’ಈ ಸಿಡಿ 100 ರಷ್ಟು ನಕಲಿ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನನ್ನ ರಾಜಕೀಯ ಏಳಿಗೆ ಸಹಿಸದ ಜನ, ನನ್ನನ್ನು ಎದುರಿಸಲಾಗದವರು ಈ ಕೆಲಸ ಮಾಡಿದ್ದಾರೆ. ಎಲ್ಲಾ ತನಿಖೆ ಎದುರಿಸುತ್ತೇನೆ. ನಾನು ಅಪರಾಧಿಯಲ್ಲ, ನಿರಪರಾಧಿ’ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹೀಗೆ ಆಗುತ್ತದೆ ಎಂದು ನನಗೆ 4 ತಿಂಗಳ ಹಿಂದೆಯೇ ಗೊತ್ತಿತ್ತು. ಸಿಡಿ ಬಿಡುಗಡೆಯಾಗುವ 26 ಗಂಟೆಗಳ ಮೊದಲು ನನಗೆ ಹೈಕಮಾಂಡ್, ಹಿತೈಷಿಗಳಿಂದ ಕರೆ ಬಂದಿತ್ತು. ನಾಳೆ ನಿನ್ನ ಬಗ್ಗೆ ಷಡ್ಯಂತ್ರದ ಒಂದು ಸಿಡಿ ಬಿಡುಗಡೆಯಾಗುತ್ತದೆ ಹೆದರಬೇಡ ಎಂದು. ನಾನು ಹೆದರಲಿಲ್ಲ. ಯಾಕೆಂದರೆ ನಾನು ತಪ್ಪು ಮಾಡಿರಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಜಾರಕಿಹೊಳಿ ಸಿಡಿ ಪ್ರಕರಣ: ದೂರು ವಾಪಸ್ ಪಡೆಯಲು ಅವಕಾಶವಿಲ್ಲವೆಂದ ಪೊಲೀಸರು
’ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಯಾರು ನನ್ನನ್ನು ಕೇಳಲಿಲ್ಲ. ನಾನು ನನ್ನ ಸ್ವತಃ ನಿರ್ಧಾರದಿಂದ ರಾಜೀನಾಮೆ ನೀಡಿದ್ದೇನೆ. ನಾನು ಕಟ್ಟಿದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ರಾಜೀನಾಮೆ ನೀಡಿದೆ. ಅಂದು ಬೆಳಗ್ಗೆ 9.30ಕ್ಕೆ ನಾನು ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಸಿದ್ದೆ’ ಎಂದಿದ್ದಾರೆ.
’ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿಯೂ ನನಗೆ ವಿರೋಧಿಗಳಿಲ್ಲ. ಇದು ರಾಜಕಾರಣವಲ್ಲ. ಯಾವ ಪಕ್ಷದವರ ಮೇಲೂ ನಾನು ಆರೋಪ ಮಾಡಿಲ್ಲ. ಅವರೆಲ್ಲ ನನಗೆ ಬೆಂಬಲ ನೀಡಿದ್ದಾರೆ. ಸರ್ಕಾರದ ಕೆಡವಿದ ಕೋಪವಿದ್ದರೇ ಕುಮಾರಸ್ವಾಮಿ, ರೇವಣ್ಣ ನನಗೆ ಯಾಕೆ ಸಪೋರ್ಟ್ ಮಾಡ್ತಿದ್ರು?’ ಎಂದು ಜಾರಕಿಹೊಳಿ ಪ್ರಶ್ನಿಸಿದ್ದಾರೆ.
’ಎಷ್ಟೇ ದೊಡ್ಡ ಪ್ರಭಾವಿಯಾಗಿದ್ದರೂ ನಾನು ಅವರನ್ನು ಜೈಲಿಗೆ ಕಳಿಸುತ್ತೇನೆ. ಅವರನ್ನು ಬಿಡುವುದಿಲ್ಲ. ನಾನು ರಾಜಕೀಯದಲ್ಲಿ ಇರುತ್ತೇನೆ ಇಲ್ಲವೋ ಗೊತ್ತಿಲ್ಲ. ಆದ್ರೆ ಅವರನ್ನು ಮಾತ್ರ ಬಿಡುವುದಿಲ್ಲ’ ಎಂದು ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಸಿಂಘು ಗಡಿಯಲ್ಲಿ ಗುಂಡು ಹಾರಿಸಿದ ಅಪರಿಚಿತ ವ್ಯಕ್ತಿಗಳು!
’ನನ್ನನ್ನು ಮುಗಿಸಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಸಿಡಿಗಾಗಿ 15, 20 ಕೋಟಿ ಖರ್ಚು ಮಾಡಿದ್ದಾರೆ. ಯುವತಿಗೆ 5 ಕೋಟಿ ನೀಡಿದ್ದಾರೆ. ವಿದೇಶದಲ್ಲಿ 2 ಅಪಾರ್ಟ್ಮೆಂಟ್ ನೀಡಿದ್ದಾರೆ. ಯಶವಂತಪುರದ ಅಕ್ಕ ಪಕ್ಕದಲ್ಲಿ ನಾಲ್ಕನೇ ಫ್ಲೋರ್ ಮತ್ತು ಒರಾಯನ್ ಮಾಲ್ ಪಕ್ಕದಲ್ಲಿ 5ನೇ ಫ್ಲೋರ್ನಲ್ಲಿ ಈ ಷಡ್ಯಂತ್ರ ರಚಿಸಲಾಗಿದೆ’ ಎಂದು ಆರೋಪಿಸಿದ್ದಾರೆ.
’ನನಗೆ ಈ ಸಂದರ್ಭದಲ್ಲಿ ಬೆಂಬಲವಾಗಿ ನಿಂತ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ನನ್ನ ಕುಟುಂಬ ಸದಸ್ಯರು, ನಾನು ಬಾಲಚಂದ್ರ ಜಾರಕಿಹೊಳಿ ಹೇಳಿರುವ ಎಲ್ಲಾ ಮಾತಿಗೂ ಮತ್ತು ಹಿತೈಷಿಗಳ ಮಾತಿಗೆ ನಾನು ಬದ್ಧವಾಗಿದ್ದೇನೆ ಎಂದಿದ್ದಾರೆ.
ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ನಾನು ನಿರಪರಾಧಿ ದಯವಿಟ್ಟು ನನಗೆ ಬೆಂಬಲ ನೀಡಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
“ರಮೇಶ್ ಜಾರಕಿಹೊಳಿಯವರ ಮೇಲೆ ಯುವತಿಯೊಬ್ಬರಿಗೆ ಕೆಲಸದ ಆಮಿವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪವಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿಡಿಯೋ ಸಿ.ಡಿ ಜೊತೆಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಕಳೆದೆರಡು ದಿನಗಳ ಹಿಂದೆ ದೂರ ವಾಪಸ್ ಪಡೆಯುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ವೀರಶೈವ ಲಿಂಗಾಯತ, ಒಕ್ಕಲಿಗರ ನಿಗಮ ಸ್ಥಾಪನೆಯನ್ನು ಸ್ವಾಗತಿಸುತ್ತೇನೆ: ಬಜೆಟ್ ವಿಶ್ಲೇಷಣೆ ಮಾಡಿದ ಸಿದ್ದರಾಮಯ್ಯ