ಭಾರತದಲ್ಲಿ “ರೈತರ ಸುರಕ್ಷತೆ” ಮತ್ತು “ಪತ್ರಿಕಾ ಸ್ವಾತಂತ್ರ್ಯ” ಕುರಿತು ಸೋಮವಾರ ಬ್ರಿಟನ್ ಸಂಸತ್ತಿನಲ್ಲಿ ನಡೆದ ಚರ್ಚೆಗೆ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
“ಸಮತೋಲಿತ ಚರ್ಚೆಯ ಬದಲು, ದೃಢೀಕರಣ ಅಥವಾ ಸತ್ಯಗಳಿಲ್ಲದೆ ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗಿದೆಯೆಂದು ನಾವು ತೀವ್ರವಾಗಿ ವಿಷಾದಿಸುತ್ತೇವೆ, ವಿಶ್ವದ ಅತಿದೊಡ್ಡ ಕಾರ್ಯನಿರತ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಅನುಮಾನಿಸಲಾಗಿದೆ’ ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.
“ಬ್ರಿಟಿಷ್ ಮಾಧ್ಯಮಗಳು ಸೇರಿದಂತೆ ವಿದೇಶಿ ಮಾಧ್ಯಮಗಳು ಭಾರತದಲ್ಲಿವೆ ಮತ್ತು ಚರ್ಚೆಯಲ್ಲಿರುವ ಘಟನೆಗಳಿಗೆ ಮೊದಲ ಬಾರಿಗೆ ಸಾಕ್ಷಿಯಾಗಿವೆ. ಭಾರತದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ಕೊರತೆಯ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಹೈಮಿಷನ್ ಹೇಳಿದೆ.
ಸೋಮವಾರ, ಬ್ರಿಟಿಷ್ ಸಂಸತ್ತು ಭಾರತದಲ್ಲಿ “ರೈತರ ಸುರಕ್ಷತೆ” ಮತ್ತು “ಪತ್ರಿಕಾ ಸ್ವಾತಂತ್ರ್ಯ” ಕುರಿತು ಚರ್ಚಿಸಲು 90 ನಿಮಿಷಗಳನ್ನು ಮೀಸಲಿಟ್ಟಿತ್ತು. ರೈತರ ಪ್ರತಿಭಟನೆಗಳಿಗೆ ಭಾರತೀಯ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಲೇಬರ್ ಪಕ್ಷದ ಹಲವಾರು ಸಂಸದರು, ಲಿಬರಲ್ ಪ್ರಜಾಪ್ರಭುತ್ವವಾದಿಗಳು ಮತ್ತು ಸ್ಕಾಟಿಷ್ ರಾಷ್ಟ್ರೀಯ ಪಕ್ಷದವರು ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯುಕೆ ಸರ್ಕಾರ, “ಎರಡೂ ರಾಷ್ಟ್ರದ ಪ್ರಧಾನ ಮಂತ್ರಿಗಳು ವೈಯಕ್ತಿಕವಾಗಿ ಭೇಟಿಯಾದಾಗ ಭಾರತದೊಂದಿಗೆ ಈ ಕಳವಳವನ್ನು ಹಂಚಿಕೊಳ್ಳಲಾಗುವುದು” ಎಂದು ಹೇಳಿದೆ.
ಭಾರತೀಯ ಮೂಲದ ಮೈಡೆನ್ಹೆಡ್ ಲಿಬರಲ್ ಡೆಮೋಕ್ರಾಟ್ ನಾಯಕ ಗುರ್ಚ್ ಸಿಂಗ್ ಸಲ್ಲಿಸಿದ ಮನವಿಗೆ ಈ ಚರ್ಚೆಯು ಪ್ರತಿಕ್ರಿಯೆಯಾಗಿತ್ತು. ಈ ಪೆಟಿಷನ್ಗೆ ವಾರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯುಕೆ ನಿವಾಸಿಗಳು ಸಹಿ ಮಾಡಿದ್ದಾರೆ.
ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಮಾರ್ಟಿನ್ ಡೇ ಚರ್ಚೆ ಆರಂಭಿಸುತ್ತ, “ಕೃಷಿ ಸುಧಾರಣೆಗಳು ಭಾರತ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ ವಿಷಯವೆಂದು ಯುಕೆ ಸರ್ಕಾರ ಈಗಾಗಲೇ ಹೇಳಿದೆ. ಆದ್ದರಿಂದ ನಾವು ಈಗ ಸುಧಾರಣೆಗಳ ಬಗ್ಗೆ ಚರ್ಚಿಸುತ್ತಿಲ್ಲ. ಪ್ರತಿಭಟನಾಕಾರರ ಸುರಕ್ಷತೆಗಾಗಿ ನಾವು ಚರ್ಚಿಸುತ್ತಿದ್ದೇವೆ. ಜಲಫಿರಂಗಿ, ಅಶ್ರುವಾಯು ಬಳಕೆ, ಇಂಟರ್ನೆಟ್ ಸ್ಥಗಿತ ಮತ್ತು ಪೊಲೀಸರು ಮತ್ತು ರೈತರ ನಡುವೆ ಪದೇ ಪದೇ ಘರ್ಷಣೆ ಉಂಟಾಗುವುದು ಕಳವಳಕಾರಿ ವಿಷಯವಾಗಿದೆ. ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ ಎಂದರು.
ಭಾರತದ ರೈತರು ಮತ್ತು ಪತ್ರಕರ್ತರ ಸುರಕ್ಷತೆಯ ಬಗ್ಗೆ ಹಲವಾರು ವಿರೋಧ ಪಕ್ಷದ ಸಂಸದರು ಕಳವಳ ವ್ಯಕ್ತಪಡಿಸಿದರು. ಬ್ರಿಟನ್ನಿನ ಏಷ್ಯಾ ರಾಜ್ಯ ಸಚಿವ ನಿಗೆಲ್ ಆಡಮ್ಸ್, “ಭಾರತದೊಂದಿಗಿನ ನಿಕಟ ಸಂಬಂಧವು ರಾಷ್ಟ್ರವನ್ನು ಕಳವಳ ವ್ಯಕ್ತಪಡಿಸುವುದಕ್ಕೆ ಅಡ್ಡಿ ಮಾಡುವುದಿಲ್ಲ’ ಎಂದು ಹೇಳಿದರು.
ಕಾರ್ಮಿಕ ಮುಖಂಡ ಜೆರೆಮಿ ಕಾರ್ಬಿನ್, “ಅಭೂತಪೂರ್ವ ಪ್ರತಿಭಟನೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನ ಏಕೆ ಸೇರುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸುವಂತೆ ಮಾಡಬೇಕು. ಪತ್ರಕರ್ತರ ಬಂಧನವು ಗಂಭೀರ ವಿಷಯವಾಗಿದೆ” ಎಂದು ಹೇಳಿದರು.
ಕನ್ಸರ್ವೇಟಿವ್ ಸಂಸದೆ ಥೆರೆಸಾ ವಿಲಿಯರ್ಸ್, ಭಾರತ ಸರ್ಕಾರದ ಪ್ರತಿಕ್ರಿಯೆಗೆ ಬೆಂಬಲವನ್ನು ಹಂಚಿಕೊಂಡರು. “ಸಾಮೂಹಿಕ ಪ್ರತಿಭಟನೆಗಳು ನಡೆದಾಗ ಇಲ್ಲಿಯೂ ಸಹ ಪೊಲೀಸರ ವಿರುದ್ಧ ನಾವು ದೂರುಗಳನ್ನು ಸ್ವೀಕರಿಸುತ್ತೇವೆ. ಇದರರ್ಥ ಬ್ರಿಟನ್ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದಲ್ಲ” ಎಂದರು.
ತನ್ನ ಹೇಳಿಕೆಯಲ್ಲಿ, ಭಾರತೀಯ ಹೈಕಮಿಷನ್, “ಭಾರತದ ಹೈಕಮಿಷನ್ ಸಾಮಾನ್ಯವಾಗಿ ಗೌರವಾನ್ವಿತ ಸಂಸತ್ ಸದಸ್ಯರ ಒಂದು ಸಣ್ಣ ಗುಂಪು ಸೀಮಿತ ಕೋರಂನಲ್ಲಿ ನಡೆಸುವ ಆಂತರಿಕ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೂ, ಯಾರಾದರೂ ಭಾರತದ ಮೇಲೆ ಆರೋಪಗಳನ್ನು ಮಾಡಿದಾಗ, ಅದನ್ನು ಸರಿಪಡಿಸುವ, ಸತ್ಯವನ್ನು ತೋರಿಸುವ ಹಕ್ಕು ಹೈಕಮಿಷನ್ಗೆ ಇದೆ’ ಎಂದು ಪ್ರತಿಪಾದಿಸಿದೆ.
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಜನವರಿಯಲ್ಲಿ ಭಾರತಕ್ಕೆ ಬರಬೇಕಿತ್ತು. ಯುಕೆಯಲ್ಲಿನ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಿದ ನಂತರ ಅವರು ಈ ಪ್ರವಾಸವನ್ನು ಮುಂದೂಡಬೇಕಾಯಿತು.
ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ನವೆಂಬರ್ನಲ್ಲಿ ದೆಹಲಿಯ ಗಡಿಯ ಬಳಿ ಪ್ರಾರಂಭವಾಯಿತು. ಕಳೆದ ತಿಂಗಳು, ಪಾಪ್ ತಾರೆ ರಿಹಾನ್ನಾ, ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್, ಯುಎಸ್ ಮತ್ತು ಯುಕೆ ಸಂಸದರು ರೈತ ಪ್ರತಿಭಟನೆಗಳ ಪರ ನಿಂತ ನಂತರ ಪ್ರತಿಭಟನೆಗೆ ಅಪಾರ ಜಾಗತಿಕ ಬೆಂಬಲ ವ್ಯಕ್ತವಾಗಿತ್ತು.
“ಈ ಪ್ರತಿಭಟನೆಗಳನ್ನು ಭಾರತದ ಪ್ರಜಾಪ್ರಭುತ್ವದ ನೀತಿಗಳು ಮತ್ತು ರಾಜಕೀಯದ ಹಿನ್ನೆಲೆಯಲ್ಲಿ ನೋಡಬೇಕು ಎಂದು ನಾವು ಒತ್ತಿ ಹೇಳಲು ಬಯಸುತ್ತೇವೆ ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಸಂಬಂಧಪಟ್ಟ ರೈತ ಗುಂಪುಗಳ ಪ್ರಯತ್ನಗಳು ಜಾರಿಯಲ್ಲಿವೆ ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.


