ಲಸಿಕೆ ಅಭಿಯಾನದ ಆರಂಭದ ಈ ಸಂದರ್ಭದಲ್ಲಿ, ಭಾರತದ ಮೇಲ್ ಮಧ್ಯಮ ವರ್ಗ ಮತ್ತು ನವ ಮಧ್ಯಮ ವರ್ಗದ ಸುಶಿಕ್ಷಿತ, ಇಂಗ್ಲಿಷ್ ಚೆನ್ನಾಗಿ ಬಲ್ಲ ಟಿವಿ ವೀಕ್ಷಕರ ಕಣ್ಮಣಿಯಾಗಿದ್ದ ಪತ್ರಕರ್ತ ಅರ್ನಾಬ್ ಗೊಸ್ವಾಮಿಯ ವಾಟ್ಸಾಪ್ ಚಾಟ್ಗಳು ಲೀಕ್ ಆಗಿದ್ದು ಅವರ ದೇಶ ವಿರೋಧಿ ಕೃತ್ಯಗಳು ಹೊರ ಬೀಳುತ್ತಿರುವ ಈ ಸಂದರ್ಭದಲ್ಲಿ, ದ್ಚೇಷ ಭಾಷಣಕ್ಕೆ ಕುಖ್ಯಾತಿಯಾದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ 3 ತಿಂಗಳ ‘ಮೊಬೈಲ್ ಜರ್ನಲಿಸಂ’ ಕೋರ್ಸ್ ಆರಂಭಿಸಿದ್ದಾರೆ.
ದ್ವೇಷಪೂರಿತ ಭಾಷಣ, ಟ್ವೀಟ್ಗಳ ಕಾರಣಕ್ಕೆ ‘ಕುಖ್ಯಾತಿ’ ಪಡೆದು, ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಇವರು ಈಶಾನ್ಯ ದೆಹಲಿಯಲ್ಲಿ ನಡೆದ ಕೋಮುಗಲಭೆಗಳಲ್ಲಿ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೆ ದ್ವೇಷ ಭಾಷಣಕ್ಕೆ ಕಪಿಲ್ ಮಿಶ್ರಾರನ್ನು ಫೇಸ್ಬುಕ್ ಹೆಸರಿಸಿತ್ತು.
ಅವರು ಆರಂಭಿಸುತ್ತಿರುವ ಕೋರ್ಸ್ನ ಸಿಲಬಸ್ ಏನೇಂದರೆ, “ಪ್ರಚಾರ-ನಿರ್ವಹಣಾ ಪತ್ರಿಕೋದ್ಯಮ” (ಪ್ರೊಪಗಂಡಾ ಹ್ಯಾಂಡ್ಲಿಂಗ್ ಜರ್ನಲಿಸಂ) ಕಲಿಸುವುದು. ಇದರಲ್ಲಿ “ಪ್ರಚಾರ ಶಬ್ದಕೋಶ” (ಪ್ರೊಪಗಂಡಾ ವೊಕಾಬುಲರಿ), “ಮಾಧ್ಯಮ-ಕಾರ್ಪೊರೇಟ್ ಸಂಬಂಧಗಳು” ಇತ್ಯಾದಿ ಕಲಿಸುತ್ತಾರಂತೆ!
ಫೇಸ್ಬುಕ್ನಲ್ಲಿ ಮಿಶ್ರಾ ಅವರ ಈ ಕುರಿತ ಪೋಸ್ಟ್, ಈ ಕೋರ್ಸ್ ಮೂಲಕ, “ನಿಮ್ಮ ಸ್ವಂತ ನಿರೂಪಣೆಯನ್ನು ಮಾಡಲು ಕಲಿಯಿರಿ” ಎಂದು ಹೇಳುತ್ತದೆ. ಮೂರು ತಿಂಗಳ ಈ ಆನ್ಲೈನ್ ಈ ಕೋರ್ಸ್ಗೆ ಮಿಶ್ರಾ ಮತ್ತು ಮಾಜಿ ಐಎಎಸ್ ಅಧಿಕಾರಿ ಸಂಜಯ್ ದೀಕ್ಷಿತ್ ಮಾರ್ಗದರ್ಶನ ನೀಡಲಿದ್ದಾರೆ. “ಪ್ರಚಾರ-ನಿರ್ವಹಣಾ ಪತ್ರಿಕೋದ್ಯಮ” ವನ್ನು ಕಲಿಸುವ ಹೊರತಾಗಿ, ಇದು ಎಡಿಟಿಂಗ್, ಯೂಟ್ಯೂಬ್ಗಾಗಿ ವೀಡಿಯೊಗಳನ್ನು ಮಾಡುವುದು, “ನವೀನ ಆಲೋಚನೆಗಳೊಂದಿಗೆ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವುದು” ಮತ್ತು “ಸಾಮಾಜಿಕ ಮಾಧ್ಯಮ ತಂತ್ರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು” –ಈ ಎಲ್ಲವನ್ನೂ ಕಲಿಸಲಿದೆಯಂತೆ!
ಈ ಎಲ್ಲಾ ವಿಚಾರಗಳನ್ನು ಅರ್ನಾಬ್ ಗೋಸ್ವಾಮಿ ತಮ್ಮ ರಿಪಬ್ಲಿಕ್ ಚಾನೆಲ್ ಮೂಲಕ ಮಾಡುತ್ತಿದ್ದರು. ಆದರೆ ಅವರು ಬಾರ್ಕ್ ಸಿಇಓ ಪಾರ್ಥೋ ದಾಸ್ಗುಪ್ತರವರೊಂದಿಗೆ ನಡೆಸಿ ವಾಟ್ಸಾಪ್ ಚಾಟ್ಗಳು ಸೋರಿಕೆಯಾಗಿವೆ. ಅದರಲ್ಲಿ ಅವರು ಪುಲ್ವಾಮ ದಾಳಿಯನ್ನು ಸಂಭ್ರಮಿಸಿರುವುದು, ಬಾಲಾಕೋಟ್ ದಾಳಿ ಮೋದಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತದೆ ಎಂದು ಮಾತುಕತೆ ನಡೆಸಿದ್ದು ಇದು ದೇಶವಿರೋಧಿ ನಡೆ ಎಂಬುದಾಗಿ ಟೀಕೆಗೊಳಗಾಗಿದೆ.
ಮಾಧ್ಯಮಗಳು ಸ್ವತಂತ್ರವಾಗಿ, ನಿಷ್ಪಷಪಾತವಾಗಿ, ಆಳುವ ವರ್ಗವನ್ನು ಪ್ರಶ್ನಿಸುತ್ತಾ ಜನಪರವಾಗಿ ಕೆಲಸ ಮಾಡಬೇಕೆಂದು ಬಯಸುವವರ ಮಧ್ಯೆ ಮತ್ತಷ್ಟು ಪ್ರೊಪೊಗಾಂಡಾ ಮಾಧ್ಯಮಗಳನ್ನು ತಯಾರಿಸಲು ಕಪಿಲ್ ಮಿಶ್ರಾ ಹೊರಟಂತಿದೆ.
ಇದನ್ನೂ ಓದಿ: ದ್ವೇಷ ಭಾಷಣದ ಉದಾಹರಣೆಗೆ ’ಕಪಿಲ್ ಮಿಶ್ರಾ’ ಭಾಷಣವನ್ನು ಉಲ್ಲೇಖಿದ ಫೇಸ್ಬುಕ್