ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕಾಗಿ 4 ವರ್ಷಗಳಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಆಪ್ತೆ ವಿ.ಕೆ. ಶಶಿಕಲಾ ಸೋಮವಾರ (ಇಂದು) ತಮಿಳುನಾಡಿಗೆ ತೆರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಸುಮಾರು 1,500 ಪೊಲೀಸರನ್ನು ನಿಯೋಜಿಸಲಾಗಿದೆ.
ಜನವರಿ 27 ರಂದು ಜೈಲಿನಿಂದ ಬಿಡುಗಡೆಗೊಂಡಿದ್ದ ಶಶಿಕಲ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದರ ನಂತರ ಅವರು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ರೆಸಾರ್ಟ್ವೊಂದರಲ್ಲಿ ವಾಸ್ತವ್ಯ ಹೂಡಿದ್ದರು.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ: 4 ವರ್ಷ ಜೈಲುವಾಸದ ನಂತರ ಬಿಡುಗಡೆಯಾದ ವಿ.ಕೆ ಶಶಿಕಲಾ
ದೇವನಹಳ್ಳಿಯ ರೆಸಾರ್ಟ್ನಿಂದ ಶಶಿಕಲಾ ಅವರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಹೊಸೂರಿಗೆ ಬೆಳಿಗ್ಗೆ 9 ಗಂಟೆಗೆ ತಲುಪಿದ್ದಾರೆ ಎನ್ನಲಾಗಿದೆ. ಅವರಿಗೆ ಬೆಂಗಳೂರಿನಿಂದ ಚೆನ್ನೈವರೆಗಿನ ಅವರ ಬೆಂಬಲಿಗರು 32 ಸ್ಥಳಗಳಲ್ಲಿ ಸ್ವಾಗತ ಕೋರಲಿದ್ದಾರೆ. ಟಿ. ನಗರದಲ್ಲಿರುವ ಎಂಜಿಆರ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಶಶಿಕಲಾ ತಮ್ಮ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ.
ತಮಿಳುನಾಡಿಗೆ ವಾಪಸಾಗುತ್ತಿರುವ ಶಶಿಕಲಾ ಅವರನ್ನು ಸ್ವಾಗತಿಸಲು ಅವರ ಬೆಂಬಲಿಗರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ ಆಗಮಿಸಿ, ಬೆಂಗಳೂರಿನಿಂದ ಅವರನ್ನು ರ್ಯಾಲಿ ಮುಖಾಂತರ ಕರೆದೊಯ್ಯುವುದಾಗಿ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಪೊಲೀಸರು ಕೊರೊನಾ ನಿಯಮ ಮತ್ತು ಕಾನೂನು ಸುವ್ಯವಸ್ಥೆ ಕಾರಣ ನೀಡಿ ಅದಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: 10 ಕೊಟಿ ದಂಡ ಪಾವತಿಸಿದ ಜಯಲಲಿತ ಆಪ್ತೆ ಶಶಿಕಲಾ


