ತಮಿಳುನಾಡು ಪ್ರತಿಪಕ್ಷದ ನಾಯಕ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಪ್ರಧಾನಮಂತ್ರಿಯವರು “ಕಳಂಕಿತ ಕೈಗಳನ್ನು ಹಿಡಿದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಭಾನುವಾರ ಪ್ರಧಾನಿ ಮೋದಿ ತಮಿಳುನಾಡಿನ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯ ಕೈ ಹಿಡಿದು, ಕೈ ಮೇಲಕ್ಕೆ ಎತ್ತಿ ಸಂಭ್ರಮಿಸಿದ್ದನ್ನು ಸ್ಟಾಲಿನ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆಡಳಿತಾರೂಢ ಎಐಡಿಎಂಕೆಯ ಇಬ್ಬರು ಉನ್ನತ ನಾಯಕರ ಕೈಗಳನ್ನು ಹಿಡಿದು ಮೇಲಕ್ಕೆತ್ತಿ ಚುನಾವಣಾ ಭಂಗಿಯನ್ನು ಪ್ರದರ್ಶಿಸಿದ್ದರು. ತಮಿಳುನಾಡಿನಲ್ಲಿ ಚುನಾವಣೆ ಸಮೀಪಿಸುತ್ತಿರುವ ಮುನ್ನ ರಾಜಕೀಯವಾಗಿ ಮಹತ್ವದ ಸಭೆಯಲ್ಲಿ ಪಿಎಂ ಮೋದಿ, ಮುಖ್ಯಮಂತ್ರಿ ಇ ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್ಸೆಲ್ವಂ ಅವರು ತಮ್ಮ ಕೈಗಳನ್ನು ಜೋಡಿಸಿ ಮೇಲಕ್ಕೆ ಎತ್ತಿಕೊಂಡು ವೇದಿಕೆಯ ಮೇಲೆ ನಿಂತಿದ್ದರು.
“ಒಂದು ಕಡೆ ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಸರ್ಕಾರದ ಬಗ್ಗೆ ಮಾತನಾಡುತ್ತಾರೆ ಮತ್ತು ಮತ್ತೊಂದೆಡೆ ಅವರು ಭ್ರಷ್ಟಾಚಾರದ ಆರೋಪ ಹೊತ್ತಿರುವ ಇಬ್ಬರು ಜನರ ಕೈಗಳನ್ನು ಹಿಡಿದಿದ್ದಾರೆ” ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಟಾಲಿನ್ ಹೇಳಿದ್ದಾರೆ.
“ಪಿಎಂ ಮೋದಿ ಇಪಿಎಸ್ ಮತ್ತು ಒಪಿಎಸ್ಗಳ ಕಳಂಕಿತ ಕೈಗಳನ್ನು ಹಿಡಿದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಾರೆಯೇ” ಎಂದು ಅವರು ಪ್ರಶ್ನಿಸಿದರು, (ಇಪಿಎಸ್-ಮುಖ್ಯಮಂತ್ರಿ ಇ.ಪಳಮಿಸ್ವಾಮಿ ಮತ್ತು ಒಪಿಎಸ್-ಡಿಸಿಎಂ ಒ. ಪನ್ನೀರ್ಸೆಲ್ವಂ)
“ಅಂತಹ ಕಳಂಕಿತ ಕೈಗಳನ್ನು ಪ್ರಧಾನಿ ಹಿಡಿದಾಗ, ಅವರು ಭ್ರಷ್ಟಾಚಾರವನ್ನು ಸ್ವೀಕರಿಸಿ ಬೆಂಬಲಿಸುತ್ತಾರೆಯೇ ಎಂಬ ಅನುಮಾನ ಹುಟ್ಟುತ್ತದೆ’ ಎಂದು ಸ್ಟಾಲಿನ್ ಟೀಕಿಸಿದ್ದಾರೆ.
ಸರ್ಕಾರದ ಕಾಂಟ್ರಾಕ್ಟ್ಗಳನ್ನು ತನ್ನ ಸಂಬಂಧಿಕರಿಗೆ ಹಸ್ತಾಂತರಿಸುವಲ್ಲಿ, ಹೆದ್ದಾರಿ ಟೆಂಡರ್ಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತಿನಲ್ಲಿ ಮುಖ್ಯಮಂತ್ರಿ ಪಾತ್ರವಿದೆ ಎಂದು ಡಿಎಂಕೆ ಆರೋಪಿಸಿದೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು ಆದರೆ ಎಐಎಡಿಎಂಕೆ ಸರ್ಕಾರದ ಮೇಲ್ಮನವಿ ಮೇರೆಗೆ ಈ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಡಿಸಿಎಂ ಪನ್ನೀರ್ಸೆಲ್ವಂ ಅಥವಾ ಒಪಿಎಸ್ ಅಪಾರ ಅಕ್ರಮ ಸಂಪತ್ತಿನ ಆರೋಪ ಎದುರಿಸುತ್ತಿದ್ದಾರೆ.
ಈ ಇಬ್ಬರೂ ನಾಯಕರನ್ನು ಯಾವುದೇ ನ್ಯಾಯಾಲಯವು ದೋಷಾರೋಪಣೆ ಮಾಡಿಲ್ಲ ಎಂದು ಸೂಚಿಸಿದಾಗ, ಸ್ಟಾಲಿನ್, “ನ್ಯಾಯಾಲಯವು ಅವರನ್ನು ನಿರಪರಾಧಿಗಳೆಂದು ಕೂಡ ಎಂದು ಹೇಳಿಲ್ಲ. ಪ್ರಧಾನಿ ಅದನ್ನು ಬೆಂಬಲಿಸುವುದು ಇನ್ನೂ ತಪ್ಪು.” ಎಂದಿದ್ದಾರೆ.
ಸ್ಟಾಲಿನ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ನಾರಾಯಣನ್ ತಿರುಪತಿ, “ಇಪಿಎಸ್ ಅಥವಾ ಒಪಿಎಸ್ ವಿರುದ್ಧ ಯಾವುದೇ ಪ್ರಕರಣಗಳು ಸಾಬೀತಾಗಿಲ್ಲ. ಪ್ರಧಾನಿ ಇಬ್ಬರು ತಮಿಳು ನಾಯಕರನ್ನು ಗೌರವಿಸುತ್ತಿದ್ದಾರೆ ಮತ್ತು ಅವರ ಕೈಗಳನ್ನು ಹಿಡಿದಿದ್ದಾರೆ ಎಂದು ಸ್ಟಾಲಿನ್ ಹೆಮ್ಮೆಪಡಬೇಕು” ಎಂದಿದ್ದು, ‘ಸ್ಟಾಲಿನ್ ನಮ್ಮ ಮೈತ್ರಿ ಬಗ್ಗೆ ಅಸೂಯೆ ಪಡುತ್ತಿದ್ದಾರಷ್ಟೇ’ ಎಂದಿದ್ದಾರೆ.
ಮೇ ವೇಳೆಗೆ ನಡೆಯಲಿರುವ ತಮಿಳುನಾಡು ಚುನಾವಣೆಗೆ ಬಿರುಸಿನ ತಯಾರಿ ನಡೆಸಿರುವ ಡಿಎಂಕೆ, ಎಐಎಡಿಎಂಕೆಯ ಎರಡು ಅವಧಿಯ ಭ್ರಷ್ಟಾಚಾರ ವಿಷಯವನ್ನು ಕೇಂದ್ರೀಕರಿಸುವ ಅಭಿಯಾನದೊಂದಿಗೆ ಆಕ್ರಮಣಕಾರಿಯಾಗಿ ಬೀದಿಗಿಳಿದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ 39 ಸ್ಥಾನಗಳನ್ನು ಗೆದ್ದಿದ್ದರೆ, ಎಐಡಿಎಂಕೆ-ಬಿಜೆಪಿ ಮೈತ್ರಿ ಒಂದು ಸ್ಥಾನ ಮಾತ್ರ ಗೆದ್ದಿತ್ತು.
ಇದನ್ನೂ ಓದಿ: ಪಂಜಾಬ್ ಸ್ಥಳೀಯ ಚುನಾವಣೆ – ಕಾಂಗ್ರೆಸ್ಗೆ ಭರ್ಜರಿ ಜಯ, ಬಿಜೆಪಿಗೆ ಮುಖಭಂಗ