“ಪ್ರತಿಭಟನೆಯ ಹಕ್ಕು ಕೆಲವು ಕರ್ತವ್ಯಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಪ್ರತಿಭಟನೆಯನ್ನು ಎಲ್ಲಿಬೇಕಾದರೂ-ಯಾವಾಗಬೇಕಾದರೂ ನಡೆಸಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶಾಹೀನ್ಬಾಗ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಹೇಳಿತ್ತು. ಈ ತೀರ್ಪನ್ನು ಪ್ರಶ್ನಿಸಿ 12 ಕಾರ್ಯಕರ್ತರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
2019 ರಲ್ಲಿ ದೆಹಲಿಯ ಶಾಹೀನ್ಬಾಗ್ನಲ್ಲಿ ನಡೆದ ಪೌರತ್ವ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದನ್ನು ಮನಸೋ ಇಚ್ಛೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸಿಎಎ ವಿರೋಧಿ ಪ್ರತಿಭಟನಕಾರರ ಬಂಧನ: ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ
“ಪ್ರತಿಭಟನೆಯನ್ನು ಎಲ್ಲಿಬೇಕಾದರೂ-ಯಾವಾಗಬೇಕಾದರೂ ನಡೆಸಲು ಸಾಧ್ಯವಿಲ್ಲ. ಅದು ಕೆಲವು ಸ್ವಯಂಪ್ರೇರಿತ ಪ್ರತಿಭಟನೆಗಳೂ ಕೂಡ ಆಗಿರಬಹುದು. ಆದರೆ ದೀರ್ಘಕಾಲದ ಪ್ರತಿಭಟನೆಯ ಸಂದರ್ಭದಲ್ಲಿ, ಇತರರ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾರ್ವಜನಿಕ ಸ್ಥಳವನ್ನು ನಿರಂತರವಾಗಿ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಅನಿರುದ್ ಬೋಸ್ ಮತ್ತು ಕೃಷ್ಣ ಮುರಾರಿ ಇದ್ದ ಮೂವರ ನ್ಯಾಯಾಧೀಶರ ಪೀಠವು ಹೇಳಿದೆ.
“ಪ್ರತಿಭಟನೆಗಾಗಿ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವಂತಿಲ್ಲ ಮತ್ತು ಸಾರ್ವಜನಿಕ ಪ್ರತಿಭಟನೆಗಳು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ನಡೆಯಬೇಕು” ಎಂದು ನ್ಯಾಯಪೀಠವು ಪುನರುಚ್ಚರಿಸಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಸಿಎಎ ವಿರೋಧಿಗಳ ಬೇಟೆ: ದೆಹಲಿ ಗಲಭೆಗೆ ಉಮರ್ ಖಾಲಿದ್ರನ್ನು ಸಿಲುಕಿಸಿದ್ದು ಹೇಗೆ?
“ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವವು ಯಾವಾಗಲೂ ಒಟ್ಟಿಗೆ ಇರುತ್ತದೆ” ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್ 2020 ರಲ್ಲಿ ಹೇಳಿತ್ತು. ಇದನ್ನು ಉಲ್ಲೇಖಿಸಿದ ನ್ಯಾಯಪೀಠವು, “ಈ ರೀತಿಯ ಪ್ರತಿಭಟನೆಗಳು ಸ್ವೀಕಾರಾರ್ಹವಲ್ಲ” ಎಂದು ಒತ್ತಿ ಹೇಳಿದೆ.
ದೆಹಲಿಯ ಶಾಹೀನ್ಬಾಗ್ 2019 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು. ಸುಮಾರು 3 ತಿಂಗಳ ಕಾಲ ಮಹಿಳೆಯರು-ಮಕ್ಕಳು ಸೇರಿದಂತೆ ಸಾವಿರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: 10 ದಿನದಲ್ಲಿ 3 ಬಾರಿ ಸಿಎಎ ವಿರೋಧಿ ಹೋರಾಟಗಾರ್ತಿಯರ ಬಂಧನ: ಕಪಿಲ್ ಮಿಶ್ರಾ ಮೇಲೆ ಕ್ರಮ ಏಕಿಲ್ಲ?


