Homeಅಂಕಣಗಳುಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

ಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

- Advertisement -
- Advertisement -

ರೈತ ಪ್ರತಿಭಟನೆಗಳ ಭಾಗವಾಗಿ ಮಹಿಳೆಯರು ಯಾಕಿದ್ದಾರೆ?

ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಮೊನ್ನೆ ವಿಚಾರಣೆಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿದು. ಮನೆಗೆ ಮರಳುವಂತೆ ಅವರ ಮನ ಒಲಿಸಿರಿ. ಇಲ್ಲವಾದರೆ ಈ ಸಂಬಂಧ ಆದೇಶ ನೀಡಬೇಕಾದೀತು ಎಂದೂ ಅವರು ಹೇಳಿದರು.

ದೇಶದ ಕೃಷಿ ಶ್ರಮಿಕ ಪಡೆಯ ಶೇ.42ರಷ್ಟು ಮಹಿಳೆಯರೇ ಆಗಿದ್ದಾರೆ. ಆದರೆ ಅವರ ಕೃಷಿ ಜಮೀನಿನ ಒಡೆತನದ ಮಾತು ಬಂದರೆ ಆಕೆಯ ಹೆಸರಿಗಿರುವುದು ಕೇವಲ ಶೇ.ಎರಡರಷ್ಟು ಭೂಮಿ ಮಾತ್ರ ಎಂದು ರಾಷ್ಟ್ರೀಯ ಆನ್ವಯಿಕ ಆರ್ಥಶಾಸ್ತ್ರೀಯ ಸಂಶೋಧನಾ ಸಂಸ್ಥೆ 2018ರಲ್ಲಿ ಹೇಳಿದೆ.

2011ರ ಜನಗಣತಿಯ ಪ್ರಕಾರ ಗ್ರಾಮೀಣ ಭಾರತದ ಶೇ.65ರಷ್ಟು ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒಕ್ಕಲುತನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮನ್ನೂ ರೈತರೆಂದು ವರ್ಗೀಕರಿಸಬೇಕೆಂಬುದು ಮಹಿಳೆಯರ ಬಹುಕಾಲದ ಬೇಡಿಕೆ. ಬಿತ್ತನೆ, ಮಾರಾಟದ ತೀರ್ಮಾನಗಳಲ್ಲೂ ಆಕೆಗೆ ದನಿಯಿಲ್ಲ. ಆದರೆ ಕೃಷಿವ್ಯವಸ್ಥೆಯ ಕೇಂದ್ರಬಿಂದು ಅವರು. ಬಿತ್ತನೆಯಿಂದ ಹಿಡಿದು ಕಟಾವಿನ ತನಕ, ದನ ಮೇಯಿಸುವುದರಿಂದ ಹಿಡಿದು ಹಾಲು ಹಿಂಡುವ ತನಕ ಗಂಡಸಿಗೆ ಸರಿಸಮ ಇಲ್ಲವೇ ಮಿಗಿಲಾದ ಶ್ರಮ ಆಕೆಯದು.

ಎಂಟು ನೂರು ಮಂದಿ ಮಹಿಳೆಯರು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ಬಹಿರಂಗ ಪ್ರತಿಭಟನಾ ಪತ್ರ ಬರೆದಿದ್ದಾರೆ. ಕೃಷಿಯಲ್ಲಿ ಮಹಿಳೆಯರದು ಪ್ರಧಾನ ಪಾತ್ರ ಎಂಬ ವಾಸ್ತವವನ್ನು ನಿಮ್ಮ ಹೇಳಿಕೆಗಳು ಅವಮಾನಗೊಳಿಸಿವೆ. ಮಹಿಳೆಯು ಹಾಲಿ ರೈತ ಪ್ರತಿಭಟನೆಯ ಆತ್ಮ ಮತ್ತು ಹೃದಯವೆಂಬುದನ್ನು ಕಾಣಿರಿ. ಸರ್ಕಾರಿ ಅಂಕಿ ಅಂಶಗಳಲ್ಲಿ ಮಹಿಳಾ ರೈತರು ಮಟಾ ಮಾಯವಾಗಿರುವ ಜೀವಿಗಳು. ರೈತರ ಆತ್ಮಹತ್ಯೆಗಳ ನಿಜ ಭಾರವನ್ನು ಹೊರಬೇಕಾಗಿರುವ ಕಷ್ಟಜೀವಿ ಆಕೆ. ಸಾವಿಗಿಂತ ಬದುಕೇ ಕ್ರೂರ ಆಕೆಯ ಪಾಲಿಗೆ. ಆಕೆ ಕೇವಲ ರೈತನ ತಾಯಿ ಪತ್ನಿ, ಮಗಳು, ಸೋದರಿ, ಸೊಸೆ ಮಾತ್ರವೇ ಆಗಿರುತ್ತಾಳೆ. ರೈತಳೆಂದು ಆಕೆಯನ್ನು ಕರೆಯುವುದಿಲ್ಲ ಸರ್ಕಾರ. ಇದೀಗ ಸುಪ್ರೀಮ್ ಕೋರ್ಟಿನ ಮನಸ್ಥಿತಿಯೂ ಭಿನ್ನವಾಗಿಲ್ಲ.

ಈ ರೈತ ಪ್ರತಿಭಟನೆಯು ಕೇವಲ ಕೃಷಿ ಕಾನೂನುಗಳಿಗೆ ವಿರೋಧವನ್ನು ಸಿಡಿಸಿರುವುದಲ್ಲದೆ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಆವರಣವಾಗಿ ಹೊಮ್ಮಿರುವುದನ್ನು ಗಮನಿಸಿರಿ. ಆವರ ಪಾತ್ರವನ್ನು ಕಡೆಗಣಿಸುವುದು ಅತೀವ ಅವಹೇಳನಕರ ಎಂದಿದ್ದಾರೆ. ಈ ಕೃಷಿ ಕಾನೂನುಗಳಿಂದಾಗಿ ಒಕ್ಕಲುತನದ ಆದಾಯಗಳು ಮತ್ತಷ್ಟು ಕುಸಿದರೆ ಅದರ ನೇರ ಭಾರ ಹೊರುವವರು ಮನೆವಾರ್ತೆಯನ್ನು ನೋಡಿಕೊಳ್ಳಬೇಕಾಗಿರುವ ಹೆಣ್ಣುಮಕ್ಕಳೇ. ಪ್ರತಿಭಟನೆಯ ಸ್ಥಳಗಳಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲಕ್ಕೆ ಭಾಷಣಗಳನ್ನು ಸಂಘಟಿಸುವ, ಸಭೆಗಳನ್ನು ಏರ್ಪಡಿಸುವ, ಪತ್ರಿಕಾಗೋಷ್ಠಿ ನಡೆಸುವ, ವೈದ್ಯೋಪಚಾರ ನೀಡುವ, ಅಡುಗೆ ಮಾಡುವ ಕ್ರಿಯೆಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಯಮಾಡಿ ಕೃಷಿಯಲ್ಲಿ ಮಹಿಳಾ ರೈತರ ಪಾತ್ರವನ್ನು ಗುರುತಿಸಿರಿ ಮತ್ತು ನಿಮ್ಮ ಪುರುಷಾಧಿಪತ್ಯದ ಮನಸ್ಥಿತಿಯಿಂದ ಹೊರಬನ್ನಿರಿ ಎಂದು ಮಹಿಳೆಯರು ಸುಪ್ರೀಮ್ ಕೋರ್ಟಿಗೆ ಝಾಡಿಸಿದ್ದಾರೆ.

ಮಹಿಳೆಯ ದುಡಿಮೆಯನ್ನು ಭಾರತೀಯ ಪುರುಷಾಧಿಪತ್ಯದ ರಾಜಕೀಯ ಸಾಮಾಜಿಕ ಆರ್ಥಿಕ ವ್ಯವಸ್ಥೆ ಗುರುತಿಸಿಯೇ ಇಲ್ಲ. ಆದಿಕಾಲದ ಬೇಟೆಗಾರ ಪುರುಷ ಈಟಿ ಮತ್ತು ಬೀಸು ಕೋಲನ್ನಷ್ಟೇ ಹಿಡಿದು ಹಗುರಕ್ಕೆ ನಡೆಯುತ್ತಿದ್ದರೆ, ಆತನ ಹಿಂದೆ ಹೆಜ್ಜೆ ಹಾಕುತ್ತಿದ್ದ ಆಕೆಯ ಮೇಲೆ ಅವರಿಬ್ಬರ ಕೂಸು, ಬಿಡಾರ ಹೂಡಿದರೆ ಛಾವಣಿಯಾಗಬಲ್ಲ ಪರಿಕರ, ಬುತ್ತಿ ಗಂಟುಗಳ ಜೊತೆಗೆ ಅಗೆಯುವ ಬಡಿಗೆಯ ಒಜ್ಜೆ. ಕೂಳು ಬೇಯಿಸಲು ಕಟ್ಟಿಗೆಯನ್ನು ಆಯುವುದು, ನೀರು ಹೊರುವುದು ಅಡಿಗೆ ಮಾಡುವುದು ಆಕೆಯದೇ ಕೆಲಸ. ಹೆಣ್ಣು ಗಂಡುಗಳ ನಡುವೆ ಸಾರ್ವತ್ರಿಕ ಶ್ರಮ ವಿಭಜನೆ ಎಂದರೆ ಆಕೆಯ ಪಾಲಿಗೆ ಮೈ ಮುರಿಯುವ ಗಾಣದೆತ್ತಿನ ಎಡೆಬಿಡದ ದುಡಿತ. ಕ್ರೀಡೆ, ಕನಸು, ಧರ್ಮ, ಕಲಾತ್ಮಕ ಅಭಿವ್ಯಕ್ತಿ, ಆಚರಣೆಗಳು ಆತನದೇ ವಿಶೇಷಾಧಿಕಾರ. ಪಶುಗಳನ್ನು ಪಳಗಿಸಿದ ನಂತರ ಪುರುಷ ಅವುಗಳನ್ನು ನೊಗಕ್ಕೆ ಹಚ್ಚಿ ದುಡಿಸಿದ. ಪಳಗಿಸಿದ ಪಶು ಸತ್ತಾಗ ಪುನಃ ನೊಗಕ್ಕೆ ನೇಗಿಲಿಗೆ ಹೆಗಲು ಕೊಟ್ಟದ್ದು ಆಕೆಯ. ಹಿಂದೆ ನಿಂತು ಆಕೆಯನ್ನು ನಡೆಸಿದ ಅಧಿಕಾರ ಆತನದೇ. ಇಂದಿಗೂ ಬಹಳಷ್ಟು ರೈತಾಪಿ ಕುಟುಂಬಗಳಲ್ಲಿ ಎತ್ತುಗಳನ್ನು ನಡೆಸಿಕೊಂಡಷ್ಟು ಉತ್ತಮವಾಗಿ ಹೆಣ್ಣನ್ನು ನಡೆಸಿಕೊಳ್ಳುವುದಿಲ್ಲ. ಆಕೆ ಕಂತೆ ಒಗೆದರೆ ಮತ್ತೊಬ್ಬ ತೊತ್ತು ಬೇಡಿಕೊಂಡು ಬಂದಾಳು. ಆದರೆ ಎತ್ತುಗಳು ಸತ್ತರೆ ಮತ್ತೆ ತರಲು ಹಣ ಸುರಿಯಬೇಕಲ್ಲ?

ಕೆಲಸ ಒಜ್ಜೆಯದು ಎಂದು ಆಕೆ ಎಂದೂ ಮಾಡದೆ ಬಿಟ್ಟವಳಲ್ಲ. ಬುದ್ಧಿಶಕ್ತಿ ಬೇಕಿರುವ ಮತ್ತು ನಿರ್ವಹಣಾ ಕೌಶಲ ಒಳಗೊಳ್ಳುವ ಕೆಲಸವನ್ನು ಆಕೆಗೆ ನಿರಾಕರಿಸಲಾಗಿತ್ತು. ಕತ್ತೆ ಕಾಯುವ ಕೆಲಸಾನೂ ಕೂಡ ಆಕೆಗೆ ಕೊಡುತ್ತಿರಲಿಲ್ಲ. ದಾರಿಯ ದೂರವನ್ನು ಕತ್ತೆಯ ಮೇಲೆ ಕುಳಿತು ಕ್ರಮಿಸುವ ರೈತಾಪಿ ಪುರುಷ ಮತ್ತು ಜೊತೆ ಜೊತೆಯಲ್ಲೇ ಓಡು ನಡಿಗೆಯಲ್ಲಿ ಧಾವಿಸುವ ಆತನ ಪತ್ನಿಯನ್ನು ಈಗಲೂ ಅಲ್ಲಲ್ಲಿ ಕಾಣುವುದು ಸಾಧ್ಯ. ಸಿರಿವಂತ ಪ್ರಪಂಚದಲ್ಲಿ ಈ ಸಂಬಂಧ ಕುಟುಂಬದ ಕಾರು ಸವಾರಿಯ ಸುಖ ಗಂಡನದಾದರೆ, ನಡೆದು ದೂರ ಕ್ರಮಿಸುವ ಇಲ್ಲವೇ ಬಸ್ಸಿನಲ್ಲಿ ಓಡಾಡುವ ಹೆಂಡತಿಯ ದೃಶ್ಯವಾಗಿ ಬದಲಾದೀತು

Photo Courtesy: The Indian Express

.

ಭಾರದ, ಮೈಮುರಿಯುವ, ನಿತ್ಯ ಮಾಡಿದ್ದನ್ನೇ ಮಾಡುವ ಅರ್ಥವಿಲ್ಲದ ದುಡಿತ ಆಕೆಯದು. ಜಗತ್ತಿನ ತುಂಬೆಲ್ಲ ಇದೇ ಕತೆ. ಕೂಳು ಬೇಯಿಸುವ ವಿರಳ ಉರುವಲನ್ನು ಹುಡುಕಿ ಹೆಕ್ಕಿ ಮುರಿದು ಹೊರೆಯಾಗಿ ಬಿಗಿದು ತಲೆಯ ಮೇಲೋ ಬೆನ್ನ ಮೇಲೆಯೋ ಹೊತ್ತು ತರುವವಳು ಆಕೆಯೇ. ದುರ್ಲಭ ನೀರನ್ನು ದೂರದಿಂದ ನೆತ್ತಿ ನುಗ್ಗಾಗುವಂತೆ ಹೊತ್ತು ತರುವುದು ಈಗಲೂ ಆಕೆಯದೇ ಕೆಲಸ. ಪುರುಷರು ಭಾರದ ನೀರನ್ನು ಹೊರುವುದು ವಿರಳವಾಗಿ ಲಭಿಸುವ ನೋಟ. ಶ್ರಮವನ್ನು ಹಗುರ ಮಾಡುವ ಊರ್ಜೆಯ ಮೂಲ ದೊರೆತ ಮರುಕ್ಷಣವೇ ಅಂತಹ ಕೆಲಸವನ್ನು ಪುರುಷರು ಬಾಚಿಕೊಳ್ಳುವರು.

ಸೊಂಟ ಬಗ್ಗಿಸಿಯೋ ಕುಕ್ಕರಗಾಲಲ್ಲಿ ಕುಳಿತೋ ಕಳೆಗುದ್ದಲಿ ಮತ್ತು ಪಿಕಾಸಿಗಳಲ್ಲೇ ಮಾಡಬೇಕಿದ್ದಷ್ಟು ದಿನ ಉಳುಮೆಯ ಕೆಲಸ ಆಕೆಯದು. ಟ್ರ್ಯಾಕ್ಟರುಗಳು, ಟಿಲ್ಲರುಗಳು ಬಂದೊಡನೆಯೇ ಆತನದಾಗಿಬಿಡುತ್ತದೆ!

ವಿಶ್ವಸಂಸ್ಥೆಯ ಯೋಜನೆಯೊಂದು ಮಹಿಳಾ ವ್ಯಾಪಾರಿಗಳಿಗೆ ಹಂಚಿದ ಬೈಸಿಕಲ್‌ಗಳನ್ನು ಕಿತ್ತುಕೊಂಡು ಸವಾರಿ ಮಾಡಿದವರು ಅವರ ಗಂಡಂದಿರು. ಮಹಿಳೆಯರು ಎಂದಿಂತೆ ತಮ್ಮ ಉತ್ಪನ್ನಗಳ ಮೂಟೆ ಹೊರೆಯನ್ನು ನೆತ್ತಿಯ ಮೇಲೆ ಹೊತ್ತು ಮೈಲಿಗಟ್ಟಲೆ ನಡೆಯುವುದು ತಪ್ಪಲಿಲ್ಲ. ಅನಾದಿಕಾಲದಿಂದ ಮಹಿಳೆಯ ಶ್ರಮ ಶಕ್ತಿಯ ಕುರಿತ ಈ ವ್ಯಾಖ್ಯಾನ ಖ್ಯಾತ ಸ್ತ್ರೀ ಚಿಂತಕಿ ಜರ್ಮೇನ್ ಗ್ರೀರ್ ಅವರದು. The Whole Woman ಎಂಬ ಕೃತಿಯಲ್ಲಿ ಹೆಣ್ಣು ಗಂಡಿನ ನಡುವೆ ಶ್ರಮ ಶಕ್ತಿ ವಿಭಜನೆಯ ಈ ಅನ್ಯಾಯದ ತಾರತಮ್ಯವನ್ನು ಬಿಡಿಸಿಡುತ್ತಾರೆ.

ಹೆರವರ ಹೊಲಗಳಲ್ಲಿ ಕೂಲಿ ಮಾಡುವ ಹೆಣ್ಣಾಳುಗಳಿಗೆ ಅರ್ಧ ಕೂಲಿಯ ಅವಮಾನ ಯುಗಗಳಿಂದ ನಡೆದು ಬಂದದ್ದು. ತೆಲುಗಿನ ಸಣ್ಣ ಕತೆಯೊಂದರಲ್ಲಿ ಗಂಡ ಹೆಂಡತಿ ಇಬ್ಬರೂ ಕೂಲಿಯಾಳುಗಳು. ಪರಸ್ಥಳಕ್ಕೆ ಪಯಣದ ಸಂದರ್ಭ. ಬಸ್ಸೇರಿ ಕುಳಿತವರ ಬಳಿ ಬರುವ ಕಂಡಕ್ಟರ್ ಎರಡು ಟಿಕೆಟ್‌ಗಳ ದರ ತೆರುವಂತೆ ಹೇಳುತ್ತಾನೆ. ಅದ್ಯಾಕೆ ಎರಡು ಟಿಕೆಟುಗಳ ರೊಕ್ಕ ಕೊಡಲಿ… ನನಗೆ ಪೂರ್ತಿ ಕೂಲಿ ಕೊಟ್ರೆ ಆಕೆಗೆ ಕೊಡೋದು ಅರ್ಧ ಕೂಲಿಯೇ. ಕೂಲಿಯಾದರೆ ಅರ್ಧ, ಟಿಕೆಟ್ಟಾದರೆ ಪೂರ್ತಿ! ಈ ಅನ್ಯಾಯ ಯಾಕೆ? ಒಂದೂವರೆ ಟಿಕೆಟ್ ಹರೀರ್ರಿ ಎಂದು ಪ್ರತಿಭಟಿಸುತ್ತಾನೆ ಗಂಡ. ಬಸ್ಸಲ್ಲಿ ಕುಳಿತ ಜನ ಆತನ ವಾದಕ್ಕೆ ಪಕಪಕನೆ ನಗುತ್ತಾರೆ. ಕತೆ ಅಲ್ಲಿಗೆ ಮುಗಿದುಹೋಗುತ್ತದೆ.

ಪಿತೃಪ್ರಧಾನ ವ್ಯವಸ್ಥೆಯ ಪಿರಮಿಡ್ ತುದಿಯಲ್ಲಿ ಶತಮಾನಗಳಿಂದ ಪವಡಿಸಿರುವ ಸ್ತ್ರೀದ್ವೇಷಿಗಳು ಈ ವಿಚಾರವನ್ನು ಒಪ್ಪಲಿಕ್ಕಿಲ್ಲ. ಸುಪ್ರೀಮ್ ಕೋರ್ಟು ಅರಿವಿನ ಆಗರ, ನ್ಯಾಯದಾನದ ತವನಿಧಿ ಎಂಬ ನಂಬಿಕೆಯಿದೆ. ಅದರ ನಡೆನುಡಿಗಳು ಈ ನಂಬಿಕೆಯ ತಳಹದಿಯನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಇರಬೇಕೇ ವಿನಾ ಸಡಿಲುಗೊಳಿಸಕೂಡದು.


ಇದನ್ನೂ ಓದಿ: ರೈತ ಮಹಿಳಾ ದಿನ: ರೈತರಿಗೆ ಬೆಂಬಲ ಘೋಷಿಸಿ ದೇಶವ್ಯಾಪಿ‌ ಪ್ರತಿಭಟನೆ ನಡೆಸಲು ಮಹಿಳೆಯರ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...