ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು “ಲವ್ ಜಿಹಾದ್” ಶಾಸನ ತರಲು ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಅದನ್ನು ಪ್ರಮುಖ ಮೈತ್ರಿ ಪಕ್ಷದ ನಾಯಕ ಮತ್ತು ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮತಾಂತರಗೊಳ್ಳುವಂತೆ ಒತ್ತಾಯಿಸಲು ಮದವೆಯ ನಾಟಕ ಆಡುತ್ತಾರೆ ಎಂದು ಬಲಪಂಥಿಯರು ಬಳಸುವ “ಲವ್ ಜಿಹಾದ್” ಎಂಬ ಪದವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
“ಲವ್ ಜಿಹಾದ್” ಎಂಬ ಈ ಪದವನ್ನು ನಾನು ಒಪ್ಪುವುದಿಲ್ಲ. ಬಲವಂತದ ಧಾರ್ಮಿಕ ಮತಾಂತರವನ್ನು ಪರೀಕ್ಷಿಸಲು ನಾವು ನಿರ್ದಿಷ್ಟವಾಗಿ ಕಾನೂನನ್ನು ರಚಿಸೋಣ. ನಾವು ಅದನ್ನು ಬೆಂಬಲಿಸುತ್ತೇವೆ. ಯಾರಾದರೂ ಸ್ವಇಚ್ಛೆಯಿಂದ ಮತಾಂತರಗೊಂಡರೆ ಅಥವಾ ಇನ್ನೊಂದು ನಂಬಿಕೆಯ ಪಾಲುದಾರನನ್ನು ಮದುವೆಯಾದರೆ, ಯಾವುದೇ ನಿರ್ಬಂಧವಿಲ್ಲ, ಇರಲೂ ಬಾರದು” ಎಂದು ದುಶ್ಯಂತ್ ಚೌತಾಲಾ ಎನ್ಡಿಟಿವಿಗೆ ತಿಳಿಸಿದರು.
ಇದನ್ನೂ ಓದಿ: ಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ..
ರೈತರ ಪ್ರತಿಭಟನೆಯ ಬಗ್ಗೆ ದುಶ್ಯಂತ್ ಚೌತಾಲಾ ಮತ್ತು ಅವರ ಜನ್ನಾಯಕ್ ಜನತಾ ಪಕ್ಷ (ಜೆಜೆಪಿ) ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಈ ಸಮಯದಲ್ಲಿ ಈ ಹೇಳಿಕೆಗಳು ಬಂದಿವೆ. ತಮ್ಮ ಪಕ್ಷದ ಆಧಾರಸ್ತಂಭವಾದ ರೈತರು ವಿರೋಧಿಸುತ್ತಿರುವ ಕೇಂದ್ರ ಕಾನೂನುಗಳನ್ನು ಪರಿಶೀಲಿಸುವ ಬೇಡಿಕೆಯನ್ನು ಚೌತಾಲಾ ಬೆಂಬಲಿಸಿದ್ದಾರೆ. ಕೇಂದ್ರ ಸರ್ಕಾರ ರೈತರ ಮಾತು ಕೇಳದಿದ್ದರೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದರು.
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವಾರು ಬಿಜೆಪಿ ಆಡಳಿತದ ರಾಜ್ಯಗಳು ಈಗಾಗಲೇ ‘ಲವ್ ಜಿಹಾದ್’ ಎಂಬ ಜನಪ್ರಿಯ ಹೆಸರಿನ ಶಾಸನಗಳನ್ನು ಜಾರಿಗೆ ತಂದಿವೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಹರಿಯಾಣದ ನುಹ್ ಜಿಲ್ಲೆಯಲ್ಲಿ ಜೆಜೆಪಿ ಈ ಕುರಿತಾಗಿ ಪ್ರಶ್ನೆಗಳನ್ನು ಮತ್ತು ಆತಂಕವನ್ನು ಎದುರಿಸುತ್ತಿದೆ.
ಚೌತಾಲಾ ಅವರು ಬುಧವಾರ ಚಂಡೀಗಢದಲ್ಲಿ ಸಮುದಾಯದ ಸದಸ್ಯರೊಂದಿಗೆ ಸಭೆ ನಡೆಸಿದರು. “ನಾವು ನಮ್ಮ ನಾಯಕ ದುಶ್ಯಂತ್ ಚೌತಾಲಾ ಅವರೊಂದಿಗೆ ಮೇವತ್ನ ಜನರ ಸಭೆಯನ್ನು ಏರ್ಪಡಿಸಿದ್ದೇವೆ. ವಿಧಾನಸಭೆಯಲ್ಲಿ ಪರಿಚಯಿಸಬೇಕಾದ ಹೊಸ ಕಾನೂನಿನ ಬಗ್ಗೆ ಅವರು ನಮ್ಮ ಕಾಳಜಿಯನ್ನು ತಿಳಿಸಿದರು” ಎಂದು ಜೆಜೆಪಿಯ ಅಲ್ಪಸಂಖ್ಯಾತ ಕೋಶದ ಮುಖ್ಯಸ್ಥ ಮೊಹ್ಸಿನ್ ಚೌಧರಿ ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಹರಿಯಾಣದಲ್ಲಿ ಅಂತರ್ ಧರ್ಮಿಯ ಸಂಬಂಧಗಳ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಆರ್ಟಿಐ ಉತ್ತರವು ಬಹಿರಂಗಪಡಿಸಿದೆ. ಎರಡು ಪ್ರಕರಣಗಳಲ್ಲಿ ಎಫ್ಐಆರ್ಗಳನ್ನು ರದ್ದುಗೊಳಿಸಲು ಪೊಲೀಸರು ಮುಂದಾಗಿದ್ದಾರೆ ಮತ್ತು ಮೂರನೆಯದು ಖುಲಾಸೆಯಲ್ಲಿ ಕೊನೆಗೊಂಡಿದೆ. ನಾಲ್ಕನೇ ಪ್ರಕರಣ ನ್ಯಾಯಾಲಯದಲ್ಲಿದೆ.
ಆರ್ಟಿಐ ಅರ್ಜಿಯನ್ನು ಪಾಣಿಪತ್ ನಿವಾಸಿ ಪಿ.ಪಿ ಕಪೂರ್ ಸಲ್ಲಿಸಿದ್ದರು. ಅಂಬಾಲಾ, ನುಹ್ ಮತ್ತು ಪಾಣಿಪತ್ ಜಿಲ್ಲೆಗಳಲ್ಲಿ ಒಟ್ಟು ನಾಲ್ಕು ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ತೈಲ ಬೆಲೆ 100 ರ ಗಡಿ ದಾಟಿದೆ; ಆದರೆ ಬಿಜೆಪಿ ‘ಲವ್ ಜಿಹಾದ್’ ಹಿಂದೆ ಬಿದ್ದಿದೆ: ವಿಜಯರಾಘವನ್


