ಭಾನುವಾರ ಮುಂಜಾನೆ 4.30 ರ ಸುಮಾರಿಗೆ ತಮೀಳ್ ನೇಷನ್ ಪೀಪಲ್ಸ್ ಫ್ರಂಟ್ ಪಾಲಿಟ್ ಪ್ರಧಾನ ಕಾರ್ಯದರ್ಶಿ ಬಾಲನ್ ಮತ್ತು ಕೊ. ಸೀನಿವಾಸನ್ ಅವರನ್ನು ಸೇಲಂ ಥೀವಟ್ಟಿಪಟ್ಟಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಒಂದುವರೆ ವರ್ಷಗಳ ಹಿಂದೆ ಕೇರಳ ಪೊಲೀಸರ ಎನ್ಕೌಂಟರ್ನಲ್ಲಿ ಸಾವಿಗೀಡಾಗಿದ್ದ ಮಾವೋವಾದಿ ನಾಯಕ ಮಣಿವಾಸಗಂ ಅವರ ಶವಸಂಸ್ಕಾರದಲ್ಲಿ ಭಾಗವಹಿಸಿದ್ದಕ್ಕಾಗಿ ದಾಖಲಿಸಲಾಗಿದ್ದ ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.
ನವೆಂಬರ್ 2019 ರಲ್ಲಿ ಬಾಲನ್ ಮತ್ತು ಕೋ. ಸೀನಿವಾಸನ್ರವರು ಮಣಿವಾಸಗಂ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದರು.
ಅವರ ಬಂಧನವನ್ನು ಖಂಡಿಸಿರುವ ತಮೀಳ್ ನೇಷನ್ ಪೀಪಲ್ಸ್ ಫ್ರಂಟ್ “ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಯಾರಾದರು ಪ್ರಕರಣಗಳನ್ನು ದಾಖಲಿಸುತ್ತಾರೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದೆ. ಫ್ರಂಟ್ನ ಸದಸ್ಯರಾದ ಸತೀಶ್ ಮತ್ತು ಅರುಣ್ ಶೌರಿ ಅವರಿಗೆ ಕೇವಲ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಈ ಪ್ರಕರಣದಲ್ಲಿ ಮತ್ತೊಂದು ಸಮನ್ಸ್ ನೀಡಲಾಗಿದೆ ಎಂದು ತಮೀಳ್ ನೇಷನ್ ಪೀಪಲ್ಸ್ ಫ್ರಂಟ್ ಹೇಳಿದೆ.
ಇದನ್ನೂ ಓದಿ: ’ಸಿಖ್ಖರನ್ನು ದಾರಿ ತಪ್ಪಿಸಲಾಗುತ್ತಿದೆ’-ರಾಜ್ಯಸಭೆಯಲ್ಲಿ ಕೃಷಿ ಕಾನೂನನ್ನು ಮತ್ತೆ ಸಮರ್ಥಿಸಿದ ಮೋದಿ
ತಮಿಳ್ ನೇಷನ್ ಪೀಪಲ್ಸ್ ಫ್ರಂಟ್ನ ಜಿಲ್ಲಾ ಸಮಿತಿ ಸದಸ್ಯರಾದ ಆರ್. ಶ್ರೀರಾಮ್, ಬಿಜೆಪಿ ವಿರುದ್ದ ಜನಾಂದೋಲನ ರೂಪಿಸಿದ್ದಕ್ಕಾಗಿ ಈ ಬಂಧನ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಶ್ರೀರಾಮ್, “2021 ರ ಜನವರಿ 20 ರಂದು ಚೆನ್ನೈನಲ್ಲಿ ಎಪ್ಪತ್ತು ತಮಿಳು ಸಂಘಟನೆಗಳನ್ನು ಒಳಗೊಂಡು ’ಬಿಜೆಪಿ ವಿರೋಧಿ ಚಳುವಳಿ’ ಕುರಿತು ಒಂದು ಸಭೆ ನಡೆದಿತ್ತು. ಎಪ್ರಿಲ್ ತಿಂಗಳಿನಲ್ಲಿ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಪರ್ಯಾಯ ಆಂದೋಲನವನ್ನು ಕಟ್ಟುವ ಬಗ್ಗೆ ಸಭೆಯನ್ನು ನಡೆಲಾಗಿತ್ತು. ಈ ಸಭೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರದಂತೆ ತಡೆಯಲು ಬಿಜೆಪಿ ಎಲ್ಲಿ ಚುನಾವಣೆಗೆ ನಿಂತರು ಅಲ್ಲಿ ಅದನ್ನು ಸೋಲಿಸಲು ಒಗ್ಗೂಡುವಂತೆ ಚರ್ಚಿಸಲಾಗಿತ್ತು” ಎಂದು ಹೇಳಿದರು.
“ಈ ಸಭೆಯನ್ನು ’ಬಿಜೆಪಿಯನ್ನು ಸೋಲಿಸಿ ಚಳವಳಿ’ಯ ಮುಖಂಡರಾದ ಬಾಲನ್ ಅವರು ಆಯೋಜಿಸಿದ್ದರು. ಈ ಸಭೆ ನಡೆದ ನಂತರ ಪೊಲೀಸರು ಒಂದುವರೆ ವರ್ಷ ಹಿಂದೆ ದಾಖಲಾದ ಪ್ರಕರಣವನ್ನು ಹೊರತೆಗೆದು ಅವರನ್ನು ಬಂಧಿಸಿದ್ದಾರೆ” ಎಂದು ಶ್ರೀರಾಮ್ ಹೇಳಿದರು.
ಇದನ್ನೂ ಓದಿ: ದಲಿತ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆಗೊಳಿಸಿ: ನಟ ದಿಲ್ಜಿತ್, ನಟಿ ರಮ್ಯಾ ಒತ್ತಾಯ
“ಎನ್ಕೌಂಟರ್ಗಳು ನಿರಂತರವಾಗಿ ನಡೆಯುತ್ತಿರುವುದರಿಂದ, ನಕಲಿ ಎನ್ಕೌಂಟರ್ಗಳನ್ನು ತನಿಖೆ ಮಾಡಬೇಕೆಂದು ನಾವು ಮನಿವಾಸಗಂ ಅವರ ಹತ್ಯೆಯನ್ನು ನಾವು ಖಂಡಿಸಿದ್ದೆವು. ಅವರ ಅಂತಿಮ ದರ್ಶನ ಪಡೆಯಲು ಸೇಲಂಗೆ ಹೋದಾಗ ಬಾಲನ್ ಅವರು ಅಲ್ಲಿ ಭಾಷಣ ಮಾಡಿದ್ದರು ಹಾಗೂ ಸೀನಿವಾಸನ್ ಅವರ ಒಂದು ಕವಿತೆ ಓದಿದ್ದರು. ಆದರೆ ಅಂದು 7 ಜನರ ಮೇಲೆ ದಾಖಲಾದ ಎಫ್ಐಆರ್ನಲ್ಲಿ ಬಾಲನ್ ಅಥವಾ ಸೀನಿವಾಸನ್ ಅವರ ಹೆಸರು ಇರಲಿಲ್ಲ” ಎಂದು ಶ್ರೀರಾಮ್ ಹೇಳಿದ್ದಾರೆ.
ತಮಿಳ್ ನೇಷನ್ ಫ್ರಂಟ್ನ ಕಾರ್ಯಕರ್ತರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸ್ವತಃ ಬರೆದಿದ್ದರು. ವಿವಾದಿತ ಯುಎಪಿಎ ಕಾನೂನಿನ ಅಡಿಯಲ್ಲಿ ಈ ರೀತಿ ಬರೆಯುವ ಹಕ್ಕು ಡಿಎಸ್ಪಿಗೆ ಇದೆ. ಕಾನೂನಿನಂತೆ ಎಫ್ಐಆರ್ನಲ್ಲಿ ಯಾರ ಹೆಸರನ್ನು ಉಲ್ಲೇಖಿಸದಿದ್ದರೂ, ಪೊಲೀಸರು ಸಿದ್ಧಪಡಿಸಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಬಳಸಿಕೊಂಡು ಅವರು ಯಾರನ್ನೂ ಯಾವಾಗ ಬೇಕಾದರೂ ಬಂಧಿಸಬಹುದಾಗಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆನಂದ್ ತೆಲ್ತುಂಬ್ಡೆ ಮತ್ತು ಗೌತಮ್ ನವಲಖಾ ಅವರನ್ನು ಬಂಧಿಸಲು ಇದೇ ರೀತಿಯ ವಿಧಾನಗಳನ್ನು ಬಳಸಲಾಯಿತು. ಮೂಲ ಎಫ್ಐಆರ್ನಲ್ಲಿ ಅವರ ಹೆಸರುಗಳು ಇರಲಿಲ್ಲವಾದರು ನಂತರ ಪೊಲೀಸರು ಸ್ವತಃ ಸಿದ್ಧಪಡಿಸಿದ ತಪ್ಪೊಪ್ಪಿಗೆಯನ್ನು ಹೇಳಿಕೆಯಾಗಿ ಸೇರಿಸಲಾಯಿತು.
ಪ್ರಕರಣದಲ್ಲಿ ಎಡಪ್ಪಾಡಿ ಸರ್ಕಾರದ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಹಸ್ತಕ್ಷೇಪವನ್ನು ತಮೀಳ್ ನೇಷನ್ ಪೀಪಲ್ಸ್ ಫ್ರಂಟ್ ಖಂಡಿಸಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪ್ರಕರಣಗಳನ್ನು ದಾಖಲಿಸುವುದು ಮಾನವನ ಮೂಲಭೂತ ಹಕ್ಕುಗಳ ಮೇಲಿನ ಅಮಾನವೀಯ ದಾಳಿ ಎಂದು ಅದು ಹೇಳಿದೆ. ತಮ್ಮ ಸಂಘಟನೆಯ ಸದಸ್ಯರನ್ನು ತಕ್ಷಣವೆ ಬಿಡುಗಡೆ ಮಾಡಬೇಕೆಂದು ಅದು ಒತ್ತಾಯಿಸಿದೆ.
ಇದನ್ನೂ ಓದಿ: ’ನಿಮ್ಮ ದುರಹಂಕಾರದ ನೆತ್ತಿಯ ಮೇಲೆ ಕಾಲಿಟ್ಟು ನಡೆಯುತ್ತೇವೆ’: ಕರವೇ ಅಭಿಯಾನಕ್ಕೆ ವ್ಯಾಪಕ ಬೆಂಬಲ


