Homeನಿಜವೋ ಸುಳ್ಳೋ‘ನ್ಯಾಯಾಧೀಶರೇ ಆರೋಪಿಯಾದರೆ... ವಿಚಾರಣಾ ಪೀಠದಲ್ಲಿ ಸ್ವತಃ ನ್ಯಾಯಮೂರ್ತಿಯಾಗಿ ಕುಳಿತರೇ?’

‘ನ್ಯಾಯಾಧೀಶರೇ ಆರೋಪಿಯಾದರೆ… ವಿಚಾರಣಾ ಪೀಠದಲ್ಲಿ ಸ್ವತಃ ನ್ಯಾಯಮೂರ್ತಿಯಾಗಿ ಕುಳಿತರೇ?’

- Advertisement -
- Advertisement -
| ಮಲ್ಲಿಗೆ ಸಿರಿಮನೆ |
ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ವರದಿಗಳೊಂದಿಗೆ ಭಾರತದ ಪ್ರಜ್ಞಾವಂತ ನಾಗರೀಕರು ಆತಂಕದೊಂದಿಗೇನೆ ಇಂದಿನ ದಿನಕ್ಕೆ ಕಣ್ಣು ತೆರೆದರು. ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆ ಶಾಕ್‍ಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿರುವುದು ಆಘಾತಕಾರಿಯಾಗಿದೆ; ದೇಶದ ಅತ್ಯುಚ್ಛ ನ್ಯಾಯದಾನ ಸಂಸ್ಥೆಯನ್ನೂ ಸೇರಿದಂತೆ ಎಲ್ಲವನ್ನೂ ಜನರು ಅನುಮಾನದಿಂದ ನೋಡುವಂತಹ ಸಂದರ್ಭ ಸೃಷ್ಟಿಯಾಗಿದೆ.
ಪ್ರಕರಣದ ಹಿನ್ನೆಲೆ: ಸುಪ್ರೀಂ ಕೋರ್ಟ್‍ನ ಮಾಜಿ ಮಹಿಳಾ ನೌಕರರೊಬ್ಬರು ಸಿಜೆಐ (ಭಾರತದ ಮುಖ್ಯ ನ್ಯಾಯಮೂರ್ತಿಗಳು) ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 35 ವರ್ಷದ ಈ ಮಹಿಳಾ ಉದ್ಯೋಗಿಯು ಸುಪ್ರೀಂ ಕೋರ್ಟ್‍ನ 22 ಮಂದಿ ಜಡ್ಜ್‍ಗಳಿಗೆ ಬರೆದಿರುವ ಪತ್ರದಲ್ಲಿ ‘ಅಕ್ಟೋಬರ್ 2018ರಲ್ಲಿ ತಾನು ಸಿಜೆಐ ಅವರ ಗೃಹ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರು ತನ್ನ ಜೊತೆ ಲೈಂಗಿಕ ವರ್ತನೆ ತೋರಿದ್ದರು ಮತ್ತು ಇದನ್ನು ವಿರೋಧಿಸಿದ್ದಕ್ಕಾಗಿ ತನ್ನನ್ನು ಗೃಹ ಕಛೇರಿಯ ಕೆಲಸದಿಂದ ಬದಲಾಯಿಸಲಾಯಿತು ಮತ್ತು ನಂತರ 2 ತಿಂಗಳಲ್ಲಿ ಕೆಲಸದಿಂದ ವಜಾಗೊಳಿಸಲಾಯಿತು’ ಎಂದು ಹೇಳಿದ್ದಾರೆ. ವಜಾಗೊಳಿಸಲು ನೀಡಲಾದ 3 ಕಾರಣಗಳಲ್ಲಿ ಒಂದು ದಿನ ಅನುಮತಿ ಪಡೆಯದೆ ಕ್ಯಾಶುಯಲ್ ಲೀವ್ ಹಾಕಿದ್ದನ್ನೂ ಒಂದು ಕಾರಣವಾಗಿ ನೀಡಲಾಗಿದೆ ಎಂದು ಕೂಡಾ ಈ ಉದ್ಯೋಗಿ ಹೇಳಿದ್ದಾರೆ.
ಈ ಬಗ್ಗೆ ಹಲವು ಆಯಾಮಗಳಲ್ಲಿ ಪ್ರತಿಕ್ರಿಯೆಗಳು ಈಗಾಗಲೇ ಹೊರಬಂದಿದ್ದು, ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ ಈ ‘ಇಡೀ ಪ್ರಕರಣ ಸುಳ್ಳು ಮತ್ತು ಕಥೆ ಕಟ್ಟಲಾಗಿರುವಂಥದ್ದು’ ಎಂದು ಹೇಳಿಕೆ ನೀಡಿದರೆ, ‘ಕ್ರಿಮಿನಲ್ ಕಾನೂನಿನಲ್ಲಿ ಮಹಿಳೆಯರು ಅಸೋಸಿಯೇಶನ್’ ಈ ಬಗ್ಗೆ ಕೂಡಲೇ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ಅಲ್ಲಿಯವರೆಗೆ ಸಿಜೆಐ ಆ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂದು ಹೇಳಿದೆ.
ಅದೇ ಸಂದರ್ಭದಲ್ಲಿ ಈ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ಪೀಠದಲ್ಲಿ ಸ್ವತಃ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರೇ ಮೂರು ಮಂದಿ ನ್ಯಾಯಾಧೀಶರಲ್ಲಿ ಒಬ್ಬರಾಗಿ ಕುಳಿತು ವಿಚಾರಣೆ ನಡೆಸಿರುವುದು, ಮಾಧ್ಯಮಗಳು ಈ ಪ್ರಕರಣದ ವರದಿ ಮಾಡುವಾಗ ಸ್ವನಿಯಂತ್ರಣವನ್ನು ಪಾಲಿಸಬೇಕೆಂದು ನ್ಯಾಯಾಧೀಶರಲ್ಲೊಬ್ಬರು ಅಭಿಪ್ರಾಯ ಪಟ್ಟಿರುವುದು, ಕೊನೆಗೆ ನೀಡಲಾದ ತೀರ್ಪಿನಲ್ಲಿ ನ್ಯಾಯಾಧೀಶರ ಸಹಿ ಇರಬೇಕಾದಲ್ಲಿ ರಂಜನ್ ಗೊಗೊಯ್ ಅವರ ಹೆಸರು ದಾಖಲಾಗದೇ ಇರುವುದು, ಎಲ್ಲವೂ ಹಲವು ಹಿರಿಯ ಘನತೆವೆತ್ತ ನ್ಯಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಯಂ ವಿಚಾರಣೆ-ಆಕ್ರೋಶಕ್ಕೆ ಕಾರಣ!

ಸಿಜೆಐ ರಂಜನ್ ಗೊಗೊಯ್ ಅವರು ತಮ್ಮ ಮೇಲಿನ ಆರೋಪದ ವಿಚಾರಣೆಯನ್ನು ಸವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲು ರಚಿಸಲಾದ ಪೀಠದಲ್ಲಿ ಸ್ವತಃ ತಾವೂ ಒಬ್ಬ ನ್ಯಾಯಾಧೀಶರಾಗಿ ಕೂತಿದ್ದರು. ಇದು ಆಕ್ಷೇಪಾರ್ಹವಾದುದು! ಭಾರತದ ಮೊಟ್ಟಮೊದಲ ಮಹಿಳಾ ಉಪ ಸಾಲಿಸಿಟರ್ ಜನರಲ್ ಆಗಿದ್ದ ಮತ್ತು ಹಿರಿಯ ನ್ಯಾಯವಾದಿಯಾಗಿರುವ ಇಂದಿರಾ ಜೈಸಿಂಗ್ ಅವರು “ಸುಪ್ರೀಂ ಕೋರ್ಟ್‍ನ ಈ ವರ್ತನೆ ಅತ್ಯಂತ ಅಸ್ವಾಭಾವಿಕವಾಗಿದೆ. ದುರಂತವೆಂದರೆ ಸ್ವತಃ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಲೈಂಗಿಕ ಕಿರುಕುಳದ ಆರೋಪ ಬಂದರೆ ಏನು ಮಾಡಬೇಕೆಂಬ ಸ್ಪಷ್ಟ ನಿರ್ದೇಶನ ‘ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ (ತಡೆ ಮತ್ತು ನಿರ್ವಹಣಾ ಕಾಯ್ದೆ) 2013’ರಲ್ಲೂ ದಾಖಲಾಗಿಲ್ಲ. ಸುಪ್ರೀಂ ಕೋರ್ಟ್‍ನ ‘ಆಂತರಿಕ ದೂರು ಸಮಿತಿ’ಯನ್ನು ರಚಿಸುವವರು, ರಾಜ್ಯ ಕೋರ್ಟ್‍ಗಳ ನ್ಯಾಯಮೂರ್ತಿಗಳ ಮೇಲೆ ಆರೋಪ ಬಂದರೆ ಅದನ್ನು ವಿಚಾರಣೆ ನಡೆಸುವವರು ಎಲ್ಲವೂ ಸಿಜೆಐ ಆಗಿರುತ್ತಾರೆ. ಆದರೆ, ಅವರೇ ಆರೋಪಿ ಸ್ಥಾನದಲ್ಲಿರುವಾಗ ಏನು ಮಾಡಬೇಕು ಎಂಬ ಬಗ್ಗೆ ಸರಿಯಾದ ಮಾರ್ಗದರ್ಶಿ ಸೂತ್ರಗಳಿಲ್ಲ; ಅದೇನೇ ಆದರೂ ಶನಿವಾರ ಬೆಳಿಗ್ಗೆ ನಡೆದ ವಿಚಾರಣೆಯ ಪ್ರಹಸನ ನಮ್ಮ ಕಾನೂನು ವ್ಯವಸ್ಥೆಯನ್ನು ಅಪಹಾಸ್ಯ ಮಾಡುವಂತಿತ್ತು” ಎನ್ನುತ್ತಾರೆ. ಮತ್ತೊಬ್ಬ ಖ್ಯಾತ ಮಹಿಳಾವಾದಿ ವಕೀಲೆ ವೃಂದಾ ಗ್ರೋವರ್ ಅವರು “ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಆರೋಪ ಬಂದ ತಕ್ಷಣ ಸುಪ್ರೀಂ ಕೋರ್ಟ್ ಇದನ್ನೊಂದು ಸುವೋ ಮೋಟೋ ಪ್ರಕರಣವಾಗಿ ತೆಗದುಕೊಂಡಿದ್ದಾಗಲೀ, ವಿಚಾರಣೆಗೆ ವಿಶೇಷ ಪೀಠ ರಚಿಸಿ ಸ್ವತಃ ಆರೋಪಿತರಾದ ನ್ಯಾಯಮೂರ್ತಿಯೂ ಇನ್ನಿಬ್ಬರೊಂದಿಗೆ ಅಲ್ಲಿ ಕೂತದ್ದಾಗಲೀ, ಆ ಬಗ್ಗೆ ತೆರೆದ ಕೋರ್ಟ್‍ನಲ್ಲಿ ವಿಚಾರಣೆಗೆ ಅವಕಾಶ ನೀಡಿದ್ದಾಗಲೀ, ದೂರುದಾರರಿಗೆ ಸಾಕಷ್ಟು ಪೂರ್ವಮಾಹಿತಿ ಇಲ್ಲದೆ ವಿಚಾರಣೆ ನಡೆಸಿದ್ದಾಗಲೀ, ಆ ‘ವಿಚಾರಣೆ’ಯಲ್ಲಿ ದೂರುದಾರ ಮಹಿಳೆಯ ಬಗ್ಗೆ ಆಕ್ಷೇಪಣೆಗಳನ್ನು ಸಿಜೆಐ ಅವರು ಎತ್ತಿದ್ದಾಗಲೀ-ಯಾವುದೂ ಅಗತ್ಯವಾಗಿತ್ತೆಂದು ಅನಿಸುವುದಿಲ್ಲ. ‘ಭಾರತದ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆಗೆ ಗಂಭೀರ ಸವಾಲೊಡ್ಡುವ ಪ್ರಕರಣ’ ಎಂದು ಸ್ವತಃ ಸುಪ್ರೀಕೋರ್ಟ್ ಇದನ್ನು ಕರೆದುಕೊಂಡು ತಾನೇ ವಿಚಾರಣೆಗೆ ಮುಂದಾಗಿರುವುದು ಸೂಕ್ತವಾದುದಲ್ಲ” ಎಂದು ವೃಂದಾ ಗ್ರೋವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ವೃಂದಾ ಗ್ರೋವರ್
ಮತ್ತೊಬ್ಬ ಹಿರಿಯ ವಕೀಲರೂ ಮತ್ತು ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ದ ಹಿಂದಿನ ಮುಖ್ಯಸ್ಥರಲ್ಲೊಬ್ಬರೂ ಆಗಿದ್ದ ದುಷ್ಯಂತ್ ದವೆ ಅವರು ‘ದ ಹಿಂದೂ’ ಪತ್ರಿಕೆಗೆ ಬರೆಯುತ್ತಾ, “ಈ ಪ್ರಕರಣವು ಭಾರತದ ನ್ಯಾಯಾಂಗ ವ್ಯವಸ್ಥೆಗಾಗಲೀ ಅಥವಾ ಅದರ ವಿಶ್ವಾಸಾರ್ಹತೆ, ಸ್ವಾಯತ್ತತೆಗಾಗಲೀ ಸವಾಲೊಡ್ಡುವಂಥದ್ದಾಗಿರಲಿಲ್ಲ; ಬದಲಿಗೆ ಆ ದೂರಿನ ವಿಚಾರಣೆಯ ಹೆಸರಿನಲ್ಲಿ ಶನಿವಾರ ಬೆಳಿಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ನಡೆದ ಘಟನೆ ಖಂಡಿತವಾಗಿ ದೇಶದ ಅತ್ಯಚ್ಛ ನ್ಯಾಯದಾನ ಸಂಸ್ಥೆಯ ಘನತೆ ಮತ್ತು ವಿಶ್ವಾಸಾರ್ಹತೆಗೆ ಚ್ಯುತಿ ತಂದಿದೆ. ನಾನು ಈ ಪ್ರಕರಣದ ಬಗ್ಗೆ ತೀವ್ರ ವಿಚಾರಣೆ ನಡೆಯಲಿ ಮತ್ತು ಸಿಜೆಐ ಅವರು ಆರೋಪಮುಕ್ತರಾಗಲೀ ಎಂದು ಬಯಸುತ್ತೇನೆ ಆದರೆ ಅದು ಈ ಮಾದರಿಯಲ್ಲಲ್ಲ” ಎಂದು ಕಟುವಾದ ಮಾತುಗಳಲ್ಲಿ ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ ಖ್ಯಾತನಾಮರನ್ನೂ ಒಳಗೊಂಡಂತೆ ಅನೇಕರ ವ್ಯಕ್ತಿತ್ವದ ಮತ್ತೊಂದು ಕರಾಳ ಮುಖವನ್ನು ಬಹಿರಂಗಕ್ಕೆ ತಂದ ‘ಮೀಟೂ’ ಆಂದೋಲನದಂತಹವು ಇನ್ನೂ ಜನರ ನೆನಪಿನಲ್ಲಿರುವಾಗಲೇ, ಭಾರತದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮೇಲೆಯೇ ಬಂದ ಇಂತಹ ಒಂದು ಆರೋಪವನ್ನು ಘನತೆಯಿಂದ ನಿಭಾಯಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ವೃದ್ಧಿಸಬೇಕಾದ ತಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಎಡವಿದರೇ? ಇನ್ನಾದರೂ ಈ ಪ್ರಕರಣದಲ್ಲಿ ಖಡಕ್ಕಾದ ನಿಷ್ಪಕ್ಷಪಾತ ತನಿಖೆ ನಡೆಸುವ ಬದ್ಧತೆಯನ್ನು ಭಾರತದ ಅತ್ಯುಚ್ಛ ನ್ಯಾಯಾಲಯ ತೋರಬೇಕಿದೆ.
ರಂಜನ್ ಗೊಗೊಯ್ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣಕ್ಕೊಂದು ಆತಂಕಕಾರಿ ಟ್ವಿಸ್ಟ್-ಉತ್ಸವ್ ಬೈನ್ಸ್ ಫೇಸ್‍ಬುಕ್ ಪೋಸ್ಟ್!
ಉತ್ಸವ್ ಬೈನ್ಸ್ ಎಂಬ ಯುವ ವಕೀಲ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಸಂಬಂಧ ಪ್ರಕಟಿಸಿರುವ ತನ್ನ ಫೇಸ್‍ಬುಕ್ ಮತ್ತು ಟ್ವಿಟರ್ ಪೋಸ್ಟ್‍ಗಳು ಬೇರೆಯದೇ ಆದ ಆಯಾಮವೊಂದರ ಸಾಧ್ಯತೆಯನ್ನು ತೆರೆದಿಡುತ್ತಿವೆ!
ಉತ್ಸವ್ ಬೈನ್ಸ್‍ರವರು, ಅಸಾರಾಂ ಬಾಪು ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿಯ ಪರ ವಾದಿಸಿದ ಮತ್ತು ಇಂದಿನ ಸಂದರ್ಭದಲ್ಲಿ ಯುಕ್ತಾಯುಕ್ತ ವಿವೇಚನೆಯೊಂದಿಗೆ ಪ್ರಜ್ಞಾವಂತಿಕೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಭಾರತದ ಯುವ ವಕೀಲರಲ್ಲೊಬ್ಬರು. ತಮ್ಮ ಫೇಸ್‍ಬುಕ್ ಪೋಸ್ಟ್‍ನಲ್ಲಿ ಅವರು ವಿವರವಾಗಿ ತನ್ನ ಅನುಭವವನ್ನು ಬರೆದುಕೊಂಡಿದ್ದಾರೆ. ಈ ಪ್ರಕರಣದ ಹಿಂದೆ ಭಾರತದ ಸರ್ವೋಚ್ಛ ನ್ಯಾಯಾಲಯದ ಒಳಗಡೆಯೇ ಇರುವ ಭ್ರಷ್ಟ ನ್ಯಾಯಾಧೀಶರು ಮತ್ತಿತರ ಪ್ರಭಾವಿಗಳ ಜಾಲವೊಂದರ ಕರಾಳ ಹಸ್ತಗಳು ಕೆಲಸ ಮಾಡುತ್ತಿರಬಹುದೇ ಎಂಬ ಅನುಮಾನ ಅದನ್ನು ಓದಿದಾಗ ಹುಟ್ಟುತ್ತದೆ.
ಉತ್ಸವ್ ಬೈನ್ಸ್ ಬರೆದಿರುವಂತೆ, “ಸಿಜೆಐ ವಿರುದ್ಧ ಲೈಂಗಿಕ ಆರೋಪದ ದೂರು ದಾಖಲಿಸಿರುವ ಮಹಿಳೆಯ ಪರವಾಗಿ ವಕೀಲಿಕೆ ನಡೆಸುವಂತೆ ಮತ್ತು ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸುವಂತೆ ಕೇಳಿ, ಕೆಲವು ಸಮಯದ ಹಿಂದೆ ನನಗೆ ಒಂದೂವರೆ ಕೋಟಿಯ ಆಮಿಷವೊಡ್ಡಲಾಗಿತ್ತು…………….ನಾನು ಹಿಂದೆ ಅಸಾರಾಂ ವಿರುದ್ಧ ಪ್ರಕರಣ ನಡೆಸಿದಾಗ, ನೊಂದ ಬಾಲಕಿಯ ಸಂಬಂಧಿ ಎಂದು ಹೇಳಿಕೊಂಡು ನನ್ನನ್ನು ಬಹಳ ಹೊಗಳಿದ್ದ ವ್ಯಕ್ತಿ ನನಗೆ ಈ ಪ್ರಕರಣ ಕೈಗೆತ್ತಿಕೊಳ್ಳುವಂತೆ ಕೇಳಿಕೊಂಡ. ಆತನ ಮಾತುಕತೆ ಮತ್ತು ಈ ದೂರುದಾರ ಮಹಿಳೆಯೊಂದಿಗೆ ತನ್ನ ಸಂಬಂಧದ ಬಗ್ಗೆ ಆತನ ಸಮಜಾಯಿಷಿ ನನಗೆ ಅನುಮಾನಾಸ್ಪದವಾಗಿ ಕಂಡು ನಾನು ಪ್ರಕರಣದಲ್ಲಿ ವಾದಿಸಲು ಒಲ್ಲೆನೆಂದಕೂಡಲೇ ಆತ ನನಗೆ ನೀಡುವ ಶುಲ್ಕದ ಮೊತ್ತವನ್ನು 50 ಲಕ್ಷದಿಂದ ಒಂದೂವರೆ ಕೋಟಿಗೆ ಏರಿಸಿದ, ಜೊತೆಗೆ ಪತ್ರಿಕಾ ಗೋಷ್ಟಿ ನಡೆಸಬೇಕೆಂದೂ ಹೇಳಿದ. ಇದೆಲ್ಲ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಆರೋಪ ಹೊರಿಸಿ ಅವರ ರಾಜೀನಾಮೆ ಪಡೆಯಲು ಮಾಡುತ್ತಿರುವ ದೊಡ್ಡ ಹುನ್ನಾರದಂತೆ ಕಂಡುಬಂದುದರಿಂದ ನಾನು ಕೂಡಲೇ ಅವನನ್ನು ಕಛೇರಿಯಿಂದ ಹೊರಡಿಸಿದೆ”. ನಂತರವೂ ತಾನು ಈ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಇದೊಂದು ಸಂಚುಕೂಟದ ರಹಸ್ಯ ಕಾರ್ಯಾಚರಣೆಯಂತೆ ಕಂಡುಬಂದುದಾಗಿಯೂ, ಈ ಬಗ್ಗೆ ಮಾಹಿತಿ ನೀಡಲೇಬೇಕೆಂದು ತನಗೆ ಅನಿಸಿದ್ದರಿಂದ ಶುಕ್ರವಾರ ಸಂಜೆ ತಾನು ಸಿಜೆಐ ಅವರ ಮನೆಗೆ ಭೇಟಿ ನೀಡಿದ್ದಾಗಿಯೂ, ಆದರೆ ಅವರು ಆ ಸಮಯದಲ್ಲಿ ಮನೆಯಲ್ಲಿಲ್ಲದ ಕಾರಣ ಮಾಹಿತಿ ಕೊಡಲಾಗದೆ ಹೋದದ್ದಗಿಯೂ ಉತ್ಸವ್ ಬೈನ್ಸ್ ಬರೆದಿದ್ದಾರೆ. ತನಗೂ ಸಿಜೆಐಗೂ ಯಾವುದೇ ವ್ಯಕ್ತಿಗತ ಪೂರ್ವ ಪರಿಚಯ ಇಲ್ಲ, ಆದರೆ ಪ್ರಕರಣ ಬಹಳ ಗಂಭೀರವಾದುದರಿಂದ ಇದರ ಬಗ್ಗೆ ಎಲ್ಲ ಆಯಾಮಗಳಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದೂ ಕೂಡಾ ಬೈನ್ಸ್ ಒತ್ತಾಯಿಸುತ್ತಾರೆ.
ಅದೇ ಸಂದರ್ಭದಲ್ಲಿ, ತಾನು ‘ಈ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲಾರೆ, ಏಕೆಂದರೆ ಅದರಿಂದ ದೂರುದಾರ ಮಹಿಳೆಯನ್ನು ಮಾಧ್ಯಮಗಳು ವಿಚಾರಣೆ ನಡೆಸಲು ಆರಂಭಿಸುತ್ತವೆ. ಆಕೆಯ ದೂರಿನ ನ್ಯಾಯಯುತ ಕಾನೂನುಬದ್ಧ ತನಿಖೆಯಾಗಬೇಕೆಂದು ಬಯಸುತ್ತೇನೆಯೇ ಹೊರತು, ಮಾಧ್ಯಮಗಳು ನಡೆಸುವ ‘ಮೀಡಿಯಾ ಟ್ರಯಲ್’ ಅಲ್ಲ, ಅದಕ್ಕೆ ತಾನು ಪೂರ್ಣ ವಿರುದ್ಧ’ ಎಂದೂ ಅವರು ಬರೆದಿದ್ದಾರೆ.
ಜನಪರ ಕಾಳಜಿಯುಳ್ಳ ಈ ಯುವ ವಕೀಲನ ವರದಿಯ ಹಿಂದಿರುವ ಸತ್ಯ ಸಂಗತಿಯೇನು ಎಂಬುದನ್ನೂ ಮತ್ತು ಒಂದು ವೇಳೆ ಹಾಗೆ ರಂಜನ್ ಗೊಗೊಯ್ ಅವರ ವಿರುದ್ಧ ಸಂಚುಕೂಟವೊಂದು ಕೆಲಸ ಮಾಡುತ್ತಿರುವುದೇ ಆದರ ಅವರ ಹಿತಾಸಕ್ತಿಗಳೇನು ಎಂಬುದನ್ನೂ ಆಳವಾಗಿ ವಿಚಾರಣೆಗೊಳಪಡಿಸುವ ತುರ್ತು ಅಗತ್ಯವಿದೆ.
ಅದೇನೆ ಇದ್ದರೂ, ಸಿಜೆಐ ರಂಜನ್ ಗೊಗೊಯ್ ಅವರ ಮೇಲಿನ ಈ ಆರೋಪವನ್ನು, ‘ತಮ್ಮ ಮೇಲಿನ ಆರೋಪಕ್ಕೆ ತಾವೇ ನ್ಯಾಯಾಧೀಶರಾಗಬಾರದು’ ಎಂಬ ನ್ಯಾಯಂಗದ ವಿಚಾರಣಾ ತತ್ವಕ್ಕೆ ಧಕ್ಕೆ ಬಾರದಂತೆ, ಜನರ ನಂಬಿಕೆಗೂ ಘಾಸಿಯಾಗದಂತೆ ಘನತೆಯಿಂದ ನಿರ್ವಹಿಸುವ ಬಹುದೊಡ್ಡ ಜವಾಬ್ದಾರಿ ಇಡೀ ಸುಪ್ರೀಂ ಕೋರ್ಟ್ ಮತ್ತು ಜುಡಿಷಿಯಲ್ ಕಮ್ಯುನಿಟಿಯ ಮೇಲಿದೆ. ಅದನ್ನು ನಿರ್ವಹಿಸಲಾಗುವುದು ಎಂದು ನಂಬೋಣವೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...