೆಯ ಸುತ್ತನ್ನು 14 ಟೇಬಲ್‍ಗಳಲ್ಲಿ ಮಾಡಲಾಗುತ್ತದೆ. ಎರಡನೆಯದಾಗಿ, ಮತಎಣಿಕೆಯ ಪ್ರಾರಂಭದಲ್ಲಿ ಆಡಿಟ್‍ಅನ್ನು ಮಾಡಬೇಕೇ ಹೊರತು ಮುಕ್ತಾಯದ ಹಂತದಲ್ಲಲ್ಲ. ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಒಂದು ಇವಿಎಮ್ ಮತ್ತು ಅದಕ್ಕೆ ಅನುಕ್ರಮವಾದ ವಿವಿಪ್ಯಾಟ್ ತೆಗೆಯಬೇಕು ಮತ್ತು ಪ್ರತೀ 14 ಟೇಬಲ್‍ಗಳೊಂದಿಗೆ ತಾಳೆ ಹಾಕಿದ ನಂತರವೇ ಬಾಕಿ ಇವಿಎಮ್‍ಗಳ ಮತಎಣಿಕೆ ಪ್ರಾರಂಭಿಸಬೇಕು. ಇವುಗಳು ತಾಳೆ ಹೊಂದಿದಲ್ಲಿ, ಬಾಕಿ ಮತಎಣಿಕೆ ಈಗ ಮಾಡುವಂತೆ ಮಾಡಬೇಕು. ತಾಳೆ ಆಗದಿದ್ದಲ್ಲಿ, ಆ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಪೇಪರ್ ಸ್ಲಿಪ್‍ಗಳ ಎಣಿಕೆಯಾಗಬೇಕು. ಮೂರನೆಯದಾಗಿ, ಮತಎಣಿಕೆ ಮುಗಿದ ನಂತರ ಪ್ರತಿಯೊಬ್ಬ ಅಭ್ಯರ್ಥಿಗೂ ತಾನು ಆಯ್ಕೆ ಮಾಡಿದ ಕನಿಷ್ಠ ಒಂದು ಮತಗಟ್ಟೆಯಲ್ಲಿ ವಿವಿಪ್ಯಾಟ್ ಆಡಿಟ್‍ಗೆ ಬೇಡಿಕೆ ಇಡುವ ಹಕ್ಕನ್ನು ಹೊಂದಿರಬೇಕು, ಇದನ್ನು ರಿಟರ್ನಿಂಗ್ ಅಧಿಕಾರಿಯ ವಿವೇಚನೆಗೇ ಬಿಡಬಾರದು. ಚುನಾವಣಾ ಆಯೋಗ ಅಥವಾ ಉಚ್ಚ ನ್ಯಾಯಾಲಯ ಈ ವಿಷಯವನ್ನು ಬಗೆಹರಿಸಿ ಮುಕ್ತಾಯಗೊಳಿಸಲಿ. ಈ ವಿಷಯದ ಬಗ್ಗೆ ಈ ಲೇಖನ ಕೊನೆಯದಾಗಲಿ ಎಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...