ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಲಕ್ಷಾಂತರ ರೈತರು ಹೋರಾಡುತ್ತಿರುವುದು ನಿಮಗೆ ಗೊತ್ತೆ ಇದೆ. ಅದೇ ಮಾದರಿಯಲ್ಲಿ ಹರಿಯಾಣದ ಪಲ್ವಾಲ್ ಜಿಲ್ಲೆಯ ಬ್ರಿಸ್ಲಾ ಗ್ರಾಮದಲ್ಲಿಯೂ ಸಹ ಕಳೆದ 65 ದಿನಗಳಿಂದ ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈ ಪ್ರತಿಭಟನಾ ಸ್ಥಳಕ್ಕೆ ಹೊರರಾಜ್ಯಗಳಿಂದಲೂ ಪ್ರತಿಭಟನಾಕಾರರು ಬಂದು ಭಾಗವಹಿಸಿ ಬೆಂಬಲ ನೀಡುತ್ತಿದ್ದಾರೆ.
ಬ್ರಿಸ್ಲಾ ಗ್ರಾಮದ ರಸ್ತೆಯಲ್ಲಿ ದೆಹಲಿ ಮಾದರಿಯಲ್ಲಿಯೇ ಟೆಂಟ್ ಒಂದನ್ನು ಹಾಕಲಾಗಿದೆ. ರಾಷ್ಟ್ರೀಯ ಕಿಸಾನ್ – ಮಜ್ದೂರ್ ಮಹಾಸಂಘವು ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿದಿನವೂ ಪ್ರತಿಭಟನೆ ನಡೆಯುತ್ತಿದ್ದು, ರಾತ್ರಿವೇಳೆ ಕೆಲವರು ಅಲ್ಲಿಯೇ ಉಳಿಯುತ್ತಿದ್ದಾರೆ.
ಗ್ರಾಮದ ಸರಪಂಚರು ಸಹ ಪ್ರತಿದಿನ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಅವರ ನೇತೃತ್ವದಲ್ಲಿಯೇ ಹೋರಾಟ ಆರಂಭವಾಗಿದೆ. ಅಲ್ಲದೆ ಪ್ರತಿದಿನ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಗ್ರಾಮದ ಒಬ್ಬರು ಉಪವಾಸ ಸತ್ಯಾಗ್ರಹ ಆಚರಿಸಿತ್ತಾರೆ. ಈಗಾಗಲೇ 60ಕ್ಕು ಹೆಚ್ಚು ಜನರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನು ಇಲ್ಲಿನ ಪ್ರತಿಭಟನೆಗೆ ಗುಜರಾತ್, ರಾಜಸ್ಥಾನದ ಜನರೂ ಸಹ ಬಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಪಲ್ವಾಲ್ನ ಹೈವೆಗಳಲ್ಲಿ ಇಂತಹ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಪಲ್ವಾಲ್ಗೆ ಭೇಟಿ ಕೊಟ್ಟವರೆಲ್ಲಾ ಇಲ್ಲಿಗೂ ಬರುತ್ತಾರೆ.
ಗುಜರಾತ್ನ ಸೂರತ್ ನಿಂದ ಬಂದಿರುವ ತಬ್ಸುಮ್ ಚೌಹಾಣ್ರವರು ಹೋರಾಟದ ಕುರಿತು ಮಾತನಾಡಿ “ನಾನು ಈ ಆಂದೋಲನವನ್ನು ಬೆಂಬಲಿಸಲು ಬಂದಿದ್ದೇನೆ, ಏಕೆಂದರೆ ನಾನು ರೈತನ ಮಗಳು. ನಮ್ಮ ದೇಶದಲ್ಲಿ ರೈತ ಮತ್ತು ಕೃಷಿ ಸುರಕ್ಷಿತವಾಗಿಲ್ಲದಿದ್ದರೆ ನಮ್ಮ ದೇಶ ಸುರಕ್ಷಿತವಾಗಿರುವುದು ಹೇಗೆ? ನಮ್ಮ ಪ್ರಧಾನಿ ಮೋದಿಯವರು ಅಂಬಾನಿ ಮತ್ತು ಅದಾನಿಯನ್ನು ಬೆಳೆಸುವುದಕ್ಕಾಗಿ ಈ ಕಾಯ್ದೆಗಳನ್ನು ತಂದಿದ್ದಾರೆ. ಇನ್ನು ಅಂಬಾನಿ ಅದಾನಿಯವರು ಸಿಮ್ ಕಾರ್ಡ್ ತರ ಆಹಾರ ತಯಾರಿಸುವ ಉಪಕರಣ ಕಂಡುಹಿಡಿಯಬಲ್ಲರೆ? ಕೃಷಿ ಮಾಡದೇ ಕೇವಲ ಹಣ ಹಾಕಿದರೆ ಆಹಾರ ಕೊಡುವಂತ ಉಪಕರಣ ತಯಾರಿಸುತ್ತಾರೆಯೇ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಇಲ್ಲದಿದ್ದರೆ ಸರ್ಕಾರ ಮಣ್ಣು ತಿನ್ನಬೇಕಾಗುತ್ತದೆ. ಇಂದು ರೈತರ ಕಷ್ಟ ಗೊತ್ತಿಲ್ಲದವರು ಕೃಷಿ ಮಂತ್ರಿಗಳಾಗಿದ್ದಾರೆ. ಇನ್ನು ಮೋದಿಯವರು ಮನ್ ಕಿ ಬಾತ್ ಆಡುತ್ತಾರೆಯೇ ಹೊರತು ಜನರ ಮಾತು ಕೇಳಿಸಿಕೊಳ್ಳುವುದಿಲ್ಲ. ನಾನು ಒಬ್ಬ ರೈತನ ಮಗಳು. ನನ್ನ ಮಾತನ್ನು ಅವರು ಕೇಳಿಸಿಕೊಳ್ಳಬೇಕು. ರೈತರು ಸಣ್ಣ ವ್ಯಕ್ತಿಗಳಲ್ಲ. ಅವರು ಬೆಳೆಯದೆ ಇದ್ದರೆ ನಾವು ಏನು ತಿನ್ನಲು ಸಾಧ್ಯವಿಲ್ಲ. ನೀವು ಆಹಾರವನ್ನು ಗೌರವಿಸುವುದಾದರೆ ರೈತರನ್ನು ಗೌರವಿಸಬೇಕು. ಕೇಂದ್ರ ಸರ್ಕಾರ ರೈತರೊಂದಿಗೆ ಮಾತನಾಡುತ್ತೇವೆ ಅನ್ನುತ್ತಾರೆ ಈ ಕಾನೂನುಗಳನ್ನು ತರುವ ಮುಂಚೆಯೇ ಮಾತನಾಡಬಹುದಿತ್ತಲ್ಲವೇ? ಈಗಲಾದರೂ ಅವರು ರೈತನ ಮಾತುಗಳನ್ನು ಕೇಳಬೇಕು” ಎಂದು ಒತ್ತಾಯಿಸಿದ್ದಾರೆ.
ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಹರಿಯಾಣದ ಪಲ್ವಾಲ್ ಜಿಲ್ಲೆಯ ಹೈವೆಯಲ್ಲಿಯೂ ಸಹ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ದೇಶವ್ಯಾಪಿ ‘ಸಂಚಾರ ಸ್ಥಗಿತ ಚಳವಳಿ’ಗೆ ಕರೆ