ನಮ್ಮ ರೈತರು ದೇಶವನ್ನು ಆತ್ಮನಿರ್ಭರ್ ಮಾಡಿದ್ದಾರೆ. ಆದರೆ ಮೂರು ಕೃಷಿ ಕಾಯ್ದೆಗಳ ಮೂಲಕ ಅವರನ್ನೇ ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 10 ದಿನಗಳ ಜೈ ಜವಾನ್, ಕಿಸಾನ್ ಆಂದೋಲನದ ಭಾಗವಾಗಿ ಉತ್ತರ ಪ್ರದೇಶದ ಶಹರಾನ್ಪುರದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು “ಕೇಂದ್ರ ಸರ್ಕಾರವನ್ನು ನಮ್ಮ ರೈತರನ್ನು ಅಥವಾ ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ” ಎಂದು ದೂರಿದ್ದಾರೆ.
ಉತ್ತರ ಪ್ರದೇಶದ 27 ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವು ಈ ಕಿಸಾನ್ ಆಂದೋಲನ ನಡೆಸುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಮೂರು ಕಾನೂನುಗಳನ್ನು ವಾಪಸ್ ಪಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.
“ಕೇಂದ್ರ ಸರ್ಕಾರವು ರೈತರನ್ನು ದೇಶವಿರೋಧಿಗಳು ಎಂದು ಕರೆಯುತ್ತಿದೆ. ಆದರೆ ನಿಜವಾದ ಅರ್ಥದಲ್ಲಿ ಕೇಂದ್ರ ಸರ್ಕಾರವೇ ದೇಶ ವಿರೋಧಿಯಾಗಿ ವರ್ತಿಸುತ್ತಿದೆ. ಮೋದಿಯವರ 56 ಇಂಚಿನ ಎದೆಯೊಳಗೆ ಚಿಕ್ಕ ಹೃದಯವಿದೆ. ಅದು ಯಾವಾಗಲೂ ಕೆಲವೇ ಉದ್ಯಮಪತಿಗಳ ಪರವಾಗಿ ಮಿಡಿಯುತ್ತಿರುತ್ತದೆ” ಎಂದು ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ.
Massive crowd at Kisan Panchayat, Saharanpur. @priyankagandhi ji will be addressing the gathering shortly. pic.twitter.com/aJZ9IL011x
— Ruchira Chaturvedi (@RuchiraC) February 10, 2021
ಕೇಂದ್ರ ಸರ್ಕಾರವು ರೈತರನ್ನು ಆತಂಕವಾದಿಗಳು, ಭಯೋತ್ಪಾದಕರು ಎಂದು ಕರೆದು ಅವಮಾನಿಸುತ್ತಿದೆ. ಅದು ರೈತರನ್ನು ನಂಬಲು ಸಿದ್ದವಿಲ್ಲ. ಆದರೆ ರೈತರ ಹೃದಯವು ಎಂದಿಗೂ ದೇಶದ ವಿರುದ್ಧವಿಲ್ಲ. ರೈತನ ಹೃದಯ ಯಾವಾಗಲು ಭೂಮಿಯ ಕುರಿತು ಯೋಚಿಸುತ್ತದೆ. ಹಗಲು ರಾತ್ರಿ ರೈತ ಭೂಮಿಯಲ್ಲಿಯೇ ದುಡಿಯುತ್ತಾನೆ. ಅಂತಹ ರೈತರು ದೇಶಕ್ಕೆ ದ್ರೋಹವೆಸಗಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಧಾನಿಗಳಿಗೆ ಪಾಕಿಸ್ತಾನಕ್ಕೆ, ಚೀನಾಕ್ಕೆ ಹೋಗಲು ಸಮಯವಿದೆ. ಆದರೆ ತನ್ನದೇ ಕ್ಷೇತ್ರದ, ತನಕಗೆ ಮತ ಹಾಕಿದ ರೈತರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ಪ್ರಿಯಾಂಕ ಆರೋಪಿಸಿದ್ದಾರೆ.
ಆಂದೋಲನ್ ಜೀವಿಗಳೆಂದು ಕರೆಯುವ ಮೂಲಕ ಪ್ರಧಾನಿಗಳು ರೈತರನ್ನು ಅವಮಾನಿಸುತ್ತಿದ್ದಾರೆ ಮತ್ತು ಸಂಸತ್ತನ್ನು ಅವಮಾನಿಸುತ್ತಿದ್ದಾರೆ. ರೈತರನ್ನು ಗೌರವಿಸದವರು ದೇಶಭಕ್ತರಾಗಲು ಸಾಧ್ಯವಿಲ್ಲ ಎಂದು ಅವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರ ಸ್ಥಿತಿ ನೋಡಿದರೆ ಹೊಟ್ಟೆ ಉರಿಯುತ್ತೆ: ರೈತ ಹೋರಾಟಕ್ಕೆ ನಟ ಶಿವರಾಜ್ಕುಮಾರ್ ಬೆಂಬಲ
???