ನಾನು ಪಂಜಾಬಿನಲ್ಲಿ ಸಿಹಿ ತಿನಿಸುಗಳನ್ನು ಮಾರಾಟ ಮಾಡುವ ಹಲವಾಯಿ, ನಮ್ಮದು ಸ್ವಂತ ಅಂಗಡಿಯಿದೆ. ನಾನು ನನ್ನ ಸಹೋದರರು ಅಂಗಡಿ ಮೇಲ್ವಿಚಾರಣೆ ನೋಡಿಕೊಳ್ಳುತ್ತೆವೆ. ಈಗ ನಮಗೆ ನಮ್ಮ ಅಂಗಡಿಗಳ ಬಗ್ಗೆ ಚಿಂತೆಯಿಲ್ಲ, ರೈತರು ಮತ್ತು ಅವರ ಹಕ್ಕುಗಳ ರಕ್ಷಣೆಯೆ ಮುಖ್ಯ. ಹಾಗಾಗಿ ನಾವು ಇಲ್ಲಿ ಸೇವೆ ನೀಡಲು ಬಂದಿದ್ದೇವೆ ಎನ್ನುತ್ತಾರೆ ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ಚಹಾ ಸೇವೆ ನೀಡುತ್ತಿರುವ ಗುರ್ನಾಮ್ ಸಿಂಗ್.
ಪಂಜಾಬಿನ ಗುರ್ನಾಮ್ ಸಿಂಗ್, ಟಿಕ್ರಿ ಗಡಿಯಲ್ಲಿ ಕಳೆದ ಡಿಸೆಂಬರ್ ಐದನೇ ತಾರೀಖಿನಿಂದ ಸೇವೆ ಎಂದುಕೊಂಡು ಪ್ರತಿಭಟನಾ ನಿರತರಿಗೆ ಮತ್ತು ಪ್ರತಿಭಟನೆ ಬೆಂಬಲಿಸಿ ಬರುವವರಿಗೆ ಟೀ ಸರಬರಾಜು ಮಾಡುತ್ತಿದ್ದಾರೆ. ಎರಡು ದೊಡ್ಡ ಪಾತ್ರೆಗಳಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ಟೀ ಮಾಡಲು ಶುರು ಮಾಡುವ ಇವರು ನಿರಂತರವಾಗಿ ರಾತ್ರಿ 9 ಗಂಟೆಯವರೆಗೆ ಟೀ ತಯಾರಿಸುತ್ತಾರೆ.
ಇದನ್ನೂ ಓದಿ: ರೈತರಿಗೆ ಕೊರೊನಾ ಸಾಂಕ್ರಮಿಕದಿಂದ ರಕ್ಷಣೆ ನೀಡಲಾಗಿದೆಯೆ?: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ಟೀ ತಯಾರಿಸಲು ಬೇಕಾಗುವ ಹಾಲು ಪಂಜಾಬ್ ಮತ್ತು ಹರಿಯಾಣದ ರೈತರು ಸರಬರಾಜು ಮಾಡುತ್ತಾರೆ. ಟೀ ಪುಡಿ ಮತ್ತು ಸಕ್ಕರೆ ಇಲ್ಲಿಯೇ ಇರುವ ಅನೇಕ ಲಂಗರ್ಗಳು ಮತ್ತು ಹಲವು ಸೇವಾ ಸಂಸ್ಥೆಗಳು ನೀಡುತ್ತವೆ. ಸೇವೆ ಮಾಡುವ ಮನಸ್ಸು ಇದ್ದರೇ ಸಾಕು ಎಲ್ಲಾ ಸೌಲಭ್ಯಗಳು ತಾವಾಗಿಯೇ ದೊರೆಯುತ್ತವೆ ಎಂದು ಹೇಳುತ್ತಾರೆ ಗುರುನಾಮ್.
ನಾನು, ನನ್ನ ಸಹೋದರರು ಪಂಜಾಬಿನಲ್ಲಿ ನಮ್ಮ ಕುಟುಂಬನ್ನು ಬಿಟ್ಟು ಇಲ್ಲಿಗೆ ಬಂದಿದ್ದೇವೆ. ಅವರ ಚಿಂತೆ ನಮಗಿಲ್ಲ ಎಂದಲ್ಲ, ಅದಕ್ಕೂ ಹೆಚ್ಚು ರೈತರ ಈಗಿನ ಪರಿಸ್ಥಿತಿಯಲ್ಲಿ ಅವರ ಜೊತೆಗೆ ನಿಲ್ಲುವುದು ನಮ್ಮ ಜವಾಬ್ದಾರಿ. ಅದೆಷ್ಟೇ ದಿನವಾಗಲಿ ನಾವು ರೈತರ ಜೊತೆ ಇರುತ್ತೇವೆ. ಅವರೆ ಇಲ್ಲ ಎಂದರೆ ದೇಶ ಉಳಿಯುವುದಾದರೂ ಹೇಗೆ ಎಂದು ಅವರು ಪ್ರಶ್ನಿಸುತ್ತಾರೆ.
ಚಳಿ, ಮಳೆ ಹೆಚ್ಚಾಗಿದೆ ಇಂತಹ ಸ್ಥಿತಿಯಲ್ಲೂ ಕಿಸಾನ್ ಹಿಂದೆ ಸರಿಯುತ್ತಿಲ್ಲ. ನಾವು ರೈತರ ಮಕ್ಕಳು, ಅವರ ನೋವು ನಮ್ಮ ನೋವು ಒಂದೇ. ಚಳಿ ಹೆಚ್ಚಾದಾಗ ಒಂದು ಲೋಟ ಚಹ ಕೂಡ ಕೊಂಚ ನೆಮ್ಮದಿ ನೀಡಬಲ್ಲದು. ಹಾಗಾಗಿ ಈ ಸೇವೆ ಸಲ್ಲಿಸುತ್ತಿದ್ದೆನೆ. ನನ್ನ ಸಹೋದರರು ಇಬ್ಬರು ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಅವರದ್ದು ಮತ್ತೊಂದು ರೀತಿಯ ಸೇವೆ. ಮೋದಿ ಸರ್ಕಾರ ನಮ್ಮ ಮಾತುಗಳನ್ನು ಕೇಳಬೇಕು. ಕೇವಲ ಪಂಜಾಬ್ ಮತ್ತು ಹರಿಯಾಣದ ರೈತರಿಗಾಗಿ ಮಾತ್ರವಲ್ಲ, ಇಡೀ ದೇಶದ ರೈತರಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಗುರ್ನಾಮ್ ಸಿಂಗ್ ಹೇಳುತ್ತಾರೆ.
ಇದನ್ನೂ ಓದಿ: ರೈತ ಹೋರಾಟದ ಕೇಂದ್ರಗಳಾದ ಟಿಕ್ರಿ- ಸಿಂಘು ಗಡಿಗಳು ಹೇಗಿವೆ? ಅವುಗಳ ಹಿನ್ನೆಲೆಯೇನು?


