ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 3 ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಸ್ಥಳವಾದ ದೆಹಲಿ-ಹರಿಯಾಣ ಗಡಿಭಾಗದ ಸಿಂಘು ಪ್ರದೇಶದ ಬಳಿ ಭಾನುವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಈ ಘಟನೆ ನಡೆದಿದೆ. ಕೆಲವು ವ್ಯಕ್ತಿಗಳು ಲಂಗರ್ (ಸಮುದಾಯ ಪಾಕಶಾಲೆ)ನಲ್ಲಿ ಆಹಾರ ಸೇವಿಸುತ್ತಿದ್ದಾಗ ತಗಾದೆ ತೆಗೆದ ಬಳಿಕ ಘರ್ಷಣೆಗೆ ಇಳಿದಿದ್ದಾರೆ. ಬಳಿಕ ಕಾರಿನೊಳಗಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕಾರಿನ ಗುರುತು ಪತ್ತೆಯಾಗಿದ್ದು ಗುಂಡು ಹಾರಿಸಿದವರ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಂಗೂಲಿ ಕ್ಯಾಚ್ ಮಾಡಲು ಹೋಗಿ ‘ಕೋಬ್ರಾ’ ಹಿಡಿದ ಬಿಜೆಪಿ
ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಐಪಿಸಿ ಸೆಕ್ಷನ್ 285( ಕ್ರಿಮಿನಲ್ ಉದ್ದೇಶದ ಕೃತ್ಯ) ಹಾಗೂ 506( ಬೆಂಕಿ ಅಥವಾ ದಹನಕಾರಿ ವಸ್ತುವಿನೊಂದಿಗೆ ನಿರ್ಲಕ್ಷದ ವರ್ತನೆ ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಕುಂಡ್ಲಿ ಪೊಲೀಸ್ ಠಾಣಾಧಿಕಾರಿ ರವಿ ಹೇಳಿದ್ದಾರೆ.
ರೈತರ ಪ್ರತಿಭಟನೆ 100ನೇ ದಿನಕ್ಕೆ ಕಾಲಿರಿಸಿದ ಗುರುತಿಗಾಗಿ ನವದೆಹಲಿಯ ಹೊರಭಾಗದಲ್ಲಿ, ದೆಹಲಿ-ಹರಿಯಾಣ ಸಂಪರ್ಕಿಸುವ 135 ಕಿ.ಮೀ ಉದ್ದದ ಕುಂಡ್ಲಿ-ಮನೆಸರ್-ಪಾಲ್ವಾಲ್ ಹೆದ್ದಾರಿಯ ಐದು ಕಡೆ ರೈತರು ಹೆದ್ದಾರಿ ತಡೆ ಆಂದೋಲನ ನಡೆಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇದನ್ನೂ ಓದಿ: ಮಹಿಳಾ ದಿನಾಚರಣೆಯ ದಿನವೇ ಪೊದೆಯಲ್ಲಿ ಪತ್ತೆಯಾದ ನವಜಾತ ಹೆಣ್ಣುಮಗು!