ತಮಿಳುನಾಡಿನ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದ ಶಶಿಕಲಾ ನಟರಾಜನ್ ನಿನ್ನೆ (ಮಾ.3) ರಾಜಕೀಯ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತ ಅವರ ಅಪ್ತೆ ಶಶಿಕಲಾ ರಾಜಕೀಯದಿಂದ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದಾರೆ.
ಶಶಿಕಲಾ ಈ ಮಹತ್ದದ ವಿಚಾರವನ್ನು ಮಾಧ್ಯಮ ಪ್ರಕಟಣೆಯ ಮೂಲಕ ಘೋಷಿಸಿದ್ದಾರೆ. “ನಾನು ಎಂದಿಗೂ ಅಧಿಕಾರ ಅಥವಾ ಸ್ಥಾನವನ್ನು ಗುರಿಯಾಗಿಸಿಕೊಂಡಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: AIDMK ಪಕ್ಷದ ಉನ್ನತ ಹುದ್ದೆಗಾಗಿ ಕೋರ್ಟ್ ಮೆಟ್ಟಿಲೇರಿದ ವಿ.ಕೆ ಶಶಿಕಲಾ
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗ ಶಶಿಕಲಾ ಈ ನಿರ್ಧಾರ ಪ್ರಕಟಸಿದ್ದಾರೆ. ಶಶಿಕಲಾ ಜೈಲಿನಿಂದ ಬಿಡುಗಡೆಯಾದ ನಂತರ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಈಗ ಶಶಿಕಲಾ ಅವರ ಈ ನಿರ್ಧಾರವು ಆಡಳಿತಾರೂಢ ಎಐಎಡಿಎಂಕೆ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಕೊಂಚ ನಿರಾಳವನ್ನುಂಟುಮಾಡಿದೆ.
ಆದರೆ, ಕಳೆದ ಫೆಬ್ರವರಿ ತಿಂಗಳಿನಲ್ಲಿ, ಎಐಎಡಿಎಂಕೆ ಪಕ್ಷದಿಂದ ತನ್ನನ್ನು ಉಚ್ಚಾಟನೆ ಮಾಡಿದ್ದನ್ನು ಕೋರ್ಟ್ನಲ್ಲಿ ಪ್ರಶ್ನಿಸಿ ಮರು ಅರ್ಜಿ ಸಲ್ಲಿಸಿದ್ದ ಶಶಿಕಲಾ, ಈಗ ದಿಢೀರ್ ಎಂದು ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಎಐಎಡಿಎಂಕೆ ಪಕ್ಷದಲ್ಲಿ ತನಗೇ ಉನ್ನತ ಸ್ಥಾನ ಸಿಗಬೇಕೆಂದು ಪಟ್ಟು ಹಿಡಿದಿದ್ದ ಶಶಿಕಲಾ ಅವರ ಈ ನಡೆ ಕೊಂಚ ಸಂದೇಹವನ್ನು ಉಳಿಸಿದೆ. ಈಗ ಅವರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಯಾರ ಜೊತೆಗೆ ಯಾರ ಮೈತ್ರಿ? ಸದ್ಯದ ಸಂಪೂರ್ಣ ಚಿತ್ರಣ